Advertisement

ದೆಹಲಿ ಅನ್ ಲಾಕ್ : ರಾಜಧಾನಿಯತ್ತ ವಾಪಾಸಾಗುತ್ತಿರುವ ವಲಸೆ ಕಾರ್ಮಿಕರು..!

04:03 PM Jun 07, 2021 | Team Udayavani |

ನವ  ದೆಹಲಿ : ಕೋವಿಡ್ ಸಂಕಷ್ಟ ದೇಶದಲ್ಲಿ ಎಲ್ಲಾ ವರ್ಗದವರಿಗೂ ತಟ್ಟಿದೆ. ವಲಸೆ ಕಾರ್ಮಿಕರ ಪಾಲಿಗೆ ಈ ಕೋವಿಡ್ ಮಹಾಮಾರಿ ಹಾಗೂ ಲಾಕ್ ಡೌನ್  ಅವರ ಜೀವನೋಪಾಯಕ್ಕೆ ಬಲವಾದ ಪೆಟ್ಟು ನೀಡಿದೆ ಎನ್ನುವುದಲ್ಲಿ ಸಂಶಯವಿಲ್ಲ.

Advertisement

ಕೋವಿಡ್ ಸೋಂಕಿನ ಮೊದಲ ಅಲೆಯಲ್ಲಿ ದೇಶದ ಪ್ರಮುಖ ನಗರಗಳಿಂದ ಹೆದ್ದಾರಿಗಳಲ್ಲಿ ವಲಸೆ ಕಾರ್ಮಿಕರು ತಮ್ಮ ತವರಿಗೆ ಮುಖ ಮಾಡಿದ ಹಾಗೆಯೇ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿಯೂ ಕೂಡ ಆಗಿತ್ತು. ಆದರೇ, ಈಗ ದೇಶದ ಕೆಲವು ರಾಜ್ಯಗಳಲ್ಲಿ  ಕೋವಿಡ್ ಸೋಂಕಿನ ಅಲೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರಗಳು  ಅನ್ ಲಾಕ್ ನತ್ತ ಮುಖ ಮಾಡುತ್ತಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಅನ್ ಲಾಕ್ ವಿವಿಧ ಹಂತಗಳಲ್ಲಿ ನೆಡೆಯುತ್ತಿದ್ದು, ಇಂದಿನಿಂದಲೇ ತವರಿಗೆ ತೆರಳಿದ್ದ ವಲಸೆ ಕಾರ್ಮಿಕರು ಮತ್ತೆ ದೆಹಲಿಯತ್ತ ಮುಖ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ.

ಇದನ್ನೂ ಓದಿ : ಬೆಳಗಾವಿ: ಕಾರಿನಲ್ಲಿದ್ದ 5 ಕೆ.ಜಿ. ಚಿನ್ನ ಎಗರಿಸಿದ ಪ್ರಕರಣದ ಕಿಂಗ್‌ಪಿನ್ ಪೊಲೀಸರ ವಶಕ್ಕೆ

ನಗರದ ವಿವಿಧ ಅಂತರ್ ರಾಜ್ಯ ಬಸ್ ಟರ್ಮಿನಸ್ (ಐ ಎಸ್‌ ಬಿ ಟಿ) ಮತ್ತು ರೈಲ್ವೆ ನಿಲ್ದಾಣಗಳಿಂದ ನೂರಾರು ವಲಸೆ ಕಾರ್ಮಿಕರು ವಾಪಾಸಾಗಿದ್ದು ಕಂಡು ಬಂತು.

Advertisement

ದೆಹಲಿಯಲ್ಲಿ ಅನ್ ಲಾಕ್ ಹಂತಗಳು ಆರಂಭವಾಗುತ್ತಿದ್ದಂತೆ ಉದ್ಯಮ ಕ್ಷೇತ್ರಗಳು, ಹಾಗೂ ಅಸಂಘಟಿತ ಕಾರ್ಮಿಕ ವಲಯಗಳು ನಿಧಾನ ಗತಿಯಲ್ಲಿ ತೆರವು ಕಂಡುಕೊಳ್ಳುತ್ತಿರುವ ಕಾರಣದಿಂದ ರಾಷ್ಟ್ರ ರಾಜಧಾನಿಗೆ ಮತ್ತೆ ವಲಸೆ ಕಾರ್ಮಿಕರು ವಾಪಾಸ್ ಆಗುತ್ತಿದ್ದಾರೆ ಎಂದು ವರದಿಯಾಗಿವೆ.

ದೆಹಲಿಯಲ್ಲಿ ಇಂದಿನಿಂದ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಕೋವಿಡ್ ಸೋಂಕಿನ ಎರಡನೇ ಅಲೆಯ ನಿಯಂತ್ರಣ ಮಾಡುವ ಉದ್ದೇಶದಿಂದ ಹೇರಿದ್ದ ಕಠಿಣ ಲಾಕ್ ಡೌನ್ ಇಂದಿನಿಂದ ತೆರವುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ಸೇವೆಗಳು ಸಾರ್ವಜನಿಕರಿಗೆ 50 ಪ್ರತಿಶತದಷ್ಟು ಸಾಮರ್ಥ್ಯದೊಂದಿಗೆ ತೆರೆಯಲ್ಪಟ್ಟವು.

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡಿದ ದೆಹಲಿಗೆ ವಾಪಾಸ್ಸಾದ ಬಿಹಾರ್ ಮೂಲದ ಅಮೃತ್ ಪಾಲ್, ಕೋವಿಡ್ ಇಳಿಮುಖವಾಗುವ ಲಕ್ಷಣಗಳು ಕಾಣುತ್ತಿದೆ. ಉದ್ಯೋಗವಕಾಶಗಳು ಪುನರ್ ನಿರ್ಮಾಣ ಆಗಬಹುದು ಎಂಬ ಭರವಸೆಯೊಂದಿಗೆ ನಾವು ಹದಿನೈದು ಮಂದಿ ದೆಹಲಿಗೆ ಮರಳಿದ್ದೇವೆ ಎಂದಿದ್ದಾರೆ.

ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜ್ನೋರ್ ನಿವಾಸಿ ಹೃದಯ ಕುಶ್ವಾಹ, “ಕೋವಿಡ್ -19 ಪ್ರಕರಣಗಳು ಕಡಿಮೆಯಾದಂತೆ, ದೆಹಲಿ ಸರ್ಕಾರವು ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಉದ್ಯೋಗಗಳನ್ನು ಮತ್ತೆ ಮರಳಿ ಪಡೆಯುವ ಭರವಸೆ ಇದೆ. ಎಂದಿದ್ದಾರೆ.

ಪೂರ್ವ ದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ ಚಹಾ ಅಂಗಡಿಯೊಂದನ್ನು ನಡೆಸುತ್ತಿರುವ ಉತ್ತರಪ್ರದೇಶದ ಉನ್ನಾವೊ ನಿವಾಸಿ ಚೋಟು ಪಾಸ್ವಾನ್, ದೆಹಲಿಯ ಲಾಕ್‌ ಡೌನ್ ತೆರವುಗೊಳ್ಳುತ್ತಿದ್ದಂತೆ ವ್ಯಾಪಾರಗಳು ನಿಧಾನವಾಗಿ ಸಹಜ ಸ್ಥಿತಿಯತ್ತ ಬರುವ ಭರವಸೆ ಇದೆ. ಕೊಂಚ ವಿಳಂಬವಾಗಬಹುದು, ವ್ಯಾಪಾರಗಳು ಮೊದಲಿನಷ್ಟು ಇಲ್ಲದಿರಬಹುದು, ಹಾಗಾಗಿ ನನ್ನ ಕುಟುಂಬವನ್ನು ಹಳ್ಳಿಯಲ್ಲೆ ಇರುವಂತೆ ಮಾಡಿ, ನಾನು ಮಾತ್ರ ವಾಪಾಸ್ಸಾಗಿದ್ದೇವೆ. ಹೊಟ್ಟೆಪಾಡು. ಉಳ್ಳವರಿಗೆ ಬದುಕು ಎಂದು ಕಷ್ಟ ಆಗಲಾರದು, ಬಡವರು ನಾವು ದುಡಿದರೇ ಮಾತ್ರ ಹೊಟ್ಟೆಗೆ ಹಿಟ್ಟು ಎಂದು ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಸೋಂಕಿನ ಹಠಾತ್ ಏರಿಕೆಯ ಕಾರಣದಿಂದಾಗಿ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಏಪ್ರಿಲ್ ಮೂರನೇ ವಾರದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರು. ಲಾಕ್ ಡೌನ್ ಆಗುತ್ತಿದ್ದಂತೆ ವಲಸೆ ಕಾರ್ಮಿಕರು ತಮ್ಮೂರಿನತ್ತ ಮರಳಿದರು. ಈಗ ಸುಮಾರು ಒಂದುವರೆ ತಿಂಗಳುಗಳ ನಂತರ ದೆಹಲಿ ಸರ್ಕಾರ ಸೋಂಕಿನ ಇಳಿಮುಖ ಕಂಡದ್ದರಿಂದ ಹಂತಹಂತವಾಗಿ ಲಾಕ್ ಡೌನ್ ತೆರವುಗೊಳಿಸುತ್ತಿದೆ.  ವಲಸೆ ಕಾರ್ಮಿಕರು ಮತ್ತೆ ದೆಹಲಿಯತ್ತ ಧಾವಿಸುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಒಂದುವರೆ ತಿಂಗಳುಗಳಿಂದ ನಿರ್ಜನವಾಗಿದ್ದ ರಾಜಧಾನಿಯ ಹೆದ್ದಾರಿ ರಸ್ತೆಗಳು ಮತ್ತು ಮಾರುಕಟ್ಟೆಗಳು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಚೀನಾ:ಹತಾಶೆಯಿಂದ ಕುಪಿತಗೊಂಡ ನಿರುದ್ಯೋಗಿ ಯುವಕನಿಂದ ಚೂರಿಯಿಂದ ದಾಳಿ, ಆರು ಮಂದಿ ಸಾವು

Advertisement

Udayavani is now on Telegram. Click here to join our channel and stay updated with the latest news.

Next