Advertisement

ಕೋವಿಡ್‌ ನಿಯಂತ್ರಣ: ಸರಕಾರಕ್ಕೆ  ಸೂಚನೆ

01:06 AM Apr 23, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿರುವ ಹೈಕೋರ್ಟ್‌, ರೆಮಿಡಿಸಿವಿರ್‌ ಮತ್ತು ಆಕ್ಸಿಜನ್‌ಗಾಗಿ ಕೋವಿಡ್‌ ಸೋಂಕಿತರು ಅಲೆಯುವುದನ್ನು ತಪ್ಪಿಸಲು  ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

Advertisement

ಔಷಧ ಕಾಳಸಂತೆಯಲ್ಲಿ ಮಾರಾಟವಾಗು ವುದನ್ನು ತಡೆಯಬೇಕು, ಸಾವನ್ನಪ್ಪಿದ ಸೋಂಕಿತರ ಅಂತ್ಯಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಬೇಕು ಎಂದು ಸೂಚನೆ ನೀಡಿದೆ.

ಕೋವಿಡ್‌-19 ನಿಯಂತ್ರಣಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಮತ್ತು ನ್ಯಾ| ಅರವಿಂದ್‌ ಕುಮಾರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ  ನಡೆಸಿ  ಸರಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಿತು.

ಆಕ್ಸಿಜನ್‌ ಲಭ್ಯತೆ ವಿವರಣೆ ಕೊಡಿ :

ಸರಕಾರ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಪರಿಶೀಲಿಸಿದ ನ್ಯಾಯಪೀಠ ರಾಜ್ಯದಲ್ಲಿ ಆಕ್ಸಿಜನ್‌ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ, ಎಷ್ಟು ಉತ್ಪಾದನೆಯಾಗುತ್ತಿದೆ, ಎಷ್ಟು ಬೇಡಿಕೆ ಇದೆ ಹಾಗೂ ಎಷ್ಟು ಪೂರೈಕೆಯಾಗುತ್ತಿದೆ ಎಂಬ ಕುರಿತು ಮುಂದಿನ ವಿಚಾ ರಣೆ ವೇಳೆ ಸ್ಪಷ್ಟವಾಗಿ ವಿವರ ನೀಡಬೇಕು ಎಂದು ಸೂಚಿಸಿತು.

Advertisement

ಶುಕ್ರವಾರವೂ ವಿಚಾರಣೆ : 

ಕೋವಿಡ್‌ ಪರಿಸ್ಥಿತಿಯ ತೀವ್ರತೆಯನ್ನು ಅರಿತಿರುವ ಹೈ ಕೋರ್ಟ್‌, ಶುಕ್ರವಾರವೂ ವಿಚಾರಣೆ ನಡೆಸುವುದಾಗಿ ಹೇಳಿದೆ. ಅಲ್ಲದೆ, ಅಗತ್ಯ ಬಿದ್ದರೆ ಸೋಮವಾರವೂ  ವಿಶೇಷ ಕಲಾಪ ನಡೆಸಿ ಸರಕಾರಕ್ಕೆ ನಿರ್ದೇಶನ ನೀಡಲಾಗುವುದು ಎಂದಿತು.

ಸಮಿತಿ ರಚನೆ ಅಗತ್ಯವಿಲ್ಲ: ಸರಕಾರ :

ಕೋವಿಡ್‌ ನಿಯಂತ್ರಣಕ್ಕೆ ನಾನಾ ವಲಯಗಳ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಹೈಕೋರ್ಟ್‌ ಕಳೆದ ವಿಚಾರಣೆ ವೇಳೆ ನೀಡಿದ್ದ ನಿರ್ದೇಶನದ ಕುರಿತು ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಈ ಹಂತದಲ್ಲಿ ಸಮಿತಿ ರಚನೆ ಅಗತ್ಯವಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಸಮರ್ಪಕ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಜತೆಗೆ ಸಚಿವರ ಸಮಿತಿಗಳು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿವೆ. ಸರಕಾರದ ಶೇ.50ರಷ್ಟು ಸಿಬಂದಿಯನ್ನು ಕೋವಿಡ್‌ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಹೇಳಿದರು.

ಪ್ರಮುಖ ನಿರ್ದೇಶನಗಳು :

  • ಸೋಂಕಿತರು ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗೆ ಪರದಾಡುವುದನ್ನು ತಪ್ಪಿಸಬೇಕು. ಸೂಕ್ತ ಮಾಹಿತಿ ನೀಡಲು ಎಲ್ಲ ಆಸ್ಪತ್ರೆಗಳ ಮುಂಭಾಗದಲ್ಲಿ ಹೆಲ್ಪ್ ಡೆಸ್ಕ್ ತೆರೆಯಬೇಕು.
  • 24 ಗಂಟೆಗಳಲ್ಲೇ ಆರ್‌ ಟಿಪಿಸಿಆರ್‌ ವರದಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು.
  • ಸೋಂಕು ಪರೀಕ್ಷಾ ಕೇಂದ್ರಗಳ ಮುಂದೆ ದಟ್ಟಣೆಯನ್ನು ತಗ್ಗಿಸಬೇಕು, ವೃದ್ಧರು ಮತ್ತು ಗರ್ಭಿಣಿಯರಿಗೆ ಪ್ರತ್ಯೇಕ ಸರತಿ ಸಾಲು ರಚಿಸಬೇಕು.
  • ಕೊರೊನಾ ಲಕ್ಷಣಗಳಿಲ್ಲದ ಗರ್ಭಿಣಿಯರಿಗೆ ಆಸ್ಪತ್ರೆಗಳಿಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು.
  • ರೆಮಿಡಿಸಿವಿರ್‌ ಔಷಧ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸಬೇಕು ಹಾಗೂ ಅವುಗಳ ವ್ಯವಹಾರದಲ್ಲಿ ಪಾರದರ್ಶಕತೆ ಪ್ರದರ್ಶಿಸಬೇಕು.
  • ಆಕ್ಸಿಜನ್‌ ಲಭ್ಯತೆ ಖಾತ್ರಿಗೆ ಕ್ರಮ ಕೈಗೊಳ್ಳಬೇಕು.
  • ಚಿತಾಗಾರಗಳ ಮೇಲಿನ ಒತ್ತಡವನ್ನು ತಗ್ಗಿಸಬೇಕು. ಮೃತ ಸೋಂಕಿತರ ಅಂತ್ಯಕ್ರಿಯೆ ಗೌರವಯುತವಾಗಿ ನಡೆಯುವಂತೆ ಮಾಡಬೇಕು.
  • ಮುಂದಿನ ದಿನಗಳಲ್ಲಿ ಸೋಂಕು ಇನ್ನೂ ತೀವ್ರವಾಗಿ ಹರಡಲಿದೆ ಎಂದು ತಜ್ಞರ ಸಮಿತಿ ಅಂದಾಜಿಸಿರುವುದರಿಂದ ಸರಕಾರ ಅಗತ್ಯ ಸಿದ್ಧತೆ ಮಾಡಬೇಕು.
Advertisement

Udayavani is now on Telegram. Click here to join our channel and stay updated with the latest news.

Next