Advertisement

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ: ಆನಂದ್‌ ಶೆಟ್ಟಿ ಮಿಯ್ಯಾರ್

06:01 PM Jan 02, 2020 | Team Udayavani |

ಪುಣೆ, ಜ. 1: ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ 9ನೇ ವಾರ್ಷಿಕೋತ್ಸವ ಸಮಾರಂಭವು ಜ. 11ರಂದು ನಗರದ ತಿಲಕ ಸ್ಮಾರಕ ಸಭಾಭವನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಈ ಬಗ್ಗೆ ಪೂರ್ವಭಾವಿ ಸಭೆಯೊಂದು ಡಿ. 30ರಂದು ಪೂನಾ ಕ್ಲಬ್‌ ಕಾನ್ಫರೆನ್ಸ್‌ ಹಾಲ್‌ನಲ್ಲಿ ಸಂಘದ ಅಧ್ಯಕ್ಷ ಆನಂದ್‌ ಶೆಟ್ಟಿ ಮಿಯ್ನಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಈ ಸಂದರ್ಭ ಆನಂದ್‌ ಶೆಟ್ಟಿ ಅವರು ಸಮಿತಿ ಸದಸ್ಯರನ್ನು ಸ್ವಾಗತಿಸಿ ಮಾತನಾಡಿ ಪ್ರತೀ ವರ್ಷದಂತೆ ನಮ್ಮ ಸಂಘದ 9ನೇ ವಾರ್ಷಿಕೋತ್ಸವ ಸಮಾರಂಭವು ಜ. 11ರಂದು ನಡೆಯಲಿದ್ದು ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ನಡೆಸುವಲ್ಲಿ ನಾವೆಲ್ಲರೂ ಪೂರ್ವತಯಾರಿಯನ್ನು ಮಾಡಿಕೊಳ್ಳ ಬೇಕಾಗಿದೆ. ಪುಣೆಯಾದ್ಯಂತ ಇರುವ ಸಮಾಜ ಬಾಂಧವರನ್ನು ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಮಂತ್ರಣಪತ್ರವನ್ನು ನೀಡಬೇಕಾಗಿದೆ.

ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಮಾಜದ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳಾಗಾದಂತೆ ಇದು ನಮ್ಮ ಮನೆಯ ಸಮಾರಂಭವೆಂಬಂತೆ ಭಾವಿಸಿ ಸಮಾರಂಭವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರೆಲ್ಲರೂ ಸಹಕಾರ ನೀಡಬೇಕೆಂದರು.

ಸಂಘದ ಉಪಾಧ್ಯಕ್ಷರಾದ ಗಣೇಶ್‌ ಹೆಗ್ಡೆ ಮಾತನಾಡಿ ಇದು ನಮ್ಮದೇ ಕಾರ್ಯಕ್ರಮವಾಗಿದ್ದು ನಾವೆಲ್ಲರೂ ಯೋಜನಾ ಬದ್ಧವಾಗಿ ಕಾರ್ಯಕ್ರಮದ ತಯಾರಿ ಯಲ್ಲಿ ತೊಡಗಿಸಿಕೊಂಡರೆ ಕಾರ್ಯಕ್ರಮ ಯಶಸ್ಸಾಗುವುದರಲ್ಲಿ ಸಂಶಯವಿಲ್ಲ. ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸುವ ಜವಾಬ್ದಾರಿ ನಮ್ಮ ಮೇಲಿದ್ದು ಅದಕ್ಕಾಗಿ ನಾವೆಲ್ಲರೂ ಒಮ್ಮತದಿಂದ ಶ್ರಮಿಸಬೇಕೆಂದರು.

ಸಂಘದ ಮಾಜಿ ಅಧ್ಯಕ್ಷರಾದ ನಾರಾಯಣ ಕೆ. ಶೆಟ್ಟಿಯವರು ಮಾತನಾಡಿ, ನಮ್ಮ ಸಂಘ ಸ್ಥಾಪನೆಯಾದಂದಿನಿಂದಲೂ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಎಲ್ಲರೂ ಒಗ್ಗಟ್ಟಿನಿಂದ ಶ್ರಮವಹಿಸಿ ಎಲ್ಲ ಕಾರ್ಯಕ್ರಮಗಳನ್ನೂ ಯಶಸ್ವಿಗೊಳಿದ್ದಾರೆ.

Advertisement

ಅದೇ ರೀತಿ 9ನೇ ವಾರ್ಷಿಕೋತ್ಸವ ಸಂಭ್ರಮವನ್ನೂ ನಾವೆಲ್ಲರೂ ಒಗ್ಗೂಡಿ ಪೂರ್ವತಯಾರಿಯನ್ನು ಮಾಡಿಕೊಂಡು ಉತ್ತಮ ಕಾರ್ಯಕ್ರಮವನ್ನಾಗಿಸುವಲ್ಲಿ ಪ್ರಯತ್ನಿಸೋಣ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ವಾರ್ಷಿಕೋತ್ಸವದ ಕಾರ್ಯಕ್ರಮಗಳ ವಿವರಗಳನ್ನು ಸಭೆಯ ಮುಂದಿಟ್ಟರು. ಸಂಘದ ಮಾಜಿ ಅಧ್ಯಕ್ಷರಾದ ಜಯ ಶೆಟ್ಟಿ ಮಿಯ್ಯಾರ್‌ ,ಮಾಜಿ ಕಾರ್ಯದರ್ಶಿ ರೋಹಿತ್‌ ಡಿ. ಶೆಟ್ಟಿ ನಗ್ರಿಗುತ್ತು, ಮಾಜಿ ಕಾರ್ಯದರ್ಶಿ ಸತೀಶ್‌ ರೈ ಕಲ್ಲಂಗಳ ,ಮಾಜಿ ಕೋಶಾಧಿಕಾರಿ ದಿನೇಶ್‌ ಶೆಟ್ಟಿ ಎನ್‌ಐಬಿಎಂ ಅವರು ಕಾರ್ಯಕ್ರಮವನ್ನು ಯಶಸ್ವಿಯನ್ನಾಗಿಸುವ ಬಗ್ಗೆ ಸಲಹೆಗಳನ್ನಿತ್ತರು .

ಸಭೆಯಲ್ಲಿ ಸಂಘದ ಕೋಶಾಧಿಕಾರಿ ದಿನೇಶ್‌ ಶೆಟ್ಟಿ ನಿಟ್ಟೆ ಪದಾಧಿಕಾರಿಗಳಾದ ರವೀಂದ್ರ ಶೆಟ್ಟಿ, ಸುಶ್ಮಿತ್‌ ಶೆಟ್ಟಿ, ಸುಧಾಕರ ಶೆಟ್ಟಿ ಕೆಮ್ತೂರು, ಬಾಲಕೃಷ್ಣ ಶೆಟ್ಟಿ, ಚಂದ್ರಕಾಂತ್‌ ಶೆಟ್ಟಿ, ಸತೀಶ್‌ ಶೆಟ್ಟಿ ಕಾಡೂರು, ಪ್ರದೀಪ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಎ. ರೈ, ಮಾಜಿ ಕಾರ್ಯಾಧ್ಯಕ್ಷೆ ಸುಧಾ ಎನ್‌. ಶೆಟ್ಟಿ, ಸುಜಾತಾ ಎಸ್‌ ಹೆಗ್ಡೆ, ಸರೋಜಿನಿ ಜೆ. ಶೆಟ್ಟಿ, ಮಲ್ಲಿಕಾ ಎ. ಶೆಟ್ಟಿ, ಮಹಿಳಾ ವಿಭಾಗದ ಪದಾಧಿಕಾರಿಗಳಾದ ಉಷಾ ಯು. ಶೆಟ್ಟಿ, ಲತಾ ಎಸ್‌. ಶೆಟ್ಟಿ, ಸುಜಯಾ ಬಿ. ಶೆಟ್ಟಿ, ಸುಮನಾ ಎಸ್‌. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

 

 ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next