Advertisement

ಸಜೀಪಪಡು ಗ್ರಾ.ಪಂ.ಹೊಸ ಕಟ್ಟಡದ ಗೊಂದಲ

11:47 PM Nov 11, 2019 | Team Udayavani |

ಬಂಟ್ವಾಳ: ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರಕಾರವು ಹೊಸ ಗ್ರಾಮ ಪಂಚಾಯತ್‌ಗಳನ್ನು ಅಸ್ತಿತ್ವಕ್ಕೆ ತಂದಿದ್ದು, ಅದರಂತೆ ಬಂಟ್ವಾಳ ತಾಲೂಕಿನಲ್ಲಿ 12 ಗ್ರಾ.ಪಂ.ಗಳು ಅಸ್ತಿತ್ವಕ್ಕೆ ಬಂದಿವೆ. ಪ್ರಸ್ತುತ ಹೊಸ ಗ್ರಾಮ ಪಂಚಾಯತ್‌ಗಳ ಕಟ್ಟಡದ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಸಜೀಪಪಡು ಗ್ರಾ.ಪಂ.ನ ಹೊಸ ಕಟ್ಟಡದ ಕುರಿತು ಗೊಂದಲ ಸೃಷ್ಟಿಯಾಗಿದೆ.

Advertisement

ಗ್ರಾ.ಪಂ. ವ್ಯಾಪ್ತಿಯ ಚೇಳೂರಿನಲ್ಲಿ ನೂತನ ಕಟ್ಟಡಕ್ಕೆ ಸ್ಥಳ ಸಮತಟ್ಟು ಮಾಡಿ, ಕಾಮಗಾರಿಯನ್ನೂ ಆರಂಭಿಸಲಾಗಿದೆ. ಗುಡ್ಡವನ್ನು ಸಮತಟ್ಟು ಮಾಡಿರುವುದರಿಂದ ಮಳೆಯಿಂದ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದರೆ, ಗ್ರಾ.ಪಂ. ಆಡಳಿತ ಮಂಡಳಿ ಮಾತ್ರ ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದೆ.

6 ಕಟ್ಟಡ ಪೂರ್ತಿ
ತಾಲೂಕಿನ 12 ಹೊಸ ಗ್ರಾ.ಪಂ.ಗಳ ಪೈಕಿ 6 ಗ್ರಾ.ಪಂ.ಗಳ ಕಟ್ಟಡಗಳು ಈಗಾಗಲೇ ಪೂರ್ತಿಗೊಂಡಿದ್ದು, 6 ಗ್ರಾ.ಪಂ.ಗಳ ಕಟ್ಟಡಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಆದರೆ ಸಜೀಪಪಡು ಗ್ರಾ.ಪಂ.ನ ನೂತನ ಕಟ್ಟಡದ ಅಡಿಪಾಯ ಕಾಮಗಾರಿಯೂ ಇನ್ನೂ ಆರಂಭಗೊಂಡಿಲ್ಲ!

ಗ್ರಾ.ಪಂ.ನಿಂದ ದೂರು
ಸಜೀಪಪಡು ಗ್ರಾಮ ಪಂಚಾಯತ್‌ನ ನೂತನ ಕಟ್ಟಡಕ್ಕೆ ಸರಕಾರದಿಂದ 10 ಲಕ್ಷ ರೂ. ಮಂಜೂರುಗೊಂಡಿದೆ. ಈ ಕುರಿತು ಕಳೆದ ಫೆಬ್ರವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಕೂಡ ನಡೆದಿದೆ.

ಎರಡೆರಡು ಬಾರಿ ತೊಂದರೆ?
ಪ್ರಸ್ತುತ ಗ್ರಾ.ಪಂ.ನ ನೂತನ ಕಟ್ಟಡದ ಸ್ಥಳವನ್ನು ಸಮತಟ್ಟು ಮಾಡಿ, ಪಿಲ್ಲರ್‌ ಏರಿಸುವುದಕ್ಕೆ ಹೊಂಡಗಳನ್ನು ಮಾಡಲಾಗಿದೆ. ಆದರೆ ವಿಪರೀತ ಮಳೆಯ ಪರಿಣಾಮ ಹೊಂಡಕ್ಕೆ ಮಣ್ಣು ಬಿದ್ದಿದ್ದು, ಗುತ್ತಿಗೆದಾರರು ಎರಡೆರಡು ಬಾರಿ ಹೊಂಡ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಜತೆಗೆ ತಾವು ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲೂ ಹೊಂಡದಲ್ಲಿ ಪೂರ್ತಿ ನೀರು ತುಂಬಿಕೊಂಡಿತ್ತು. ಹೀಗಾಗಿ ಮಳೆ ಪೂರ್ತಿ ನಿಲ್ಲದೆ ಗುತ್ತಿಗೆದಾರರು ಕೂಡ ಕಾಮಗಾರಿ ಮುಂದುವರಿಸುವುದಕ್ಕೆ ಧೈರ್ಯ ತೋರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

 ಮರು ಟೆಂಡರ್‌ಗೆ ಸಮಯ ಅವಕಾಶ
ಮಳೆಯಿಂದ ಕಾಮಗಾರಿಗೆ ಕೊಂಚ ಹಿನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಗುತ್ತಿಗೆದಾರರಿಂದ ವೇಗವಾಗಿ ಕಾಮಗಾರಿ ನಡೆಸಲು ಪ್ರಯತ್ನಿಸಬಹುದು. ಆದರೆ ಪ್ರಸ್ತುತ ಗ್ರಾ.ಪಂ.ನ ಜನಪ್ರತಿನಿಧಿಗಳು ಗುತ್ತಿಗೆದಾರರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಬೇಡಿಕೆಯಂತೆ ಮರು ಟೆಂಡರ್‌ ಪ್ರಕ್ರಿಯೆ ನಡೆಸಿದರೆ ಅದಕ್ಕೂ ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕಾಗಬಹುದು.
– ತಾರಾನಾಥ್‌ ಸಾಲ್ಯಾನ್‌ಎಇಇ, ಪಂ. ಎಂ.
ಉಪವಿಭಾಗ, ಬಂಟ್ವಾಳ

 ಮಳೆಯಿಂದ ತೊಂದರೆ
ಚೇಳೂರು ಪ್ರದೇಶದಲ್ಲಿ ಗುಡ್ಡವನ್ನು ಅಗೆದು ಸಮತಟ್ಟು ಮಾಡಿರುವುದರಿಂದ ಮಳೆಯಿಂದ ಕಾಮಗಾರಿ ನಡೆಸುವುದಕ್ಕೆ ಕೊಂಚ ತೊಂದರೆಯಾಗಿದೆ. ಬಿಸಿಲು ಬಂದು ಪೂರ್ತಿ ಒಣಗಿದ ಬಳಿಕ ಕಾಮಗಾರಿ ಮುಂದುವರಿಸಬೇಕಿದೆ.
– ಶ್ವೇತಾ ಕೆ.ವಿ.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

 ಹೊಸ ಕಟ್ಟಡದ ಆಸೆ
ಹೊಸದಾಗಿ ಬಂದಿರುವ ಗ್ರಾ.ಪಂ.ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿದ್ದು, ನಮ್ಮ ಅವಧಿ ಮುಗಿಯುವುದಕ್ಕೆ ಮೊದಲು ಹೊಸ ಕಟ್ಟಡವನ್ನು ಉದ್ಘಾಟಿಸಬೇಕೆಂಬ ಆಸೆ. ಆದರೆ ಹಾಲಿ ಕಾಮಗಾರಿಯ ವೇಗವನ್ನು ಕಂಡರೆ ಹಾಲಿ ಆಡಳಿತ ಮಂಡಳಿ ಮುಗಿಯುವುದಕ್ಕಿಂತ ಮುಂಚೆ ಕಾಮಗಾರಿ ಮುಗಿಸುವ ಲಕ್ಷಣಗಳು ಕಂಡುಬರುತ್ತಿಲ್ಲ.
– ಹೆನ್ರಿ ಡಿ’ಸೋಜಾ
ಉಪಾಧ್ಯಕ್ಷರು,
ಸಜೀಪಪಡು ಗ್ರಾ.ಪಂ.

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next