Advertisement

ಬಾಂಗ್ಲಾದಿಂದ ರಾಜ್ಯಕ್ಕೆ ಖೋಟಾನೋಟು

06:00 AM Jul 01, 2018 | |

ಬೆಂಗಳೂರು: ಕಪ್ಪುಹಣ ಹಾಗೂ ಖೋಟಾನೋಟು ನಿಯಂತ್ರನಿಸುವ ನಿಟ್ಟಿನಲ್ಲಿ ಕೇಂದ್ರಸರ್ಕಾರ ಕೈಗೊಂಡ ನೋಟು ಅಮಾನ್ಯಿಕರಣ ನಿರ್ಧಾರದ ಬಳಿಕವೂ ರಾಜ್ಯದಲ್ಲಿ ಖೋಟಾ ನೋಟು ದಂಧೆ ನಿರಾಂತಕವಾಗಿಯೇ ಮುಂದುವರಿದಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.

Advertisement

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಈಗಲೂ  ಬಾಂಗ್ಲಾ ಗಡಿಯಿಂದ ಖೋಟಾನೋಟು ಸರಬರಾಜಾಗುತ್ತಿದೆ ಎಂಬ ಸ್ಫೋಟಕ ಮಾಹಿತಿಯೂ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆಯಿಂದ ಪತ್ತೆಯಾಗಿದೆ.

ರಾಜ್ಯದಲ್ಲಿ ಖೋಟಾನೋಟು ಚಲಾವಣೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿದ್ದ ಮುಂಬೈ ಹಾಗೂ ಹೈದರಾಬಾದ್‌ ಎನ್‌ಐಎ ಪೊಲೀಸರು ತನಿಖೆ ವೇಳೆ  ಆರೋಪಿಗಳಿಂದ ವಶಪಡಿಸಿಕೊಂಡಿದ್ದ 100 ಪುಟದ ಡೈರಿ, ಬ್ಯಾಂಕ್‌ ಖಾತೆ  ಮಾಹಿತಿ, ಎಟಿಎಂ ರಸೀದಿ, ದೂರವಾಣಿ ಕರೆಗಳ ವಿನಿಮಯದಿಂದ ಕರ್ನಾಟಕದಲ್ಲಿ ಖೋಟಾ ನೋಟು ಜಾಲ ವ್ಯಾಪಕವಾಗಿ ಹರಡಿರುವುದು ಗೊತ್ತಾಗಿದೆ.

ಖೋಟಾ ನೋಟು ಬಾಂಗ್ಲಾದಲ್ಲಿ ಮುದ್ರಣವಾಗಿ ಪಶ್ಚಿಮ ಬಂಗಾಳದ ಮೂಲಕ ಕರ್ನಾಟಕಕ್ಕೆ ರವಾನೆಯಾಗುತ್ತಿತ್ತು. ಒಟ್ಟಾರೆ ನಿರ್ವಹಣೆ  ಪಶ್ಚಿಮ ಬಂಗಾಳದ ಕೋಲ್ಕತ್ತಾ, ಮಾಲ್ಡಾ ಮೂಲಕ ನಿರ್ವಹಣೆಯಾಗುತ್ತಿತ್ತು. ಈ ಜಾಲದಲ್ಲಿ ಕರ್ನಾಟಕದಲ್ಲೂ ನೂರಾರು ಮಂದಿ ಭಾಗಿಯಾಗಿದ್ದು ಕಮಿಷನ್‌ ಹಣದ ಆಸೆಗೆ  ಅಕ್ರಮದಲ್ಲಿ ಭಾಗಿಯಾಗಿರುವ ಸಂಗತಿಯೂ ತನಿಖೆಯಲ್ಲಿ ತಿಳಿದು ಬಂದಿದೆ. ಈ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿರುವ ಎರಡೂ ವಿಭಾಗದ ಎನ್‌ಐಎ ಅಧಿಕಾರಿಗಳು, ಇಡೀ ಜಾಲ ಬೇಧಿಸಲು ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

ಕೊಲ್ಕತ್ತಾ ಜೈಲಿನಲ್ಲಿದ್ದಾನೆ ಸೂತ್ರಧಾರ
2013ರಲ್ಲಿ ಖೋಟಾನೋಟು ಚಲಾವಣೆ ಆರೋಪ ಪ್ರಕರಣದಲ್ಲಿ ಕೊಲ್ಕತ್ತಾ ಪೊಲೀಸರಿಂದ ಬಂಧಿತನಾಗಿರುವ ಶಹನೋಯಾಜ್‌ ಕಸೂರಿ ಅಲಿಯಾಸ್‌ ಇಶಾಕ್‌ ಶೇಖ್‌ ಕರ್ನಾಟಕದಲ್ಲಿ ಖೋಟಾನೋಟು ಚಲಾವಣೆಯ ಕಿಂಗ್‌ಪಿನ್‌ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

Advertisement

ಕಳೆದ ಮಾರ್ಚ್‌ 13 ರಂದು ಚಿಕ್ಕೋಡಿಯಲ್ಲಿ ಬಂಧಿಸಲಾದ ಮೂವರು ಆರೋಪಿಗಳ ವಿಚಾರಣೆ ನಡೆಸಿದ ಎನ್‌ಐಎ ತಂಡಕ್ಕೆ, ಈ ತಂಡದ ಹಿಂದೆ ನೋಟಾನೋಟು ಚಲಾವಣೆಯ ಸೂತ್ರಧಾರ ಶಹನೋಯಾಜ್‌ ಆಗಿದ್ದು, ಜೈಲಿನಿಂದಲೇ ದಂಧೆ ನಿರ್ವಹಣೆ ಮಾಡುತ್ತಿದ್ದಾನೆ. ಆತನ ಸೂಚನೆ ಮೇರೆಗೆ  ಆತನ ಸಹಚರರಾದ ಸರೀಫ‌ುಲ್‌ ಇಸ್ಲಾಂ ಹಾಗೂ ಸುಕ್ರುದ್ದೀನ್‌ ಅನ್ಸಾರಿ (ಸದ್ಯ ತಲೆಮರೆಸಿಕೊಂಡಿರುವ ) ಸರಬರಾಜು ಮಾಡುತ್ತಿದ್ದರು. ಬಾಂಗ್ಲಾ ಗಡಿಮೂಲಕ  ಖೋಟಾ ನೋಟು ಮೊದಲು ಕೋಲ್ಕRತ್ತಾಗೆ ತರಿಸಿಕೊಳ್ಳುತ್ತಿದ್ದರು. ಬಳಿಕ ಸಹಚರರ ಮುಖಾಂತರ  ರೈಲು ಮೂಲಕ ಕರ್ನಾಟಕಕ್ಕೆ ಸರಬರಾಜು ಮಾಡುತ್ತಿದ್ದರು.  ರಾಜ್ಯದಲ್ಲಿ ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ಹಲವರಿಗೆ ಕಮಿಷನ್‌ ರೂಪದಲ್ಲಿ ನೀಡುತ್ತಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.

1 ಲಕ್ಷ.ಖೋಟಾ ನೋಟಿಗೆ  48 ಸಾವಿರ ಅಸಲಿ ಹಣ
ಸದ್ಯ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಶೋಕ್‌ ಕುಂಬಾರ್‌ ಹಾಗೂ ರಾಜೇಂದ್ರ ಪಾಟೀಲ್‌ ನಿವಾಸದಲ್ಲಿ ವಶಪಡಿಸಿಕೊಂಡಿದ್ದ ಡೈರಿಯಲ್ಲಿ ಹಲವು ಅಂಶಗಳನ್ನು  ಬರೆಯಲಾಗಿದ್ದು ಕೊಲ್ಕತ್ತಾದಿಂದ ಬರುವ 1ಲಕ್ಷ ರೂ. ಮೊತ್ತದ ಖೋಟಾ ನೋಟಿಗೆ  ಅಶೋಕ್‌ ಕುಂಬಾರ್‌ 48 ಸಾವಿ ರೂ.  ಅಸಲಿ ಹಣ ನೀಡುತ್ತಿದ್ದರು. ನಂತರ  ಖೊಟಾನೋಟುಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ಇತೆರೆಡೆ ಚಲಾವಣೆ ಮಾಡುತ್ತಿದ್ದರು. ಇದಕ್ಕಾಗಿಯೇ ಹಲವರನ್ನು ನೇಮಿಸಿಕೊಂಡಿದ್ದರು. 1 ಲಕ್ಷ ಪೂರ್ತಿ ಖೋಟಾ ನೋಟು ಚಲಾವಣೆಯಾಗಿರುವುದು ದೃಢಪಟ್ಟ ನಂತರ ಮತ್ತೆ 5 ರಿಂದ 10 ಸಾವಿರ ರೂ. ಕಮೀಷನ್‌ ಸಿಗುತ್ತಿತ್ತು ಎಂಬ ಮಾಹಿತಿ ಪತ್ತೆಯಾಗಿದೆ.

ಕೋಲ್ಕತ್ತಾದ ಕಿಂಗ್‌ಪಿನ್‌ಗಳಿಂದ ಖೋಟಾನೋಟು ಪಡೆದ ಬಳಿಕ ಅವರಿಗೆ ನೀಡಬೇಕಿರುವ ಅಸಲಿ ಹಣವನ್ನು ಆರೋಪಿಗಳು ಬ್ಯಾಂಕ್‌ ಖಾತೆಗೆ ಎಟಿಎಂ ಕೇಂದ್ರಗಳ ಮೂಲಕ ವರ್ಗಾವಣೆ ಮಾಡುತ್ತಿದ್ದರು.  ಈ ರೀತಿ ಹಣ ಸಂದಾಯದ ಬಗ್ಗೆ  63 ರಸೀದಿಗಳು ಪತ್ತೆಯಾಗಿವೆ ಎಂದು ಮೂಲಗಳು ಖಚಿತಪಡಿಸಿವೆ.

ಖೋಟಾನೋಟು ಚಲಾವಣೆ ಸಂಬಂಧ ಮಾರ್ಚ್‌ 12ರಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ದಲೀಮ್‌ ಮಿಯಾನನ್ನು ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು, ಆತ ನೀಡಿದ ಚಿಕ್ಕೋಡಿಯ ಅಶೋಕ್‌ ಕುಂಬಾರ್‌ ನಿವಾಸದ ಮೇಲೆ ಶೋಧ ನಡೆಸಿದ್ದರು. ಈ ವೇಳೆ  2000 ಮುಖಬೆಲೆಯ 82 ಸಾವಿರ ರೂ. ಖೋಟಾ ನೋಟುಗಳು ಪತ್ತೆಯಾಗಿದ್ದವು. ಅದೇ ರೀತಿ  ರಾಯಭಾಗದ ರಾಜೇಂದ್ರ ಪಾಟೀಲ್‌ರನ್ನು ಬಂಧಿಸಿದ್ದರು.ಸದ್ಯ ಮೂವರು ಆರೋಪಿಗಳು ಸೇರಿದಂತೆ ತಲೆಮರೆಸಿಕೊಂಡಿರುವ ಬಾಗಲಕೋಟೆಯ ಗಂಗಾಧರ ಕೋಲ್ಕರ, ಕೋಲ್ಕತ್ತಾ ಜೈಲಿನಲ್ಲಿರುವ ಶಹನೋಯಾಜ್‌ ಕಸೂರಿ, ಸೈಫ‌ುಲ್ಲಾ ಇಸ್ಲಾಂ, ಶುಕ್ರುದ್ದೀನ್‌ ಶೇಖ್‌, ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ತನಿಖೆ  ಮುಂದುವರಿಸಿದ್ದಾರೆ.

ಹೈದರಾಬಾದ್‌ ಎನ್‌ಐಎ ಕೇಸ್‌ನಲ್ಲಿ ಮದ್ದೂರಿನ ಯುವಕರು
ಈ ಮಧ್ಯೆ,  ಏಪ್ರಿಲ್‌ 15 ರಂದು ವಿಶಾಖ ಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಕಂದಾಯ ನಿರ್ದೇಶನಾಲಯದ ಗುಪ್ತಚರ ದಳ  (ಡಿಆರ್‌ಐ)  ಮಂಡ್ಯ ಜಿಲ್ಲೆ ಮದ್ದೂರಿನ ಮೆಹಬೂಬ್‌ ಬೇಗ್‌ ಅಲಿಯಾಸ್‌ ಅಜರ್‌ ಬೇಗ್‌, ಸೈಯದ್‌ ಇಮ್ರಾನ್‌ ಎಂಬುವರನ್ನು  ಬಂಧಿಸಿ 10.20 ಲಕ್ಷ ರೂ. ಮೌಲ್ಯದ 2000 ರೂ ಮುಖಬೆಲೆಯ ಖೋಟಾನೋಟು ಜಪ್ತಿ ಮಾಡಿಕೊಂಡಿತ್ತು. ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎನ್‌ಐಎ, ಇಬ್ಬರ  ವಿರುದ್ಧವೂ ವಿಜಯವಾಡ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆರೋಪಿ ಸೈಯದ್‌ ಇಮ್ರಾನ್‌, ಈ ಹಿಂದೆ  ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದು ಕೆಲ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಬಳಿಕ 2015ರಿಂದ ಖೋಟಾನೋಟು ಚಲಾವಣೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

– ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next