Advertisement

ಅಂಗನವಾಡಿಗೆ ಗ್ಯಾಸ್‌ ಸಂಪರ್ಕ ಕಲ್ಪಿಸಿ

10:30 AM Jul 01, 2018 | Team Udayavani |

ಕಲಬುರಗಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿನ ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್‌ ಸಂಪರ್ಕವಿಲ್ಲದೆ ಒಲೆ ಮೇಲೆ ಅಡುಗೆ ಮಾಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಕೂಡಲೆ ಜಿಲ್ಲೆಯ ಅಂತಹ 126 ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್‌ ಸಂಪರ್ಕ ಒದಗಿಸಿ ಒಂದು ತಿಂಗಳ ಒಳಗಾಗಿ ಆಯೋಗಕ್ಕೆ ವರದಿ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ವಿ.ಬಿ. ಪಾಟೀಲ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಿಸುವ ಪ್ರತಿಯೊಬ್ಬ ಮಗುವಿಗೂ ಪೌಷ್ಟಿಕ ಆಹಾರ ದೊರಕಬೇಕು ಮತ್ತು ಅನ್ನಭಾಗ್ಯ, ಬಿಸಿಯೂಟ, ಅಂಗನವಾಡಿಯಲ್ಲಿ ಮಾತೃಪೂರ್ಣದಂತಹ ಮಹತ್ವಪೂರ್ಣ ಯೋಜನೆಗಳಲ್ಲಿ ನೀಡಲಾಗುತ್ತಿರುವ ಆಹಾರ ಸಾಮಗ್ರಿಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಮತ್ತು ಈ ಸಂಬಂಧ ಆಗಾಗ ಸರ್ಕಾರಕ್ಕೆ ಸೂಕ್ತ ಸಲಹೆ ನೀಡುವುದು, ಅಪೌಷ್ಟಿಕತೆ ನಿವಾರಿಸುವುದೆ ಆಯೋಗದ ಮುಖ್ಯ ಉದ್ದೇಶವಾಗಿದೆ. ಅದರಂತೆ ಆಯೋಗವು ರಾಜ್ಯಾದ್ಯಂತ ಸಂಚರಿಸಿ ಯೋಜನೆಗಳಲ್ಲಿನ ಲೋಪದೋಷಗಳನ್ನು ಅಧಿಕಾರಿಗಳಿಂದ ಪಡೆದು ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡಲಿದೆ ಎಂದರು.

ಆಯೋಗವು ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರ. ಶಾಲೆ, ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಹಲವು ಸಮಸ್ಯೆಗಳನ್ನು ಪತ್ತೆ ಹಚ್ಚಿದೆ. ಹಡಗಿಲ್‌ ಹಾರುತಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿನ ಕಾರ್ಯಕರ್ತೆ ಗೈರಾಗಿದ್ದರು. ಅಲ್ಲದೆ ಕಾರ್ಯಕರ್ತೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರು ನೀಡಿದ್ದು, ಕೂಡಲೆ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತು ಮಾಡಬೇಕು ಎಂದರು.

ಕಲಬುರಗಿ ನಗರದ ಮೆಟ್ರಿಕ್‌ ನಂತರ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿದಾಗ 56 ವಿದ್ಯಾರ್ಥಿಗಳಿಗೆ ಕೇವಲ 30 ಬೆಡ್‌ಗಳನ್ನು ಪೂರೈಸಲಾಗಿದ್ದು ಗಮನಕ್ಕೆ ಬಂದಿದೆ. ಕೆಲ ವಿದ್ಯಾರ್ಥಿಗಳು ನೆಲದ ಮೇಲೆ ಮಲಗುತ್ತಿದ್ದಾರೆ. ಕೂಡಲೆ ಈ ಸಮಸ್ಯೆ ಬಗೆಹರಿಸುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಆಹಾರ ಗೋದಾಮುಗಳಲ್ಲಿ ಮಾನವ ಸೇವನೆಗೆ ಯೋಗ್ಯವಿಲ್ಲದ ಆಹಾರ ಧಾನ್ಯಗಳನ್ನು ವಿಲೇವಾರಿ ಅಥವಾ ನಾಶ ಮಾಡಲು ಸರ್ಕಾರದ ಆದೇಶವಿದ್ದು, ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಆಹಾರ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಆಯೋಗದ ಸದಸ್ಯರಾದ ಎಚ್‌.ವಿ. ಶಿವಶಂಕರ, ಡಿ.ಜಿ. ಹಸಬಿ, ಬಿ.ಎ.ಮಹಮ್ಮದ ಅಲಿ, ಮಂಜುಳಾಬಾಯಿ ಮಾತನಾಡಿ, ಅಪೌಷ್ಟಿಕತೆ ನಿವಾರಣೆ ನಿಟ್ಟಿನಲ್ಲಿ ಆಯೋಗದ ಮಹತ್ವದ ಈ ಸಭೆಗೆ ಗೈರು ಹಾಜರಾದ ಜಿಪಂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಗೈರು ಹಾಜರಿಯನ್ನು ಅಧಿಕೃತವಾಗಿ ದಾಖಲಿಸಿಲಾಗುವುದು.

Advertisement

ಪಡಿತರ ಅಂಗಡಿ ಹಂತದಲ್ಲಿ ಆಹಾರ ಜಾಗೃತಿ ಸಭೆ ಮತ್ತು ಅಂಗನವಾಡಿ ಹಂತದಲ್ಲಿ ಬಾಲ ವಿಕಾಸ ಸಭೆ ಕಡ್ಡಾಯವಾಗಿ ನಡೆಸಬೇಕು. ಜಿಲ್ಲೆಯ ಎಲ್ಲ ಪಡಿತರ ಅಂಗಡಿಗಳಿಗೆ ಪಿ.ಒ.ಎಸ್‌ ಅಳವಡಿಸಬೇಕು ಮತ್ತು ಆಹಾರ ಅದಾಲತ್‌ ಕಡ್ಡಾಯವಾಗಿ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿ, ಆಹಾರ ಆಯೋಗವು ಕಳೆದ ಎರಡೂಮೂರು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಆಹಾರಕ್ಕೆ ಸಂಬಂಧಿಸಿದಂತೆ ಕೆಲ ನ್ಯೂನತೆಗಳನ್ನು ಸರಿಪಡಿಸುವಂತೆ ತಿಳಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆಯೋಗದ ಎಲ್ಲ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು.

ಇನ್ನು ಮುಂದೆ ವಸತಿ ನಿಲಯಗಳಿಗೆ ತಾವು ಖುದ್ದಾಗಿ ಅನಿರೀಕ್ಷಿತವಾಗಿ ಭೇಟಿ ನೀಡುತ್ತೇನೆ ಎಂದ ಜಿಲ್ಲಾಧಿಕಾರಿಗಳು
ತಹಶೀಲ್ದಾರ್‌ರು ಮತ್ತು ಸಹಾಯಕ ಆಯುಕ್ತರು ಸಹ ಪ್ರತಿವಾರ 2-3 ವಸತಿ ನಿಲಯಗಳಿಗೆ ಭೇಟಿ ನೀಡುವಂತೆ ನಿರ್ದೇಶಿಸಿದರು. ಜಿಲ್ಲೆಯ 983 ಪಡಿತರ ಅಂಗಡಿಗಳ ಪೈಕಿ 983 ಅಂಗಡಿಯಲ್ಲಿ ಪಿ.ಓ.ಎಸ್‌. ಅಳವಡಿಸಿದ್ದು, ಪಿ.ಒ.ಎಸ್‌ ಅಳವಡಿಕೆಯಲ್ಲಿ ರಾಜ್ಯದಲ್ಲಿಯೆ ಕಲಬುರಗಿ ಜಿಲ್ಲೆ ಅಗ್ರಸ್ಥಾನದಲ್ಲಿದೆ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಅರುಣಕುಮಾರ ಸಂಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ, ಅಳತೆ ಮತ್ತು ತೂಕ ಇಲಾಖೆ, ಕರ್ನಾಟಕ ರಾಜ್ಯ ಆಹಾರ ನಿಗಮ, ಆರೋಗ್ಯ ಇಲಾಖೆಯ ಅಧಿಕಾರಿಗಳು, ತಾಲೂಕಾ ಸಿ.ಡಿ.ಪಿ.ಒಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಇಂದಿನಿಂದ ರಾಷ್ಟ್ರಿಯ ಪೌಷ್ಠಿಕಾಂಶ ಮಿಷನ್‌ ಜಾರಿ ಅಪೌಷ್ಟಿಕತೆ ನಿವಾರಣೆ ಕುರಿತು ನ್ಯಾ| ಎನ್‌.ಕೆ. ಪಾಟೀಲರ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ಸಂಪೂರ್ಣಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಜು. 1 ರಿಂದ ರಾಷ್ಟ್ರೀಯ ಪೌಷ್ಟಿಕಾಂಶ ಮಿಷನ್‌ ಜಾರಿಯಾಗುತ್ತಿದ್ದು, ಅಧಿಕಾರಿಗಳು ಸನ್ನದ್ಧರಾಗಿರಬೇಕು. ಅಪೌಷ್ಟಿಕತೆ ನಿವಾರಣೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಾತ್ರ ಹೆಚ್ಚಾಗಿದೆ. ಆದರೆ ಈ ಎರಡು ಇಲಾಖೆಗಳು ಒಟ್ಟಾಗಿ ಸಮನ್ವಯತೆಯಿಂದ ಕೆಲಸ ನಿರ್ವಹಿಸದೆ ಇರುವುದು ದುರಾದೃಷ್ಟಕರ. ಪ್ರತಿ ಎರಡು
ತಿಂಗಳಿಗೊಮ್ಮೆ ವೈದ್ಯರು ಅಂಗನವಾಡಿಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕೆಂದು ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಗಮನಹರಿಸಬೇಕು.
ವಿ.ಬಿ. ಪಾಟೀಲ, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next