Advertisement

ಕೋವಿಡ್ ನಿರ್ವಹಣೆ ವ್ಯವಸ್ಥೆ ಚೇತರಿಕೆ :  ಪೂರ್ಣ ಸರಿದಾರಿಗೆ ಬರಲು ಬೇಕು ಇನ್ನಷ್ಟು ಸಮಯ

01:01 AM May 12, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸ್ಥಿತಿ ದಿನೇ ದಿನೆ ಏರುತ್ತಿರುವ ಬೆನ್ನಲ್ಲೇ ಹಳಿ ತಪ್ಪಿದ್ದ ನಿರ್ವಹಣ ವ್ಯವಸ್ಥೆ ಮತ್ತೆ ಸರಿದಾರಿಗೆ ಬರುತ್ತಿದೆ. ಪಂಚ ಸಚಿವರು ನಿರ್ವಹಣೆ ಹೊತ್ತ ಮೇಲೆ ಪರಿಸ್ಥಿತಿ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ!
ವಾರದ ಹಿಂದಷ್ಟೇ ಆಮ್ಲಜನಕ ಇಲ್ಲ, ಹಾಸಿಗೆ ಸಿಗುತ್ತಿಲ್ಲ, ರೆಮಿಡಿಸಿವಿರ್‌ ದೊರಕುತ್ತಿಲ್ಲ… ಹೀಗೆ ಸಮಸ್ಯೆಗಳ ಸರಮಾಲೆ ಇತ್ತು. ಇದನ್ನು ಮನಗಂಡ ಸಿಎಂ ಯಡಿಯೂರಪ್ಪ ಅವರು ಪಂಚ ಸಚಿವರಿಗೆ ಜವಾಬ್ದಾರಿ ಹಂಚಿದ್ದರು. ಕಳೆದ ವಾರಕ್ಕೆ ಹೋಲಿಸಿದರೆ ಈಗ ಪರಿಸ್ಥಿತಿ ಸುಧಾರಿಸಿದಂತೆ ಕಾಣುತ್ತಿದೆ . ಹಳಿ ತಪ್ಪಿದ್ದ ನಿರ್ವಹಣ ವ್ಯವಸ್ಥೆ ಸರಿದಾರಿಗೆ ಬರುವ ಲಕ್ಷಣಗಳು ಕಾಣಿಸುತ್ತಿವೆ.

Advertisement

ಡಾ| ಅಶ್ವತ್ಥನಾರಾಯಣ ಔಷಧ ಕಂಪೆನಿಗಳ ಜತೆ ಮಾತುಕತೆ ನಡೆಸಿ ದಿನಕ್ಕೆ 20 ಸಾವಿರ ರೆಮಿಡಿಸಿವಿರ್‌ ಡೋಸ್‌ ಪೂರೈಕೆಗೆ ವ್ಯವಸ್ಥೆ ಮಾಡಿದರು. ಪೂರೈಕೆ ವಿಚಾರದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಕಂಪೆನಿಗಳಿಗೆ ನೋಟಿಸ್‌ ಜಾರಿ ಮಾಡಲು ಆದೇಶ ಹೊರಡಿಸಿದರು.

ಬೇಡಿಕೆ ಮತ್ತು ಪೂರೈಕೆಯಲ್ಲಿ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಪ್ರಸ್ತುತ ನಿತ್ಯ 35 ಸಾವಿರ ರೆಮಿಡಿಸಿವಿರ್‌ ಡೋಸ್‌ ಬೇಕಾಗಿದ್ದು, ಕೇಂದ್ರ ಸರಕಾರವೂ ರಾಜ್ಯಕ್ಕೆ ಹಂಚಿಕೆ ಪ್ರಮಾಣ ಹೆಚ್ಚು ಮಾಡಿದೆ.
– ಡಾ| ಅಶ್ವತ್ಥನಾರಾಯಣ

ಜಗದೀಶ್‌ ಶೆಟ್ಟರ್‌ ಅವರು, ಕೇಂದ್ರಕ್ಕೆ ನಿರಂತರ ಬೇಡಿಕೆ ಸಲ್ಲಿಸಿ 850 ಮೆ. ಟನ್‌ ಆಮ್ಲಜನಕ ದೊರೆಯುವಂತೆ ನೋಡಿಕೊಂಡರು. ಪರಿಣಾಮ ಈಗ ರಾಜ್ಯಕ್ಕೆ 1,015 ಮೆ. ಟನ್‌ ಆಮ್ಲಜನಕ ಲಭ್ಯವಾಗಿದೆ. ಜಿಂದಾಲ್‌ ಕಂಪೆನಿಗೆ ಭೇಟಿ ನೀಡಿ ಅಲ್ಲಿನ ಉತ್ಪಾದನ ಸಾಮರ್ಥ್ಯವನ್ನು 500 ಮೆ. ಟನ್‌ನಿಂದ 900 ಮೆ. ಟನ್‌ಗೆ ಹೆಚ್ಚಿಸಲು ಸೂಚಿಸಿದರು.
ಹಿಂದೆ 650 ಮೆ. ಟನ್‌ ಆಮ್ಲ ಜನಕ ಲಭಿಸುತ್ತಿತ್ತು. ಕೇಂದ್ರದ ಜತೆ ನಿರಂತರ ಸಂಪರ್ಕ ಸಾಧಿಸಿ 1,015 ಮೆ. ಟನ್‌ ಸಿಗುವಂತೆ ಮಾಡಲಾಗಿದೆ.
– ಜಗದೀಶ್‌ ಶೆಟ್ಟರ್‌

ಬಸವರಾಜ ಬೊಮ್ಮಾಯಿ ಮತ್ತು ಆರ್‌. ಅಶೋಕ್‌ ಖಾಸಗಿ ಆಸ್ಪತ್ರೆಗಳ ಜತೆ ಸಭೆ ನಡೆಸಿ ಶೇ. 75ರಷ್ಟು ಹಾಸಿಗೆ ಸರಕಾರಕ್ಕೆ ನೀಡುವಂತೆ ಸೂಚಿಸಿದರು.

Advertisement

ಖಾಸಗಿ ವೈದ್ಯಕೀಯ ಕಾಲೇಜುಗಳ ಸಾಮಾನ್ಯ ಬೆಡ್‌ಗಳನ್ನು ಆಮ್ಲಜನಕ ಬೆಡ್‌ಗಳಾಗಿ ಪರಿವರ್ತಿಸಲು ಸರಕಾರವೇ ಶೇ. 75ರಷ್ಟು ವೆಚ್ಚ ಭರಿಸುವ ಭರವಸೆ ನೀಡಿದೆ.

ಸರಕಾರ ಶೇ. 75ರಷ್ಟು ವೆಚ್ಚ ಭರಿಸಲು ಮುಂದಾಗಿರುವುದ ರಿಂದ ಖಾಸಗಿಯವರು ಬೆಡ್‌ ನೀಡಲು ಮುಂದೆ ಬಂದಿದ್ದಾರೆ.
ಆರ್‌. ಅಶೋಕ್‌

ಅರವಿಂದ ಲಿಂಬಾವಳಿ ಅವರು ವಿವಿಧ ವಾರ್‌ ರೂಂ ಮತ್ತು ಕಾಲ್‌ ಸೆಂಟರ್‌ಗಳಿಗೆ ಭೇಟಿ ನೀಡಿ ಅಧಿಕಾರಿಗಳು, ಸಿಬ್ಬಂದಿ ಜತೆ ನಿರಂತರ ಸಭೆ ನಡೆಸಿದ್ದಾರೆ.

ಇಲಾಖೆಗಳ ನಡುವಿನ ಸಮನ್ವಯ ಕೊರತೆ ಮತ್ತು ಅಪಾರದರ್ಶಕತೆ ಪತ್ತೆ ಹಚ್ಚಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತೀ ವಾರ್ಡ್‌ನಲ್ಲಿ 50 ಜನರ ಸಮಿತಿ ರಚನೆ ಮಾಡಿದ್ದಾರೆ. ವಾರ್ಡ್‌ ಮಟ್ಟದಲ್ಲಿ ಕೊರೊನಾ ಕೇರ್‌ ಸೆಂಟರ್‌ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ.
ವಾರ್‌ ರೂಂ ನಿರ್ವಹಣೆಯಲ್ಲಿ ಸಮನ್ವಯ ಹೆಚ್ಚಿಸಿದ್ದೇನೆ.
– ಅರವಿಂದ ಲಿಂಬಾವಳಿ

39 ಸಾವಿರ ಸೋಂಕು
ರಾಜ್ಯ ದಲ್ಲಿ ಮಂಗ ಳ ವಾ ರ 39,510 ಮಂದಿಗೆ ಸೋಂಕು ದೃಢ ಪ ಟ್ಟಿದೆ. ಸಾವಿನ ಸಂಖ್ಯೆ  480ಕ್ಕೆ ಇಳಿದಿದೆ. ಮಂಗ ಳ ವಾರ 22,584 ಮಂದಿ ಗುಣ  ಹೊಂದಿ ದ್ದಾರೆ. ಬೆಂಗ ಳೂ ರಿ ನಲ್ಲಿ 15,879 ಸೋಂಕು ತಗು ಲಿದ್ದು, 259 ಮಂದಿ ಮೃತ ಪಟ್ಟಿದ್ದಾರೆ.

ಪಂಚ ಸಚಿವರು ಮಾಡಿದ್ದೇನು?
– ಒಂದು ವಾರದಿಂದ ನಿರಂತರ ಸಭೆ, ಪರಿಶೀಲನೆ
– ಕೊರೊನಾ ಪರೀಕ್ಷೆಯಿಂದ ಹಾಸಿಗೆ ಹಂಚಿಕೆ, ಆಮ್ಲಜನಕ, ರೆಮಿಡಿಸಿವಿರ್‌ ಅಗತ್ಯಗಳ ಮಾಹಿತಿ ಸುವರ್ಣ ಆರೋಗ್ಯ ಟ್ರಸ್ಟ್‌ ಪೋರ್ಟಲ್‌ಗೆ ಸೇರ್ಪಡೆ
– ಜನರಿಗೆ ಅಂಕಿ ಅಂಶ ಒಂದೆಡೆ ಸಿಗುವ ವ್ಯವಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next