Advertisement

ಕಾಂಗ್ರೆಸ್‌ನ ಮೂರು ರಾಜ್ಯಗಳು, ಮೂರು ಬಾಗಿಲು!

10:52 PM Aug 30, 2021 | Team Udayavani |

ದೇಶದ ಒಟ್ಟು ಆರು ರಾಜ್ಯಗಳಲ್ಲಿ ಕಾಂಗ್ರೆಸ್‌ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆಡಳಿತ ನಡೆಸುತ್ತಿದೆ. ರಾಜಸ್ಥಾನ, ಪಂಜಾಬ್‌ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ನೇರವಾಗಿಯೇ ಅಧಿಕಾರ ಹಿಡಿದಿದ್ದರೆ, ತಮಿಳುನಾಡು, ಝಾರ್ಖಂಡ್‌ ಮತ್ತು ಮಹಾರಾಷ್ಟ್ರದಲ್ಲಿ ಆಯಾ ಸರಕಾರಗಳಲ್ಲಿ ಕಿರಿಯ ಪಾಲುದಾರನಾಗಿದೆ. ವಿಚಿತ್ರವೆಂದರೆ, ಕಿರಿಯ ಪಾಲುದಾರನಾಗಿ ಆಡಳಿತವಿರುವ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಅಷ್ಟೇನೂ ನಾಯಕತ್ವದ ಸಮಸ್ಯೆಗಳು ಕಾಣಿಸುತ್ತಿಲ್ಲ. ಆದರೆ ನೇರವಾಗಿ ಆಡಳಿತದಲ್ಲಿರುವ ಮೂರು ರಾಜ್ಯಗಳಲ್ಲೂ ನಾಯಕತ್ವ ವಿಚಾರವೇ ಬಿಸಿತುಪ್ಪವಾಗಿ ಪರಿಣಮಿಸಿದೆ.  ಒಂದಷ್ಟು ಇತಿಹಾಸ ನೋಡುವುದಾದರೆ, ಕಾಂಗ್ರೆಸ್‌ಗೆ ನಾಯಕತ್ವದ ಸಮಸ್ಯೆ ಇರುವುದು ಕೇವಲ ರಾಜ್ಯಗಳಲ್ಲಿ ಅಲ್ಲ. ಅದು ದೇಶದ ಮಟ್ಟದಲ್ಲಿಯೇ ದಟ್ಟವಾಗಿದೆ. ನಾಯಕತ್ವದ ಸಮಸ್ಯೆಯಿಂದಾಗಿಯೇ ಕಾಂಗ್ರೆಸ್‌ನಲ್ಲಿ ಪ್ರತ್ಯೇಕವಾಗಿ ಜಿ23 ಎಂಬ ಗುಂಪು ಹುಟ್ಟಿಕೊಂಡಿರುವುದು. ಇಂದಿಗೂ ಈ ಗುಂಪು, ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ, ನಾಯಕತ್ವದ ಸಮಸ್ಯೆಯಿಂದಾಗಿಯೇ ಹಲವಾರು ಮಂದಿ ಪಕ್ಷ ಬಿಟ್ಟು ಹೋಗಿದ್ದಾರೆ ಎಂದೇ ವಾದಿಸಿಕೊಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗಷ್ಟೇ ಅಸ್ಸಾಂನಲ್ಲಿ ಮಹಿಳಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸುಶ್ಮಿತಾ ದೇವ್‌ ಅವರು, ಪಕ್ಷ ಬಿಟ್ಟು ಟಿಎಂಸಿಗೆ ಸೇರಿಕೊಂಡಿದ್ದಾರೆ. ಈ ವಿಚಾರದಲ್ಲೂ  ಈ ಜಿ23 ಅಸಮಾಧಾನ ವ್ಯಕ್ತಪಡಿಸಿದೆ.  ಏನೇ ಆಗಲಿ ಆದರೆ ಸದ್ಯ ಸ್ವತಂತ್ರವಾಗಿ ಆಡಳಿತದಲ್ಲಿರುವ ಮೂರು ರಾಜ್ಯಗಳಲ್ಲಿನ ಬೆಳವಣಿಗೆ ಕಾಂಗ್ರೆಸ್‌ಗೆ ತಲೆನೋವು ತರಿಸಿರುವುದು ಸುಳ್ಳಲ್ಲ. ಎಲ್ಲ ರಾಜ್ಯಗಳಲ್ಲೂ ತಮಗೇ ನಾಯಕತ್ವ ಸಿಗಬೇಕು ಎಂದು ಒಂದು ಗುಂಪು, ಮತ್ತೂಂದು ಗುಂಪಿನ ವಿರುದ್ಧ ಸೆಣೆಸುತ್ತಿದೆ.

Advertisement

ಪಂಜಾಬ್ : ಅಮರೀಂದರ್ಸಿಂಗ್‌ VS ನವಜೋತ್‌ ಸಿಧು 

ಮುಂದಿನ ವರ್ಷವೇ ಇಲ್ಲಿ ವಿಧಾನಸಭೆ ಚುನಾವಣೆ ಇದೆ. ಕಳೆದ ಬಾರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಪಕ್ಷ ಗೆದ್ದಿದೆ ಎಂಬುದು ಬಹಿರಂಗ ಸತ್ಯ. ಇಲ್ಲಿ ಆಡಳಿತದಲ್ಲಿದ್ದ ಶಿರೋಮಣಿ ಅಕಾಲಿ ದಳವನ್ನು (ಎಸ್‌ಎಡಿ) ಸೋಲಿಸುವಲ್ಲಿಯೂ ಅಮರೀಂದರ್‌ ಪಾತ್ರ ಮುಖ್ಯ ವಾದದ್ದು. ಆದರೆ ಇಲ್ಲೀಗ ಅಮರೀಂದರ್‌ ನಾಯಕತ್ವ ಪ್ರಶ್ನಿಸಿ, ನವಜೋತ್‌ ಸಿಂಗ್‌ ಸಿಧು ರಾಜಕೀಯ ಸಮರವನ್ನೇ ಸಾರಿದ್ದಾರೆ. ಇದು ಈಗಿನಿಂದಲ್ಲ, ತುಂಬಾ ಹಿಂದಿನಿಂದಲೇ ಅಮರೀಂದರ್‌ ಅವರ ತೀರ್ಮಾನಗಳನ್ನು ಪ್ರಶ್ನಿಸುವುದರ ಜತೆಗೆ ಅಮರೀಂದರ್‌ಗೂ ಮತ್ತು ಎಸ್‌ಎಡಿಗೂ ನಂಟಿದೆ ಎಂದು ಹೇಳುವ ಮೂಲಕ ಪಕ್ಷಕ್ಕೆ ಮುಜುಗರ ತಂದಿದ್ದರು.

ಸದ್ಯ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರ ಮಧ್ಯಸ್ಥಿಕೆಯಿಂದ ವಿವಾದ ಒಂದಷ್ಟು ಶಮನವಾಗಿದೆ. ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ವಿರೋಧದ ನಡುವೆಯೂ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ನವಜೋತ್‌ ಸಿಂಗ್‌ ಸಿಧು ಅವರಿಗೆ ವಹಿಸಲಾಗಿದೆ. ಇದು ಕ್ಯಾಪ್ಟನ್‌ಗೆ ಇಷ್ಟವಿಲ್ಲದಿದ್ದರೂ, ಹೈಕಮಾಂಡ್‌ನ‌ ಒತ್ತಡದಿಂದಾಗಿ ಒಪ್ಪಿಕೊಂಡಿದ್ದಾರೆ.

ಇದರ ಮಧ್ಯೆಯೇ ಮುಂದಿನ ವಿಧಾನಸಭೆ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎಂಬ ಚರ್ಚೆಗಳೂ ಇಲ್ಲಿ ಶುರುವಾಗಿವೆ. ಸಿಧು ನೇತೃತ್ವದಲ್ಲೇ ನಡೆಯಲಿ ಎಂಬುದು ಅವರ ಬಣದ ಒತ್ತಾಸೆಯಾದರೆ, ಹೈಕಮಾಂಡ್‌ ಅಮರೀಂದರ್‌ ಸಿಂಗ್‌ ನೇತೃತ್ವದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಸಿಧು ಬಣದ 32 ಶಾಸಕರು ಅಮರೀಂದರ್‌ ಸಿಂಗ್‌ ವಿರುದ್ಧ ಬಂಡೆದ್ದು, ರಾಜೀನಾಮೆಗೂ ಒತ್ತಾಯಿಸಿದ್ದರು. ಇದಕ್ಕೆ ಹೈಕಮಾಂಡ್‌ ಸೊಪ್ಪು ಹಾಕಲಿಲ್ಲವಷ್ಟೇ.

Advertisement

ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿದ್ದರೂ, ಸಿಧು ತಮ್ಮ ವರಸೆ ಬಿಟ್ಟಿಲ್ಲ. ರಾಜಕೀಯ ಸಲಹೆಗಾಗಿ ಆಪ್ತರೊಬ್ಬರನ್ನು ನೇಮಿಸಿಕೊಂಡು, ಅವರಿಂದಾಗಿ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದರು. ಈಗ ಸಲಹೆಗಾರ ರಾಜೀನಾಮೆ ಕೊಟ್ಟಿದ್ದಾರೆ. ಈ ವಿಚಾರವೂ ಸಿಧುಗೆ ಸಿಟ್ಟು ತರಿಸಿದ್ದು, ಸ್ವತಂತ್ರ ನಿರ್ಧಾರ ಕೈಗೊಳ್ಳಲು ಬಿಡದಿದ್ದರೆ ಸರಿಯಾಗಿರಲ್ಲ ಎಂದು ಹೈಕಮಾಂಡ್‌ಗೆà ಎಚ್ಚರಿಕೆ ನೀಡಿದ್ದಾರೆ. ಇದೊಂದು ರೀತಿಯಲ್ಲಿ ಹೈಕಮಾಂಡ್‌ಗೂ ಇಕ್ಕಟ್ಟಿನ ಸನ್ನಿವೇಶದಂತಾಗಿದೆ.

ಇನ್ನು ಸೋಮವಾರ ಮತ್ತೂಂದು ಬೆಳವಣಿಗೆ ನಡೆದಿದ್ದು, ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸಾಮೂಹಿಕ ನೇತೃತ್ವ, ಅಂದರೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ನೇತೃತ್ವದಲ್ಲೇ ನಡೆಸುತ್ತೇವೆ. ಅಮರೀಂದರ್‌ ಮತ್ತು ಸಿಧು ಪಂಜಾಬ್‌ನ ಎರಡು ಪಿಲ್ಲರ್‌ಗಳಿದ್ದಂತೆ ಎಂದು ಉಸ್ತುವಾರಿ ಹರೀಶ್‌ ರಾವತ್‌ ಹೇಳಿದ್ದಾರೆ. ಈ ಮೂಲಕ ಮೊನ್ನೆಯಷ್ಟೇ ಅಮರೀಂದರ್‌ ಸಿಂಗ್‌ ಅವರೇ ಕ್ಯಾಪ್ಟನ್‌ ಎಂದಿದ್ದ ಅವರೇ ಯೂಟರ್ನ್ ಹೊಡೆದಿದ್ದಾರೆ. ಒಟ್ಟಾರೆಯಾಗಿ ಇಡೀ ರಾಜ್ಯದ ನಾಯಕತ್ವ ವಿಚಾರ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ ಎಂಬುವುದು ಸತ್ಯ.

ರಾಜಸ್ಥಾನ : ಗೆಹ್ಲೋಟ್‌  VS ಪೈಲಟ್‌

ಇಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ವಿಶೇಷಎಂದರೆ, ಸದ್ಯ ಕಾಂಗ್ರೆಸ್‌ ಆಡಳಿತದಲ್ಲಿರುವ ದೊಡ್ಡ ರಾಜ್ಯವೆಂದರೆ ಇದೊಂದೇ. ಇಲ್ಲೂ ಆಂತರಿಕ ಸಂಘರ್ಷಗಳು ಪಕ್ಷಕ್ಕೆ ಹೊಡೆತ ನೀಡುತ್ತಲೇ ಇವೆ. ಕಳೆದ ವರ್ಷವೇ ಸಚಿನ್‌ ಪೈಲಟ್‌ ಅಶೋಕ್‌ ಗೆಹ್ಲೋಟ್‌ ವಿರುದ್ಧ ಬಂಡೆದಿದ್ದರು. ಆಗ ಉಪಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡಿದ್ದರು. ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರೇ ಮಧ್ಯಸ್ತಿಕೆ ವಹಿಸಿ ಈ ಭಿನ್ನಮತ ಶಮನಗೊಳಿಸಿದ್ದರು. ಪೈಲೆಟ್‌ ಬೆಂಬಲಿಗರಿಗೆ ಗೆಹ್ಲೋಟ್‌ ಸಂಪುಟದಲ್ಲಿ ಉತ್ತಮ ಸ್ಥಾನ ನೀಡುವುದು ಮತ್ತು ಸಚಿನ್‌ ಪೈಲಟ್‌ ಅವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಬಗ್ಗೆ ಮಾತಾಗಿತ್ತು. ಆದರೆ ಇದುವರೆಗೆ ಈ ವಾಗ್ಧಾನ ಈಡೇರಿಲ್ಲ. ನಿಧಾನಕ್ಕೆ ಪೈಲಟ್‌ ಅವರೂ ತಮ್ಮ ಅಸಮಾಧಾನ ತೋರಿಸಿಕೊಳ್ಳುತ್ತಿದ್ದಾರೆ. ಪೈಲಟ್‌ ಅವರ ಬೆಂಬಲಿಗರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಅತ್ತ ಅಶೋಕ್‌ ಗೆಹ್ಲೋಟ್‌ಈ ಬಗ್ಗೆ  ತಲೆಕೆಡಿಸಿಕೊಳ್ಳುತ್ತಿಲ್ಲ. ಇದು ಒಂದು ರೀತಿಯಲ್ಲಿ ಹೈಕಮಾಂಡ್‌ಗೆ ಇಕ್ಕಟ್ಟಿನ ಸ್ಥಿತಿಯಾಗಿದೆ. ಅಲ್ಲದೇ ಶೀಘ್ರವಾಗಿ ಸಚಿನ್‌ ಪೈಲಟ್‌ಗೆ ಸ್ಥಾನ ಸಿಗದಿದ್ದರೆ, ಕಾಂಗ್ರೆಸ್‌ಗೆ ಪೆಟ್ಟು ಬೀಳುವುದು ಖಂಡಿತ. ಹೀಗಾಗಿಯೇ, ಹೈಕಮಾಂಡ್‌ ಸಚಿನ್‌ ಪೈಲಟ್‌ ಅವರಿಗೆ ದಿಲ್ಲಿಯಲ್ಲಿಯೇ ಪ್ರಮುಖ ಸ್ಥಾನ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ಮಾತುಗಳಿವೆ. ಆದರೆ ಇದು ಬಹುಬೇಗನೇ ನೆರವೇರಿದರೆ ಮಾತ್ರ ಪರಿಸ್ಥಿತಿ ಉತ್ತಮವಾಗಬಹುದು.

ಛತ್ತೀಸ್‌ಗಢ:  ಬಘೇಲ್‌ VS ದಿಯೋ :

ಇದುವರೆಗೆ ಚೆನ್ನಾಗಿಯೇ ನಡೆದುಕೊಂಡು ಹೋಗುತ್ತಿದ್ದ ಛತ್ತೀಸ್‌ಗಢದ ಕಾಂಗ್ರೆಸ್‌ ಸರಕಾರದಲ್ಲಿಯೂ ವೈಮನಸ್ಸು ಉಂಟಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಸರಕಾರ ರಚನೆಯಾದಾಗ, ಸಿಎಂ ಹುದ್ದೆಯನ್ನು ರೊಟೇಶನ್‌ ಮಾಡುವ ಬಗ್ಗೆ ರಾಹುಲ್‌ ಗಾಂಧಿಯವರೇ ಪ್ರಸ್ತಾವ ಇರಿಸಿದ್ದರಂತೆ. ರಾಜ್ಯದಲ್ಲಿ ಸತತ ಮೂರು ಬಾರಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಕಾಂಗ್ರೆಸ್‌ ಸಾಮೂಹಿಕ ನಾಯಕತ್ವದಲ್ಲೇ ಸೋಲಿಸಿತ್ತು. ಆಗ ಹಾಲಿ ಸಿಎಂ ಭೂಪೇಶ್‌ ಬಘೇಲ್‌ ಮತ್ತು ಟಿಎಸ್‌ ಸಿಂಗ್‌ ದಿಯೋ ನಡುವೆ ಮುಖ್ಯಮಂತ್ರಿ ಹುದ್ದೆಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸದ್ಯ ಛತ್ತೀಸ್‌ಗಢ ದಲ್ಲಿ ಅತ್ಯಂತ ಶ್ರೀಮಂತ ಶಾಸಕನಾಗಿರುವ ದಿಯೋ ಅವರು ಈಗ, ಮುಖ್ಯಮಂತ್ರಿ ಹುದ್ದೆಗಾಗಿ ಬೇಡಿಕೆ ಇರಿಸಿದ್ದಾರೆ.

ಈ ಸಂಬಂಧ ದಿಯೋ ಅವರ ಪರ ಶಾಸಕರು ದಿಲ್ಲಿಗೆ ಭೇಟಿ ನೀಡಿ ಹೈಕಮಾಂಡ್‌ ಮುಂದೆ ಹಿಂದಿನ ವಚನ ನೆನಪಿಸಿದ್ದಾರೆ. ಈಗಾಗಲೇ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರು ನಾಲ್ಕೈದು ಸುತ್ತುಗಳ ಸಂಧಾನ ಸಭೆಯನ್ನೂ ನಡೆಸಿದ್ದಾರೆ. ಮೂಲಗಳ ಪ್ರಕಾರ, ರಾಹುಲ್‌ ಗಾಂಧಿ ಅವರು ದಿಯೋ ಅವರನ್ನು ಸಿಎಂ ಮಾಡುವ ಆಲೋಚನೆಯಲ್ಲಿದ್ದಾರಂತೆ. ಆದರೆ ಭೂಪೇಶ್‌ ಬಘೇಲ್‌ ಅವರು ಸಿಎಂ ಸ್ಥಾನ ಬಿಡಲು ಒಪ್ಪುತ್ತಿಲ್ಲ. ಇದೂ ಕಾಂಗ್ರೆಸ್‌ ಪಾಲಿಗೆ ಕಗ್ಗಂಟಾಗಿದೆ.

ಟಿಎಸ್‌ ಸಿಂಗ್‌ ದಿಯೋ ಅವರು, 2013ರಿಂದ 18ರವರೆಗೆ ಛತ್ತೀಸ್‌ಗಢ ವಿಧಾನಸಭೆಯಲ್ಲಿ ವಿಪಕ್ಷ  ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಭೂಪೇಶ್‌ ಬಘೇಲ್‌ ಅವರು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದರು. ಇವರಿಬ್ಬರು ಕಾಂಗ್ರೆಸ್‌ ಗೆಲುವಿಗೆ ತಮ್ಮದೇ ಆದ ವಾದವನ್ನು ಮುಂದಿಡುತ್ತಾರೆ. ವಿಧಾನಸಭೆಯಲ್ಲಿ ಸರಕಾರದ ವೈಫ‌ಲ್ಯಗಳನ್ನು ಮುಂದಿಟ್ಟಿದ್ದರಿಂದಲೇ ಕಾಂಗ್ರೆಸ್‌ ಗೆದ್ದು, ಬಿಜೆಪಿ ಸೋತಿತು ಎಂಬುದು ದಿಯೋ ಅವರ ಮಾತಾದರೆ, ರಾಜ್ಯ ಪೂರ್ತಿ ಓಡಾಡಿ ಪಕ್ಷ ಸಂಘಟನೆ ಮಾಡಿ ಗೆಲ್ಲಿಸಿಕೊಂಡೆ ಎಂಬುದು ಬಘೇಲ್‌ ಅವರ ವಾದ. ಹೀಗಾಗಿ ಇವರೀರ್ವರ ನಡುವೆ ಈಗ ಯಾರಿಗೆ ಮಣೆ ಹಾಕುವುದು ಎಂಬುದೇ ಕಾಂಗ್ರೆಸ್‌ಗೆ ತಿಳಿಯಲಾರದ ಸಂಗತಿಯಾಗಿದೆ.

ಈ ಎಲ್ಲ ಸಂಗತಿಗಳ ಮಧ್ಯೆ ಅತ್ತ ಅಸ್ಸಾಂನಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ಪಕ್ಷ ತ್ಯಜಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ಮತ್ತು ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಸುಶ್ಮಿತಾ ದೇವ್‌ ಅವರು ಕಾಂಗ್ರೆಸ್‌ ತ್ಯಜಿಸಿದ್ದಾರೆ. ಇದು ಒಂದು ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ. ಈಗಾಗಲೇ ಅಸ್ಸಾಂನಲ್ಲಿ ಕಾಂಗ್ರೆಸ್‌ ಪದೇ ಪದೆ ಏಟು ತಿಂದಿದೆ. ಈ ಮಧ್ಯೆ, ಸುಶ್ಮಿತಾ ದೇವ್‌ ಅವರು ಟಿಎಂಸಿ ಸೇರಿರುವುದು ಭಾರೀ ನಷ್ಟವುಂಟಾಗಿದೆ ಎಂದು ಸ್ವತಃ ಕಾಂಗ್ರೆಸ್‌ ನಾಯಕರೇ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next