Advertisement

ಹತಾಶೆಯಿಂದ ಕಾಂಗ್ರೆಸ್ ಸುಳ್ಳು ಸುದ್ದಿ ಹರಡುತ್ತಿದೆ,ಜನ ತಕ್ಕ ಪಾಠ ಕಲಿಸ್ತಾರೆ: ಬಿಜೆಪಿ ಕಿಡಿ

02:22 PM Feb 15, 2022 | Team Udayavani |

ಬೆಂಗಳೂರು: ಹಿಜಾಬ್ ವಿವಾದವು ತಾರಕಕ್ಕೆ ಹೋಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎರಡು ಗುಂಪುಗಳೂ ಪ್ರತಿಭಟನೆಯನ್ನು ನಡೆಸಿ ಕಾನೂನು ಸುವ್ಯವಸ್ಥೆಗೆ ಭಂಗ ತಂದ ತರುವಾಯ ನ್ಯಾಯಾಲಯದ ಮಧ್ಯಪ್ರವೇಶದಿಂದ ಪರಿಸ್ಥಿತಿಯು ತಹಬಂದಿಗೆ ಬಂದಿದೆ ಬಿಜೆಪಿ ಹೇಳಿದೆ.

Advertisement

ಇದನ್ನೂ ಓದಿ:ಹಿಜಾಬ್ ವಿವಾದಕ್ಕೂ ಪಂಚರಾಜ್ಯ ಚುನಾವಣೆಗೂ ಏನು ಸಂಬಂಧ: ನಳಿನ್ ಕುಮಾರ್ ಕಟೀಲ್

ಆದರೆ ಕಾಂಗ್ರೆಸ್ ಪಾರ್ಟಿಗೆ  ರಾಜ್ಯದಲ್ಲಿ ಶಾಂತಿ ಕಾಪಾಡುವುದು ಬೇಡವಾಗಿದೆ. ಇಲ್ಲದ ಸಲ್ಲದ ಆಧಾರರಹಿತ ಆರೋಪಗಳನ್ನು ಬಿಜೆಪಿ ಮತ್ತು ಪರೋಕ್ಷವಾಗಿ ಹಿಂದುಗಳನ್ನು ಗುರಿಯಾಗಿಸಿ ರಾಜ್ಯದಲ್ಲಿ ಸಾಮರಸ್ಯ ಮತ್ತು ಶಾಂತಿ ಕದಡುವ ಕುಚೇಷ್ಚೆಯನ್ನು  ಮಾಡುತ್ತಿದೆ ಎಂದು ಎಂಎಲ್ ಸಿ ರವಿಕುಮಾರ್ ಹಾಗೂ ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೇಳಿದ್ದಿಷ್ಟು:
ಶಿವಮೊಗ್ಗದ ಸರ್ಕಾರಿ ಮೊದಲನೆಯ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾಗಿ ಕಾಲೇಜಿನ ಮುಂಭಾಗದಲ್ಲಿದ್ದ ಖಾಲಿ ಧ್ವಜಸ್ತಂಭವನ್ನೇರಿ ಕೇಸರಿ ಧ್ವಜವನ್ನು ಹಾರಿಸಿದರು. ಆ ಸಂದರ್ಭದಲ್ಲಿ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವು ಹಾರಾಡುತ್ತಿರಲಿಲ್ಲ.ಸತ್ಯವನ್ನು ಮರೆಮಾಚಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರು ಸಾಮಾಜಿಕ ಜಾಲ ತಾಣದ ಮುಖಾಂತರ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂದು ಕಪಟವಾದ ಭಾವನಾತ್ಮಕ ಟ್ವೀಟ್ ಮಾಡಿ ಪರಿಸ್ಥಿತಿಯನ್ನು ಮತ್ತಷ್ಟು  ಸೂಕ್ಷ್ಮವಾಗಿಸಿ ಜನರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡಿದ್ದಾರೆ

ಇದು ಸಾಲದು ಎಂಬಂತೆ #MY FLAG MY PRIDE ಎಂಬ ಹ್ಯಾಶ್ ಟ್ಯಾಗ್ ಬಳಸಿ ಸಾರ್ವಜನಿಕರಿಗೆ ಟ್ವೀಟ್ ಮಾಡಿ ಎಂದು ಕರೆ ನೀಡಿ ರಾಜ್ಯಾದ್ಯಂತ ಗಲಭೆಯಾಗಲಿ ಎಂದು ಕುಮ್ಮಕ್ಕು ಸಹಾ ನೀಡಿದರು.  ಈಗಾಗಲೇ ಇವರ ಈ ಬೆಂಕಿ ಹಚ್ಚುವ ಪ್ರಯತ್ನವನ್ನು ಬಿಜೆಪಿ ಕಾನೂನು ವಿಭಾಗವು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಇವರ ವಿರುದ್ದ ಕ್ರಮ ಜರುಗಿಸಲು ಲಿಖಿತ ದೂರು ನೀಡಿದ್ದಾರೆ.

Advertisement

ಪೊಲೀಸ್ ಮಹಾನಿರ್ದೇಶಕರು ಬಿಜೆಪಿ ನೀಡಿರುವ ದೂರಿನ ಮೇಲೆ ಕೂಡಲೇ  ಕ್ರಮ ಜರುಗಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ.ಡಿ.ಕೆ.ಶಿವಕುಮಾರ್ ರವರು ಮುಂದುವರೆದು ಶಿವಮೊಗ್ಗಾದ ಸಚಿವರ ಪುತ್ರನೊಬ್ಬನು ಸೂರತ್ ನಿಂದ ಲಾರಿಗಟ್ಟಲೆ ಕೇಸರಿ ಶಾಲನ್ನು ತಂದು ಹಂಚುತ್ತಿದ್ದಾರೆ  ಎಂದು ಬುಡವಿಲ್ಲದ ಆಪಾದನೆಯನ್ನು ಸುಖಾಸುಮ್ಮನೆ ಮಾಡಿ ಪರಿಸ್ಥಿತಿಯನ್ನು ಮತ್ತಷ್ಟು ಗೊಂದಲ ಮಾಡಲು ಯತ್ನಿಸಿದರು.

ರಾಜ್ಯದ ಪ್ರಮುಖ ರಾಜಕೀಯ ಪಕ್ಷದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿಯುತ ನಡವಳಿಕೆಯನ್ನು ನಿರೀಕ್ಷಿಸುತ್ತೇವೆ ಆದರೆ ಪರಿಸ್ಥಿತಿಯ ಲಾಭ ಪಡೆಯಲು ಇಲ್ಲದ ಸಲ್ಲದ ಆರೋಪ ಮಾಡುವುದು ಇವರಿಗೆ ಶೋಭೆ ತರುವುದಿಲ್ಲ. ಡಿ. ಕೆ.ಶಿವಕುಮಾರ್ ರವರು ಜನರನ್ನು ದಾರಿ ತಪ್ಪಿಸಿ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಲು ನಡೆಸುತ್ತಿರುವ  ವರ್ತನೆ ಕೂಡಲೇ ನಿಲ್ಲಿಸಬೇಕು ಮತ್ತು ತಮ್ಮ ಬುಡರಹಿತ ಆರೋಪಕ್ಕೆ  ರಾಜ್ಯದ ಜನತೆಯ ಕ್ಷಮೆ ಕೇಳಬೇಕು.

ಈಶ್ವರಪ್ಪನವರು ಮಾಧ್ಯಮದೊಂದಿಗೆ ಮಾತನಾಡುವ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲೆ 200 ಅಥವಾ 500 ವರ್ಷಗಳ ತರುವಾಯ ದೇಶದ ಧ್ವಜ ಕೇಸರಿಯಾಗಬಹುದು ಗೊತ್ತಿಲ್ಲ ಎಂದು ಹೇಳಿದ್ದನ್ನು ತಿರುಚಿ ರಾಷ್ಟ್ರಧ್ವಜವನ್ನು ಇಳಿಸಿ ಕೇಸರಿ ಧ್ವಜ ಹಾಕಲಾಗುವುದು ಎಂದು ಈಶ್ವರಪ್ಪ ಹೇಳಿದ್ದಾರೆ ಎಂದು ಮತ್ತೊಂದು ಸುಳ್ಳಿನ ಕಂತೆಯನ್ನು ಹೇಳಿರುವುದು ಅತ್ಯಂತ ಖಂಡನೀಯ.

200 ಆಗಲಿ ಅಥವಾ 500 ವರ್ಷವಾಗಲಿ ನೋಡಲು ನಾವು ಯಾರು ಇರುವುದಿಲ್ಲ ಹೀಗಾಗಿ ಇದೊಂದು ಅಪ್ರಸ್ತುತ ವಿಷಯವಾಗಿದೆ ಹಾಗೂ ಡಿಕೆಶಿಯವರ ಹೇಳಿಕೆಗೆ ಪ್ರತಿಯಾಗಿ ನೀಡಿದ ಪ್ರತಿಕ್ರಿಯೆ ಮಾತ್ರ. ಈಶ್ವರಪ್ಪನವರು ರಾಷ್ಟ್ರ ಧ್ವಜಕ್ಕೆ ಎಲ್ಲಾ ದೇಶಭಕ್ತರು ಗೌರವ ಸಲ್ಲಿಸಲೇ ಬೇಕು ಅದರಲ್ಲಿ ಯಾವ ರಾಜಿ ಇಲ್ಲ ಎಂದ ಮಾತನ್ನು ತಿರುಚಿ ಕೇವಲ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಹೇಳಿಕೆಯನ್ನು ಕಾಂಗ್ರೆಸ್ ಉಪಯೋಗಿಸಿಕೊಂಡು  ರಾಜಕೀಯ ಮಾಡುತ್ತಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.

ಹಿಜಾಬ್ ವಿವಾದದಲ್ಲಿ ಸಮವಸ್ತ್ರ ನೀತಿಯನ್ನು ಉಲ್ಲಂಘನೆ ಮಾಡಿದವರಿಗೆ ಬುದ್ದಿ ಹೇಳುವ ಬದಲು ಬಿಜೆಪಿಯು ಈ ವಿವಾದವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿ ಅಶಿಸ್ತಿಗೆ ಬೆಂಬಲಿಸಿ ರಾಜ್ಯದ ಯುವಕರ ಬೆಂಬಲವನ್ನು ಕಾಂಗ್ರೆಸ್ ಕಳೆದುಕೊಂಡಿರುವ ಕಾರಣ  ಈಗ ಹತಾಶೆಯಿಂದ ವಿಷಯಾಂತರಗೊಳಿಸಲು ಕೆಂಪುಕೋಟೆ ಹೇಳಿಕೆಯನ್ನು ತಿರುಚಿ ಜನರ ದಾರಿ ತಪ್ಪಿಸುವ ಹುನ್ನಾರ ಮಾಡುತ್ತಿದೆ.

ಈಶ್ವರಪ್ಪನವರ ಹೇಳಿಕೆಯು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ ಅದರ ತುಣುಕುಗಳು ಎಲ್ಲ ಕಡೆ ಲಭ್ಯವಿದೆ ಹೀಗಾಗಿ ಕಾಂಗ್ರೆಸ್ ಕುತಂತ್ರವು ಮತ್ತೆ ಅವರಿಗೆ ತಿರುಗುಬಾಣವಾಗುವುದು ನಿಶ್ಚಿತ ಮತ್ತು ಮುಂಬರುವ ದಿನದಲ್ಲಿ ಜನರು ಕಾಂಗ್ರಸ್ ತುಷ್ಟೀಕರಣ ನೀತಿಗೆ ತಕ್ಕ ಪಾಠವನ್ನು ನಿಶ್ಚಿತವಾಗಿ  ಕಲಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next