Advertisement

ವಿಷ್ಣು ಸ್ಮಾರಕ ; ಅನಿರುದ್ಧ್ ವಿರುದ್ಧ ಕಿಡಿ ಕಾರಿದ ಸಿಎಂ ಎಚ್‌ಡಿಕೆ !

12:36 PM Nov 28, 2018 | Team Udayavani |

ಬೆಂಗಳೂರು: ನಟ ವಿಷ್ಣು ವರ್ಧನ್‌ ಅವರ ಸ್ಮಾರಕ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಸರ್ಕಾರವನ್ನು ಟೀಕಿಸಿದ್ದ ನಟ ಅನಿರುದ್ಧ್ ವಿರುದ್ಧ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಕೆಂಡಾಮಂಡಲವಾಗಿದ್ದಾರೆ. 

Advertisement

ಅನಿರುದ್ಧ್ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ 
ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ವಿಷ್ಣು ವರ್ಧನ್‌ ಅವರ ಸ್ಮಾರಕ ನಿರ್ಮಾಣ ಮಾಡಬೇಕು. ಈಗಿನ ಮುಖ್ಯಮಂತ್ರಿ ಉಡಾಫೆ ಮುಖ್ಯಮಂತ್ರಿ  ಎಂದಿದ್ದರು.  

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್‌ಡಿಕೆ, ತೀವ್ರ ಆಕ್ರೋಶ ಹೊರ ಹಾಕಿದರು. ವಿಷ್ಣು ವರ್ಧನ್‌ ಅವರ ಅಳಿಯನ ಹೇಳಿಕೆಯಿಂದ ನನಗೆ ಬಹಳ ನೋವಾಯಿತು. ನಾನು ಕದ್ದು ಮುಚ್ಚಿ  ಮಾತನಾಡುವವನಲ್ಲ, ನೇರವಾಗಿ ಮಾತನಾಡುವವ ಎಂದರು. 

Advertisement

ಉಡಾಫೆ ಮುಖ್ಯಮಂತ್ರಿ ಅಂತ ಪದ ಬಳಸಿದ್ದಾರೆ. ಪದ ಬಳಕೆ ಮಾಡಬೇಕಾದರೆ ಗಾಂಭೀರ್ಯತೆ ಅರ್ಥ ಮಾಡಿಕೊಳ್ಳಬೇಕು. ನಾಡಿನ ಜನತೆಗೆ ಸೇವೆ ಸಲ್ಲಿಸಿದ ಹಲವಾರು ಪ್ರಮುಖ ನಾಯಕರಿದ್ದಾರೆ. ಕಲಾವಿದರಾಗಿ ಅವರ ಕೊಡುಗೆಗೆ ಗೌರವ ಸಲ್ಲಿಸುವುದಷ್ಟೇ ನಾನು ಮಾಡಿದ್ದೇನೆ ಎಂದರು. 

ವಿಷ್ಣು ವರ್ಧನ್‌ ಅವರು ನಿಧನರಾದಾಗ ನಾನು ಅಧಿಕಾರದಲ್ಲಿರಲಿಲ್ಲ.10 ವರ್ಷಗಳ ಹಿಂದೆ ಮೈಸೂರಿನಿಂದ ವಿಷ್ಣು ವರ್ಧನ್‌  ಅವರ ಪಾರ್ಥೀವ ಶರೀರ ತರುತ್ತಿದ್ದರು, ನಾನು ಅವರ  ಮನೆಗೆ ಹೋಗಿ ಅಂತಿಮ ದರ್ಶನ ಪಡೆದೆ , ಶಿವಾರಾಂ ಅವರ ಬಳಿ ಕೇಳಿದೆ ಎಲ್ಲಿ  ಅಂತ್ಯಕ್ರಿಯೆ ಮಾಡುತ್ತೀರಿ ಎಂದು. ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದರು. ಆಗ ನಾನೇ ಒಬ್ಬ ಕಲಾವಿದ ರಾಜ್‌ಕುಮಾರ್‌ ಅವರ ಬಳಿಕ ಅವರದ್ದೇ ಅಭಿಮಾನಿಗಳನ್ನು ಗಳಿಸಿದ್ದಾರೆ. ಬನಶಂಕರಿಯಲ್ಲಿ ಮಾಡಿದರೆ ತಪ್ಪಾಗುತ್ತದೆ ಅಂತ ನಾನೇ ಸಲಹೆ ಕೊಟ್ಟು . ಅಂಬರೀಶ್‌ ಅವರಿಗೂ ಕರೆ ಮಾಡಿ ಮಾತನಾಡಿದ್ದೆ.  ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಖುದ್ದು ನಾನೇ ಫೋನ್‌ ಮಾಡಿ ವಿಷ್ಣುವರ್ಧನ್‌ ಅವರಿಗೆ ಸರ್ಕಾರದಿಂದ ಎಲ್ಲಾದರೂ ಸಕಲ ಗೌರವ ಕೊಡಬೇಕಾಗಿದೆ ಎಂದು ಮನವಿ ಮಾಡಿದ್ದೆ. ಬಳಿಕ ಅಂದಿನ ಮುಖ್ಯ ಕಾರ್ಯದರ್ಶಿ  ಎಸ್‌.ವಿ.ರಂಗನಾಥ್‌ ಅವರ ಬಳಿಯೂ  ಚರ್ಚೆ ಮಾಡಿದ್ದೆ  ಎಂದು ತಿಳಿಸಿದರು. 

ನಾನು ಭೇಟಿಗೆ ಸಮಯ ಕೊಡಲಿಲ್ಲ ಅನ್ನುತ್ತಾರಲ್ಲ , ಅವರು ಬಂದು ನನ್ನನ್ನು ಕೇಳಿ ಬಂದಿದ್ದೀರಾ  ಎಂದು ಪ್ರಶ್ನಿಸಿದರು. 

ನಮ್ಮ ಮೇಲೆ ದಬ್ಬಾಳಿಕೆ ಮಾಡಿದ್ರೆ ಆಗುವುದಿಲ್ಲ. ನಮ್ಮದೂ ಶಾಂತಿಪ್ರಿಯ ಸಂಸ್ಕೃತಿ , ನಮ್ಮಿಂದ ಏನಾದರೂ ತಪ್ಪಾಗಿದೆಯಾ ? ನಾನು ಕರ್ತವ್ಯ ನಿರ್ವಹಣೆ ಮಾಡಿದ್ದೀನಿ ಅಷ್ಟೇ .ರಾಜ್ಯದ ಜನತೆಯೂ ತಿಳಿದು ಕೊಳ್ಳಬೇಕಾಗುತ್ತದೆ ಎಂದರು.

ಭಾರತಿ ಕ್ಷಮೆ 
ಅಳಿಯನ ಹೇಳಿಕೆ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಭಾರತಿ ವಿಷ್ಣುವರ್ಧನ್‌ ಅವರು  ಮಾಧ್ಯಮವೊಂದರಲ್ಲಿ ಅಳಿಯನ ಪರವಾಗಿ ಸಿಎಂ ಎಚ್‌ಡಿಕೆಯವರ ಕ್ಷಮೆ ಯಾಚಿಸಿದ್ದಾರೆ, ಮಾತ್ರವಲ್ಲದೆ ವಿಷ್ಣು ಸ್ಮಾರಕ ಮೈಸೂರಿನಲ್ಲೇ ಆಗಬೇಕು. ರಾಜ್‌ಕುಮಾರ್‌ ಮತ್ತು ಅಂಬರೀಷ್‌ ಅವರ ಸ್ಮಾರಕದ ಜೊತೆಯಲ್ಲಿ ಬೇಡ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next