Advertisement

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯರಿಗೆ ಅಭಿನಂದನೆ

04:35 PM Jul 15, 2017 | |

ಸೊಲ್ಲಾಪುರ: ದೇಶದಲ್ಲಿ ಎಲ್ಲಿಯೇ ಕನ್ನಡ ಮಾಧ್ಯಮದಲ್ಲಿ 1 ರಿಂದ 10ನೇ ತರಗತಿಯವರೆಗೆ ಓದಿದವರಿಗೆ ಕರ್ನಾಟಕ ಸರಕಾರ ತನ್ನ ಸಾಮಾನ್ಯ ನೇಮಕಾತಿಗಳಲ್ಲಿ ಶೇ.5 ರಷ್ಟು ಮೀಸಲಾತಿ ನೀಡಿರುವುದನ್ನು ಸ್ವಾಗತಿಸುತ್ತ ಆದರ್ಶ ಕನ್ನಡ ಬಳಗದ ಸದಸ್ಯರು ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌. ಜಿ. ಸಿದ್ಧರಾಮಯ್ಯ ಅವರಿಗೆ ಸಮಸ್ತ ಹೊರನಾಡು ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸಿದರು.

Advertisement

ಹೊರನಾಡು ಕನ್ನಡಿಗರಿಗೆ ಕರ್ನಾಕಟದಲ್ಲಿ ಉದ್ಯೋಗಕ್ಕೆ ಅವಕಾಶವೇ ಇಲ್ಲವಾಗಿದ್ದ ಕಾರಣದಿಂದ ಹೊರನಾಡಿನ ಕನ್ನಡ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ತುಂಬ ನಿರಾಶರಾಗಿದ್ದರು. ಸರಕಾರ ಹೊರಡಿಸಿರುವ ಮೀಸಲಾತಿಯ ಸುತ್ತೋಲೆ ಹೊರನಾಡಿನಲ್ಲಿ ಮತ್ತೆ ಕನ್ನಡಪರ ವಾತಾವರಣ ನಿರ್ಮಿಸಿದೆ ಹಾಗೂ ಸಂಭ್ರಮವನ್ನು ಸೃಷ್ಟಿಸಿದೆ. ಕಳೆದ ಹಲವಾರು ವರ್ಷಗಳಿಂದ ಆದರ್ಶ ಕನ್ನಡ ಬಳಗವು ಮೀಸಲಾತಿಯ ಕುರಿತು ಹೋರಾಟ ನಡೆಸುತ್ತಿದ್ದು ಬೆಳಗಾವಿಯ ಅಧಿವೇಶನದಲ್ಲಿ  ಆಳಂದ ಶಾಸಕ ಬಿ. ಆರ್‌. ಪಾಟೀಲರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಭೇಟಿಯಾಗಿ ಈ ಬಗ್ಗೆ ಚರ್ಚಿಸಲಾಗಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಎಚ್‌. ಕೆ. ಪಾಟೀಲರೊಂದಿಗೆ ಬಳಗದ ಸದಸ್ಯರು ಕೂಲಂಕುಷವಾಗಿ ಚರ್ಚಿಸಿದ್ದರು. ಅಂದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹನುಮಂತಯ್ಯನವರಿಗೆ ಸಮಸ್ಯೆಯ ಮನವರಿಕೆ ಮಾಡಿಕೊಡಲಾಗಿತ್ತು.

ತದನಂತರ ಬಳಗದ ಸದಸ್ಯರು ಬೆಂಗಳೂರಿಗೆ ತೆರಳಿ ಡಾ| ಬರಗೂರು ರಾಮಚಂದ್ರಪ್ಪ ಅವರಿಗೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಿಂದ ಈ ಬಗ್ಗೆ ಠರಾವು ಮಂಡಿಸುವಂತೆ ಒತ್ತಾಯಿಸಿತು. ಅಂತೆಯೇ ರಾಯಚೂರಿನ ಸಮ್ಮೇಳನದಲ್ಲಿ ಒಮ್ಮತದಲ್ಲಿ ಹೊರನಾಡ ಕನ್ನಡಿಗರಿಗೆ ಅವಕಾಶ ಕೊಡಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ಮುಂದೆ ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು ಬರಗೂರು ಅವರ ನೇತೃತ್ವದಲ್ಲಿ ಸಭೆ ಕರೆದು ಆದರ್ಶ ಕನ್ನಡ ಬಳಗದ ಸದಸ್ಯರೊಂದಿಗೆ ಚರ್ಚಿಸಿ ಆಗಬೇಕಿದ್ದ ಕಾರ್ಯಗಳ ಪಟ್ಟಿಮಾಡಿದರು. ಅದರಲ್ಲಿ ಮುಖ್ಯವಾಗಿ ಹೊರನಾಡ ಕನ್ನಡಿಗರಿಗೆ ಮೀಸಲಾತಿಯ ಅಂಶವೂ ಇತ್ತು. ಹೀಗೆ ಆದರ್ಶ ಕನ್ನಡ ಬಳಗವು ಸುದೀರ್ಘ‌ವಾಗಿ ನಡೆಸಿದ ಹೋರಾಟದ ಫಲವಾಗಿ ಇಂದು ಸರಕಾರ ಮೀಸಲಾತಿ ಸುತ್ತೋಲೆಯನ್ನು ಹೊರಡಿಸಿದೆ.

ಈ ಮೀಸಲಾತಿಯು ಹೊರನಾಡ ಕನ್ನಡಿಗರಿಗೆ ಆಶಾಕಿರಣವಾಗಿ ಕಾಣುತ್ತಿದೆ. ಈ ನಿಮಿತ್ತ ಬೆಂಗಳೂರಿನ ವಿಧಾನಸೌಧದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಾಲಯದಲ್ಲಿ ಅಧ್ಯಕ್ಷರನ್ನು ಗೌರವಿಸಿದ ಆದರ್ಶ ಕನ್ನಡ ಬಳಗದ ಸದಸ್ಯರು ಇದೇ ಸಂದರ್ಭದಲ್ಲಿ ಹೊರನಾಡಿನ ಕನ್ನಡಿಗರ ಇನ್ನಿತರ ಸಮಸ್ಯೆಗಳ 
ಬಗ್ಗೆ ಚರ್ಚಿಸುತ್ತ ಯಾವುದೇ ಉದ್ಯೋಗಕ್ಕೆಂದು ಅರ್ಜಿ ಸಲ್ಲಿಸುವಾಗ ಸಾಫ್ಟ್‌ವೇರ್‌ನಲ್ಲಿ ಕರ್ನಾಟಕದ ಜಿಲ್ಲೆಗಳನ್ನು ಹೊರತುಪಡಿಸಿ ಹೊರನಾಡಿನ ಯಾವುದೇ ಪ್ರದೇಶದ ಉಲ್ಲೇಖವಿಲ್ಲ. ಹಾಗಿದ್ದಲ್ಲಿ ಹೊರನಾಡ ಕನ್ನಡಿಗರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಸಾಧ್ಯವೇ ಇಲ್ಲ. ಹೀಗಾಗಿ ಮೊಟ್ಟ ಮೊದಲಿಗೆ ಸಾಫ್ಟ್‌ವೇರ್‌ನಲ್ಲಿ ಸುಧಾರಣೆಗಳಾಗಬೇಕು ಹಾಗೂ ಹೊನಾಡಿನ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

ಕರ್ನಾಟಕ ಸರಕಾರ ಕನ್ನಡಿಗರಿಗಾಗಿ ಹೊರಡಿಸಿದ ಶೇ. 5 ರಷ್ಟು ಮೀಸಲಾತಿಯ ಸುತ್ತೋಲೆಯನ್ನು ಆದರ್ಶ ಕನ್ನಡ ಬಳಗವು ಸ್ವಾಗತಿಸುತ್ತದೆ. ಇದು ಸರಿಯಾಗಿ ಕಾರ್ಯರೂಪದಲ್ಲಿ ಬರಬೇಕು. ಇದರಿಂದ ಹೊರನಾಡು ಕನ್ನಡಿಗರಿಗೆ ಎಷ್ಟರಮಟ್ಟಿಗೆ ಲಾಭವಾಗುತ್ತದೆ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಸರಕಾರ ಹೊರನಾಡು ಕನ್ನಡಿಗರಿಗಾಗಿ ವಿಶೇಷ ಮೀಸಲಾತಿ ನೀಡಬೇಕು. ಆಗ ಮಾತ್ರ ಹೊರನಾಡು ಕನ್ನಡಿಗರಿಗೆ ನ್ಯಾಯ ಸಿಗುತ್ತದೆ ಹಾಗೂ ಅವರ ಬದುಕಿಗೆ ಸ್ಥೈರ್ಯ ಬರುತ್ತದೆ ಎಂದು ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ್‌ ಶೇಖ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next