Advertisement

ಲೈಂಗಿಕ ಅಲ್ಪಸಂಖ್ಯಾತರು, ಕಾರ್ಯಕರ್ತರ ರಕ್ಷಣೆ, ಏಳ್ಗೆಗೆ ಪ್ರಣಾಳಿಕೆಯಲ್ಲಿ ಆದ್ಯತೆ: ಡಿಕೆಶಿ 

08:21 PM Aug 27, 2021 | Team Udayavani |

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರು, ಕಾರ್ಯಕರ್ತರ ರಕ್ಷಣೆ, ಏಳಿಗೆ, ಸ್ವಾಭಿಮಾನ, ಗೌರವದ ಬದುಕಿಗೆ ಪಕ್ಷದ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

Advertisement

ಅವರಿಗೆ ಕಿರುಕುಳ ನೀಡುವ ಪೊಲೀಸರು ಮತ್ತಿತರರ ವಿರುದ್ಧ ಕಠಿಣ ಕ್ರಮದ ಕಾನೂನು, ಸ್ವಯಂ ಉದ್ಯೋಗಕ್ಕೆ ಆರ್ಥಿಕ ನೆರವು, ಮನೆ, ಮಕ್ಕಳ ಶಿಕ್ಷಣಕ್ಕೆ ನೆರವು, ಆರೋಗ್ಯ ಹಾಗೂ ಪಿಂಚಣಿ ಸೌಲಭ್ಯ ಒದಗಿಸುವ ಭರವಸೆ ಪ್ರಣಾಳಿಕೆಯಲ್ಲಿ ಇರಲಿದೆ ಎಂದೂ ಶಿವಕುಮಾರ್ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರು, ಕಾರ್ಯಕರ್ತರು, ಹೋರಾಟಗಾರರ ಜತೆ ಶುಕ್ರವಾರ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದ ಅವರು, ‘ಈ ವರ್ಗದವರಿಗೆ ಸಮಾಜದಲ್ಲಿ ಗೌರವ ಸಿಗಬೇಕು ಹಾಗೂ ಅವರ ಸ್ವಾಭಿಮಾನದ ಬದುಕಿಗೆ ಅವಕಾಶ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

ಲೈಂಗಿಕ ಕಾರ್ಯಕರ್ತೆಯರಿಗೆ ಕಾನೂನಿನಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆಯಾದರೂ ಅವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಬಡತನ ಯಾರಿಗೆ ಇದೆಯೋ, ಯಾರು ಜೀವನದಲ್ಲಿ ಮೋಸ ಹೋಗಿದ್ದಾರೋ ಅವರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಹಣವಂತರಿಗೆ ರಕ್ಷಣೆ ಸಿಗುತ್ತಿದೆ. ನಿಮ್ಮ ಧ್ವನಿಯಾಗಲು ಇಂದು ನಿಮ್ಮ ಜತೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ.

ನೀವು ಸಮಾಜದಲ್ಲಿ ಗೌರವ, ಸ್ವಾಭಿಮಾನದಿಂದ ಬದುಕುವಂತಾಗಬೇಕು. ನಿಮಗೆ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಕಾನೂನಿನ ಅಗತ್ಯವಿದೆ. ಪೊಲೀಸರೇ ಆಗಲಿ, ಬೇರೆಯವರೇ ಆಗಲಿ ನಿಮಗೆ ಕಿರುಕುಳ ನೀಡಿದವರಿಗೆ ಕ್ರಮ ಕೈಗೊಳ್ಳುವ ಕಾನೂನು ತರಬೇಕಿದೆ. ಈ ವಿಚಾರವಾಗಿ ಮುಂದೆ ನಿಮ್ಮ ಸಂಘಟನೆಗಳ ಮುಖಂಡರ ಜತೆ ಮಾತನಾಡಿ, ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಈ ವಿಚಾರ ಅಳವಡಿಸುತ್ತೇವೆ.

Advertisement

ನೀವು ಮತ ಹಾಕಿದ ತಕ್ಷಣ ನಾವು ಅಧಿಕಾರಕ್ಕೆ ಬರುತ್ತೇವೆ ಎಂದಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ನಮಗೂ, ನಿಮಗೂ ಸಮಾಧಾನ ಸಿಗುವ ಕಾರ್ಯಕ್ರಮ ಅನುಷ್ಠಾನಕ್ಕೆ ಬರಬೇಕು. ನಾವು ಎಲ್ಲ ವರ್ಗದ ಜನರನ್ನು ರಕ್ಷಣೆ ಮಾಡಬೇಕು. ನಿಮ್ಮ ವರ್ಗದ ಅನೇಕರು ಗುರುತಿಸಿಕೊಳ್ಳುವುದಿಲ್ಲ. ಕೆಲವರು ಮಾತ್ರ ಧೈರ್ಯವಾಗಿ ಗುರುತಿಸಿಕೊಳ್ಳುತ್ತಿದ್ದೀರಿ. ಹೀಗಾಗಿ ಈ ವಿಚಾರವಾಗಿ ಕ್ರಿಯಾ ಯೋಜನೆ (ಪ್ಲಾನ್ ಆಫ್ ಆಕ್ಷನ್) ರೂಪಿಸಬೇಕಿದೆ.

ನಮ್ಮಲ್ಲಿ ಮಹಿಳಾ ಮಹಾ ಪಂಚಾಯ್ತಿ ಎಂಬ ಕಾರ್ಯಕ್ರಮ ರೂಪಿಸಿದ್ದು, 224 ವಿಧಾನಸಭಾ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳ ಜತೆ ಚರ್ಚಿಸಲು ಸೂಚಿಸಿದ್ದೇನೆ. ಈ ಸಂವಾದದ ಮೂಲಕ ನಿಮ್ಮ ಕಷ್ಟ, ನೋವು ನನಗೆ ಅರ್ಥವಾಗಿದೆ. ನಿಮ್ಮ ಪರ ಧ್ವನಿ ಎತ್ತಲು ಸಾಧ್ಯವಿರುವಿಡೆ ಧ್ವನಿ ಎತ್ತಲು ಪ್ರಯತ್ನಿಸುತ್ತೇನೆ. ನಿಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಕೇಳಿಸಿ, ಮನವರಿಕೆ ಮಾಡಿಕೊಂಡಿದ್ದೇನೆ.

ನಾನು ಜಯಮಾಲಾ ಅವರ ಅಧ್ಯಕ್ಷತೆಯ ಸಮಿತಿ ಹಾಗೂ ಇತರ ಸಮಿತಿಗಳ ವರದಿ ಪರಿಶೀಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ.’

ಈ ಸಂವಾದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರ ಮುಂದೆ ತಮ್ಮ ಸಮಸ್ಯೆ, ನೋವುಗಳನ್ನು ಹಂಚಿಕೊಂಡ ಹಲವು ಮಹಿಳೆಯರು, ತಾವು ದಿನನಿತ್ಯ ಪೊಲೀಸರಿಂದ ಎದುರಿಸುತ್ತಿರುವ ಸಮಸ್ಯೆ, ದೌರ್ಜನ್ಯವನ್ನು ಹೇಳಿಕೊಂಡು ಕಣ್ಣೀರಿಟ್ಟರು. ಇನ್ನು ಕೋವಿಡ್ ಸಮಯದಲ್ಲಿ ಜೀವನ ನಡೆಸಲು ಅನುಭವಿಸಿದ ಸಂಕಟ, ಸಮಾಜದಲ್ಲಿ ಎದುರಿಸುವ ಅಪಮಾನ, ಕುಟುಂಬದ ಜವಾಬ್ದಾರಿ ನಿಭಾಯಿಸಲು ಆಗುತ್ತಿರುವ ಪರದಾಟ ಎಲ್ಲವನ್ನು ಎಳೆಎಳೆಯಾಗಿ ವಿವರಿಸಿದರು.

ಈ ಸಂವಾದ ಕಾರ್ಯಕ್ರಮದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಖ್ಯಾತ ಹೋರಾಟಗಾರ್ತಿ ಅಕೈ ಪದ್ಮಶಾಲಿ, ಸಾಧನಾ ಮಹಿಳಾ ಸಂಘದ ಗೀತಾ, ಮಧು ಹಾಗೂ ವಕೀಲರಾದ ಸಭಾ ಅವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next