ಉಡುಪಿ: ಉಡುಪಿಯ ಕಾರ್ಪೊರೇಶನ್ ಬ್ಯಾಂಕ್ ಹೆರಿಟೇಜ್ ಮ್ಯೂಸಿಯಂ “ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್’ ಸೇರ್ಪಡೆ ಗೌರವ ಪಡೆದಿದೆ.
ಜೂ. 23ರಂದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಜೂ. 25ರಂದು ಬ್ಯಾಂಕ್ನ ಹಿರಿಯ ಅಧಿಕಾರಿಗಳು ಮ್ಯೂಸಿಯಂನಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಸಿದರು.
ಮ್ಯೂಸಿಯಂನಲ್ಲಿ ಕ್ರಿ.ಪೂ. 400ರಿಂದ ಇಂದಿನವರೆಗಿನ ವಿವಿಧ ಸಾಮ್ರಾಜ್ಯ, ಆಡಳಿತಗಳ 1,800ಕ್ಕೂ ಅಧಿಕ ಅಪೂರ್ವ ನಾಣ್ಯಗಳನ್ನು ಸಂಗ್ರಹಿಸಿಡಲಾಗಿದೆ. ಅಲ್ಲದೆ 10 ರೂ.ಗಳಿಂದ 1,000 ರೂ. ಮುಖಬೆಲೆಯ ಸ್ಮರಣಿಕೆ ನಾಣ್ಯ (ಕಮೆಮೊರೇಟಿವ್ ಕಾಯಿನ್ಸ್)ಗಳು ಹಾಗೂ ದೇಶ ಮತ್ತು ವಿದೇಶಗಳ ಕರೆನ್ಸಿ ನೋಟುಗಳಿವೆ. ಗಾಂಧಾರ, ಸೌರಾಷ್ಟ್ರ, ಆಶೋಕ ಸಹಿತ ಪ್ರತಿಯೊಂದು ಸಾಮ್ರಾಜ್ಯ, ರಾಜರ ಆಡಳಿತದ ನಾಣ್ಯಗಳು, ನಕಾಶೆಗಳ ಮಾಹಿತಿಯನ್ನು ಇಲ್ಲಿ ಅಳವಡಿಸಲಾಗಿದೆ. ಮ್ಯೂಸಿಯಂ ರವಿವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ತೆರೆದಿರುತ್ತದೆ. ಮೂರು ತಿಂಗಳುಗಳ ಹಿಂದೆ ಸುಪ್ರಿಂ ಕೋರ್ಟ್ ನ್ಯಾಯವಾದಿ ಸಂತೋಷ್ ಶುಕ್ಲಾ ಆಗಮಿಸಿ ಮ್ಯೂಸಿಯಂನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಅಭಿನಂದನ ಸಮಾರಂಭದಲ್ಲಿ ಬ್ಯಾಂಕ್ನ ಮಹಾಪ್ರಬಂಧಕ ಶ್ರೀವಾತ್ಸವ, ಉಪಮಹಾಪ್ರಬಂಧಕಿ ಡೇಲಿಯಾ ಡಯಾಸ್, ಮುಖ್ಯಪ್ರಬಂಧಕ ಜಗದೀಶ್ ನಾಯಕ್, ಶಿವರಾಂ ಕೃಷ್ಣನ್, ಹಿರಿಯ ಪ್ರಬಂಧಕ ಗುರುಪ್ರಸಾದ್ ಬಲ್ಲಾಳ್, ಮ್ಯೂಸಿಯಂನ ಕ್ಯುರೇಟರ್ ಮತ್ತು ಗೈಡ್ ಎಂ.ಕೆ. ಕೃಷ್ಣಯ್ಯ ಉಪಸ್ಥಿತರಿದ್ದರು.