Advertisement

ಸಮಾಜದ ರಕ್ಷಣೆಗೆ ಸಾಹಿತ್ಯದ ಕೊಡುಗೆ: ಡಾ|ರಂಗನಾಥ್‌

11:15 PM Dec 15, 2020 | mahesh |

ಬೆಳ್ತಂಗಡಿ: ಸಾಹಿತ್ಯ ಕೃತಿ ಜೀವನ ಮೌಲ್ಯದ ಆಕಾರವಾಗಿದೆ. ಸಾಹಿತ್ಯದ ಮೌಲ್ಯಗಳು ಸ್ವಂತ ಅಧ್ಯಯನ, ಅನುಭವ
ಸಂಸ್ಕಾರ ಮತ್ತು ಜೀವನಗಳಿಂದ ಸಮ್ಮಿಳಿತ. ಸಮಾಜದ ರಕ್ಷಣೆ ಮತ್ತು ಪೋಷಣೆಗೆ ಸಾಹಿತ್ಯ ಅಹರ್ನಿಶಿಯಾಗಿ ಶ್ರಮಿಸುತ್ತಿದೆ ಎಂದು ಬೆಂಗಳೂರಿನ ಹಿರಿಯ ವಿದ್ವಾಂಸರಾದ ಡಾ| ಎಸ್‌.ರಂಗನಾಥ್‌ ಅಭಿಪ್ರಾಯಪಟ್ಟರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ಆಯೋಜಿಸಿದ ಸಾಹಿತ್ಯ ಸಮ್ಮೇಳನದ 88ನೇ ಅಧಿವೇಶನವನ್ನು ಅಮೃತವರ್ಷಿಣಿ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯವು ಸಮಾಜದ ಕನ್ನಡಿಯಂತೆ. ಸಮಾಜವು ಯಾವ ವಿಧದಲ್ಲಿದ್ದರೂ ಅದರ ಪ್ರತಿಬಿಂಬವೇ ಸಾಹಿತ್ಯದಲ್ಲಿ ರೂಪಿತವಾಗುತ್ತದೆ. ಸಮಾಜದ ರೂಪುರೇಷೆಗಳು, ಏರಿಳಿತಗಳು, ಅಭ್ಯುದಯಗಳ ನಿಶ್ಚಯಾತ್ಮಕ ವಾದ ಜ್ಞಾನ ನಮಗೆ ಸಮಕಾಲೀನ ಸಾಹಿತ್ಯದಿಂದ ಪ್ರತಿಫ‌ಲಿಸುತ್ತದೆ ಎಂದರು.

ಸಾಹಿತ್ಯದ ಅಧ್ಯಯನವೇ ಸ್ವರ್ಗ ಶಿಸ್ತು ಇಲ್ಲದ ಶಾಲೆ, ದಯೆ ಇಲ್ಲದ ಧರ್ಮ, ಪಾಲನೆ ಇಲ್ಲದ ಬೋಧನೆ ವ್ಯರ್ಥ. ಸಾಹಿತ್ಯದ ಮೂಲಕ ಆಧ್ಯಾತ್ಮಿಕ, ಧಾರ್ಮಿಕ, ಮಾನವೀಯ, ಸಾಂಸ್ಕೃತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಡಾ| ಹೆಗ್ಗಡೆ ಚಿಂತನೆ ಅಸದೃಶ ಶ್ರೀ ಕ್ಷೇತ್ರದಲ್ಲಿ ಡಾ| ಹೆಗ್ಗಡೆ ಅವರ ಪರಿಕಲ್ಪನೆಯಲ್ಲಿ ನಡೆದು ಬರುತ್ತಿರುವ ಸಾಹಿತ್ಯ ಸಮ್ಮೇಳನ ಹೆಗ್ಗಡೆಯವರ ಪರಂಪರೆಯ ವ್ಯಕ್ತಿತ್ವವನ್ನು ಪ್ರಜ್ವಲಿಸುತ್ತಿದೆ. ಕ್ಷೇತ್ರದ ಜನಜಾಗೃತಿ, ಸ್ವ-ಉದ್ಯೋಗ ಪರಿಕಲ್ಪನೆ, ಆಯುರ್ವೇದಕ್ಕೆ ನೀಡಿದ ಮನ್ನಣೆ, ದೇಗುಲ ಜೀರ್ಣೋದ್ಧಾರ, ಶಿಕ್ಷಣ ಕ್ರಾಂತಿಯೆಡೆಗಿನ ಚಿಂತನಾ ಲಹರಿ ಅಸದೃಶ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಧರ್ಮದ ನಡೆ ಸಮಾಜದ ಕಡೆಗಿರಬೇಕು. ಧರ್ಮಕ್ಕೆ ಬೇಕಿರುವುದು ಮಾತೃಹೃದಯ. ಅದು ಧರ್ಮಸ್ಥಳದಲ್ಲಿ ವಾತ್ಸಲ್ಯ ಯೋಜನೆಯ ಮೂಲಕ ಸಾಕಾರಗೊಂಡಿದೆ ಎಂದರು.

Advertisement

ದೇವರನ್ನು ಅಥವಾ ದೇವಸ್ಥಾನಗಳನ್ನು ಆದಾಯದ ಶ್ರೀಮಂತಿಕೆಯಿಂದ ಅಳೆಯ ದಿರಿ. ಬದಲಾಗಿ ಜನಕಲ್ಯಾಣಕ್ಕಾಗಿ ತೊಡಗಿ ಸಿದ ಸೇವೆಯನ್ನು ಗೌರವಿಸಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಮಾನವ ಜೀವನಕ್ಕೆ ಹಿತವನ್ನುಂಟು ಮಾಡುವುದೇ ಸಾಹಿತ್ಯದ ಉದ್ದೇಶವಾಗಿದೆ. ಧರ್ಮ ಮತ್ತು ಸಾಹಿತ್ಯ ಮಾನವ ಜೀವನದ ಏಳಿಗೆಗೆ ಪೂರಕ ಮತ್ತು ಪ್ರೇರಕವಾಗಿದೆ. ಸರ್ವರ ಹಿತರಕ್ಷಣೆಯೊಂದಿಗೆ ಭಾಷಾ ಸಾಮರಸ್ಯ ಭಾಷಾಭಿಮಾನದ ಜತೆಗೆ ಮಾನವೀಯ ಮೌಲ್ಯಗಳ ಉದ್ದೀಪನ ಹಾಗೂ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಸಾಹಿತ್ಯ ಅಗತ್ಯ ಎಂದರು.

ಸಮ್ಮೇಳನದಲ್ಲಿ ಉಪನ್ಯಾಸ ಪಂಪನ ಆದಿ ಪುರಾಣದಲ್ಲಿ ಜೀವನ ವೃಷ್ಟಿ ವಿಚಾರವಾಗಿ ಮೈಸೂರಿನ ಪ್ರಾಧ್ಯಾಪಕಿ, ಸಂಸ್ಕೃತ ಚಿಂತಕಿ ಡಾ| ಜ್ಯೋತಿ ಶಂಕರ್‌, ಲಿಪಿ-ಭಾಷೆ ಹಾಗೂ ಸಂಸ್ಕೃತಿ ವಿಚಾರವಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ| ಪುಂಡಿಕಾಯ್ ಗಣಪಯ್ಯ ಭಟ್‌ ಉಪನ್ಯಾಸ ನೀಡಿದರು.

ಸಮ್ಮೇಳನದ ಅಧ್ಯಕ್ಷರು ಹಾಗೂ ಉದ್ಘಾಟಕರನ್ನು ಡಾ| ಹೆಗ್ಗಡೆಯವರು ಗೌರವಿಸಿದರು. ಡಿ. ಹರ್ಷೇಂದ್ರ ಕುಮಾರ್‌ ಉಪನ್ಯಾಸಕರನ್ನು ಗೌರವಿಸಿದರು. ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್‌, ಡಿ. ರಾಜೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ನೀತಾ ರಾಜೇಂದ್ರ ಕುಮಾರ್‌, ಅಮಿತ್‌ ಕುಮಾರ್‌, ಶ್ರದ್ಧಾ ಅಮಿತ್‌ ಉಪಸ್ಥಿತರಿದ್ದರು.

ಉಜಿರೆ ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆ ಪ್ರಾಜೆಕ್ಟ್ ನಿರ್ದೇಶಕ ಡಿ. ಶ್ರೇಯಸ್‌ ಕುಮಾರ್‌ ಹಾಗೂ ಮೈತ್ರಿ ನಂದೀಶ್‌ ಸಮ್ಮಾನ ಪತ್ರ ವಾಚಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ| ಬಿ.ಪಿ. ಸಂಪತ್‌ ಕುಮಾರ್‌ ಕಾರ್ಯಕ್ರಮ ನಿರ್ವಹಿಸಿ, ರುಡ್‌ ಸೆಟ್‌ ನಿರ್ದೇಶಕ ಪಿ.ಸಿ. ಹಿರೇಮಠ ವಂದಿಸಿದರು.

ಧರ್ಮಸ್ಥಳ ಪಂಚದಾನ ಶ್ರೇಷ್ಠ
ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯ ದಾನ ಎಂಬ ಚತುರ್ವಿಧದಾನದೊಂದಿಗೆ ಡಾ| ಹೆಗ್ಗಡೆಯವರು ಯುವ ಜನತೆಯಲ್ಲಿ ಮತ್ತು ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ಸ್ವಶಕ್ತಿ ದಾನವನ್ನು ಅಳವಡಿಸಿಕೊಂಡು ಕ್ರಾಂತಿ ಕಾರಿ ಸುಧಾರಣೆ ಮಾಡಿದ್ದಾರೆ. ಅದಕ್ಕಾಗಿ ಧರ್ಮಸ್ಥಳ ಚತುರ್ದಾನ ಕ್ಕಿಂತಲೂ ಪಂಚದಾನ ಶ್ರೇಷ್ಠ ಎಂದು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next