ಜೈಪುರ : ದೇಶದ ಬಡವರ ಪೈಕಿ ಶೇ.20ರಷ್ಟು ಕಡು ಬಡವರಿಗೆ ವರ್ಷಕ್ಕೆ 72,000 ರೂ. ನೀಡುವ ಕಾಂಗ್ರೆಸ್ ಪಕ್ಷದ ಕನಿಷ್ಠ ಆದಾಯ ಯೋಜನೆಯು ಬಡತನದ ವಿರುದ್ಧ ಪಕ್ಷವು ನಡೆಸುವ ಸರ್ಜಿಕಲ್ ಸ್ಟ್ರೈಕ್ ಆಗಿರುತ್ತದೆ ಮತ್ತು 21ನೇ ಶತಮಾನದಲ್ಲಿ ಭಾರತದಲ್ಲಿ ಯಾರೂ ಬಡವರಾಗಿ ಉಳಿಯಬಾರದು ಎಂಬ ಮಹೋನ್ನತ ಧ್ಯೇಯೊದ್ದೇಶನ್ನು ಈ ಯೋಜನೆ ಹೊಂದಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜಸ್ಥಾನದ ಗಂಗಾನಗರ ಜಿಲ್ಲೆಯ ಸೂರತ್ಗಢ ಪಟ್ಟದಲ್ಲಿ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, “ನಮ್ಮ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಾವು ಕಡು ಬಡವರಿಗೆ ಕನಿಷ್ಠ ಆದಾಯ ಸ್ಕೀಮ್ ಜಾರಿಗೆ ತರುವ ಮೂಲಕ ಬಡತನ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಕೈಗೊಳ್ಳುವೆವು’ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಿರಿವಂತರಿಗೆ ಮತ್ತು ಉನ್ನತ ಕೈಗಾರಿಕೋದ್ಯಮಿಗಳಿಗೆ ಹಣ ನೀಡಿದ್ದಾರೆ; ಆದರೆ ನಮ್ಮ ಕಾಂಗ್ರೆಸ್ ಪಕ್ಷ ಬಡವರ ಸೇವೆಗೆ ಮುಡಿಪಾಗಿದ್ದು ಅವರಿಗೆ ಕನಿಷ್ಠ ಆದಾಯವನ್ನು ಖಾತರಿಪಡಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮಿನಿಮಮ್ ಇನ್ಕಮ್ ಸ್ಕೀಮ್ ಬಿಗ್ ಬ್ಯಾಂಗ್ ಆಗಲಿದೆ ಎಂದು ರಾಹುಲ್ ಹೇಳಿದರು.
“ಧಮಾಕಾ ಹೈ ಯೇ, ಬಾಂಬ್ ಫಟೇಗಾ’ ಎಂದು ವರ್ಣಿಸಿದ ರಾಹುಲ್ ಗಾಂಧಿ, ಬಿಜೆಪಿ ದೇಶದಲ್ಲಿನ ಬಡವರನ್ನೇ ನಿರ್ನಾಮ ಮಾಡುತ್ತಿದೆ; ಆದರೆ ಕಾಂಗ್ರೆಸ್ ಬಡತನವನ್ನು ನಿರ್ನಾಮ ಮಾಡಲಿದೆ ಎಂದು ಹೇಳಿದರು.