Advertisement

ಕಾಂಗ್ರೆಸ್‌ ಸೇರುವುದಾಗಿ ಘೋಷಿಸಿದ ಜೆಡಿಎಸ್‌ ರೆಬೆಲ್‌ ಶಾಸಕರು

03:50 AM Mar 04, 2017 | Team Udayavani |

ಬೆಂಗಳೂರು:ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಏಳು ಶಾಸಕರು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ, ಕಾಂಗ್ರೆಸ್‌ ಸೇರುವುದಾಗಿ ತಿಳಿಸಿದರು.

Advertisement

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವೆಲ್ಲರೂ ಒಟ್ಟಿಗೆ ಇದ್ದು ಕಾಂಗ್ರೆಸ್‌ ಸೇರುವುದು ಖಚಿತ ಎಂದು ಹೇಳಿದರು.

ಮಾಜಿ ಸಚಿವ ಜಮೀರ್‌ ಅಹಮದ್‌, ಜೆಡಿಎಸ್‌ಗೆ ನಾವು ಬೇಡ ಎಂದ ಮೇಲೆ ನಮ್ಮ ರಾಜಕೀಯ ದಾರಿ ನಾವು ನೋಡಿಕೊಳ್ಳಬೇಕಲ್ಲವೇ? ಹೀಗಾಗಿ, ಕಾಂಗ್ರೆಸ್‌ಗೆ ಸೇರುತ್ತಿದ್ದೇವೆ ಎಂದು ತಿಳಿಸಿದರು.

ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ, ಏಳು ಶಾಸಕರು ಒಟ್ಟಿಗಿದ್ದು ಸಿದ್ದರಾಮ್ಯಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದೇವೆ. ಇದಕ್ಕೆ ಎಐಸಿಸಿ ರಾಜ್ಯ ಉಸ್ತುವಾರಿ ದಿಗ್ವಿಜಯ್‌ಸಿಂಗ್‌ ಒಪ್ಪಿಗೆ ಸಹ ಸಿಕ್ಕಿದೆ ಎಂದು ಹೇಳಿದರು.

ಚುನಾವಣೆ ಹತ್ತಿರ ಬಂದಾಗ ನಾವು ಕಾಂಗ್ರೆಸ್‌ ಸೇರುತ್ತೇವೆ. ನಮಗೆಲ್ಲರಿಗೂ ನಮ್ಮದೇ ಕ್ಷೇತ್ರಗಳಲ್ಲಿ ಟಿಕೆಟ್‌ ಕೊಡುವ ಭರವಸೆ ಸಿಕ್ಕಿದೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ತಿಳಿಸಿದರು.

Advertisement

ಮಾಜಿ ಸಚಿವ ಚೆಲುವರಾಯಸ್ವಾಮಿ, ನಾವು ನೂರಕ್ಕೆ ನೂರರಷ್ಟು ಜೆಡಿಎಸ್‌ ಪಕ್ಷದಲ್ಲಿಲ್ಲ. ನಾವು ಯಾವ ಪಕ್ಷಕ್ಕೆ ಹೋದರೂ ಟಿಕೆಟ್‌ ಖಚಿತ. ಯಾವಾಗ ಕಾಂಗ್ರೆಸ್‌ ಸೇರಬೇಕು ಎಂಬುದು ಇನ್ನೂ ನಿರ್ಧರಿಸಿಲ್ಲ. ಯುಗಾದಿ ನಂತರ ಕ್ಷೇತ್ರದ ಮತದಾರರ ಸಭೆ ನಡೆಸಿ ಅಧಿಕೃತವಾಗಿ ಘೋಷಿಸುತ್ತೇವೆ. ಆ ನಂತರ ನಮ್ಮ ಪಕ್ಷ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಬಗ್ಗೆ ನಮಗೆ ಅತೀವ ಗೌರವವಿದೆ  ಎಂದು ಹೇಳಿದರು.

ಸಮಾಲೋಚನೆ
ಇದಕ್ಕೂ ಮುನ್ನ ಏಳು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುಮಾರು ಹೊತ್ತು ಚರ್ಚಿಸಿದರು. ಮುಂದಿನ ವಿಧಾನಸಭೆ ಚುನಾವಣಾ ರಣತಂತ್ರದ ಬಗ್ಗೆಯೂ ಪ್ರಸ್ತಾಪವಾಯಿತು.  ಈಗಿನಿಂದಲೇ ಚುನಾವಣಾ ತಯಾರಿ ಮಾಡಿಕೊಳ್ಳುವಂತೆ ಸಿದ್ದರಾಮಯ್ಯ ಏಳು ಶಾಸಕರಿಗೆ ಸೂಚಿಸಿದರು  ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next