ಕಲಬುರಗಿ: ಸ್ವದೇಶಿ ಫೌಂಡೇಶನ್ ಮತ್ತು ಇನ್ಡಿಸ್ ಸಂಘಟನೆ ಸಹಯೋಗದಲ್ಲಿ ದೇಶಾದ್ಯಂತ ಏ.14ರಿಂದ ಆ.15ರವರೆಗೆ 124 ದಿನಗಳ ಕಾಲ ಸಂವಿಧಾನದ ಕುರಿತು ಅರಿವು ಮತ್ತು ಸಾರ್ವಜನಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದು ಸಂಪೂರ್ಣ ಆ್ಯಪ್ ಆಧಾರಿತ ಅಭಿಯಾನವಾಗಿರಲಿದೆ ಎಂದು ಸ್ವದೇಶಿ ಫೌಂಡೇಶನ್ ನ ವ್ಯವಸ್ಥಾಪಕ ನಿರ್ದೇಶಕ ಅರುಣಕುಮಾರ ಎನ್. ದಿವಾಣಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗತ್ತಿನ ಅತಿ ದೊಡ್ಡದಾದ ಭಾರತೀಯ ಸಂವಿಧಾನದ ಬಗ್ಗೆ ಸರಳವಾಗಿ ವಿವರಿಸುವ ನಿಟ್ಟಿನಲ್ಲಿ “ವಂದೇ ಭಾರತ’ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ಜನ್ಮದಿನವಾದ ಏ.14ರಂದು ದೇಶದ ಜನರನ್ನು ತಲುಪುವ ಅಭಿಯಾನ ಇದಾಗಿದೆ. ಆ್ಯಪ್ ಸಹಾಯದಿಂದ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ… ಹೀಗೆ 16 ಭಾಷೆಗಳಲ್ಲಿ ಅಭಿಯಾನ ನಡೆಯಲಿದೆ ಎಂದರು.
ಏ.14ರಿಂದ ಆ್ಯಪ್ನಲ್ಲಿ 124 ದಿನಗಳ ಕಾಲ ಪ್ರತಿ ದಿನವೂ ಒಂದು ಕಂತಿನ ವಿಡಿಯೋ ಬಿಡುಗಡೆ ಮಾಡಲಾಗುತ್ತದೆ. ಮೊದಲ 24 ವಿಡಿಯೋಗಳು ಸಂವಿಧಾನದ ರಚನೆ ಬಗ್ಗೆ ಹಾಗೂ ನಂತರದ 100 ವಿಡಿಯೋಗಳಲ್ಲಿ ಸಂವಿಧಾನದ ಮೂಲ ಅಂಶ, ಆಶಯಗಳ ಕುರಿತ ವಿವರಣೆ ಇರಲಿವೆ.ಅಭಿಯಾನಕ್ಕಾಗಿ 85 ಯುವಕರ ತಂಡ ರೂಪಿಸಲಾಗಿದೆ ಎಂದರು. ಶಿವಕುಮಾರ ನಾಟೀಕಾರ, ಸಿದ್ಧಾರ್ಥ್ ಬಸರಿಗಿಡ, ಸಿದ್ದು ದೊಡ್ಡಮನಿ, ಯಲ್ಲಾಲಿಂಗ ಇದ್ದರು.
ಗಿನ್ನಿಸ್ ದಾಖಲೆ ಪ್ರಯತ್ನ
ಈ ಅಭಿಯಾನಯನ್ನು ದೇಶದ 30 ಕೋಟಿ ಜನರಿಗೆ ತಲುಪಿಸುವ ಗುರಿ ಹೊಂದಲಾಗಿದೆ. ಏ.14ರಂದು ಬೆಳಗ್ಗೆ 9ಗಂಟೆಗೆ ಏಕಕಾಲಕ್ಕೆ ಜನರು ತಾವು ಇರುವ ಸ್ಥಳದಿಂದಲೇ “ವಂದೇ ಭಾರತ’ ಆ್ಯಪ್ ಸಹಾಯದಿಂದ ರಾಷ್ಟ್ರಗೀತೆ, ವಂದೇ ಮಾತರಂ ಗಾಯನ ಮಾಡುವುದು ಹಾಗೂ ಸಂವಿಧಾನದ ಪೀಠಿಕೆ ಓದುವ ಮೂಲಕ ಗಿನ್ನೀಸ್ ದಾಖಲೆ ಪುಸ್ತಕಕ್ಕೆ ಸೇರಿಸುವ ಉದ್ದೇಶ ಇದೆ.
(ಅರುಣಕುಮಾರ ದಿವಾಣಜಿ, ವ್ಯವಸ್ಥಾಪಕ ನಿರ್ದೇಶಕ, ಸ್ವದೇಶಿ ಫೌಂಡೇಶನ್ )