ಪಡುಬಿದ್ರಿ: ಕೋವಿಡ್ 19 ಮಹಾಮಾರಿಯಿಂದ ಹೊರ ಬರುವುದೇ ಈಗ ಭಾರತದ ಮುಂದಿರುವ ಮೊದಲ ಆಯ್ಕೆಯಾಗಿದೆ. ಹಾಗಾಗಿ ಯೋಜಿತ ಅಥವಾ ಕಾರ್ಯಗತವಾಗಿರುವ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗೆಗೆ ಸದ್ಯಕ್ಕೆ ಅನಿಶ್ಚಿತತೆಯು ಮುಂದುವರಿಯಲಿದೆ ಎಂಬುದಾಗಿ ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಎ. 17ರಂದು ಹೆಜಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ದಾನಿಗಳ ಮತ್ತು ತನ್ನ ನಿಧಿಯಿಂದ ಕೋವಿಡ್ 19 ಬಾಧಿತರಿಗೆ ಹಂಚಲಾದ ಅಕ್ಕಿ ಹಾಗೂ ಬೇಳೆಗಳನ್ನು ಹೆಜಮಾಡಿ ಗ್ರಾ. ಪಂ. ವಠಾರದಲ್ಲಿ ವಿತರಿಸಿ ಅವರು ಮಾತನಾಡಿದರು.
ಸಂಸದರ ನಿಧಿಯನ್ನೂ ಕೋವಿಡ್ 19 ಸಮಸ್ಯೆಯ ನಿವಾರಣೆಗಾಗಿ ಸದ್ಯ ಬಳಸಲಾಗುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ಎಲ್ಲಾ ವ್ಯವಸ್ಥೆಗಳನ್ನು ಸರಿಪಡಿಸಲು ಕೇಂದ್ರಸರಕಾರವು ಭರದ ಪ್ರಯತ್ನಗಳನ್ನು ನಡೆಸಲಿದೆ ಎಂದು ಸಂಸದೆ ಹೇಳಿದರು.
ಬೈಂದೂರು, ಕಡೂರು ಸಹಿತ ತನ್ನ ಕ್ಷೇತ್ರದಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಾನು ಸುಮಾರು 22 ಕ್ವಿಂಟಾಲ್ ಅಕ್ಕಿ ಮತ್ತು ಬೇಳೆ, ಮಾಸ್ಕ್ಗಳನ್ನು ವಿತರಿಸುತ್ತಿದ್ದೇನೆ. ಪಡಿತರ ಚೀಟಿ ಹೊಂದದವರನ್ನು, ಎಪಿಎಲ್ ಚೀಟಿ ಹೊಂದಿರುವಂತಹಾ ಅಶಕ್ತರನ್ನು, ಬೆಂಗಳೂರಿನಲ್ಲಿನ ಸುಮಾರು 5 ಲಕ್ಷ ಕಾರ್ಮಿಕರನ್ನು ಗುರುತಿಸಿ ಕಳೆದ 22ದಿನಗಳಿಂದ ತಾನು ರೇಶನ್ಗಳನ್ನು ಹಂಚುತ್ತಿರುವುದಾಗಿ ಸಂಸದೆ ಶೋಭಾ ತಿಳಿಸಿದರು.
ಶಾಸಕ ಲಾಲಾಜಿ ಮೆಂಡನ್, ಜಿ. ಪಂ.ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಶಿಲ್ಪಾ ಸುವರ್ಣ, ತಾ. ಪಂ.ಅಧ್ಯಕ್ಷೆ ®ನೀತಾ ಗುರುರಾಜ್, ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ ನಾಯಕ್, ಪ್ರ. ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಶಿರ್ವ ವ್ಯ. ಸೇ. ಸ. ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ ಶೆಟ್ಟಿ, ಜಿಲ್ಲಾ ಸಮಿತಿಯ ರಮಾಕಾಂತ ದೇವಾಡಿಗ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶರಣ್ ಕುಮಾರ್ ಮಟ್ಟು, ಪಾಂಡುರಂಗ ಕರ್ಕೇರ, ಗ್ರಾ. ಪಂ. ಸದಸ್ಯರಾದ ಸುರೇಖಾ, ಶೋಭಾ ಮತ್ತಿತರರಿದ್ದರು.
ಆದ್ಯತಾ ವಲಯದ ಕಾಮಗಾರಿಗಳಿಗೆ ವೇಗ
ಲಾಕ್ಡೌನ್ ಬಳಿಕ ಕೇಂದ್ರ ಸರಕಾರವು ಮುಂದಿನ ಎರಡು ವರ್ಷಗಳಿಗಾಗಿ ಆದ್ಯತಾ ವಲಯದಲ್ಲಿ ಯಾವ್ಯಾವ ಕಾಮಗಾರಿಗಳನ್ನು, ಇಲಾಖಾ ಯೋಜನೆಗಳನ್ನು ತ್ವರಿತವಾಗಿ ಕಾರ್ಯರೂಪಕ್ಕಿಳಿಸಬೇಕೆಂಬುದನ್ನು ನಿರ್ಣಯಿಸಲಿದೆ. ಹಾಗಾಗಿ ಮೀನುಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಆದ್ಯತೆಯ ಆಧಾರದಲ್ಲಿ ವೇಗೋತ್ಕರ್ಷ ದೊರೆತಲ್ಲಿ ಹೆಜಮಾಡಿಯ ಮೀನುಗಾರಿಕಾ ಬಂದರಿನ ಕಾಮಗಾರಿಗೂ ವೇಗ ದೊರೆಯಲಿದೆ. ಸದ್ಯಕ್ಕೇನೂ ಹೇಳಲಾಗದು ಎಂದೂ ಶೋಭಾ ತಿಳಿಸಿದರು.