Advertisement

ಶ್ರವಣ ವೈಕಲ್ಯವುಳ್ಳ ಮಕ್ಕಳಿಗೆ ಸಮಗ್ರ ಶಿಕ್ಷಣ ಶಿಕ್ಷಕರು ಏನನ್ನು ಅರಿತಿರಬೇಕು?

12:45 PM May 15, 2022 | Team Udayavani |

ವಿಶ್ವ ಆರೋಗ್ಯ ಸಂಸ್ಥೆಯು 2013ರಲ್ಲಿ ಪ್ರಕಟಿಸಿದ ಒಂದು ವರದಿಯ ಪ್ರಕಾರ ಜಾಗತಿಕವಾಗಿ 360 ದಶಲಕ್ಷ ಮಂದಿ ಶ್ರವಣ ವೈಕಲ್ಯದೊಂದಿಗೆ ಬದುಕುತ್ತಿದ್ದಾರೆ. ಇವರಲ್ಲಿ 32 ದಶಲಕ್ಷ ಮಂದಿ ಮಕ್ಕಳಾಗಿದ್ದಾರೆ. ಮಕ್ಕಳು ಶ್ರವಣ ಸಾಮರ್ಥ್ಯ ನಷ್ಟಕ್ಕೆ ಒಳಗಾಗುವ ಅಪಾಯ ಅತೀ ಹೆಚ್ಚು ಎಂಬುದನ್ನು ಇದು ಸೂಚಿಸುತ್ತದೆ. ಶ್ರವಣ ವೈಕಲ್ಯವನ್ನು ಹೊಂದಿರುವ ಶಿಶುಗಳು ಮತ್ತು ಮಕ್ಕಳು ಸಂವಹನ, ಅರ್ಥ ಮಾಡಿಕೊಳ್ಳುವಿಕೆ, ಮಾತು, ಭಾಷಾ ಬೆಳವಣಿಗೆ ಇತ್ಯಾದಿಗಳಲ್ಲಿ ಹಿಂದುಳಿಯುವ ಸಾಧ್ಯತೆ ಇದೆ ಎಂಬುದು ಕಳವಳಕಾರಿಯಾಗಿದೆ. ಕುಲಕರ್ಣಿ ಮತ್ತು ರಾಜೇಶ್ವರಿ ಎಂಬವರು 2006ರಲ್ಲಿ 2001ರ ಜನಗಣತಿಯ ಬಗ್ಗೆ ನಡೆಸಿದ ವಿಶ್ಲೇಷಣೆಯ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತೀ ಒಂದು ಸಾವಿರ ಮಂದಿಯಲ್ಲಿ ಶೇ. 0.86ರಷ್ಟು ಮಂದಿಗೆ ಶ್ರವಣ ಶಕ್ತಿ ವೈಕಲ್ಯವಿತ್ತು. ಹಾಗಾಗಿ ಇದನ್ನು ಜಾಗತಿಕವಾಗಿ ಪ್ರತಿಕೂಲ ಪರಿಣಾಮ ಬೀರಬಲ್ಲ ಒಂದು ಅನಾರೋಗ್ಯ ಸ್ಥಿತಿ ಎಂಬುದಾಗಿ ಗುರುತಿಸಬಹುದಾಗಿದ್ದು, ಶ್ರವಣ ಶಕ್ತಿ ವೈಕಲ್ಯವುಳ್ಳ ಬಹುತೇಕ ಮಂದಿ ತಮಗೆ ಅಗತ್ಯವಾದ ಸೌಕರ್ಯ-ಸೌಲಭ್ಯಗಳನ್ನು ಪಡೆಯುವ ಸ್ಥಿತಿಯಲ್ಲಿಲ್ಲ.

Advertisement

ಜನ್ಮಜಾತವಾಗಿ ಬರುವ ವೈಕಲ್ಯಗಳಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವಂಥದ್ದು ಶ್ರವಣ ಶಕ್ತಿ ದೋಷ. ಯಾವುದೇ ಒಂದು ದೇಶದಲ್ಲಿ ಪ್ರಮಾಣೀಕೃತ ಶ್ರವಣಶಕ್ತಿ ಪರೀಕ್ಷೆಯ ಯೋಜನೆಗಳನ್ನು ಅನುಸರಿಸದೆ ಇದ್ದಲ್ಲಿ ಮಕ್ಕಳಲ್ಲಿ ಇರುವ ಶ್ರವಣ ಶಕ್ತಿ ದೋಷವು ಬಹಳ ವಿಳಂಬವಾಗಿ ಪತ್ತೆಯಾಗುವುದು ಸಾಮಾನ್ಯ. ಸಾಮಾನ್ಯವಾಗಿ ಒಂದು ಕಿವಿಯ ಅಥವಾ ಲಘು ಸ್ವರೂಪದ ಶ್ರವಣ ಶಕ್ತಿ ದೋಷವುಳ್ಳ ಮಕ್ಕಳಲ್ಲಿ ಈ ತೊಂದರೆ 6 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಯಸ್ಸಿನ ವರೆಗೆ ಪತ್ತೆಯಾಗದೆ ಹೋಗುತ್ತದೆ. ಇಂತಹ ಎಲ್ಲ ಪ್ರಕರಣಗಳಲ್ಲಿ ಮಕ್ಕಳಲ್ಲಿ ಬೆಳೆಯುತ್ತಿರುವ ಅಥವಾ ವಿಳಂಬವಾಗಿ ಆರಂಭಗೊಂಡ ಶ್ರವಣ ಶಕ್ತಿ ದೋಷವನ್ನು ಗುರುತಿಸುವ ಕಾರ್ಯದಲ್ಲಿ ಶಿಕ್ಷಕ-ಶಿಕ್ಷಕಿಯರು ಅವಿಭಾಜ್ಯ ಅಂಗವಾಗಿರುತ್ತಾರೆ. ಹೀಗೆ ವಿಳಂಬವಾಗಿ ಶ್ರವಣ ಶಕ್ತಿ ದೋಷ ಪತ್ತೆಯಾದ ಅಥವಾ ಶ್ರವಣ ಶಕ್ತಿ ದೋಷ ಬೆಳೆಯುತ್ತಿರುವ ಮಕ್ಕಳು ತರಗತಿಯಲ್ಲಿ ತಮ್ಮ ಶೈಕ್ಷಣಿಕ ಗುರಿಗಳನ್ನು ಮುಟ್ಟುವಂತೆ ಮಾಡುವುದರಲ್ಲಿಯೂ ಶಿಕ್ಷಕರ ಸಹಾಯ ಮತ್ತು ನೆರವು ಬಹಳ ನಿರ್ಣಾಯಕವಾಗಿರುತ್ತದೆ. ಹೀಗಾಗಿ ಮಕ್ಕಳ ಶ್ರವಣ ಶಕ್ತಿ ನಷ್ಟವನ್ನು ಗುರುತಿಸಿ, ಅದಕ್ಕೆ ಪರಿಹಾರ ಕ್ರಮಗಳನ್ನು ಅನುಸರಿಸುವ ವಿಚಾರ ದಲ್ಲಿ ಶಿಕ್ಷಕರು ಆಧಾರಸ್ತಂಭ ಎಂದರೆ ತಪ್ಪಲ್ಲ.

ಶ್ರವಣ ಶಕ್ತಿ ದೋಷವುಳ್ಳ ಮಕ್ಕಳಿಗಾಗಿ ಶಿಕ್ಷಣ ಕ್ರಮವು ಕಾಲಾನುಕ್ರಮದಲ್ಲಿ ಬಹಳ ಪ್ರಗತಿಯನ್ನು ಸಾಧಿಸಿದೆ. ಶ್ರವಣ ತಂತ್ರಜ್ಞಾನ ಮತ್ತು ಪುನರ್ವಸತಿ ವಿಧಾನಗಳಲ್ಲಿ ಆಗಿರುವ ಪ್ರಗತಿಯಿಂದಾಗಿ ಇಂತಹ ಮಕ್ಕಳಿಗೆ ಸಮಗ್ರ ಶಿಕ್ಷಣವನ್ನು ಆದ್ಯತೆಯ ನೆಲೆಯಲ್ಲಿ ಒದಗಿಸಲಾಗುತ್ತದೆ. ಶ್ರವಣ ಶಕ್ತಿ ದೋಷವು ವಿಳಂಬವಾಗಿ ಪತ್ತೆಯಾದ ಅಥವಾ ಬೇಗನೆ ಪುನರ್ವಸತಿ ಆರಂಭವಾದ ಮಕ್ಕಳ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಆದ್ದರಿಂದ ಶ್ರವಣ ಶಕ್ತಿ ದೋಷವನ್ನು ಹೊಂದಿರುವ ಮಕ್ಕಳಿಗಾಗಿ ಲಭ್ಯವಿರುವ ಉತ್ಕೃಷ್ಟ ಕಲಿಕಾ ಕ್ರಮಗಳ ಬಗ್ಗೆ ಶಿಕ್ಷಕ-ಶಿಕ್ಷಕಿಯರು ನಿಖರ ಅರಿವನ್ನು ಹೊಂದಿರಬೇಕಾಗುತ್ತದೆ. ಶ್ರವಣ ದೋಷವುಳ್ಳ ಮಕ್ಕಳ ಕಲಿಕಾ ಪ್ರಕ್ರಿಯೆಯ ವಿಚಾರದಲ್ಲಿ ಚಾಲ್ತಿಯಲ್ಲಿರುವ ಕೆಲವು ಅತ್ಯುತ್ತಮ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಮುಖ್ಯ ವಾಹಿನಿಯ ಶಾಲೆಗಳಲ್ಲಿ ಶ್ರವಣ ಶಕ್ತಿ ದೋಷವುಳ್ಳ ಮಕ್ಕಳಿಗೆ ಕಲಿಕೆಯಲ್ಲಿ ಸಹಾಯ ಸಿಗುವುದಕ್ಕಾಗಿ ಶಿಕ್ಷಕರು ಅನುಸರಿಸಬಹುದಾದ ಕೆಲವು ಅಂಶಗಳು

  • ಶ್ರವಣ ಶಕ್ತಿ ದೋಷವುಳ್ಳ ಮಕ್ಕಳು ಶಿಕ್ಷಕರಿಗೆ ಹತ್ತಿರ ಕುಳಿತುಕೊಳ್ಳುವಂತೆ ಮುಂದುಗಡೆಯ ಆಸನಗಳನ್ನು ಅವರಿಗೆ ಕಾಯ್ದಿರಿಸಬೇಕು. ಇದರಿಂದ ಅವರಿಗೆ ಧ್ವನಿ ಸಂದೇಶ ಗರಿಷ್ಠ ಮಟ್ಟದಲ್ಲಿ ಲಭಿಸುತ್ತದೆ ಮತ್ತು ಶಿಕ್ಷಕರ ಮುಖಭಾವನೆ, ತುಟಿ ಚಲನೆಯನ್ನು ಗಮನಿಸಲು ಸಾಧ್ಯವಾಗುತ್ತದೆ.
  • ಸಾಧ್ಯವಿದ್ದಾಗಲೆಲ್ಲ ಶ್ರವಣ ಶಕ್ತಿ ದೋಷವುಳ್ಳ ಮಗುವನ್ನು ಶುಭ್ರ ಬೆಳಕಿನಲ್ಲಿ ನೇರವಾಗಿ ದೃಷ್ಟಿಸಬೇಕು.
  • ಸ್ಪಷ್ಟವಾಗಿ, ನಿಧಾನವಾಗಿ, ಸರಿಯಾಗಿ ಕೇಳಿಸುವಂತೆ ಮಾತನಾಡಬೇಕು, ಆದರೆ ಮಾತು ಸಹಜವಾಗಿದ್ದು, ಕಿರುಚಬಾರದು, ಕೈಬಾಯಿ ಚಲನೆ ಅಸಹಜವಾಗಿರಬಾರದು.
  • ಸಾಕಷ್ಟು ಚಿತ್ರಗಳು, ರೇಖಾಚಿತ್ರಗಳು, ಲೇಬಲ್‌ಗ‌ಳನ್ನು ಉಪಯೋಗಿಸಿ.
  • ಹಿನ್ನೆಲೆ ಸದ್ದನ್ನು ಆದಷ್ಟು ಕಡಿಮೆ ಮಾಡಿ – ಫ್ಯಾನ್‌ ಸದ್ದನ್ನು ಕಡಿಮೆ ಮಾಡುವುದು ಅಥವಾ ಇತರ ಯಾವುದೇ ಸದ್ದನ್ನು ಕಡಿಮೆ ಮಾಡುವುದು.
  • ಕಲಿಕೆಯನ್ನು ಸುಲಭಗೊಳಿಸಲು ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಉಪಯೋಗಿಸಿ.
  • ಬಳಕೆ ಮಾಡುತ್ತಿರುವ ಸಾಧನಗಳು (ಧ್ವನಿವರ್ಧಕಗಳು ಮತ್ತು ಕೊಕ್ಲಿಯಾರ್‌ ಇಂಪ್ಲಾಂಟ್‌ಗಳು) ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಗರಿಷ್ಠ ಪ್ರಯೋಜನವನ್ನು ನೀಡುತ್ತಿವೆ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
  • ಲಭ್ಯವಿದ್ದರೆ ಎಫ್ಎಂ ವ್ಯವಸ್ಥೆಯನ್ನು ಉಪಯೋಗಿಸಿ – ಇದು ಶ್ರವಣ ಶಕ್ತಿ ದೋಷವುಳ್ಳವರಿಗೆ ಧ್ವನಿ ಸಂಕೇತವನ್ನು ಹೆಚ್ಚು ಚೆನ್ನಾಗಿ ನೀಡುತ್ತದೆ.
  • ಯಾವುದೇ ಹಂತದಲ್ಲಿ ಶ್ರವಣ ಶಕ್ತಿ ದೋಷವುಳ್ಳ ಮಗುವಿಗೆ ಧ್ವನಿ ವರ್ಧನ ಸಾಧನಗಳು ಪ್ರಯೋಜನವನ್ನು ಒದಗಿಸುತ್ತಿಲ್ಲ, ಮಗುವಿಗೆ ಸರಿಯಾಗಿ ಕೇಳಿಸುತ್ತಿಲ್ಲ ಹಾಗೂ ಮಗುವಿಗೆ ಶ್ರವಣ ಅಥವಾ ಪುನರ್ವಸತಿ ಸಂಬಂಧಿ ಆರೈಕೆಗಳ ಅಗತ್ಯವಿದೆ ಎಂಬುದಾಗಿ ಶಿಕ್ಷಕರಿಗೆ ಅನಿಸಿದರೆ, ಕೂಡಲೇ ಅವರನ್ನು ಪ್ರಮಾಣೀಕೃತ, ಪರಿಣಿತ ಆಡಿಯಾಲಜಿಸ್ಟ್‌ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ ಅವರ ಬಳಿಗೆ ತೆರಳುವಂತೆ ಶಿಫಾರಸು ಮಾಡಿ. ಮಂಗಳೂರಿನ ಕೆಎಂಸಿ ಅತ್ತಾವರದಲ್ಲಿರುವ ಆಡಿಯಾಲಜಿ ಮತ್ತು ಎಸ್‌ಎಲ್‌ಪಿ ವಿಭಾಗದಲ್ಲಿ ಶ್ರವಣ ಶಕ್ತಿ ದೋಷವುಳ್ಳ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲ ವಿಧದ ಸೇವೆ ಮತ್ತು ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
Advertisement

-ಡಾ| ರಾಜೇಶ್‌ ರಂಜನ್‌ ಆಡಿಯಾಲಜಿ ಮತ್ತು ಎಸ್‌ಎಲ್‌ಪಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next