ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ 50 ಸಾವಿರ ರೂ.ಗಳ ಸಾಲಮನ್ನಾ ಘೋಷಣೆ ಹಿನ್ನೆಲೆಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದಿಂದ ಗುರುವಾರ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸಂಭ್ರಮಾಚರಣೆ ಕೈಗೊಳ್ಳಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿದರು. ಕೆಪಿಸಿಸಿ ಸದಸ್ಯ ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರ ಇದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಸಾಲಮನ್ನಾ ಮಾಡುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ ಎಂದರು.
ಈ ಸಾಲ ಮನ್ನಾದಿಂದ 22,27,501 ರೈತರು ಫಲಾನುಭವಿಗಳಾಗಲಿದ್ದು, ಇದರಿಂದ ಸರಕಾರಕ್ಕೆ 8,165 ಕೋಟಿ ರೂ.ಗಳ ಹೊರೆ ಬೀಳಲಿದೆ. ಈ ಹಿಂದೆ ಯುಪಿಎ ಸರಕಾರವಿದ್ದಾಗಲೂ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ದೇಶದ ರೈತರ ಸುಮಾರು 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದರು.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು 22.27 ಲಕ್ಷ ರೈತರ ಅಂದಾಜು 8,165 ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ ಎಂದರು. ಕಿಸಾನ್ ಘಟಕದ ಅಧ್ಯಕ್ಷ ಮಖಬೂಲ ಸಾವಂತನವರ ಮಾತನಾಡಿ, ರಾಜ್ಯ ಸರಕಾರದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ನಿರ್ಧಾರದಿಂದ ಸಾವಿರಾರು ರೈತರ ಬಾಳಿಗೆ ಬೆಳಕಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರ ರೈತರ ಪರ ಎಂಬುದನ್ನು ಸಾಲ ಮನ್ನಾ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ಬಾಬಾಜಾನ ಮುಧೋಳ, ಹೂವಪ್ಪ ದಾಯಗೋಡಿ, ಬಸವಾರಜ ಕಿತ್ತೂರ ಇನ್ನಿತರರು ಮಾತನಾಡಿದರು. ಕುಮಾರ ಕುಂದನಹಳ್ಳಿ, ವಿಶಾಲ ವಾಘಮೋಡೆ, ಹಜರೇಸಾಬ ಸಾವಂತನವರ, ಖಲಂದರಸಾಬ ಮಹಮ್ಮದನವರ, ಪ್ರಸನ್ನ ಮಿರಜಕರ, ಜೆ.ಡಿ. ಇಂಗಳಗಿ, ಶಿವಕುಮಾರ ಹನಸಿ, ವಿಜಯ ಶಿವನಗೌಡ್ರ, ಶಿವಾನಂದ ಹೊಳಹಡಗಲಿ ಇನ್ನಿತರರು ಇದ್ದರು.