Advertisement

ನಿವೃತ್ತ ಬಿಸಿಎಂ ಅಧಿಕಾರಿಯಿಂದ ಭ್ರಷ್ಟಾಚಾರ: ತನಿಖೆಗೆ ನಿರ್ಣಯ

10:25 PM Sep 22, 2020 | mahesh |

ಕುಂದಾಪುರ: ಬಿಸಿಎಂ ಇಲಾಖೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಯಾಗಿದ್ದು ನಿವೃತ್ತರಾದವರೊಬ್ಬರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಪ್ರಕರಣದ ತನಿಖೆ ನಡೆಸುವಂತೆ ಮಂಗಳವಾರ ನಡೆದ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆ ನಿರ್ಣಯಿಸಿದೆ.

Advertisement

ಸದಸ್ಯ ನಾರಾಯಣ ಕೆ. ಗುಜ್ಜಾಡಿ ಅವರು ಪ್ರಸ್ತಾವಿಸಿ, ಊರಿನವರಿಗೆ, ಬಂಧುಗಳಿಗೆ ಉದ್ಯೋಗ ನೀಡಲು ಪ.ಜಾತಿಯ, ವಿಧವೆಗೆ ಅನ್ಯಾಯ ಮಾಡಿದ್ದಾರೆ. ಅಕ್ಕಿ, ಬೇಳೆ ಮಾರಾಟ, ಪೀಠೊಪಕರಣಗಳ ಖರೀದಿ ಸಂದರ್ಭ ಭ್ರಷ್ಟಾಚಾರ ಮಾಡುವುದಾಗಿ ಸ್ವತಃ ಹೇಳಿಕೊಂಡ ಅಡಿಯೋ ಇದೆ. ಸದಸ್ಯರಿಬ್ಬರ ಕುರಿತು ಮಾನಹಾನಿಕರವಾಗಿ ಮಾತನಾಡಿದ ದಾಖಲೆ ಇದೆ. ಸ್ವಜನ ಪಕ್ಷಪಾತಕ್ಕಾಗಿ ದಾಖಲೆಗಳನ್ನು ತಿದ್ದಿದ್ದಾರೆ. ಕೋಟೇಶ್ವರ ಹಾಸ್ಟೆಲ್‌ನಲ್ಲಿ 100 ಮಕ್ಕಳ ಸಾಮರ್ಥ್ಯ ಇದ್ದು 135 ಮಕ್ಕಳಿದ್ದರು. 8 ತಿಂಗಳಿನಿಂದ ಅಲ್ಲಿನ ಅಡುಗೆಯವರಿಗೆ ವೇತನ ನೀಡಿರಲಿಲ್ಲ . ಹೊರಗುತ್ತಿಗೆ ಏಜೆನ್ಸಿ ಹಾಗೂ ಅಧಿಕಾರಿಯ ವಿರುದ್ಧ ತನಿಖೆ ನಡೆಯಲಿ ಎಂದರು.

2018ರಲ್ಲಿ 29 ಜನ ಹೊರಗುತ್ತಿಗೆಯವರು ಇದ್ದು ಅನಂತರ 13 ಜನರ ಹುದ್ದೆ ಖಾಲಿ ಉಳಿಯಿತು. ಅಷ್ಟಕ್ಕೆ ಮಾತ್ರ ವೇತನ ನೀಡಲು ಅವಕಾಶ ಇತ್ತು ಎಂದು ಬಿಸಿಎಂ ಅಧಿಕಾರಿ ದಯಾನಂದ್‌ ಹೇಳಿದರು. ಸದಸ್ಯ ವಾಸುದೇವ ಪೈ, ನಿವೃತ್ತಿಯ ಅನಂತರ ಸೌಲಭ್ಯಗಳನ್ನು ತಡೆಹಿಡಿಯಿರಿ ಎಂದರು. ಅಂಬಿಕಾ ಅವರು, ಸಭೆಗೆ ಕರೆಸಲು ಅವಕಾಶ ಇದ್ದರೆ ಮುಂದಿನ ಸಭೆಗೆ ಕರೆಸಿ ಎಂದರು. ಜ್ಯೋತಿ ಪುತ್ರನ್‌, ಜಯಶ್ರೀ ಎಸ್‌. ಮೊಗವೀರ, ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ ಎಂದರು. ಉಮೇಶ್‌ ಶೆಟ್ಟಿ ಕಲ್ಗದ್ದೆ, ಕರಣ್‌ ಪೂಜಾರಿ, ನಮ್ಮಿಬ್ಬರ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ್ದು ಅವರ ಎಲ್ಲ ಹಗರಣಗಳನ್ನೂ ತನಿಖೆಗೆ ಒಳಪಡಿಸಬೇಕೆಂದರು. ಅಡುಗೆ, ಅಡುಗೆ ಸಹಾಯಕರ ನೇಮಕಾತಿಯಲ್ಲಿ ಪ್ರಭಾರ ನೆಲೆಯಲ್ಲಿದ್ದ ಶಶಿಕಲಾ ಅವರ ಮೇಲೂ ಸ್ವಜನ ಪಕ್ಷಪಾತದ ಲಿಖೀತ ಆರೋಪವನ್ನು ಜ್ಯೋತಿ ಪುತ್ರನ್‌ ಓದಿದರು. ಶಶಿಕಲಾ ಇದನ್ನು ನಿರಾಕರಿಸಿದರು.

ಗಾಂಜಾ ಹತೋಟಿಗೆ ಕ್ರಮ
ಗಾಂಜಾ ಹತೋಟಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. 56 ಜನರ ವೈದ್ಯಕೀಯ ತಪಾಸಣೆ ನಡೆಸಿ 17 ಜನರ ಮೇಲೆ ಗಾಂಜಾ ಸೇವನೆ, 4 ಪ್ರಕರಣಗಳಲ್ಲಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 20 ಪೆಡ್ಲರ್‌ಗಳು ಊರುಬಿಟ್ಟು ಹೋಗಿದ್ದಾರೆ ಎಂದು ಎಸ್‌ಐ ಸದಾಶಿವ ಗೌರೋಜಿ ಮಾಹಿತಿ ನೀಡಿದರು.

ಕೇಸು
ಹೆದ್ದಾರಿ ಅವ್ಯವಸ್ಥೆ ಕುರಿತು ಆಗಾಗ ಪ್ರತಿಭಟನೆ ಗಳು ನಡೆಯುತ್ತಿವೆ. ಕಾಮಗಾರಿ ಪೂರ್ಣವಾಗದೆ ಇದ್ದರೂ ಸುಂಕ ವಸೂಲಾತಿ ನಡೆಯುತ್ತಿದೆ. ಕಾಮಗಾರಿ ಸರಿಯಿಲ್ಲ ಎಂದು ಪ್ರಶ್ನಿಸುವ ಜನಪ್ರತಿನಿಧಿಗಳ ಮೇಲೆ ಕೇಸು ದಾಖಲಿವ ಬೆದರಿಕೆ ಬರುತ್ತದೆ. ಇದು ಯಾವ ಕಾನೂನು ಎಂದು ಕರಣ್‌ ಪೂಜಾರಿ ಹೇಳಿದರು. ನಿಮ್ಮ ಮೇಲೆ ಕೇಸು ದಾಖಲಿಸಲು ಬಿಡುವುದಿಲ್ಲ ಎಂದು ಅಧ್ಯಕ್ಷೆ ಇಂದಿರಾ ಶೆಡ್ತಿ ಹೇಳಿದರು. ಇಲಾಖಾ ದಬ್ಟಾಳಿಕೆ ಎಂದು ವಾಸುದೇವ ಪೈ, ಇದು ತಾ.ಪಂ.ಗೆ ಮಾಡಿದ ಅವಮಾನ ಎಂದು ಜ್ಯೋತಿ, ಈ ವರೆಗೆ ಹೆದ್ದಾರಿ ಅವ್ಯವಸ್ಥೆ ಕುರಿತಾದ ಚರ್ಚೆಗೆ ಕೈಗೊಂಡ ಕ್ರಮಗಳೇನು ಎಂದು ಉಮೇಶ್‌ ಪ್ರಶ್ನಿಸಿದರು.

Advertisement

ತೆರವು
ಅತಿಕ್ರಮವಾಗಿ ಕೆರೆಯಲ್ಲೇ ರಸ್ತೆ ನಿರ್ಮಿಸಿದರೂ ಚೋಳನಕೆರೆ ಒತ್ತುವರಿ ಇಲ್ಲ ಎಂದು ವರದಿ ನೀಡಲಾಗಿದ್ದು ಮಡಿವಾಳ ಕೆರೆಯ ಒತ್ತುವರಿ ಶೀಘ್ರ ತೆರವು ಮಾಡಬೇಕು ಎಂದು ಸುರೇಂದ್ರ ಖಾರ್ವಿ ಹೇಳಿದರು.
ಅಧ್ಯಕ್ಷೆ ಇಂದಿರಾ ಶೆಡ್ತಿ, ಉಪಾಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ, ಸ್ಥಾಯೀ ಸಮಿತಿ ಅಧ್ಯಕ್ಷೆ ರೂಪಾ ಪೈ, ಕಾರ್ಯ ನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್‌, ತಹಶೀಲ್ದಾರ್‌ ಆನಂದಪ್ಪ ನಾಯ್ಕ ಉಪಸ್ಥಿತರಿದ್ದರು.

500 ರೂ.ಗೆ ಆಧಾರ್‌ ಕಾರ್ಡ್‌
ಆಧಾರ್‌ ಕಾರ್ಡ್‌ ಮಾಡಿಸಲು ತೊಂದರೆಯಾಗುತ್ತಿದೆ. 500 ರೂ. ಲಂಚ ನೀಡಿದರೆ ತತ್‌ಕ್ಷಣ ಮಾಡಿಕೊಡಲಾಗುತ್ತದೆ ಎಂದು ಸವಿತಾ ಎಸ್‌. ಮೊಗವೀರ ಹೇಳಿದರು. ನೂರಾರು ಮಂದಿಗೆ ಪಿಂಚಣಿ ಬರುತ್ತಿಲ್ಲ ಎಂದು ಸದಸ್ಯರು ಹೇಳಿದಾಗ, ಆಧಾರ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆ ಪ್ರತಿ ತಾಲೂಕು ಕಚೇರಿಗೆ ಕೊಟ್ಟರೆ ಸರಿಪಡಿಸಲಾಗುವುದು ಎಂದು ತಹಶೀಲ್ದಾರ್‌ ಆನಂದಪ್ಪ ನಾಯ್ಕ ಹೇಳಿದರು.
ತಾಲೂಕು ಕಚೇರಿಗೆ ಕರೆಸುವ ಬದಲು ವಿಎಗಳ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಿ ಎಂದು ಸದಸ್ಯರಿಂದ ಬೇಡಿಕೆ ಬಂತು. ಕಾವ್ರಾಡಿಯ 70 ಮಂದಿಗೆ 94ಯಲ್ಲಿ ಡಿ ನೋಟಿಸ್‌ ನೀಡಿಲ್ಲ ಎಂದು ಜ್ಯೋತಿ ಪುತ್ರನ್‌, ಗಂಗೊಳ್ಳಿಯ 18 ಮಂದಿಗೆ ಹಕ್ಕುಪತ್ರ ದೊರೆತಿಲ್ಲ ಎಂದು ಗಂಗೊಳ್ಳಿ ಪಂಚಾಯತ್‌ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಹೇಳಿದರು.

ಆಸ್ಪತ್ರೆ ಸಾಲ- ಉದಯವಾಣಿ ವರದಿ
ಕೋವಿಡ್‌ ಆಸ್ಪತ್ರೆ 20 ಲಕ್ಷ ರೂ. ಸಾಲದಲ್ಲಿದೆ ಎಂದು ಉದಯವಾಣಿ ವರದಿ ಮಾಡಿದೆ. ಈ ಕುರಿತು ಚಿತ್ರಣ ಬೇಕು ಎಂದು ಉಮೇಶ್‌ ಶೆಟ್ಟಿ ಕಲ್ಗದ್ದೆ ಹೇಳಿದರು. ಹೊರಬಾಕಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ವಾಸುದೇವ ಪೈ ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಲು ಸಂಬಂಧಪಟ್ಟವರು ಇರಲಿಲ್ಲ. ತಾಲೂಕು ಆರೋಗ್ಯಾಧಿಕಾರಿ ಉತ್ತರಿಸಲಿಲ್ಲ. ಸರಕಾರಿ ಆಸ್ಪತ್ರೆಯಲ್ಲಿರುವ ಕೋವಿಡ್‌ ಚಿಕಿತ್ಸಾ ಘಟಕ ಸ್ಥಳಾಂತರಿಸಿ ಸಾಮಾನ್ಯರಿಗೆ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಉದಯ ಪೂಜಾರಿ, ಕರಣ್‌ ಪೂಜಾರಿ, ಜ್ಯೋತಿ ಪುತ್ರನ್‌ ಹೇಳಿದರು. ಕೋವಿಡ್‌ ಆಸ್ಪತ್ರೆ ಸ್ಥಳಾಂತರ ಬೇಡ, ಸಾಮಾನ್ಯರ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಎಂದು ಉಮೇಶ್‌ ಶೆಟ್ಟಿ ಹೇಳಿದರು. ಈ ಚರ್ಚೆಗೆ ಉತ್ತರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ, ತಾಲೂಕು ಮಟ್ಟದಲ್ಲಿ ಆರಂಭವಾದ ರಾಜ್ಯದ ಮೊದಲ ಕೋವಿಡ್‌ ಆಸ್ಪತ್ರೆ ಇದು. 10 ಐಸಿಯು ಬೆಡ್‌, 100 ಆಕ್ಸಿಜನ್‌ ಬೆಡ್‌ಗಳಿವೆ. ಇನ್ನೂ 200 ಬೆಡ್‌ಗಳಿಗೆ ನಾವು ಸಿದ್ಧರಿದ್ದೇವೆ. ಸಾರ್ವಜನಿಕರೇ ಬಂದು ತಪಾಸಣೆ ನಡೆಸಲು ಸಹಕರಿಸಬೇಕು. ನಿಯಮಗಳು ಬದಲಾಗಿದ್ದು ಈಗ ಪಾಸಿಟಿವ್‌ ಬಂದರೆ ಸೀಲ್‌ಡೌನ್‌ ಮಾಡುವುದಿಲ್ಲ. ತ್ವರಿತ ಚಿಕಿತ್ಸೆ ಮೂಲಕ ಕಾಯಿಲೆ ದೂರ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next