Advertisement

ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಗ್ರಂಥಾಲಯ ನಿರ್ಮಿಸಿದ ರೈತ ದಂಪತಿ

05:38 PM May 10, 2022 | Team Udayavani |

ರಾಮನಗರ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿ ಸಲು ಗ್ರಾಮಾಂತರ ಪ್ರದೇಶಗಳ ಅಭ್ಯರ್ಥಿಗಳಿಗೂ ಆಸಕ್ತಿ ಇದೆ. ಆದರೆ, ಅಧ್ಯಯನಕ್ಕೆ ಅವರೆಲ್ಲ ನಗರ, ಪಟ್ಟಣ ಪ್ರದೇಶಗಳಲ್ಲಿನ ಗ್ರಂಥಾಲಯಗಳನ್ನು ಅವಲಂಭಿಸಬೇಕಾಗಿದೆ. ತಾಲೂಕಿನ ಬಿಡದಿ ಹೋಬಳಿ ಕಾಕರಾಮನಹಳ್ಳಿಯಲ್ಲಿ ರೈತ ದಂಪತಿ ತಮ್ಮ ಭಾಗದ ವಿದ್ಯಾರ್ಥಿಗಳಿಗೆ ಇದ್ದ ಈ ಕೊರತೆಯನ್ನು ನೀಗಿಸಲು ಮುಂದಾಗಿದ್ದಾರೆ.

Advertisement

ಕಾಕರಾಮನಹಳ್ಳಿ ಗ್ರಾಮದ ರೈತ ಚಿಕ್ಕಮರಿಯಣ್ಣ ಮತ್ತು ಅವರ ಪತ್ನಿ ಸಾಕಮ್ಮ ಈ ಪ್ರಯತ್ನ ಆರಂಭಿಸಿದ್ದಾರೆ. ತಮ್ಮ ಸ್ವಂತ ಕಟ್ಟಡವೊಂದರಲ್ಲಿ ಗ್ರಂಥಾಲಯವನ್ನು ಸ್ಥಾಪಿಸಿ, ಅಧ್ಯಯನಕ್ಕೆ ಟೇಬಲ್‌ಗ‌ಳು, ಕುರ್ಚಿಗಳನ್ನು ಅಳವಡಿಸಿದ್ದಾರೆ. ಈ ವ್ಯವಸ್ಥೆಗೆ ದಂಪತಿ ಈಗಾಗಲೆ ಸಾವಿರಾರು ರೂ. ವೆಚ್ಚ ಮಾಡಿದ್ದಾರೆ. ಅಭ್ಯ ರ್ಥಿಗಳು ಈ ವ್ಯವಸ್ಥೆಯನ್ನು ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.

ನೂರಾರು ಪುಸ್ತಕ ಸಂಗ್ರಹ: ಕಟ್ಟಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅತ್ಯಗತ್ಯವಾಗಿರುವ ನೂರಾರು ಪುಸ್ತಕಗಳನ್ನು ಶೇಖರಿಸಿದ್ದಾರೆ. ಕಟ್ಟಡದ ಮಹಡಿಯಲ್ಲಿ ಶೀಟುಗಳನ್ನು ಅಳವಡಿಸಿ ಸುಮಾರು 40 ಮಂದಿ ಒಟ್ಟಿಗೆ ಕುಳಿತು ಪ್ರಶಾಂತವಾಗಿ ಓದು, ಬರಹ, ಅಧ್ಯಯನ ದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ಕಾಕರಾಮನಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಗಾಳಿ, ಬೆಳಕು ಧಾರಾಳವಾಗಿ ಲಭಿಸುವ ಈ ವ್ಯವಸ್ಥೆಯ ಬಗ್ಗೆ ಸ್ಥಳೀ ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಪಿಎಸ್‌ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಈ ಭಾಗದ ಅನೇಕ ವಿದ್ಯಾರ್ಥಿಗಳು ನೂರಾರು ರೂ., ಕೊಟ್ಟು ಪುಸ್ತಕ ಖರೀದಿ ಮಾಡಲಾಗುವುದಿಲ್ಲ. ಅಧ್ಯಯನ ಮಾಡಬೇಕಾದರೆ ಪಟ್ಟಣ, ನಗರಗಳಿಗೆ ಹೋಗಬೇಕಾಗಿದೆ. ಕೆಲವರು ಬೆಂಗಳೂರು ನಗರಕ್ಕೆ ಹೋಗಬೇಕಾದ ಅನಿವಾರ್ಯವಿದೆ. ಪದೇ ಪದೇ ವೆಚ್ಚ ಮಾಡಲು ಆ ಅಭ್ಯರ್ಥಿಗಳ ಕುಟುಂಬಗಳು ಆರ್ಥಿಕ ಸಬಲರಾಗಿಲ್ಲ. ಹೀಗಾಗಿ ತಾವು ತಮ್ಮ ಕಟ್ಟಡದಲ್ಲಿ ಈ ವ್ಯವಸ್ಥೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಪುಸ್ತಕ ನೀಡಲು ಮನವಿ: ಸದ್ಯ ಗ್ರಂಥಾಲಯದಲ್ಲಿ ಸುಮಾರು 50 ಸಾವಿರ ರೂ., ಮೌಲ್ಯದ ಪುಸ್ತಕಗಳ ಸಂಗ್ರಹವಿದೆ. ಆದರೆ, ಇಷ್ಟು ಪುಸ್ತಕಗಳು ಅಧ್ಯಯನಕ್ಕೆ ಸಾಕಾಗುವುದಿಲ್ಲ. ಹೀಗಾಗಿ ಪುಸ್ತಕಗಳ ಕೊಡುಗೆ ನೀಡುವಂತೆ ರೈತ ದಂಪತಿ ಚಿಕ್ಕಮರಿಯಣ್ಣ ಮತ್ತು ಸಾಕಮ್ಮ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಪುಸ್ತಕ ದಾನಿಗಳು ಗ್ರಂಥಾಲಯದ ವಿಳಾಸಕ್ಕೆ ಪುಸ್ತಕಗಳನ್ನು ಕಳುಹಿಸಿಕೊಡಬಹುದು ಎಂದು ಮನವಿ ಮಾಡಿದ್ದಾರೆ.

Advertisement

ಸ್ಮಾರ್ಟ್‌ ಕ್ಲಾಸ್‌ಗೆ ಚಿಂತನೆ: ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಪುಸ್ತಕಗಳ ಜೊತೆಗೆ ಜಾಲತಾಣಗಳಲ್ಲಿ ಲಭ್ಯವಾಗುವ ಮಾಹಿತಿಯನ್ನು ಅಭ್ಯರ್ಥಿಗಳಿಗೆ ಒದಗಿಸುವ ಆಲೋಚನೆ ಈ ದಂಪತಿಗಿದೆ. ಜಾಲ ತಾಣಗಳಲ್ಲಿ ಆನ್‌ಲೈನ್‌ ಕೋಚಿಂಗ್‌ ತರಗತಿಗಳು ನಡೆಯುತ್ತವೆ. ಈ ತರಗತಿಗಳನ್ನು ಇಲ್ಲಿರುವ ವಿದ್ಯಾ ರ್ಥಿಗಳಿಗೆ ಬಿತ್ತರಿಸುವ ವ್ಯವಸ್ಥೆ ಸ್ಮಾರ್ಟ್‌ ಕ್ಲಾಸ್‌ ರೂಂ ಸ್ಥಾಪನೆಗೂ ದಂಪತಿ ಚಿಂತನೆ ನಡೆಸಿದ್ದಾರೆ.

ಈ ಭಾಗದ ವಿದ್ಯಾರ್ಥಿಗಳು ಸಾಮೂಹಿಕವಾಗಿ ಆನ್‌ ಲೈನ್‌ ತರಗತಿಗಳಲ್ಲಿ ಭಾಗವಹಿಸಿ, ಪರಸ್ಪರ ಚರ್ಚೆ ಮಾಡಲು ಅನುಕೂಲವಾಗುತ್ತದೆ ಎಂದು ಉದ್ದೇಶಿಸಿದ್ದಾರೆ. ಈ ವ್ಯವಸ್ಥೆಯ ಸ್ಥಾಪ ನೆಗೂ ಅವರು ಆಸಕ್ತ ರಿಂದ ಸಹಕಾರ ಬಯಸಿದ್ದಾರೆ.

ತಜ್ಞರಿಗೆ ಆಹ್ವಾನ: ಹಳ್ಳಿಗಾಡಿನ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿ ಸಲು ಅನುಕೂಲವಾಗುವಂತೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಿ ಉನ್ನತ ಹುದ್ದೆ ಗಳಲ್ಲಿರುವ ಅಧಿಕಾರಿಗಳು ಮತ್ತು ಖಾಸಗಿ ವಲಯದಲ್ಲಿರುವ ಆಸಕ್ತರನ್ನು ಆಹ್ವಾನಿಸಿ, ಇಲ್ಲಿಗೆ ಬರುವ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಸಲಹೆಗಳನ್ನು ಕೊಡಸುವ ಉದ್ದೇಶವನ್ನು ದಂಪತಿ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ತರಬೇತಿ ಪಡೆಯಲು ವ್ಯವಸ್ಥೆಯ ಕೊರತೆಯಿಂದಾಗಿ ವಂಚಿತರಾಗಬಾರದು ಎಂಬುದಷ್ಟೇ ತಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.

ಈ ಗ್ರಂಥಾಲಯ ಎಲ್ಲಿದೆ? : ಬಿಡದಿ ಪಟ್ಟಣದಿಂದ ಕೇವಲ ಐದು ಕಿ.ಮೀ ದೂರದಲ್ಲಿ ಕಾಕರಾಮನಹಳ್ಳಿ ಗ್ರಾಮವಿದೆ. ಗ್ರಾಮದಲ್ಲಿ ಬಿಡದಿ-ಗಾಣಕಲ್‌ ಮುಖ್ಯರಸ್ತೆಯ ಮಗ್ಗುಲಲ್ಲೇ ಗ್ರಂಥಾಲಯ ಕಟ್ಟಡವಿದೆ. ಬಿಡದಿಯ ನಲ್ಲಿಗುಡ್ಡೆಕೆರೆ ಮಾರ್ಗವಾಗಿ ಶೆಟ್ಟಿಗೌಡನದೊಡ್ಡಿ, ಎಂ.ಕರೇನಹಳ್ಳಿ ಮುಖೇನ ಕಾಕರಾಮನಹಳ್ಳಿ ಗ್ರಾಮವನ್ನು ತಲುಪಬಹುದು. ಬಿಡದಿಯಿಂದ ಸಾರಿಗೆ ಸಂಸ್ಥೆ ಬಸ್‌ ಸೌಲಭ್ಯವೂ ಉತ್ತಮವಾಗಿದೆ. ಹೆಚ್ಚಿನ ಮಾಹಿತಿಗಾಗಿ 8310175517 ಸಂಖ್ಯೆ ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next