Advertisement

“ಕಡ್ಡಾಯ ಮತದಾನ’ಪರ-ವಿರೋಧ ಚರ್ಚೆ

09:56 AM Nov 24, 2019 | sudhir |

ನವದೆಹಲಿ: ಕಡ್ಡಾಯ ಮತದಾನ ಕುರಿತು ಲೋಕಸಭೆಯಲ್ಲಿ ಶುಕ್ರವಾರ ಗಂಭೀರ ಚರ್ಚೆ ನಡೆದಿದ್ದು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಈ ಕುರಿತು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Advertisement

ಬಿಜೆಪಿಯ ಜನಾರ್ದನ್‌ ಸಿಂಗ್‌ ಸಿಗ್ರಿವಾಲ್‌ ಅವರು ಜುಲೈನಲ್ಲಿ ಮಂಡಿಸಿದ್ದ “ಕಡ್ಡಾಯ ಮತದಾನ ವಿಧೇಯಕ 2019’ರ ಕುರಿತು ಶುಕ್ರವಾರ ಚರ್ಚೆ ನಡೆಸಲಾಯಿತು. ಸ್ವತಃ ಬಿಜೆಪಿಯ ಸತ್ಯಪಾಲ್‌ ಸಿಂಗ್‌ ಅವರೇ ಇದನ್ನು ವಿರೋಧಿಸಿದ್ದು, ನಾನು ಈ ವಿಧೇಯಕದ ಪರವಾಗಿಲ್ಲ ಎಂದು ಘೋಷಿಸಿದರು.

ಮುಂಬೈನ ಮಾಜಿ ಪೊಲೀಸ್‌ ಆಯುಕ್ತರೂ ಆಗಿರುವ ಸತ್ಯಪಾಲ್‌ ಸಿಂಗ್‌, “ಕಡ್ಡಾಯ ಮತದಾನ ಎನ್ನುವುದು ಪ್ರಜಾಪ್ರಭುತ್ವದ ಹಿತಾಸಕ್ತಿಯಿಂದ ಕೂಡಿದ್ದಲ್ಲ’ ಎಂದು ಹೇಳಿದರು. ಇದೇ ವೇಳೆ, ವಿಧೇಯಕಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಬಿಜೆಪಿ ಸದಸ್ಯ ಗೋಪಾಲ್‌ ಶೆಟ್ಟಿ, ದೇಶದಲ್ಲಿ ಮತದಾನದ ಪ್ರಮಾಣ ಹೆಚ್ಚಾಗಬೇಕೆಂದರೆ ಕಡ್ಡಾಯ ಮತದಾನ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟರು. ಈ ನಿಯಮ ಜಾರಿಗೆ ತಂದರೆ, ಹಾಲಿ ಸರ್ಕಾರದಂತೆಯೇ ಬಲಿಷ್ಠ ಸರ್ಕಾರ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಬಿಜೆಪಿಯ ರವಿ ಕಿಶನ್‌ ಹೇಳಿದರು.

ಇನ್ನು ಆರ್‌ಎಸ್‌ಪಿ ಸದಸ್ಯ ಎನ್‌.ಕೆ. ಪ್ರೇಮಚಂದ್ರ ಅವರು, “ಹಕ್ಕು ಚಲಾಯಿಸದೇ ಇರುವುದು ಕೂಡ ನಮ್ಮ ದೇಶದ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕು’ ಎಂದರಲ್ಲದೆ, ಮತದಾನವನ್ನು ಕಡ್ಡಾಯ ಮಾಡುವ ಬದಲಿಗೆ ಎಲ್ಲರೂ ಹಕ್ಕು ಚಲಾಯಿಸುವಂತೆ ಉತ್ತೇಜನ ನೀಡುವತ್ತ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಚರ್ಚೆಯ ಸಂದರ್ಭದಲ್ಲಿ, ನೋಟಾ(ಮೇಲಿನ ಯಾರೂ ಅಲ್ಲ ಎಂಬ ಆಯ್ಕೆ)ವನ್ನು ರದ್ದು ಮಾಡಬೇಕೆಂಬ ಒತ್ತಾಯವೂ ಕೇಳಿಬಂತು.

ವಿಧೇಯಕ ಮಂಡನೆ: ಎಲೆಕ್ಟ್ರಾನಿಕ್‌ ಸಿಗರೇಟ್‌ಗಳ ಉತ್ಪಾದನೆ, ಆಮದು ಮತ್ತು ಮಾರಾಟಕ್ಕೆ ನಿಷೇಧ ಹೇರುವಂಥ ವಿಧೇಯಕವನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಗಿದೆ. ಆರೋಗ್ಯ ಸಚಿವ ಹರ್ಷವರ್ಧನ್‌ ಇದನ್ನು ಮಂಡಿಸಿದ್ದಾರೆ.

Advertisement

ಖಾಸಗೀಕರಣ ಅಲ್ಲ: ಸರ್ಕಾರ ರೈಲ್ವೆಯನ್ನು ಖಾಸಗೀಕರಣಗೊಳಿಸುತ್ತಿಲ್ಲ. ಬದಲಾಗಿದೆ ವಾಣಿಜ್ಯ ಹಾಗೂ ಆನ್‌-ಬೋರ್ಡ್‌ ಸೇವೆಗಳನ್ನು ಹೊರಗುತ್ತಿಗೆ ನೀಡಿದೆಯಷ್ಟೆ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ, ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿನ ಹೂಡಿಕೆ ಹಿಂಪಡೆತ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, “ಕೆಲವು ಖಾಸಗಿ ಕಂಪನಿಗಳವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ ಪ್ರತಿಭಟನೆ
ಚುನಾವಣಾ ಬಾಂಡ್‌ ಕುರಿತು ಪ್ರಧಾನಿ ಮೋದಿ ಮೌನ ಮುರಿಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಸಂಸದರು ಶುಕ್ರವಾರ ಸಂಸತ್‌ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರವು ಸುಳ್ಳುಗಳ ಫ್ಯಾಕ್ಟರಿಯಾಗಿದೆ ಎಂದೂ ಅವರು ಆರೋಪಿಸಿದರು.

ಗದ್ದಲವಾದೆ‹ ನೋಟಿಸ್‌ ರದ್ದು
ಸಂಸದರ ಗದ್ದಲದಿಂದಾಗಿ ಕಲಾಪವೇನಾದರೂ ಮುಂದೂ ಡಲ್ಪಟ್ಟರೆ, ಸಂಸದರು ಮೊದಲೇ ಸಲ್ಲಿಸಿರುವಂಥ ನೋಟಿಸ್‌ಗಳು ರದ್ದಾಗುತ್ತವೆ ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಶೂನ್ಯ ಅವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳ ಕುರಿತು ಚರ್ಚಿಸಲು ಸಂಸದರು ಮೊದಲೇ ನೋಟಿಸ್‌ ನೀಡಿರುತ್ತಾರೆ. ಸಾಮಾನ್ಯ ವಾಗಿ ಕಲಾಪ ಮುಂದೂಡಲ್ಪಟ್ಟರೆ ಆ ನೋಟಿಸ್‌ಗೆ ಸಂಬಂಧಿ ಸಿದ ಚರ್ಚೆ ಮಾರನೇ ದಿನಕ್ಕೆ ಮುಂದೂಡಲ್ಪಡುತ್ತದೆ. ಆದರೆ ಇನ್ನು ಮುಂದೆ, ಸದಸ್ಯರ ಗದ್ದಲದಿಂದಾಗಿ ಬೆಳಗ್ಗಿನ ಕಲಾಪ ವ್ಯರ್ಥವಾದರೆ, ಸಂಸದರು ಚರ್ಚೆಗಾಗಿ ಸಲ್ಲಿಸಿದ ಎಲ್ಲ ನೋಟಿಸ್‌ಗಳೂ ರದ್ದಾಗುತ್ತವೆ ಎಂದಿದ್ದಾರೆ ನಾಯ್ಡು.

ಮಾಜಿ ಪ್ರಧಾನಿಗಳ ಕುಟುಂಬಕ್ಕಿಲ್ಲ ಎಸ್‌ಪಿಜಿ
ಮಾಜಿ ಪ್ರಧಾನಿಗಳ ಕುಟುಂಬ ಸದಸ್ಯರಿಗೆ ಎಸ್‌ಪಿಜಿ(ವಿಶೇಷ ರಕ್ಷಣಾ ಪಡೆ) ಭದ್ರತೆಯನ್ನು ರದ್ದು ಮಾಡುವ ಕುರಿತ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದ್ದು, ಮುಂದಿನ ವಾರ ಈ ವಿಧೇಯಕ ಲೋಕಸಭೆಯಲ್ಲಿ ಮಂಡನೆಯಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಎಸ್‌ಪಿಜಿ ಕಾಯ್ದೆಗೆ ತಿದ್ದುಪಡಿ ತಂದು, ಈ ಅಂಶವನ್ನು ಸೇರಿಸಲಾಗಿದೆ. ಪ್ರಸ್ತುತ ಎಸ್‌ಪಿಜಿ ಕಾಯ್ದೆಯ ಪ್ರಕಾರ, ಪ್ರಧಾನಮಂತ್ರಿ, ಅವರ ಕುಟುಂಬ ಸದಸ್ಯರು, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅವರು ಹುದ್ದೆ ತ್ಯಜಿಸಿದ ಒಂದು ವರ್ಷ ಕಾಲ ಎಸ್‌ಪಿಜಿ ಭದ್ರತೆಯನ್ನು ನೀಡಲಾಗುತ್ತಿತ್ತು. ತದನಂತರ, ಅವರ ಜೀವಕ್ಕಿರುವ ಬೆದರಿಕೆಯ ಆಧಾರದಲ್ಲಿ ಎಸ್‌ಪಿಜಿ ಭದ್ರತೆಯನ್ನು ಮುಂದುವರಿಸಲಾಗುತ್ತಿತ್ತು. ಆದರೆ, ಈ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅದರಂತೆ, ಇನ್ನು ಮುಂದೆ ಹುದ್ದೆ ತ್ಯಜಿಸಿದ ಮರುಕ್ಷಣವೇ ಎಸ್‌ಪಿಜಿ ಭದ್ರತೆ ರದ್ದಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next