Advertisement

ಚುನಾವಣೆ ಬಂದಾಗ ಕಾಂಗ್ರೆಸ್‌-ಮೋದಿ ವಿರೋಧಿಗಳಿಗೆ ಮಹದಾಯಿ ನೆನಪು

11:32 AM Apr 22, 2019 | Team Udayavani |
ಹುಬ್ಬಳ್ಳಿ: ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ ಹಾಗೂ ಮೋದಿ ವಿರೋಧಿಗಳಿಗೆ ಮಹದಾಯಿ ನೆನಪಾಗುತ್ತದೆ. ವಿನಾಕಾರಣ ಬಿಜೆಪಿ ಹಾಗೂ ಮೋದಿಯವರ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.

ಜನವರಿ ತಿಂಗಳಲ್ಲಿ ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಕುಮಾರಸ್ವಾಮಿ ಅವರು, ಮೇಲ್ಮನವಿ ಸಲ್ಲಿಸುವುದರಿಂದ ನ್ಯಾಯಾಧೀಕರಣದ ತೀರ್ಪಿನ ಕುರಿತು ಗೆಜೆಟ್ ನೋಟಿಫಿಕೇಶನ್‌ ಹೊರಡಿಸಲು ತೊಂದರೆಯಾಗುತ್ತದೆ ಎಂದಿದ್ದರು. ಆದರೆ ಇದೀಗ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. 2010 ರಲ್ಲಿ ಯುಪಿಎ ಸರಕಾರವೇ ಈ ವಿಚಾರ ಮಾತುಕತೆಯ ಮೂಲಕ ಬಗೆಹರಿಯುವುದಿಲ್ಲ ಎಂದು ನ್ಯಾಯಾಧೀಕರಣ ರಚನೆಯೊಂದೇ ಪರಿಹಾರ ಎಂದು ಸರ್ವೋಚ್ಚ ನ್ಯಾಯಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದನ್ನು ಜನರು ಮರೆತಿಲ್ಲ. 2007ರ ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ನೀಡಿದ್ದ ಹೇಳಿಕೆ ಮಾಧ್ಯಮದಲ್ಲಿ ಪ್ರಕಟವಾಗಿರುವುದು ದಾಖಲೆಯಿದೆ. ಇದೆಲ್ಲ ಗೊತ್ತಿದ್ದರೂ ವಿನಯ ಕುಲಕರ್ಣಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದು, ಈ ಯತ್ನ ಕೈಗೂಡುವುದಿಲ್ಲ. ಮಹದಾಯಿ ಹೋರಾಟಗಾರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ವಿನಯ ಕುಲಕರ್ಣಿಯವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ. ಯಮನೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಲಾಠಿ ಪ್ರಹಾರ ಮಾಡಿಸಿ ದೌರ್ಜನ್ಯ ಎಸಗಿರುವುದನ್ನು ಅಲ್ಲಿನವರು ಸೇರಿದಂತೆ ಕ್ಷೇತ್ರದ ಜನತೆ ಮರೆತಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

ಮಹದಾಯಿ ಹೋರಾಟ ಯಾರೊಬ್ಬರ ಸ್ವತ್ತಲ್ಲ. ಅದು ಉಕ ಭಾಗದ 4 ಜಿಲ್ಲೆಗಳ ಜನಸಾಮಾನ್ಯರ ಹೋರಾಟವೇ ಹೊರತು ಕೋನರಡ್ಡಿಯವರ ಮನೆಯ ಹೋರಾಟವಲ್ಲ. ಕೋನರಡ್ಡಿಯವರು ಮಹದಾಯಿ ಹೋರಾಟಗಾರರು ಚುನಾವಣೆಯಲ್ಲಿ ಸಂಸದ ಪ್ರಹ್ಲಾದ ಜೋಶಿ ಸೋಲಿಸುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದು, ಅವರೊಬ್ಬರೇ ಮಹದಾಯಿಗಾಗಿ ಹೋರಾಟ ಮಾಡಿಲ್ಲ. ಕಳಸಾ-ಬಂಡೂರಿಗೆ ಶಕ್ತಿ ತುಂಬಿದವರೆ ಬಿ.ಎಸ್‌. ಯಡಿಯೂರಪ್ಪ, ಕೆ.ಎಸ್‌. ಈಶ್ವರಪ್ಪ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ. 2005-06ರಲ್ಲಿ ಈಶ್ವರಪ್ಪ ಮಹದಾಯಿ ಯೋಜನೆಗೆ ಇಚ್ಛಾಶಕ್ತಿ ತೋರಿ ಕಣಕುಂಬಿಯಲ್ಲಿ ಭೂಮಿಪೂಜೆ ಮಾಡಿದ್ದರು. ಆಗ ಕೋನರಡ್ಡಿ ಎಲ್ಲಿದ್ದರು?
•ಶಿವಾನಂದ ಮುತ್ತಣ್ಣವರ

Advertisement

Udayavani is now on Telegram. Click here to join our channel and stay updated with the latest news.

Next