Advertisement

ಹಿಂದುತ್ವಕ್ಕಾಗಿ ಸಂವಿಧಾನ ತಿದ್ದುಪಡಿ

04:14 PM Dec 17, 2017 | |

ಬೆಂಗಳೂರು: ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್‌ ಗೌಡ ಪ್ರತಿಪಾದಿಸಿದ್ದಾರೆ. ಹಿಂದೂ ಜನ ಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆ ವತಿಯಿಂದ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಭಾಗೀಯ ಹಿಂದೂ ಅಧಿವೇಶನದಲ್ಲಿ ಮಾತನಾಡಿದ ಅವರು, ಯಾವ್ಯಾವುದೋ ಕಾರಣಗಳಿಗೆ ಸಂವಿಧಾನವನ್ನು ನೂರಾರು ಬಾರಿ ತಿದ್ದುಪಡಿ ಮಾಡಲಾಗಿದೆ. ಅದೇ ರೀತಿಯಲ್ಲಿ ಹಿಂದೂ ರಾಷ್ಟ್ರಕ್ಕಾಗಿ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದರು.

Advertisement

ಹಿಂದೂ ರಾಷ್ಟ್ರ ನಿರ್ಮಾಣದ ವಿಷಯ ಇಂದು ರಾಷ್ಟ್ರೀಯ ಮಟ್ಟದ ಚರ್ಚೆ ಆಗುತ್ತಿದೆ. ಆದರೆ, ಈ ವಿಚಾರ ಕೆಲವರ ಪಾಲಿಗೆ ಹೊಟ್ಟೆ ನೋವಿನ ವಿಷಯವಾಗಿದೆ. ಹಿಂದೂ ಸಂಸ್ಕೃತಿ, ಪರಂಪರೆಯನ್ನು ಹೊಂದಿರುವ ಈ ರಾಷ್ಟ್ರದಲ್ಲಿ ಹಿಂದೂಗಳ ಪರವಾಗಿರುವ ಒಂದು ಕಾನೂನನ್ನು ಇಲ್ಲಿನ ಸರ್ಕಾರಗಳು ಜಾರಿಗೆ ತಂದ ನಿದರ್ಶನಗಳಿಲ್ಲ ಎಂದರು.

2013ರಲ್ಲಿ ನಡೆದ 2ನೇ ರಾಷ್ಟ್ರೀಯ ಹಿಂದು ಅಧಿವೇಶನದಲ್ಲಿ ಸಮಾನ ಮನಸ್ಕರ ಸಂಘಟನೆಗಳು ಒಟ್ಟಾಗಿ ಹೋರಾಟಗಳನ್ನು ರೂಪಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಅದರ ನಂತರ 14 ರಾಜ್ಯಗಳಲ್ಲಿ 225 ವಿಷಯಗಳ ಮೇಲೆ 1000ಕ್ಕೂ ಹೆಚ್ಚು ಪ್ರತಿಭಟನೆ ಗಳು ನಡೆದಿವೆ. ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿಭಾಗೀಯ ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳುವ ಯೋಜನೆಯನ್ನು ಹೊಂದಲಾಗಿದೆ ಎಂದು ವಿವರಿಸಿದರು.

ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಹಿಂದುತ್ವವಾದಿಗಳು ಹಾಗೂ ಹಿಂದೂ ಸಂಘಟನೆಗಳು ಹಿಂದೂ ರಾಷ್ಟ್ರದ ನಿಜವಾದ ಶಿಲ್ಪಿಗಳು.  ರಾಜಕೀಯಕ್ಕೆ ಸೇರಿದ ಹಿಂದುತ್ವವಾದಿಗಳಿಂದ ಹಿಂದುತ್ವದ ಕಾರ್ಯ ಆಗುವುದಿಲ್ಲ. ಹಾಗಾಗಿ ಸಮಾನ ಮನಸ್ಕ ಸಂಘಟನೆಗಳು ಒಟ್ಟಾಗಿ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮುನ್ನೆಡೆಸಬೇಕಾಗಿದೆ ಎಂದು ಗುರುಪ್ರಸಾದ್‌ ಕರೆ ನೀಡಿದರು. ಹೈಕೋರ್ಟ್‌ ವಕೀಲ ಎನ್‌.ಪಿ. ಅಮೃತೇಶ್‌, ಭಾರತ ಸ್ವಾಭಿಮಾನ ಟ್ರಸ್ಟ್‌ನ ಪ್ರಭಾರಿ ದಿವಾಕರ್‌ ಭಟ್‌, ಲೇಖಕ ರೋಹಿತ್‌ ಚಕ್ರತೀರ್ಥ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next