Advertisement

ರಾಜ್ಯದಲ್ಲಿ ಕೋವಿಡ್‌ ಹೆಚ್ಚಾಗಬೇಕು ಪರೀಕ್ಷೆ

02:42 AM Jul 09, 2020 | Hari Prasad |

ಕೆಲವು ಸಮಯದ ಹಿಂದಷ್ಟೇ ಕೋವಿಡ್‌-19 ಪ್ರಸರಣ ತಡೆಯುವ ವಿಚಾರದಲ್ಲಿ ಶ್ಲಾಘನೆಗೆ ಪಾತ್ರವಾಗಿದ್ದ ರಾಜಧಾನಿ ಬೆಂಗಳೂರಲ್ಲಿ ಈಗ ಸೋಂಕಿತರ ಸಂಖ್ಯೆಯಲ್ಲಿ ಹಠಾತ್‌ ಏರಿಕೆಯಾಗಿದೆ.

Advertisement

ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಬೆಂಗಳೂರಿನಲ್ಲೇ 61.42 ಪ್ರತಿಶತ ಪ್ರಕರಣಗಳು ಪತ್ತೆಯಾಗಿವೆ. ತನ್ಮೂಲಕ ಈಗ ಕರ್ನಾಟಕ ಅತೀ ಹೆಚ್ಚು ‘ಸಕ್ರಿಯ’ ಸೋಂಕಿತರನ್ನು ಹೊಂದಿರುವ ಹಾಟ್‌ಸ್ಪಾಟ್‌ಗಳಲ್ಲಿ ನಾಲ್ಕನೇ ಸ್ಥಾನ ತಲುಪಿದೆ. ರಾಜ್ಯವೆಂದಷ್ಟೇ ಅಲ್ಲ, ದೇಶದ ವಿವಿಧ ಭಾಗಗಳಲ್ಲಿ ಕೋವಿಡ್ 19 ಹಾವಳಿ ಹೆಚ್ಚುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ಕೇರಳದ ತಿರುವನಂತಪುರದಲ್ಲಿ ಕಟ್ಟುನಿಟ್ಟಾದ ‘ಟ್ರಿಪಲ್‌ ಲಾಕ್‌ ಡೌನ್‌’ ಜಾರಿಯಲ್ಲಿದೆ. ಅಸ್ಸಾಂನ ಗುವಾಹಟಿಯಲ್ಲಿ ಸೋಂಕು, ಸಮುದಾಯ ಪ್ರಸರಣದ ಹಂತ ತಲುಪಿದೆ ಎಂದು ಅಲ್ಲಿನ ಸರಕಾರ ಘೋಷಿಸಿದೆ.

ಇನ್ನೊಂದೆಡೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಪರಿಸ್ಥಿತಿ ಕೆಲವು ದಿನಗಳಿಂದ ತುಸು ಸುಧಾರಣೆಯತ್ತ ಸಾಗುತ್ತಿದೆ. ಜೂನ್‌ 23ರಿಂದ 26ರ ವರೆಗೆ ಪ್ರತಿದಿನ ದಿಲ್ಲಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲಾರಂಭಿಸಿದ್ದವು. ಈಗ ನಿಧಾನಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಾರಂಭಿಸಿದೆಯಾದರೂ ಅಪಾಯವಿನ್ನೂ ದೂರವಾಗಿಲ್ಲ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಇವೆಲ್ಲದರ ನಡುವೆ ವಿಶೇಷಜ್ಞರು ಒಂದು ವಿಷಯದತ್ತ ಬೆರಳು ತೋರಿಸುತ್ತಾರೆ. ಕೆಲವು ರಾಜ್ಯಗಳು, ಕೋವಿಡ್‌ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ಕೊಡುತ್ತಿಲ್ಲ, ಅವುಗಳ ಬುಲೆಟಿನ್‌ಗಳ ಪ್ರಮಾಣ, ಅಥವಾ ವಿವರಗಳ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

Advertisement

ಅದರಲ್ಲೂ ಕೆಲವೆಡೆಯಲ್ಲಿ ಸ್ವಾಸ್ಥ್ಯ ವಿಭಾಗದಿಂದ ಜಾರಿಯಾಗುವ ಬುಲೆಟಿನ್‌ಗಳಲ್ಲಿ ರೋಗಿಗಳ ಸಂಖ್ಯೆಯೇನೋ ಇರುತ್ತದೆ. ಆದರೆ ರೋಗಿಯ ವಯಸ್ಸು, ಕ್ಷೇತ್ರ ಮತ್ತು ಸ್ಥಿತಿಗೆ ಸಂಬಂಧಿಸಿದ ಪೂರಕ ಮಾಹಿತಿಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ಹಾಗೆಂದು ರಾಜ್ಯ ಸರಕಾರಗಳು ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡುತ್ತಿವೆ ಎಂದೇನೂ ಅಲ್ಲ. ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಾ ಹೋದಂತೆ ಸಹಜವಾಗಿಯೇ ಸ್ವಾಸ್ಥ್ಯ ಇಲಾಖೆಗಳ ಮೇಲೆ ಒತ್ತಡ ಬೀಳುತ್ತದೆ. ಆದರೆ  ಈ ವಿಷಯದಲ್ಲಿ ನಿಷ್ಕಾಳಜಿ ತೋರುವುದು ಖಂಡಿತ ರೋಗ ಪ್ರಸರಣ ತಡೆಯಲ್ಲಿ ಇಡಲಾಗುತ್ತಿರುವ ಹೆಜ್ಜೆಗೆ ಅಡ್ಡಿಯಾಗಬಹುದು.

ಇತ್ತ ರಾಜ್ಯದ ವಿಷಯಕ್ಕೆ ಬರುವುದಾದರೆ ನಮ್ಮಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್‌ನ ವೇಗದಲ್ಲಿ ಇಳಿಕೆ ಕಂಡುಬಂದಿದೆ. ಹಠಾತ್ತನೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಮುಂದಿನ ದಿನಗಳಲ್ಲಾದರೂ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವ ಪ್ರಕ್ರಿಯೆಗೆ ಮರುವೇಗ ಕೊಡುವ ಅಗತ್ಯವಿದೆ.

ಇನ್ನು ರಾಜ್ಯದಲ್ಲಿ ಇದುವರೆಗೂ 7.40 ಲಕ್ಷ ಟೆಸ್ಟಿಂಗ್‌ಗಳಾಗಿವೆ. ಇದಕ್ಕೆ ಹೋಲಿಸಿದರೆ ನಮಗಿಂತಲೂ ಕಡಿಮೆ ಪ್ರಕರಣಗಳಿರುವ ನೆರೆಯ ಆಂಧ್ರಪ್ರದೇಶದಲ್ಲಿ ಈವರೆಗೂ 10.77 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೇ ನಿತ್ಯ ಪರೀಕ್ಷೆಗಳ ಪ್ರಮಾಣವೂ ಅಲ್ಲಿ ಅಧಿಕವಿದೆ.

ಜುಲೈ 3ರಂದು ಆ ರಾಜ್ಯದಲ್ಲಿ 38 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದೆ. ಗಮನಾರ್ಹ ಸಂಗತಿಯೆಂದರೆ ನಮ್ಮಲ್ಲಿ ಒಂದೇ ದಿನ ಅತೀ ಹೆಚ್ಚು ಪರೀಕ್ಷೆಗಳು ನಡೆದದ್ದು ಸಹ ಜುಲೈ 3ರಂದೇ! ಅಂದು ನಮ್ಮಲ್ಲಿ 18 ಸಾವಿರ ಪರೀಕ್ಷೆಗಳು ನಡೆದಿವೆ.

ರೋಗಿಗಳ ಬಗ್ಗೆ ಸಾರ್ವಜನಿಕರಿಗೂ ಈಗ ಸರಿಯಾಗಿ ಮಾಹಿತಿ ತಿಳಿಯುತ್ತಿಲ್ಲ. ಇಲ್ಲಿ ಮಾಹಿತಿ ಅಡಗಿಸಿದಷ್ಟು ಅಪಾಯ ಹೆಚ್ಚುತ್ತಾ ಸಾಗುತ್ತದೆ. ಒಂದು ನಿರ್ದಿಷ್ಟ ಪ್ರದೇಶದ ವ್ಯಕ್ತಿಗೆ ಸೋಂಕು ತಗಲಿದೆ ಎಂದು ತಿಳಿದರೆ ಅದರ ಸುತ್ತಮುತ್ತಲಿನ ಜನರು ಹೆಚ್ಚು ಜಾಗರೂಕತೆಯಿಂದ ಇರಲು, ಸ್ವಯಂ ಪರೀಕ್ಷೆಗೆ ಒಳಗಾಗಲು ಸಾಧ್ಯವಿದೆ. ಅದನ್ನೇ ತಿಳಿಸದಿದ್ದರೆ ಮುಂದೆ ನಿಯಂತ್ರಣವೂ ಕಷ್ಟವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next