Advertisement

ಭ್ರಷ್ಟರ ವಿರುದ್ಧ ನಿರ್ಭಯವಾಗಿ ದೂರು ನೀಡಿ

03:15 PM May 19, 2019 | Suhan S |

ಕೋಲಾರ: ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾ ಚಾರ, ಲಂಚಕ್ಕೆ ಬೇಡಿಕೆ ಹಾಗೂ ವಿನಾಕಾರಣ ಕೆಲಸಗಳಲ್ಲಿ ವಿಳಂಬ ಮಾಡುವ ಕುರಿತು ಸಾರ್ವಜನಿಕರು ನಿರ್ಭಯವಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿ ಎಂದು ದಳದ ಕೇಂದ್ರವಲಯ ಅಧೀಕ್ಷಕ ಎ.ಆರ್‌.ಬಡಿಗೇರ್‌ ತಿಳಿಸಿದರು.

Advertisement

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಭ್ರಷ್ಟಾಚಾರ ನಿಗ್ರಹ ದಳ ಹಮ್ಮಿಕೊಂಡಿದ್ದ ಜನಜಾಗೃತಿ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸಾರ್ವ ಜನಿಕರ ಕೆಲಸಗಳಿಗೆ ಸರ್ಕಾರಿ ಶುಲ್ಕ ಹೊರತುಪಡಿಸಿ ಹೆಚ್ಚಿನ ಹಣ ಪಡೆಯುವಂತಿಲ್ಲ. ಈ ರೀತಿ ಪಡೆದರೆ ಇದು ಭ್ರಷ್ಟಾಚಾರ ಕಾಯ್ದೆಯಡಿಯಲ್ಲಿ ಶಿಕ್ಷಾರ್ಹ ಅಪರಾಧ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಏನಾದರೂ ತಪ್ಪು ಮಾಡಿದರೆ ಅವರನ್ನೂ ತನಿಖೆ ಮಾಡಲು ವಿಜಿಲೆನ್ಸ್‌ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.

ಗ್ರಾಪಂ, ತಾಲೂಕು ಕಚೇರಿ, ಆರ್‌ಟಿಒ, ಆಸ್ಪತ್ರೆ ಇನ್ನಿತರೆ ಸರ್ಕಾರಿ ಕಚೇರಿಗಳಿಗೆ ಹೋದಾಗ ಸರ್ಕಾರಿ ನೌಕರರು ಕೆಲಸಕ್ಕೆ ಹಣದ ಬೇಡಿಕೆ ಇಡುತ್ತಾರೆ. ಇಂತಹ ವರನ್ನು ವಿಚಾರಿಸಿಕೊಳ್ಳಲು ನಾವಿದ್ದೇವೆ. ಭ್ರಷ್ಟಾಚಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ದೂರು ನೀಡಲು ಮುಂದೆ ಬರುತ್ತಿಲ್ಲ, ಕಾನೂನು ಚೌಕಟ್ಟಿನಲ್ಲಿ ನಿಗಪಡಿಸಿದ ಶುಲ್ಕಕ್ಕಿಂತ ಹೆಚ್ಚು ಹಣ ಕೇಳಿದರೆ ನಮ್ಮನ್ನು ಸಂಪರ್ಕಿಸಿ ಎಂದು ಭರವಸೆ ನೀಡಿದರು.

ಭ್ರಷ್ಟಾಚಾರ ಕೆಟ್ಟದ್ದು: ಎಎಸ್ಪಿ ಜಾಹ್ನವಿ ಮಾತನಾಡಿ, ಲಂಚ ಪಡೆಯುವುದು ಎಷ್ಟು ಅಪರಾಧವೋ, ನೀಡುವುದು ಸಹ ಅಷ್ಟೇ ಅಪರಾಧ. ಸರ್ಕಾರವು ಕೆಲಸಕ್ಕೆ ತಕ್ಕ ಸಂಭಾವನೆ ನೀಡುತ್ತದೆ. ಭ್ರಷ್ಟಾಚಾರವನ್ನು ತಡೆಗಟ್ಟಲು ಜನರಿಗೆ ಅರಿವು ಮೂಡಿಸಬೇಕು. ಶಾಲಾ ಹಂತದಲ್ಲೇ ಮಕ್ಕಳಿಗೆ ಭ್ರಷ್ಟಾಚಾರ ಕೆಟ್ಟದ್ದು ಎಂಬ ತಿಳಿವಳಿಕೆ ನೀಡಬೇಕು ಎಂದರು.

ಲಂಚ ಸ್ವೀಕರಿಸಿದ ಪ್ರಮುಖರು:ದಳದ ಉಪ ಅಧೀಕ್ಷಕ ಪುರುಷೋತ್ತಮ್‌ ಮಾತನಾಡಿ, ದಳ ಆರಂಭವಾದಾಗಿ ನಿಂದಲೂ 45 ಪ್ರಕರಣ ದಾಖಲಾಗಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕರಿಸಿ ಸಿಕ್ಕಿ ಬಿದ್ದಿರುವ 34 ಪ್ರಕರಣಗಳಿವೆ. ಬಿಸಿಎಂ ಜಿಲ್ಲಾಧಿಕಾರಿ, 2017ರಲ್ಲಿ ಬಂಗಾರಪೇಟೆ ತಹಶೀಲ್ದಾರ್‌ ತಲಾ 2 ಲಕ್ಷ ರೂ., 2018ರಲ್ಲಿ ಕೆಜಿಎಫ್‌ ಬಿಇಒ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿ ರುವ ಪ್ರಮುಖ ಪ್ರಕರಣಗಳು ಎಂದು ವಿವರಿಸಿದರು.

Advertisement

ತನಿಖೆ ಮುಗಿಯುವವರೆಗೂ ಸಹಕರಿಸಿ: ಭ್ರಷ್ಟಾಚಾರ ನಿಗ್ರಹ ದಳದ ವಿಶೇಷ ಸರ್ಕಾರಿ ಅಭಿಯೋಜಕ ರಾಮಚಂದ್ರಯ್ಯ ಮಾತನಾಡಿ, ವಿಶ್ವದ 176 ದೇಶಗಳಲ್ಲಿ ಭಾರತ ಭ್ರಷ್ಟಾಚಾರದಲ್ಲಿ 76ನೇ ಸ್ಥಾನದಲ್ಲಿದೆ. ಕಡಿಮೆ ಮಾಡಲು ಯುವಕರು ಕೈಜೋಡಿಸಬೇಕಿದೆ. ಸರ್ಕಾರದ ಸಂಬಳ ಪಡೆಯುತ್ತಿರುವ ಎಲ್ಲಾ ಕಾಯಂ ಹಾಗೂ ಗುತ್ತಿಗೆ ನೌಕರರು ಭ್ರಷ್ಟಾಚಾರ ನಿಗ್ರಹ ದಳದ ತನಿಖೆಯ ವ್ಯಾಪ್ತಿಗೆ ಒಳಪಡುತ್ತಾರೆ. ದೂರುದಾರರು ಆರೋಪಿಗೆ ಶಿಕ್ಷೆ ಆಗುವವರೆಗೂ ತನಿಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ, ದೂರು ನೀಡಿರುವ ದೂರುದಾರರನ್ನು ಸನ್ಮಾನಿಸಲಾಯಿತು. ನಂತರ ಭ್ರಷ್ಟಾಚಾರ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಎಸಿಬಿಗೆ ದೂರು ನೀಡಿರುವವರಲ್ಲಿ ತೊಪ್ಪನಹಳ್ಳಿ ಮಲ್ಲಿಕಾರ್ಜುನ, ಧನಮಟ್ನಹಳ್ಳಿ ವೆಂಕಟೇಶಪ್ಪ, ಬಿಎಂಟಿಸಿ ನಿರ್ವಾಹಕಿ ಶೈಲಜಾ ಹಾಗೂ ಜಿಲ್ಲೆಯ ಎರಡು ರೈತ ಸಂಘಗಳ ಪದಾಧಿಕಾರಿಗಳು ಮತ್ತಿತರ ಪ್ರಮುಖರಿದ್ದರು. ಜನಪನಹಳ್ಳಿಯ ರೈತ ರಾಮಯ್ಯರನ್ನು ಸನ್ಮಾನಿಸಲಾಯಿತು.

ಕೋಲಾರ ಉಪ ಅಧೀಕ್ಷಕ ಕೋದಂಡರಾಮಯ್ಯ, ಮುಳಬಾಗಿಲು ಉಪಅಧೀಕ್ಷಕ ಬಿ.ಕೆ.ಉಮೇಶ್‌, ಪ್ರೊಬೆಷನರಿ ಉಪ ಅಧೀಕ್ಷಕಿ ಅನುಷಾ, ಲೋಕಾಯುಕ್ತ ಉಪ ಅಧೀಕ್ಷಕ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next