Advertisement

ಕಾಂಗ್ರೆಸ್ ಪಕ್ಷ ಇಟಾಲಿಯನ್ ಬುದ್ಧಿ ತೋರಿಸುತ್ತಿದೆ: ಸುರೇಶ್ ಅಂಗಡಿ ಆಕ್ರೋಶ

02:31 PM Sep 06, 2019 | Team Udayavani |

ಬೆಳಗಾವಿ:  ಡಿ.ಕೆ ಶಿವಕುಮಾರ್ ಬಂಧನಕ್ಕೂ, ಬಿಜೆಪಿ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ವಿನಾಕಾರಣ ಬಿಜೆಪಿಯನ್ನು ದೂರುವುದರ ಮೂಲಕ ಇಟಾಲಿಯನ್ ಬುದ್ದಿ ತೋರಿಸುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

Advertisement

ಬೆಳಗಾವಿ ನಗರದಲ್ಲಿ ಶುಕ್ರವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಂದಿನ ಕಾಂಗ್ರೆಸ್ ಪಕ್ಷ ಇಟಾಲಿಯನ್  ಬುದ್ಧಿ ತೋರಿಸುವುದರ ಮೂಲಕ ಈಸ್ಟ್ ಇಂಡಿಯಾ ಕಂಪನಿಯ ಧೋರಣೆಯನ್ನು ತೋರುತ್ತಿದೆ ಎಂದು ಸೋನಿಯಾ ಗಾಂಧಿಯ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಬಂಧಿಸಿರುವುದಕ್ಕೂ ಮತ್ತು ಬಿಜೆಪಿಗೂ ಯಾವುದೇ ರೀತಿಯ ಸಂಬಂಧವಿಲ್ಲ.  ತೆರಿಗೆ ದಾಳಿ ವೇಳೆ ಅವರ ದೆಹಲಿ ನಿವಾಸದಲ್ಲಿ ಸಿಕ್ಕಿರುವ 8.59 ಕೋಟಿ ಹಣಕ್ಕೆ ಸೂಕ್ತ ದಾಖಲಾತಿ ನೀಡದಿರುವುದಕ್ಕಾಗಿ ಮತ್ತು ವಿಚಾರಣೆಗೆ ಸಹಕರಿಸದಿರುವುದಕ್ಕಾಗಿ ಬಂಧಿಸಿದ್ದಾರೆ ಕೇವಲ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ತೆರಿಗೆ ದಾಳಿಯಾಗಿಲ್ಲ, ನಮ್ಮ ಮೇಲೂ ಆಗಿವೆ. ಆದರೆ ನಾವು ಕಾಂಗ್ರೆಸ್ಸಿಗರಂತೆ ಸಾರ್ವಜನಿಕ ಆಸ್ತಿ ಹಾಳು ಮಾಡಿಲ್ಲ ಎಂದರು.

ವಾಜಪೇಯಿ ಸರಕಾರದ ಅವಧಿಯಲ್ಲಿ ನನ್ನ ಮೇಲೆ ಐ ಟಿ ದಾಳಿಯಾಗಿತ್ತು. ನಂತರ ಕೇಂದ್ರ ಸಚಿವರಾಗಿದ್ದ ಸಿದ್ದೇಶ ಅವರ ಮೇಲೆ ಸಹ ದಾಳಿ ನಡೆದಿತ್ತು. ಐ ಟಿ ಹಾಗೂ ಇ ಡಿ ಸಾಂವಿಧಾನಿಕ ಸಂಸ್ಥೆಗಳು. ಕಾನೂನಿಗೆ ಅನುಗುಣವಾಗಿ ಅವು ಕಾರ್ಯನಿರ್ವಹಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 70 ವರ್ಷಗಳಿಂದ ಜಮ್ಮು-ಕಾಶ್ಮೀರಕ್ಕೆ ಅಂಟಿಕೊಂಡಿದ್ದ 370 ಹಾಗೂ 35 ವಿಶೇಷ ಸ್ಥಾನಮಾನ ಕಾಯ್ದೆಗಳನ್ನು ರದ್ದು ಪಡಿಸಿ ಐತಿಹಾಸಿಕ ಕೆಲಸ ಮಾಡಿದೆ. ಇದಕ್ಕೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಇದು ಈಸ್ಟ್ ಇಂಡಿಯಾ ಕಂಪನಿಯ ಧೋರಣೆಯನ್ನು ಹೊತ್ತಂತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ ಜಿರಲಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next