Advertisement

ಸಂತ್ರಸ್ತರು ಸತ್ತ ಮೇಲೆ ಪರಿಹಾರ ನೀಡುತ್ತಾರಾ?: ಉಭಯ ಸರಕಾರಗಳ ವಿರುದ್ಧ ಈಶ್ವರ್ ಖಂಡ್ರೆ ಕಿಡಿ

10:21 AM Sep 13, 2019 | Hari Prasad |

ಬೀದರ: ಭೀಕರ ನೇರೆ ಸಂಭವಿಸಿದ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದಿಗೂ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎರಡೂ ವಿಫಲಗೊಂಡಿವೆ. ನೇರೆ ಪ್ರದೇಶದಲ್ಲಿನ ಸಂತ್ರಸ್ತರು ಸತ್ತ ಬಳಿಕ ಸರ್ಕಾರ ಪರಿಹಾರ ನೀಡುತ್ತದೆಯೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ರಾಜ್ಯ ಮತ್ತು ಕೇಂದ್ರ ಸರಕಾರಗಳನ್ನು ಪ್ರಶ್ನಿಸಿದ್ದಾರೆ.

Advertisement

ನೇರೆಹಾವಳಿ ಸಂತ್ರಸ್ತರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಗುರುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ನೇರೆ ಪರಿಸ್ಥಿತಿ ಕುರಿತು  ಅಮಿತ್ ಶಾ  ಅವರು ವೈಮಾನಿಕ ಸಮೀಕ್ಷೆ ನಡೆಸಿ 40 ದಿನಗಳು ಕಳೆದರೂ ಕೂಡ ಈವರೆಗೆ ಕೇಂದ್ರ ಸರ್ಕಾರದಿಂದ ಚಿಕ್ಕಾಸು ಪರಿಹಾರ  ಬಂದಿಲ್ಲ. ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇದೆ ಎಂದು ಹೇಳುತ್ತಿದ್ದಾರೆ ಹಾಗಾದರೆ ಇನ್ನು ಯಾವಾಗ ನೆರೆ ಸಂತ್ರಸ್ತರು ಸತ್ತಮೇಲೆ ಪರಿಹಾರ ಬರುತ್ತಾ ಎಂದು ಪ್ರಶ್ನಿಸಿದರು.

2008-09ರಲ್ಲಿ ರಾಜ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಹಾಗೂ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಆ ಸಂದರ್ಭದಲ್ಲಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದ್ದ ಕೇಂದ್ರ ಸರಕಾರತಕ್ಷಣಕ್ಕೆ ಎರಡು ಸಾವಿರ ಕೋಟಿ  ಪರಿಹಾರ ಒದಗಿಸಿತ್ತು. ಆದರೆ ಇಂದು ನೇರೆ ಸಂತ್ರಸ್ತರ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ತೊರುತ್ತಿವೆ ಎಂದು ಖಂಡ್ರೆ ಆರೋಪಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ಯಾಕೆ ಮತ ಹಾಕಿದರು ಎಂಬುದು ಇಂದಿಗೂ ಗೊತ್ತಾಗಿಲ್ಲ. ಜನರ ಸಂಕಷ್ಟದಲ್ಲಿ ಆಡಳಿತ ಪಕ್ಷದವರು ಸ್ಪಂದಿಸುತ್ತಿಲ್ಲ. ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

Advertisement

ರಾಜ್ಯದಲ್ಲಿ ಸಂಭವಿಸಿದ ನೆರೆಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕಿತ್ತು ಈ ಮೂಲಕ ಕೇಂದ್ರ ಸರ್ಕಾರದ ವಿಶೇಷ ಅನುದಾನ ರಾಜ್ಯಕ್ಕೆ ದೊರೆಯುತ್ತಿತ್ತು. ಆದರೆ ಸದ್ಯ ಪ್ರತಿ ಜಿಲ್ಲೆಗೆ ಎರಡು ಮೂರು ಕೋಟಿ ಅನುದಾನ ಮಾತ್ರ ಕಲ್ಪಿಸಿದ್ದು, ಕೂಡಲೇ ಸರ್ಕಾರ ಪರಿಹಾರ ಕಲ್ಪಿಸಲು ಮುಂದಾಗಬೇಕು. ಇಲ್ಲವಾದಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ನಡೆಸುವುದುವುದು ಅನಿವಾರ್ಯವಾಗಲಿದೆ ಎಂದು ಈಶ್ವರ್ ಖಂಡ್ರೆ ಅವರು ಎಚ್ಚರಿಕೆ ನೀಡಿದರು.

ಡಿಕೆಶಿಗೆ ಮಾನಸಿಕ ಕಿರುಕುಳ:
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಡಿಕೆಶಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ನಗರದ ಜಿಲ್ಲಾಧಿಕಾರಿ ಎದುರಿಗೆ ನಡೆದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಜತೆಗೆ ಅವರ ಕುಟುಂಬಸ್ಥರಿಗೂ ಸಹ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಆದರೆ, ಶಿವಕುಮಾರ್ ಅವರ ಜೊತೆ ಕಾಂಗ್ರೆಸ್ ಪಕ್ಷ ನಿಲ್ಲುತ್ತದೆ ಎಂದು ಅವರು ಹೇಳಿದರು.

ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಬಿಜೆಪಿ ಪಕ್ಷಕ್ಕೆ ಸೆರ್ಪಡೆ ಆಗುತ್ತಿದ್ದಾರೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ ಅವರು, ‘ರಾಜಶೇಖರ ಪಾಟೀಲ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಲ್ಲಾ ಗಾಳಿ ಸುದ್ದಿ’ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next