Advertisement

ಕೋವಿಡ್ –ಕೆಎಫ್‌ಡಿ ತಡೆಗೆ ಮುಂಜಾಗ್ರತೆ ವಹಿಸಿ: ಹಾಲಪ್ಪ

09:20 PM Nov 11, 2020 | Suhan S |

ಸಾಗರ: ತಾಲೂಕಿನಲ್ಲಿ ಕೋವಿಡ್ ಸದ್ಯ ನಿಯಂತ್ರಣದಲ್ಲಿದೆ. ಆದರೆ ಚಳಿಗಾಲ ಇರುವುದರಿಂದ ಯಾವುದೇ ಸಂದರ್ಭದಲ್ಲಿ ಉಲ್ಬಣವಾಗಬಹುದು. ಈ ನಿಟ್ಟಿನಲ್ಲಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವಂತೆ ಶಾಸಕ ಎಚ್‌. ಹಾಲಪ್ಪ ಹರತಾಳು ಸೂಚನೆ ನೀಡಿದರು.

Advertisement

ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್ ಮತ್ತು ಕೆಎಫ್‌ಡಿ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್‌ ನಿಯಂತ್ರಣ ಕಾರ್ಯಕ್ಕೆ ಸಂಬಂಧಪಟ್ಟಂತೆ ಹಣಕಾಸಿನ ತೊಂದರೆ ಇಲ್ಲ. ಕೋವಿಡ್‌ ಸಂಬಂಧ 50 ಲಕ್ಷ ರೂ. ಸರ್ಕಾರದಿಂದ ಬಿಡುಗಡೆಯಾಗಿದೆ. ಅದರಲ್ಲಿ ಸುಮಾರು 13 ಲಕ್ಷ ರೂ. ವೆಚ್ಚ ಮಾಡಿದ್ದು ಉಳಿದ ಹಣವನ್ನು ಸಹ ಕೋವಿಡ್‌ ಸಂದರ್ಭದ ಖರ್ಚುವೆಚ್ಚದ ನಿರ್ವಹಣೆಗೆ ಬಳಸಿಕೊಳ್ಳಲು ಸೂಚನೆ ನೀಡಿದೆ. ಚಳಿಗಾಲದಲ್ಲಿ ಕೋವಿಡ್‌ ಹರಡುವ ಕುರಿತು ನಗರ ವ್ಯಾಪ್ತಿಯಲ್ಲಿ ನಗರಸಭೆ, ಗ್ರಾಪಂ ವ್ಯಾಪ್ತಿಯಲ್ಲಿ ತಾಲೂಕು ಆಡಳಿತದಿಂದ ಧ್ವನಿವರ್ಧಕದ ಮೂಲಕ ಜನಜಾಗೃತಿ ಮೂಡಿಸಲು ಧ್ವನಿವರ್ಧಕ ಬಳಕೆ, ಕರಪತ್ರ ವಿತರಣೆಯಂತಹ ಕೆಲಸ ತಕ್ಷಣದಿಂದಲೇ ನಡೆಯಬೇಕು. ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸುವ ನಿಟ್ಟಿನಲ್ಲಿ ಆಡಳಿತ ಗಮನ ಹರಿಸಬೇಕು ಎಂದು ತಿಳಿಸಿದರು.

ಕೆಎಫ್‌ಡಿ ನಿಯಂತ್ರಣಕ್ಕೆ ಅಗತ್ಯ ಕ್ರಮ: ತಾಲೂಕಿನಲ್ಲಿ ಕಳೆದ ವರ್ಷ ಮಂಗನ ಕಾಯಿಲೆ ನಿಯಂತ್ರಣ ಮಾಡುವಲ್ಲಿ ಸಾಕಷ್ಟು ಯಶಸ್ವಿಯಾಗಿದ್ದೇವೆ. ಈ ಸಾರಿ ಬೇಸಿಗೆ ಸಮೀಪಿಸುತ್ತಿದ್ದು ಮಂಗನ ಕಾಯಿಲೆ ಸೋಂಕು ಹೆಚ್ಚದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷ ಸೋಂಕು ಕಂಡುಬಂದ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್‌ ಹಂತಹಂತವಾಗಿ ನಡೆಯುತ್ತಿದೆ. ಈಗಾಗಲೇ ಅರಲಗೋಡು ಕಡೆ ಮೊದಲ ಮತ್ತು ಎರಡನೇ ಸುತ್ತಿನ ವ್ಯಾಕ್ಸಿನೇಷನ್‌ ಹಾಕುವ ಪ್ರಕ್ರಿಯೆ ಮುಗಿದಿದೆ. ಅಂತಿಮ ಹಂತದ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭವಾಗಿದ್ದು, ತಕ್ಷಣ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ|ಮೋಹನ್‌ ಕೆ.ಎಸ್‌., ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್‌, ಉಪಾಧ್ಯಕ್ಷ ಮಹೇಶ್‌ ವಿ., ಎಸಿ ಡಾ| ನಾಗರಾಜ್‌ ಎಲ್‌., ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ, ಪೌರಾಯುಕ್ತ ಎಚ್‌. ಕೆ. ನಾಗಪ್ಪ, ಡಿವೈಎಸ್‌ಪಿ ವಿನಾಯಕ್‌ ಶೆಟ್ಟಿಗೇರ್‌, ತಾಪಂ ಕಾರ್ಯನಿರ್ವಾಹಣಾಧಿ ಕಾರಿ ಪುಷ್ಪಾ ಎಂ. ಕಮ್ಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಬಿಂಬ ಕೆ.ಆರ್‌., ಡಾ| ಪ್ರಕಾಶ್‌ ಬೋಸ್ಲೆ ಕೆ.ಆರ್‌., ಅರಣ್ಯ ಇಲಾಖೆಯ ಪ್ರಮೋದ್‌ ಡಿ.ಆರ್‌., ಲೋಕೋಪಯೋಗಿ ಇಲಾಖೆಯ ದಿನೇಶ್‌, ಜಿಪಂ ಇಂಜಿನಿಯರಿಂಗ್‌ ವಿಭಾಗದ ಹಾಲೇಶಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next