Advertisement

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

12:18 PM Jul 04, 2024 | Team Udayavani |

ಬೆಂಗಳೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ.

Advertisement

ಕೋಣನಕುಂಟೆ ನಿವಾಸಿ ಶ್ರೀಕಾಂತ್‌(24) ಮತ್ತು ತಲಘಟ್ಟಪುರ ಸಮೀಪದ ಅಂಜನಾಪುರದ ನಿವಾಸಿ ಅಂಜನಾ(20) ಆತ್ಮಹತ್ಯೆಗೆ ಶರಣಾದವರು.

ಜುಲೈ 1ರಂದು ಇಬ್ಬರು ನಾಪತ್ತೆಯಾಗಿದ್ದರು. ಮಂಗಳವಾರ ಸಂಜೆ ಇಬ್ಬರ ಮೃತದೇಹ ನೈಸ್‌ ರಸ್ತೆಯ ತುಳಸಿಪುರ ಕೆರೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಈಗಾಗಲೇ ಮದುವೆಯಾಗಿದ್ದ ಶ್ರೀಕಾಂತ್‌, ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದ. ಸಂಜೆ ಹೊತ್ತು ಆಟೋ ಕೂಡ ಓಡಿಸುತ್ತಿದ್ದ. 1 ವರ್ಷದ ಹಿಂದೆ ಸಹನಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆ ನಂತರವೂ ಕಾಲೇಜಿಗೆ ಹೋಗುತ್ತಿದ್ದ. ಇದೇ ಕಾಲೇಜಿನಲ್ಲಿ ಓದುತ್ತಿದ್ದ ಅಂಜನಾಳ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಈ ವಿಚಾರಕ್ಕೆ ಶ್ರೀಕಾಂತ್‌ ಮತ್ತು ಆತನ ಪತ್ನಿಯ ನಡುವೆ ಜಗಳ ನಡೆದಿತ್ತು. ಅಲ್ಲದೇ ಅಂಜನಾ ಪೋಷಕರು ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಅದರಿಂದ ಬೇಸರಗೊಂಡಿದ್ದ ಶ್ರೀಕಾಂತ್‌ ಪ್ರೇಯಸಿ ಅಂಜನಾ ಜತೆ ಮನೆ ಬಿಟ್ಟು ಹೋಗಿದ್ದ. ಈ ಸಂಬಂಧ ಕೋಣನಕುಂಟೆ ಮತ್ತು ತಲಘಟ್ಟಪುರ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳ ತನಿಖೆ ಬೆನ್ನತ್ತಿದ್ದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಅಣ್ಣನ ಆಟೋದಲ್ಲಿ ಪ್ರೇಯಸಿ ಕರೆದೊಯ್ದ!: ಇತ್ತ ಶ್ರೀಕಾಂತ್‌ ಮನೆ ಬಿಟ್ಟು ಬರುವಾಗ ತನ್ನ ಅಣ್ಣನ ಆಟೋ ತೆಗೆದುಕೊಂಡು ಬಂದಿದ್ದು, ಈ ಆಟೋದಲ್ಲೇ ಪ್ರೇಯಸಿ ಅಂಜನಾಳನ್ನು ಕರೆದೊಯ್ದಿದ್ದಾನೆ. ಬಳಿಕ ಇಬ್ಬರು ತುಳಸೀಪುರ ಕೆರೆ ಬಳಿ ಹೋಗಿದ್ದಾನೆ. ನಂತರ ಕೆರೆ ದಡದಲ್ಲಿ ಚಪ್ಪಲಿ ಬಿಟ್ಟು, ನಮ್ಮ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್‌ನೋಟ್‌ ಬರೆದಿಟ್ಟು, ಬಳಿಕ ಕೈಗಳಿಗೆ ಪರಸ್ಪರ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೂಂದೆಡೆ ನಾಪತ್ತೆ ಪ್ರಕರಣಗಳಲ್ಲಿ ಶೋಧ ಕಾರ್ಯ ಆರಂಭಿಸಿದ ಪೊಲೀಸರಿಗೆ, ಸ್ಥಳೀಯರು ಆಟೋ ಬಗ್ಗೆ ಮಾಹಿತಿ ನೀಡಿದ್ದರು. ಆಟೋ ಜಾಡು ಬೆನ್ನತ್ತಿದಾಗ ಮಂಗಳವಾರ ಸಂಜೆ ನೈಸ್‌ ರಸ್ತೆಯ ತುಳಸಿಕೆರೆ ಸಮೀಪ ಆಟೋ ನಿಂತಿರುವುದು ಪತ್ತೆಯಾಗಿತ್ತು. ಹೀಗಾಗಿ, ಪೊಲೀಸರ ಸಮ್ಮುಖದಲ್ಲಿ ಕೆರೆಯಲ್ಲಿ ಹುಡುಕಾಡಿದಾಗ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Advertisement

ವಿಚ್ಛೇದನಕ್ಕೆ ಒಪ್ಪಿದ್ದ ಪತ್ನಿ! : ಅಚ್ಚರಿಯ ಸಂಗತಿ ಎಂದರೆ, ಶ್ರೀಕಾಂತ್‌ನ ಪತ್ನಿ ಸಹನಾ, ಪತಿಯ ಪ್ರೇಮದ ವಿಚಾರ ತಿಳಿದು ಆತನೊಂದಿಗೆ ಜಗಳ ಮಾಡಿದ್ದಳು. ಆದರೆ, ಕೆಲ ದಿನಗಳ ಹಿಂದೆ ಆತನ ಹುಚ್ಚು ಪ್ರೇಮ ಕಂಡು, ನಾನೇ ಸ್ವ ಇಚ್ಛೆಯಿಂದ ವಿಚ್ಛೇದನ ನೀಡುತ್ತೇನೆ. ನೆಮ್ಮದಿಯಿಂದ ಆಕೆ ಜತೆ ಜೀವನ ನಡೆಸಿ ಎಂದು ಪತಿ ಶ್ರೀಕಾಂತ್‌ಗೆ ಹೇಳಿದ್ದರು ಎಂದು ಹೇಳಲಾ ಗಿದೆ. ಆದರೂ ಶ್ರೀಕಾಂತ್‌, ಪ್ರೇಯಸಿ ಅಂಜನಾ ಳನ್ನು ಕರೆದೊಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಡೆತ್‌ನೋಟ್‌ ಪತ್ತೆ: ಇನ್ನು ಸಾವಿಗೂ ಮುನ್ನ ಪ್ರೇಮಿಗಳಿಬ್ಬರು ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹೀಗಾಗಿ ಸಾಯುತ್ತಿದ್ದೇವೆ ಎಂದು ಮೊಬೈಲ್‌ ನಲ್ಲಿ ಸೆಲ್ಫಿà ವಿಡಿಯೋ ಮಾಡಿ, ಸಂಬಂಧಿಕರಿಗೆ ಕಳುಹಿಸಿದ್ದಾರೆ. ಅಲ್ಲದೆ, 2 ಮೊಬೈಲ್‌ಗ‌ಳನ್ನು ಆಟೋದಲ್ಲಿಟ್ಟು ಕೆರೆಗೆ ಹಾರಿದ್ದಾರೆ. ಮೊಬೈಲ್‌ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇಬ್ಬರು ಪ್ರೇಮಿಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಪೋಷಕರು ನೀಡಿದ ದೂರಿನ ಮೇರೆಗೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಯುತ್ತಿದೆ. -ಲೋಕೆಶ್‌ ಜಗಲಾಸರ್‌, ದಕ್ಷಿಣ ವಿಭಾಗ ಡಿಸಿಪಿ.

 

Advertisement

Udayavani is now on Telegram. Click here to join our channel and stay updated with the latest news.

Next