Advertisement

ನೆಲಕಚ್ಚಿದ ಜೋಳ-ಹಾಳಾದ ತೊಗರಿ

12:13 PM Dec 15, 2018 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಗುರುವಾರ ರಾತ್ರಿಯಿಡಿ ಅಕಾಲಿಕವಾಗಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡರೆ, ಈಗಾಗಲೇ ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಬೆಳೆ ಹಾನಿಯಿಂದ ಮತ್ತೂಂದು ಹೊಡೆತ ಬಿದ್ದಂತಾಗಿದೆ.

Advertisement

ರಾತ್ರಿ 11 ಗಂಟೆ ಸುಮಾರಿಗೆ ಹಠಾತ್‌ ಆರಂಭವಾದ ಮಳೆ ಬೆಳಗಿನ ಜಾವದವರೆಗೆ ಬಿಟ್ಟು ಬಿಡದೆ ಸುರಿದಿದೆ. ನಗರದ ತಗ್ಗು ಪ್ರದೇಶದ ಮನೆಗಳು, ಅಂಗಡಿಗಳಿಗೆ ಮಳೆ ನೀರು ನುಗ್ಗಿದ್ದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಯಿತು. ಜತೆಗೆ ಬೆಳಗ್ಗೆಯೂ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಆಗಿದ್ದರಿಂದ ಶಾಲೆಗೆ ತೆರಳುವ ಮಕ್ಕಳು ತೊಂದರೆಗೆ ಸಿಲುಕಿದರು.

ನಗರದ ಮುಖ್ಯ ರಸ್ತೆಯ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಕೆಬಿಎನ್‌ ಆಸ್ಪತ್ರೆ, ಅನ್ನಪೂರ್ಣ ಕ್ರಾಸ್‌, ಲಾಲ್‌ ಗಿರಿ ಕ್ರಾಸ್‌, ಜೇವರ್ಗಿ ಕ್ರಾಸ್‌, ಮಾಕಾ ಲೇಔಟ್‌, ಆನಂದ ಹೋಟೆಲ್‌, ಕೋರ್ಟ್‌ ರಸ್ತೆಯಲ್ಲಿರುವ ಸಿದ್ಧಾರ್ಥ ಕಾನೂನು ಕಾಲೇಜು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೆಲ ಮಹಡಿಗಳಿಗೆ ನೀರು ನುಗ್ಗಿ ಸಾಕಷ್ಟು ತೊಂದರೆ ಉಂಟಾಗಿದೆ. ಇತ್ತ, ಬಿದ್ದಾಪೂರ ಕಾಲೋನಿ, ಕೈಲಾಶ ನಗರ, ತಾಜ್‌ ಸುಲ್ತಾನ್‌ಪುರ ಮತ್ತಿತರ ಕಡೆ ಕೆಲ ಪ್ರದೇಶಗಳು ಜಲಾವೃತವಾಗಿದ್ದವು. ಇದರಿಂದ ಸಾರ್ವಜನಿಕರು, ವಾಹನ ಸವಾರರು ಓಡಾಡಲಾಗದೆ ಪರದಾಡಿದರು. 

ರೈತರಿಗೆ ಮತ್ತೂಂದು ಹೊಡೆತ: ಇತ್ತ, ಈಗಾಗಲೇ ಮುಂಗಾರು ಹಾಗೂ ಹಿಂಗಾರು ಮಳೆಗಳು ಕೈಕೊಟ್ಟಿರುವುದರಿಂದ ರೈತರು ತತ್ತರಿಸಿ ಹೋಗಿದ್ದಾರೆ. ಗುರುವಾರ ರಾತ್ರಿ ಅಕಾಲಿಕ ಮಳೆ ರೈತರ ಪಾಲಿಗೆ ಕೆಡಾಗಿ ಪರಿಣಮಿಸಿದೆ. ಬರಗಾಲದಲ್ಲಿಯೂ ಇದ್ದಷ್ಟು ತೊಗರಿ ಬೆಳೆ ಬೆಳೆದ ರೈತರು ರಾಶಿ ಮಾಡಲು ಶುರು ಮಾಡಿದ್ದಾರೆ. ಈಗ ಮಳೆಯಿಂದಾಗಿ ಇದ್ದ ತೊಗರಿಯನ್ನು ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. ತೊಗರಿ ಮಾತ್ರವಲ್ಲದೇ ಜೋಳ, ಕಡಲೆ ಬೆಳೆ ,ರೇಷ್ಮೆ ಮೇಲೂ ಮಳೆ ದುಷ್ಪರಿಣಾಮ ಬೀರಿದೆ. ಜೋರಾದ ಗಾಳಿ, ಮಳೆಯಿಂದಾಗಿ ಜೋಳದ ಬೆಳೆ ನೆಲಕ್ಕೆ ಮಕಾಡೆ ಮಲಗಿದೆ.

ಎಲ್ಲೆಲ್ಲಿ ಎಷ್ಟು ಮಳೆ?: ಜಿಲ್ಲೆಯಾದ್ಯಂತ ಗುರುವಾರ ಹಠಾತ್‌ ಸುರಿದ ಮಳೆಯಿಂದ ಒಟ್ಟು ಸರಾಸರಿ 12 ಮೀ.ಮೀ. ಮಳೆಯಾಗಿದೆ. ಕಲಬುರಗಿ ತಾಲೂಕಿನಲ್ಲಿ ಅತ್ಯಧಿಕವಾಗಿ 26 ಮೀ.ಮೀ. ಮಳೆ ಸುರಿದಿದೆ. ಆಳಂದ ತಾಲೂಕಿನಲ್ಲಿ 10, ಅಫಜಲಪುರ ತಾಲೂಕಿನಲ್ಲಿ 7, ಚಿತ್ತಾಪುರ ತಾಲೂಕಿನಲ್ಲಿ 13 ಮತ್ತು ಚಿಂಚೋಳಿ ತಾಲೂಕಿನಲ್ಲಿ 22 ಮೀ. ಮೀ. ಮಳೆಯಾಗಿದ್ದು, ಸೇಡಂ ಮತ್ತು ಜೇವರ್ಗಿ ತಾಲೂಕುಗಳಲ್ಲಿ ಮಳೆಯಾಗಿಲ್ಲ ರಾತ್ರಿಯಿಂದ ಬೆಳಗಿನವರೆಗೂ ಸುರಿಯಿತು ಮಳೆ ಚಿಂಚೋಳಿ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಗುರುವಾರ ಹಾಗೂ ಶುಕ್ರವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ಜೋಳದ ಬೆಳೆ ನೆಲಕ್ಕುರುಳಿ ಹಾನಿಯಾದರೆ, ಕಟಾವಿಗೆ ಬಂದ ತೊಗರಿ ರಾಶಿಗೆ ಅಡ್ಡಿಯನ್ನುಂಟು ಮಾಡಿದೆ.

Advertisement

ತಾಲೂಕಿನ ತುಮಕುಂಟಾ, ನಾಗಾಇದಲಾಯಿ, ಚಿಮ್ಮನಚೋಡ, ಐನಾಪುರ, ನಿಡಗುಂದಾ, ಸುಲೇಪೇಟ, ಐನೋಳಿ, ದೇಗಲಮಡಿ, ಹಸರಗುಂಡಗಿ, ಸಾಲೇಬೀರನಳ್ಳಿ, ಕನಕಪುರ ಗ್ರಾಮಗಳಲ್ಲಿ ಗುರುವಾರ ಸಂಜೆ ಬಿರುಗಾಳಿ ಸಮೇತ ಸುರಿದ ಭಾರಿ ಮಳೆಯಿಂದಾಗಿ ಹಿಂಗಾರಿ ಹಂಗಾಮಿನಲ್ಲಿ ರೈತರು ಬೆಳೆ ಜೋಳದ ಬೆಳೆ ಕೆಲವು ಗ್ರಾಮಗಳಲ್ಲಿ ನೆಲಕ್ಕೆ ಬಾಗಿವೆ.

ತುಮಕುಂಟಾ ಗ್ರಾಮದಲ್ಲಿಯೇ ಅತಿ ಹೆಚ್ಚು 40 ಹೆಕ್ಟೇರ್‌ ಜಮೀನಿನಲ್ಲಿ ಬೆಳೆದ ಜೋಳದ ಬೆಳೆ ಸಂಪೂರ್ಣವಾಗಿ ನೆಲಕ್ಕೆ
ಬಾಗಿ ಹಾನಿ ಆಗಿದೆ ಎಂದು ರೈತ ಜಗನ್ನಾಥರೆಡ್ಡಿ ತಿಳಿಸಿದ್ದಾರೆ.

ದೇಗಲಮಡಿ, ಐನೋಳಿಯಲ್ಲಿ ಶುಕ್ರವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ವ್ಯಾಪಕ ಮಳೆ ಆಗಿರುವುದರಿಂದ ಕಟಾವಿಗೆ ಬಂದ ತೊಗರಿ ಬೆಳೆ ಹಾನಿಯಾಗಿದೆ. ಪಟ್ಟಣದಲ್ಲಿ ವ್ಯಾಪಕ ಮಳೆ ಆಗಿದ್ದು, ಮಳೆಗಾಲದಲ್ಲಿ ಇಂತಹ ಮಳೆ ಆಗಿಲ್ಲ.
ಈಗ ಮಳೆ ಆದರೆ ಜೋಳ ಬೆಳೆಗಳು ಚೇತರಿಕೆ ಆಗಲಿವೆ. ಆದರೆ ತೊಗರಿ ರಾಶಿಗೆ ಭಾರಿ ಅಡ್ಡಿ ಆಗಲಿದೆ. ಮಳೆ ಅಭಾವದ ಮಧ್ಯೆ ಉಳಿದ ತೊಗರಿ ಬೆಳೆಯನ್ನು ರೈತರು ಕೆಲವು ಗ್ರಾಮಗಳಲ್ಲಿ ರಾಶಿ ಮಾಡಿಕೊಳ್ಳುತ್ತಿದ್ದಾರೆ ಈಗ ಮಳೆ ಬಂದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ ಎಂದು ರೈತ ಮುಖಂಡ ಭೀಮಶೆಟ್ಟಿ ಎಂಪಳ್ಳಿ ತಿಳಿಸಿದ್ದಾರೆ. 

ಗಡಿಕೇಶ್ವಾರ, ಕೊಡಂಪಳ್ಳಿ, ಕರ್ಚಖೇಡ, ಗಣಾಪೂರ, ಗರಗಪಳ್ಳಿ, ಇರಗಪಳ್ಳಿ, ಕೆರೋಳಿ, ಭಂಟನಳ್ಳಿ, ಕೊರವಿ, ನಾವದಗಿ, ರಟಕಲ್‌, ಮೋಘಾ, ಕೋಡ್ಲಿ, ಹಲಚೇರಾ ಗ್ರಾಮಗಳಲ್ಲಿ ಕಡಲೆ ಬೆಳೆಯ ಹೂವು ಉದುರಿ ಹೋಗಿವೆ ಎಂದು ರೈತರಾದ ವಿಜಯಕುಮಾರ ಚೇಂಗಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ತೊಗರಿ ರಾಶಿಗೆ ತೊಂದರೆ ಆಗಿದೆ. ಅಲ್ಲದೇ ಈಗ ಮಳೆ ಸುರಿಯುತ್ತಿರುವುದರಿಂದ ರೈತರು ಆತಂಕ ಪಡುವಂತಾಗಿದೆ.

ಜಿಪಂ ಸದಸ್ಯ ಗೌತಮ ಪಾಟೀಲ ಭೇಟಿ: ತುಮಕುಂಟಾ ಗ್ರಾಮದಲ್ಲಿ ಮಳೆಯಿಂದ ಜೋಳದ ಬೆಳೆ ಹಾನಿಗೊಂಡ ರೈತನ ಹೊಲಕ್ಕೆ ಜಿಪಂ ಸದಸ್ಯ ಗೌತಮ ಪಾಟೀಲ, ರೈತ ಮುಖಂಡರಾದ ವಿಠಲರೆಡ್ಡಿ, ಜಗನ್ನಾಥರೆಡ್ಡಿ ಪಾಟೀಲ ಹಾಗೂ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕು ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ ಭೇಟಿ: ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಂಡಿರುವ ಹೊಲಗಳಿಗೆ ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.
 
ಮಳೆ ವಿವರ: ಚಿಂಚೋಳಿ 8 ಮಿ.ಮೀ, ಐನಾಪುರ 35.2 ಮಿ.ಮೀ, ಕುಂಚಾವರಂ 20.4 ಮಿ.ಮೀ, ಸುಲೇಪೇಟ 13.4 ಮಿ.ಮೀ, ಚಿಮ್ಮನಚೋಡ 48.2 ಮಿ.ಮೀ, ಕೋಡ್ಲಿ 36 ಮಿ.ಮೀ, ನಿಡಗುಂದಾ 43 ಮಿ.ಮೀ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಸಿಬ್ಬಂದಿ ಕಂಟೆಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next