Advertisement

ಶಿರಾ’ದಲ್ಲಿ ‘ರಾರಾ’ಜಿಸಿದ ಕಮಲ: ಬಿಎಸ್ ವೈ ಮತ್ತಷ್ಟು ಭದ್ರ, ಕೈ ರಣತಂತ್ರ ಛಿದ್ರ

04:16 PM Nov 10, 2020 | keerthan |

ಮಣಿಪಾಲ: ರಾಜ್ಯ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಉಪಚುನಾವಣೆಯ ಫಲಿತಾಂಶ ಈಗ ಕಣ್ಣಮುಂದಿದೆ. ಎರಡೂ ಕ್ಷೇತ್ರಗಳನ್ನು ಗೆದ್ದುಕೊಂಡಿರುವ ಬಿಜೆಪಿಯು ರಾಜ್ಯದಲ್ಲಿ ತನ್ನ ನೆಲೆಯನ್ನು ಮತ್ತಷ್ಟು ವಿಸ್ತರಿಸಿದೆ. ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ತುಮಕೂರಿನ ಶಿರಾ ಕ್ಷೇತ್ರದಲ್ಲೂ ಕೇಸರಿ ಪತಾಕೆಯನ್ನು ಹಾರಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ.

Advertisement

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಮುನಿರತ್ನ ಹ್ಯಾಟ್ರಿಕ್ ಸಾಧಿಸಿದ್ದಾರೆ. ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದ ಮುನಿರತ್ನ, ಈ ಬಾರಿ ಬಿಜೆಪಿ ಪಕ್ಷ ಸೇರಿ ಇಲ್ಲೂ ತಮ್ಮ ಗೆಲುವಿನ ಓಟ ಮುಂದುವರಿಸಿದ್ದಾರೆ.

2018ರ ಶಿರಾ ಚುನಾವಣೆಯಲ್ಲಿ ಶೇ.10ರಷ್ಟೂ ಮತ ಪಡೆಯಲು ವಿಫಲವಾಗಿದ್ದ ಬಿಜೆಪಿ ಈ ಬಾರಿ ಜಯ ಸಾಧಿಸಿದ್ದು ಹಲವು ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ಹಿರಿಯ ರಾಜಕಾರಣಿ, ಮಾಜಿ ಸಚಿವ ಟಿಬಿ ಜಯಚಂದ್ರ ಅವರನ್ನು ಸೋಲಿಸಿ ಬಿಜೆಪಿಗೆ ಇತ್ತೀಚೆಗಷ್ಟೇ ಸೇರ್ಪಡೆಯಾದ ರಾಜೇಶ್ ಗೌಡ ವಿಧಾನಸಭೆ ಪ್ರವೇಶಿಸುವ ಅವಕಾಶ ಪಡೆದಿದ್ದಾರೆ.

ಮತಬ್ಯಾಂಕ್ ವಿಭಜನೆ

ಆರ್.ಆರ್. ನಗರ ಕ್ಷೇತ್ರದಲ್ಲಿ ಒಕ್ಕಲಿಗರು ಪ್ರಮುಖ ಮತದಾರರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅದೇ ಸಮುದಾಯಕ್ಕೆ ಸೇರಿದವರು. ಆದರೆ ಜೆಡಿಎಸ್ ಕೂಡಾ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೃಷ್ಣಮೂರ್ತಿಗೆ ಟಿಕೆಟ್ ನೀಡಿದ್ದರಿಂದ ಅಲ್ಲಿ ಸಮುದಾಯದ ಮತಗಳು ಒಡೆದು ಮುನಿರತ್ನಗೆ ಲಾಭವಾಯಿತು ಎನ್ನುವ ಮಾತುಗಳು ಕೇಳಿಬರುತ್ತಿದೆ.

Advertisement

ಇದನ್ನೂ ಓದಿ:ಹಣದ ಹೊಳೆ ಹರಿಸಿ, ಅಧಿಕಾರ ದುರುಪಯೋಗ ಮಾಡಿ ಬಿಜೆಪಿ ಗೆದ್ದಿದೆ: ಸಿದ್ದರಾಮಯ್ಯ

ಶಿರಾ ಕ್ಷೇತ್ರದಲ್ಲಿ ಮೂರು ಅಭ್ಯರ್ಥಿಗಳೂ ಅಲ್ಲಿನ ಪ್ರಮುಖ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಹೀಗಾಗಿ ಒಂದು ಸಮುದಾಯ ಸಂಪೂರ್ಣವಾಗಿ ಒಂದು ಪಕ್ಷದ ಬೆನ್ನಿಗೆ ನಿಲ್ಲಲು ಸಾಧ್ಯವಾಗಿಲ್ಲ.

ವಿಜಯ ಶಕ್ತಿ

ಸುಮಾರು ಎರಡು ವಾರಗಳ ಕಾಲ ಶಿರಾದಲ್ಲಿ ಮೊಕ್ಕಾಂ ಹೂಡಿದ್ದ ಬಿಎಸ್ ವೈ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಅವರು ಮ್ಯಾಜಿಕ್ ಮಾಡಿದ್ದಾರೆ. ಕಳೆದ ವರ್ಷ ಮಂಡ್ಯದ ಕೆ ಆರ್ ಪೇಟೆ ಚುನಾವಣೆಯಂತೆ ಬಿಜೆಪಿ ನೆಲೆ ಇಲ್ಲದ ಶಿರಾ ಕ್ಷೇತ್ರದಲ್ಲಿ ಗೆಲುವು ತಂದಿತ್ತಿದ್ದಾರೆ. ಇದರೊಂದಿಗೆ ಕರ್ನಾಟಕದ ಪಾಲಿಗೆ ಚುನಾವಣಾ ಮಾಸ್ಟರ್ ಆಗಿ ಮೂಡಿಬಂದಿದ್ದಾರೆ.

ಇದನ್ನೂ ಓದಿ: ಶಿರಾದಲ್ಲಿ ‘ವಿಜಯ’: ಕಲ್ಪತರು ನಾಡಿನಲ್ಲಿ ಕಮಲ ಅರಳಿಸಿದ ಡಾ.ರಾಜೇಶ್ ಗೌಡ

ಕಾಂಗ್ರೆಸ್ ಒಳಪೆಟ್ಟು

ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಒಳಪೆಟ್ಟುಗಳು ಕೆಲಸ ಮಾಡಿದೆ ಎನ್ನಲಾಗುತ್ತಿದೆ. ರಾಜ್ಯ ರಾಜಕಾರಣದಲ್ಲಿ ಹಿಡಿತ ಸಾಧಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಯತ್ನದಲ್ಲಿದ್ದಾರೆ. ಹೀಗಾಗಿ ಆರ್.ಆರ್.ನಗರದಲ್ಲಿ ಸಿದ್ದರಾಮಯ್ಯಗೆ ಇಷ್ಟವಿಲ್ಲದೇ ಇದ್ದರೂ ಡಿಕೆಶಿ ಅವರು ಕುಸುಮಾ ಅವರನ್ನು ಕರೆತಂದು ಟಿಕೆಟ್ ನೀಡಿದ್ದರು. ಶಿರಾದಲ್ಲಿ ಹೈಕಮಾಂಡ್ ಹೇಳುವ ಮೊದಲೇ ಸಿದ್ದರಾಮಯ್ಯ ಅವರು ಟಿ.ಬಿ ಜಯಚಂದ್ರ ಅವರ ಹೆಸರನ್ನು ಘೋಷಿಸಿದ್ದರು ಎನ್ನಲಾಗಿದೆ. ಇದೆಲ್ಲಾ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next