Advertisement

ಕೋವಿಡ್ 19 ಸೋಂಕಿಗೆ ಸಗಣಿ ಥೆರಪಿ ಪರಿಣಾಮಕಾರಿಯೇ? ವೈದ್ಯರು ಮತ್ತು ವಿಜ್ಞಾನಿಗಳು ಹೇಳುವುದೇನು

10:40 AM May 11, 2021 | Team Udayavani |

ಅಹಮದಾಬಾದ್: ಕೋವಿಡ್ ಎರಡನೇ ಅಲೆ ಕ್ಷಿಪ್ರವಾಗಿ ಹರಡುತ್ತಿದ್ದು, ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಫುಟ್ನಿಕ್ 5 ಲಸಿಕೆ ಬಳಕೆ ಮಾಡಲಾಗುತ್ತಿದೆ. ಏತನ್ಮಧ್ಯೆ ಹಲವಾರು ಊಹಾಪೋಹ, ನಂಬಿಕೆಗಳು ಹರದಾಡುತ್ತಿದ್ದು, ಇದರಲ್ಲಿ ಹಸುವಿನ ಸಗಣಿಯೂ ಸೇರಿದೆ. ಹಸುವಿನ ಸಗಣಿಯನ್ನು ಮೈಗೆ ಹಚ್ಚಿಕೊಂಡರೆ ಕೋವಿಡ್ ಸೋಂಕು ತಗಲುವುದಿಲ್ಲ ಎಂಬ ನಂಬಿಕೆಗೆ ಸಂಬಂಧಿಸಿದಂತೆ ಇದೀಗ ಭಾರತ ವೈದ್ಯರು ಎಚ್ಚರಿಕೆಯನ್ನು ನೀಡಿದ್ದಾರೆ.

Advertisement

ಹಸುವಿನ ಸಗಣಿ ಬಳಸಿದರೆ ಕೋವಿಡ್ 19 ಸೋಂಕು ತಡೆಗಟ್ಟುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಅದು ಪರಿಣಾಮಕಾರಿಯೂ ಅಲ್ಲ. ಇದರಿಂದ ಬೇರೆ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಭಾರತದಲ್ಲಿ ಮಾರಣಾಂತಿಕ ಕೋವಿಡ್ ಎರಡನೇ ಅಲೆ ತೀವ್ರ ಭೀತಿಯನ್ನು ಹುಟ್ಟುಹಾಕಿದ್ದು, ಈಗಾಗಲೇ 22.66 ಲಕ್ಷ ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 2,46,116 ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ.

ತಜ್ಞರ ಪ್ರಕಾರ, ಕೋವಿಡ್ ಪ್ರಕರಣಗಳ ಸಂಖ್ಯೆ ಐದರಿಂದ ಹತ್ತು ಪಟ್ಟು ಹೆಚ್ಚಳವಾಗಿದೆ. ಅಲ್ಲದೇ ದೇಶಾದ್ಯಂತ ಜನರು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ಔಷಧಕ್ಕಾಗಿ ಪರದಾಡುವಂತಾಗಿದ್ದು, ಸೂಕ್ತ ಚಿಕಿತ್ಸೆ ದೊರೆಯದೆ ಹಲವು ಜನರು ಸಾವಿಗೀಡಾಗಲು ಕಾರಣವಾಗಿದೆ ಎಂದು ಹೇಳಿದೆ.

ಏನಿದು ಸಗಣಿ ಥೆರಪಿ?
ಗುಜರಾತ್ ನಲ್ಲಿ ಕೆಲವರು ಹಸುವಿನ ಕೊಟ್ಟಿಗೆಗೆ ತೆರಳಿ ವಾರಕ್ಕೊಂದು ಬಾರಿ ಗೋ ಮೂತ್ರದೊಂದಿಗೆ ಸಗಣಿಯನ್ನು ಮೈಗೆ ಹಚ್ಚಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಕೋವಿಡ್ 19 ಸೋಂಕನ್ನು ತಡೆಗಟ್ಟಬಹುದು ಎಂದು ನಂಬಿದ್ದಾರೆ. ಸಗಣಿಯನ್ನು ಮೈಗೆ ಹಚ್ಚಿಕೊಳ್ಳುವ ಥೆರಪಿಯಿಂದ ತಮ್ಮ ದೇಹಕ್ಕೆ ವೈರಸ್ ತಗಲುವುದಿಲ್ಲ ಎಂಬ ನಂಬಿಕೆ ಹೊಂದಿದ್ದು, ಇದು ವೈಜ್ಞಾನಿಕವಾಗಿ ಸಮರ್ಪಕವಾದ ಥೆರಪಿ ಅಲ್ಲ, ಇದು
ಪರಿಣಾಮಕಾರಿಯೂ ಅಲ್ಲ ಎಂದು ಭಾರತದ ವೈದ್ಯರು ತಿಳಿಸಿದ್ದಾರೆ.

Advertisement

ಹಿಂದೂಗಳಿಗೆ ಹಸು ಮತ್ತು ಹಸುವಿನ ಸಗಣಿ ಪವಿತ್ರವಾದದ್ದು, ಮನೆಯನ್ನು ಸ್ವಚ್ಛಗೊಳಿಸಿ ಸಗಣಿ ಸಾರಿಸುವುದು ಹಿಂದಿನ ಪದ್ಧತಿಯಾಗಿದೆ. ಈಗಲೂ ಹಳ್ಳಿಗಳಲ್ಲಿ ಹಸುವಿನ ಸಗಣಿಗೆ ತುಂಬಾ ಪ್ರಾಮುಖ್ಯತೆ ಇದೆ ಎಂದು ವರದಿ ತಿಳಿಸಿದೆ.

ಸಗಣಿ ಥೆರಪಿ ಪರಿಣಾಮಕಾರಿ?
“ನಾವು ಇದನ್ನು ನೋಡಿದ್ದೇವೆ, ವೈದ್ಯರು ಕೂಡಾ ಇಲ್ಲಿಗೆ ಆಗಮಿಸಿ ಪರಿಶೀಲಿಸಿದ್ದಾರೆ. ಸಗಣಿ ಥೆರಪಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಸುಳ್ಳಲ್ಲ. ಈ ರೀತಿ ಥೆರಪಿ ಮಾಡಿಸಿಕೊಳ್ಳುವವರು ಯಾವುದೇ ಭಯವಿಲ್ಲದೇ ಕೋವಿಡ್ ರೋಗಿಗಳ ಬಳಿ ಹೋಗುತ್ತಾರೆ ಎಂದು ಔಷಧ ಕಂಪನಿಯ ಅಸೋಸಿಯೇಟ್ ಮ್ಯಾನೇಜರ್ ಗೌತಮ್ ಮಣಿಲಾಲ್ ಬೋರಿಸಾ ತಿಳಿಸಿದ್ದಾರೆ. ಈ ಅಭ್ಯಾಸದಿಂದ ಕಳೆದ ವರ್ಷ ಕೋವಿಡ್ 19 ಸೋಂಕಿಗೆ ಒಳಗಾದವರು ಚೇತರಿಸಿಕೊಳ್ಳಲು ಸಹಾಯವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

ಈ ರೀತಿ ಥೆರಪಿ ಮಾಡಿಸಿಕೊಂಡು ಸಗಣಿ ಒಣಗುತ್ತದೆ. ನಂತರ ಯೋಗ ಮಾಡುವ ಮೂಲಕ ದೈಹಿಕ ಶಕ್ತಿ ಹೆಚ್ಚುತ್ತದೆ. ಕೊನೆಗೆ ದೇಹವನ್ನು ಹಾಲು ಅಥವಾ ಮಜ್ಜಿಗೆಯಿಂದ ತೊಳೆದುಕೊಳ್ಳುತ್ತಾರೆ ಎಂದು ವರದಿ ತಿಳಿಸಿದೆ.

ಆದರೆ ಕೋವಿಡ್ ಗೆ ಅಧಿಕೃತವಲ್ಲದ ಇಂತಹ ಥೆರಪಿಯನ್ನು ಮಾಡಿಸಿಕೊಳ್ಳಬಾರದು ಎಂದು ವೈದ್ಯರು ಮತ್ತು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದರಿಂದ ಬೇರೆ, ಬೇರೆ ಆರೋಗ್ಯ ಸಮಸ್ಯೆಗಳು ತಲೆದೋರಲು ಕಾರಣವಾಗಬಹುದು ಎಂದು ಹೇಳಿದ್ದಾರೆ. ಗೋಮೂತ್ರ, ಸಗಣಿ ಉಪಯೋಗಿಸುವುದರಿಂದ ಕೋವಿಡ್ ಸೋಂಕು ಎದುರಿಸಲು ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂಬುದಕ್ಕೆ ವೈಜ್ಞಾನಿಕವಾಗಿ ಯಾವುದೇ ಬಲವಾದ ಪುರಾವೆ ಇಲ್ಲ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next