Advertisement

ಇಂದಿನಿಂದ “ಕ್ಯಾರ್‌’ಅಬ್ಬರ ಇಳಿಮುಖ?

11:55 PM Oct 26, 2019 | mahesh |

ಮಂಗಳೂರು/ ಉಡುಪಿ: ಅರಬಿ ಸಮುದ್ರದಲ್ಲಿ ಉಂಟಾದ ಕ್ಯಾರ್‌ ಚಂಡಮಾರುತದ ಪರಿಣಾಮ ಕರಾವಳಿ ಭಾಗದಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದಲೇ ಮಳೆ ಸುರಿದಿತ್ತು, ಭಾರೀ ಗಾಳಿ ಮಳೆಯಿಂದಾಗಿ ಮೂಡುಶೆಡ್ಡೆ ಸೀತಾಲಕ್ಷ್ಮೀ ಅವರ ಮನೆಗೆ ಮರ ಬಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ. ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ದೀಪಾವಳಿ ಹಬ್ಬದ ನಿಮಿತ್ತ ಸಂಜೆ ಮತ್ತು ರಾತ್ರಿ ನಗರದೆಲ್ಲೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Advertisement

ಸುಬ್ರಹ್ಮಣ್ಯ, ಸುಳ್ಯ, ಕನ್ಯಾನ, ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಧರ್ಮಸ್ಥಳ, ಕನ್ಯಾನ, ಕಾಸರಗೋಡು, ಮೂಡುಬಿದಿರೆ, ಮಡಂತ್ಯಾರು, ವೇಣೂರು, ಸುರತ್ಕಲ್‌, ಉಳ್ಳಾಲ, ಕಡಬ, ಕಲ್ಲಡ್ಕ, ಮುಡಿಪು ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

ಚಂಡಮಾರುತ ಪ್ರಭಾವ ಇಳಿಕೆ
ಅರಬಿ ಸಮುದ್ರದಲ್ಲಿ ಉಂಟಾಗಿದ್ದ ಕ್ಯಾರ್‌ ಚಂಡ ಮಾರುತ ಸದ್ಯ ಒಮಾನ್‌ ದೇಶದತ್ತ ಚಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕರಾವಳಿ ಭಾಗಗಳಲ್ಲಿ ಮಳೆ ತೀವ್ರತೆ ತುಸು ಕಡಿಮೆಯಾಗಲಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಕ್ಕೆ ಹೋಲಿಸಿದರೆ ಶನಿವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಉಡುಪಿ, ಬ್ರಹ್ಮಾವರ, ಕಾರ್ಕಳ, ಕುಂದಾಪುರ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.

10 ಲ.ರೂ. ನಷ್ಟ
ಅ. 25ರಂದು ಸುರಿದ ಮಳೆಯಿಂದ ಕಡೆಕಾರು, ಕಿದಿಯೂರು, ಬೈಂದೂರಿನ ಶಿರೂರು, ಪಡುವರಿ, ಉಪ್ಪುಂದ, ಕನ್ಯಾನ ಹೊಸಾಡು, ಗುಜ್ಜಾಡಿ, ಹಕ್ಲಾಡಿ, ಗಂಗೊಳ್ಳಿ , ಉಳ್ಳೂರು, ಶಿವಪುರ, ಕೋಟತಟ್ಟು, ಹೆಗ್ಗಂಜೆ, ಆರೂರು, ಬಡಾ, ಪಡು, ಕುರ್ಕಾಲು ಎಂಬಲ್ಲಿ 27 ಮನೆಗಳಿಗೆ ಹಾನಿಯಾಗಿದ್ದು ಸುಮಾರು 10.71 ಲ.ರೂ. ನಷ್ಟ ಅಂದಾಜಿಸಲಾಗಿದೆ.

ವಿಟ್ಲ: ಮನೆ ಮೇಲೆ ಬಿದ್ದ ಮರ, ಗಾಯ
ಭಾರೀ ಮಳೆ ಗಾಳಿಗೆ ವಿಟ್ಲ ಸಮೀಪದ ಸೇರಾಜೆಯಲ್ಲಿ ಕ್ಲೋಡಿ ಲೋಬೋ ಅವರ ಮನೆ ಮೇಲೆ ಪಕ್ಕದ ತೋಟದ ಮರ ಬಿದ್ದಿದೆ. ಮನೆಮಂದಿ ಮಧ್ಯಾಹ್ನ ಮಲಗಿದ್ದ ವೇಳೆ ಈ ಘಟನೆ ಸಂಭವಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next