Advertisement

Politics: ಡಿಕೆಸು “ಪ್ರತ್ಯೇಕ ರಾಷ್ಟ್ರ” ಹೇಳಿಕೆಯಿಂದ ಕಾಂಗ್ರೆಸ್‌ ದೂರ

11:55 PM Feb 02, 2024 | Team Udayavani |

ಬೆಂಗಳೂರು: ಸಂಸದ ಡಿ.ಕೆ. ಸುರೇಶ್‌ ಅವರ ಪ್ರತ್ಯೇಕತೆಯ ಕೂಗಿಗೆ ಸ್ವತಃ ಅವರದ್ದೇ ಪಕ್ಷದ ನಾಯಕರಿಂದ ಅಪಸ್ವರ ಕೇಳಿಬಂದಿದೆ. ಆದರೆ, ಸಂಸದರ ಆ ಆಕ್ರೋಶದ ಹಿಂದಿರುವ ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ಎಲ್ಲ ನಾಯಕರು ಒಕ್ಕೊರಲಿನಿಂದ ದನಿಗೂಡಿಸಿದ್ದಾರೆ.

Advertisement

ಪ್ರತ್ಯೇಕ ದೇಶದ ಪ್ರಸ್ತಾವ ಈಗ ಎಲ್ಲೆಡೆ ಪರ-ವಿರೋಧದ ಕಿಡಿ ಹೊತ್ತಿಸಿದೆ. ವಿವಿಧ ಪಕ್ಷಗಳ ಬಹುತೇಕ ಎಲ್ಲ ನಾಯಕರು ದೇಶ ವಿಭಜನೆಯ ಹೇಳಿಕೆಗೆ ಪಕ್ಷಾತೀತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಸಂಸದರು ಹೀಗೆ ಆಕ್ರೋಶ ವ್ಯಕ್ತಪಡಿಸಲು ಸ್ವತಃ ಕೇಂದ್ರ ಸರಕಾರದ ಧೋರಣೆ ಕಾರಣ. ತೆರಿಗೆ ಸಂಗ್ರಹಕ್ಕೆ ಪ್ರತಿಯಾಗಿ ಅನುದಾನ ಹಂಚಿಕೆ, ಬರ ಪರಿಹಾರ ವಿಚಾರದಲ್ಲಿ ಕೇಂದ್ರದ ನಡೆ ಮತ್ತಿತರ ಅಂಶಗಳು ಇದಕ್ಕೆ ಪುಷ್ಠಿ ನೀಡಿವೆ.

ಈ ಸಂಬಂಧ ಶುಕ್ರವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಮುಖಂಡರು, ಸಚಿವರು, ಭಾರತ ಅಖಂಡವಾಗಿರಬೇಕು. ನಾವೆಲ್ಲ ಒಂದು ಹಾಗೂ ಒಂದು ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶ ವಿಭಜನೆ ಮಾತು ಸಲ್ಲದು. ಹಾಗಂತ, ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸಹಿಸಲು ಆಗುವುದಿಲ್ಲ. ತಾರತಮ್ಯ ಆಗದಂತೆ ನೋಡಿಕೊಳ್ಳಬೇಕಾದ್ದು ಕೇಂದ್ರದ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ.

ಆಲೋಚನೆ ಬರಬಹುದು ಅಂತ ಎಚ್ಚರಿಸಿದ್ದಾರಷ್ಟೇ
ವಿಧಾನಸೌಧದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಭಾರತ ಅಖಂಡ ದೇಶ. ಬಿಜೆಪಿ ಈ ವಿಚಾರ ರಾಜಕೀಯಗೊಳಿಸುತ್ತಿದೆ. ಸಂಸದ ಸುರೇಶ್‌ ಅವರು ಬಿಜೆಪಿ ಸರಕಾರದಿಂದ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಆಗಿರುವ ಅನ್ಯಾಯ ಪ್ರಶ್ನಿಸಿದ್ದಾರೆ. ಅನ್ಯಾಯ ಮುಂದುವರಿದರೆ ಮುಂದೆ ಇಂತಹ ಆಲೋಚನೆಗಳು ಬರಬಹುದು ಎಂದು ಎಚ್ಚರಿಸಿದ್ದಾರೆ ಎಂದು ಹೇಳಿದರು.

ಭವ್ಯ ಭಾರತ ಅಖಂಡವಾಗಿರಬೇಕು
ಸದಾಶಿವನಗರದಲ್ಲಿ ಮಾತನಾಡಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್‌, ಸುರೇಶ್‌ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ದೇಶ ಒಗ್ಗೂಡಿಸುವ ಮಾತು ಆಡಬೇಕೇ ಹೊರತು, ವಿಭಜನೆ ಮಾತಾಡಬಾರದು. ನಾವೆಲ್ಲ ಒಂದು ಮತ್ತು ಒಂದು ದೇಶ ಅಂತ ಇರಬೇಕು. ಅದೇ ರೀತಿ, ಕೇಂದ್ರ ಸರಕಾರ ಕೂಡ ತಾರತಮ್ಯ ನೀತಿ ಅನುಸರಿಸಬಾರದು ಎಂದು ಹೇಳಿದರು.

Advertisement

ಭಾರತ ಅಖಂಡವಾಗಿ ಇರಬೇಕು
ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಭಾರತ ಅಖಂಡವಾಗಿ ಇರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ದಕ್ಷಿಣ ಭಾರತ ರಾಜ್ಯಗಳಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ. ಮೋದಿ ನೇತೃತ್ವದ ಸರಕಾರ ಬಂದಾಗಿನಿಂದ ಈ ತಾರತಮ್ಯ ಆಗುತ್ತಿದೆ. ಈ ನೋವಿನಲ್ಲಿ ಡಿ.ಕೆ. ಸುರೇಶ್‌ ಮಾತನಾಡಿರಬಹುದು. ಕೇಂದ್ರದಿಂದ ಇವರಿಗೆ (ಬಿಜೆಪಿಗೆ) ನಯಾ ಪೈಸೆ ಅನುದಾನ ತರಲು ಆಗುತ್ತಿಲ್ಲ. ಇದಕ್ಕೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಗಳನ್ನು ಸಮಾನತೆಯಿಂದ ನೋಡಬೇಕು
ಕೇಂದ್ರದ ಬಿಜೆಪಿ ಸರಕಾರ ಎಲ್ಲ ರಾಜ್ಯಗಳನ್ನು ಸಮಾನತೆಯಿಂದ ನೋಡಬೇಕು. ಸಂಸದ ಸುರೇಶ್‌ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಅತಂಕ ವ್ಯಕ್ತಪಡಿಸಿ¨ªಾರೆ. ಆ ರೀತಿ ಆಗದಂತೆ ನೋಡಿಕೊಳ್ಳುವುದು ಅವರಿಗೆ (ಬಿಜೆಪಿಗೆ) ಬಿಟ್ಟಿದ್ದು.
– ಸತೀಶ್‌ ಜಾರಕಿಹೊಳಿ, ಸಚಿವ

ಅಖಂಡ ಭಾರತ ಕಾಂಗ್ರೆಸ್‌ ಪರಿಕಲ್ಪನೆ
ಕೇಂದ್ರ ಸರಕಾರದಿಂದ ರಾಜ್ಯಕ್ಕೆ ದೊರೆಯಬೇಕಾಗಿದ್ದ ಅನುದಾನ ದೊರೆತಿಲ್ಲ. ಆ ಕೋಪದಲ್ಲಿ ಸಂಸದ ಡಿ.ಕೆ. ಸುರೇಶ್‌ ಅವರು ದೇಶ ವಿಭಜನೆ ಕುರಿತ ಹೇಳಿಕೆ ನೀಡಿದ್ದಾರೆ. ಆದರೆ ಅಖಂಡ ಭಾರತ ಕಾಂಗ್ರೆಸ್‌ ಪರಿಕಲ್ಪನೆಯಾಗಿದೆ.
– ರಾಮಲಿಂಗಾ ರೆಡ್ಡಿ, ಸಚಿವ

ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ
ದಕ್ಷಿಣದ ರಾಜ್ಯಗಳಿಗೆ ಆದಾಯಕ್ಕೆ ತಕ್ಕ ಪ್ರತಿಫ‌ಲ ಸಿಗಲಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಸಂಸದ ಸುರೇಶ್‌ ಅವರು ಆ ರೀತಿ ಹೇಳಿದ್ದಾರೆ, ಅದಕ್ಕೆ ಹೆಚ್ಚಿನ ಅರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ.
– ಎಂ.ಬಿ. ಪಾಟೀಲ್‌, ಕೈಗಾರಿಕೆ ಸಚಿವ

ಪ್ರತ್ಯೇಕ ರಾಷ್ಟ್ರ; ಮುಂದುವರಿದ ಬಿಜೆಪಿ ವಾಗ್ಧಾಳಿ
ಬೆಂಗಳೂರು: ರಾಷ್ಟ್ರ ವಿಭಜನೆ ಬಗ್ಗೆ ಸಂಸದ ಡಿ.ಕೆ. ಸುರೇಶ್‌ ನೀಡಿರುವ ಹೇಳಿಕೆ ಹಾಗೂ ದಿಲ್ಲಿಯಲ್ಲಿ ಕಾಂಗ್ರೆಸ್‌ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಬಗ್ಗೆ ಬಿಜೆಪಿ ವಾಗ್ಧಾಳಿ ಮುಂದುವರಿಸಿದೆ. ಕಾಂಗ್ರೆಸ್‌ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ರಾಜ್ಯದ ಪರವಲ್ಲ, ಹೈಕಮಾಂಡ್‌ ಮುಂದೆ ಶಾಸಕರ ಬಲಾಬಲ ಪ್ರದರ್ಶನ ಮಾಡುವುದಕ್ಕೆ. ಡಿ.ಕೆ. ಶಿವಕುಮಾರ್‌ ಇದನ್ನು ಆಯೋಜಿಸಿರಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಅನುದಾನ ಬಂದಿಲ್ಲ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸಲು ಕಾಂಗ್ರೆಸ್‌ ಹವಣಿಸುತ್ತಿದೆ. ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ ಎಂಬ ಬಗ್ಗೆ ನಾವು ಚರ್ಚೆಗೆ ಸಿದ್ಧರಿದ್ದೇವೆ. ಹತ್ತು ವರ್ಷದ ಯುಪಿಎ ಅವಧಿಯಲ್ಲಿ ಎಷ್ಟು ಬಂದಿದೆ, ಮೋದಿಯವರ ಅವಧಿಯಲ್ಲಿ ಎಷ್ಟು ಬಂದಿದೆ ಎಂದು ಕಾಂಗ್ರೆಸ್‌ ಶ್ವೇತಪತ್ರ ಹೊರಡಿಸಲಿ. ಪ್ರತಿಭಟನೆಗೆ ದಿಲ್ಲಿ ವಿಮಾನ ಹತ್ತುವುದಕ್ಕೆ ಮುನ್ನ ಶ್ವೇತ ಪತ್ರ ಹೊರಡಿಸಿ ಎಂದು ಸವಾಲು ಹಾಕಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್‌ ಮಾತನಾಡಿ, ಡಿ.ಕೆ.ಸುರೇಶ್‌ ದೇಶದ ಮುಂದೆ ಕ್ಷಮೆ ಕೇಳಬೇಕು. ವೀರಪ್ಪ ಮೊಲಿ ಪ್ರಧಾನಿಯವರನ್ನು ಜಾತಿಗೆ ಜೋಡಿಸಿ ಮಾತನಾಡಿದ್ದಕ್ಕೆ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ದೇಶ ವಿಭಜನೆ ಹೇಳಿಕೆ ನೀಡಿರುವ ಸುರೇಶ್‌ಗೆ ಬುದ್ಧಿವಾದ ಹೇಳುವ ಕೆಲಸ ಆಗಬೇಕೇ ಹೊರತು ಅವರನ್ನು ಸಮರ್ಥಿಸುವುದಲ್ಲ. ಒಬ್ಬ ಜನಪ್ರತಿನಿಧಿಯಾಗಿದ್ದರೂ ಅನುದಾನ ಕಡಿಮೆ ಆಯ್ತು ಅಂತ ದೇಶ ವಿಭಜನೆ ಮಾತನಾಡಿದ್ದಾರೆ. ಅದನ್ನ ಸಮರ್ಥನೆ ಮಾಡಿಕೊಂಡದ್ದು ನಾಚಿಕೆಗೇಡಿನ ಸಂಗತಿ.
– ವಿ. ಸುನೀಲ್‌ ಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ನನ್ನ ಹೇಳಿಕೆ ತಿರುಚಿದ್ದಾರೆ: ಸಂಸದ ಡಿಕೆಸು
ರಾಮನಗರ: ಪ್ರತ್ಯೇಕ ರಾಷ್ಟ್ರ ಕುರಿತಂತೆ ತಾವು ನೀಡಿದ್ದ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ ಎಂದು ವಾಗ್ಧಾಳಿ ನಡೆಸಿರುವ ಸಂಸದ ಡಿ.ಕೆ. ಸುರೇಶ್‌, ಕೇಂದ್ರ ಸರಕಾರ ರಾಜ್ಯದ ಮೇಲೆ ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಈ ಅನ್ಯಾಯ ಹೀಗೆ ಮುಂದುವರಿದರೆ, ಪ್ರತ್ಯೇಕತೆ ಕೂಗು ಈಗಾಗಲೇ ಎಲ್ಲ ಕಡೆ ಬಂದಿದೆ ಎಂದು ತಾವು ಹೇಳಿರುವುದಾಗಿ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಎಕ್ಸ್‌ ಖಾತೆಯಲ್ಲಿ ಸರಣಿ ಪೋಸ್ಟ್‌ ಮಾಡಿರುವ ಸಂಸದ ಡಿ.ಕೆ. ಸುರೇಶ್‌, ಬಿಜೆಪಿಯವರು ಹೇಳಿಕೆಯನ್ನು ತಿರುಚುವುದರಲ್ಲಿ ನಿಸ್ಸೀಮರು. ಕರ್ನಾಟಕ ಭಾರತದಲ್ಲೇ ಇದೆ. ಇದನ್ನು ಒಕ್ಕೂಟ ಸರಕಾರ ಮರೆಯಬಾರದು ಎಂದು ವಿಪಕ್ಷಗಳಿಗೆ ತಿವಿದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next