Advertisement

ಸ್ಪರ್ಧಾತ್ಮಕ ರಾಜಕೀಯ ರಾಷ್ಟ್ರೀಯ ಭಾವೈಕ್ಯಕ್ಕೆ ಪೂರಕವಾಗಿರಲಿ

01:23 AM Feb 22, 2021 | Team Udayavani |

“ಕಳೆದು ಹೋದ ಮರಾಠಿ ನೆಲವನ್ನು ಮರಳಿ ಜಯಿಸುತ್ತೇನೆ. ಕೊನೆಯುಸಿರಿನ ವರೆಗೆ ಒಂದಿಂಚು ನೆಲವನ್ನು ಬಿಟ್ಟುಕೊಡೆವು’, “ಕೇಂದ್ರ ಸರಕಾರದಿಂದ ನಮ್ಮ ಮೇಲೆ ಆಕ್ರಮಣದ ಭೀತಿ’ ಎಂದು ಹೌರಾ ಸೇತುವೆಯ ಮೇಲೆ ಮಿಲಿಟರಿ ವಾಹನಗಳ ಸರತಿ(Caravan)ಯತ್ತ ಬೆರಳು ತೋರಿಸುವಿಕೆ- ಈ ಎಲ್ಲ ಪ್ರಚೋದನಕಾರಿ ಉದ್ಗಾರಗಳು ಜವಾಬ್ದಾರಿಯುತ ಸಾಂವಿಧಾನಿಕ ಹುದ್ದೆಯೇರಿದವರಿಂದಲೇ ಈ ದಿನಗಳಲ್ಲಿ ಹೊರಹೊಮ್ಮುತ್ತಿದೆ. ಇವೆಲ್ಲ ದೂರಗಾಮಿಯಾಗಿ ವಿಘಟನ ಮನೋಭೂಮಿಕೆ ಸೃಜಿಸುವ ಹಾಗೂ ರಾಷ್ಟ್ರೀಯ ಭಾವೈಕ್ಯಕ್ಕೆ ಭವಿಷ್ಯದಲ್ಲಿ ಗಂಭೀರ ಅಪಾಯ ತಂದೊಡ್ಡುವಂತಹದು. ಈ ಬಗೆಗೆ ಮುನ್ನೆಚ್ಚರಿಕೆ ಜನಮನದಲ್ಲಿ ಮೂಡಿಬರಬೇಕಾಗಿದೆ.

Advertisement

ಭಾರತ ರಾಜ್ಯಗಳ ಒಕ್ಕೂಟವಾಗಿರತಕ್ಕದ್ದು ಎಂಬ ಸ್ಪಷ್ಟ ಒಕ್ಕಣೆ ನಮ್ಮ ಸಂವಿಧಾನ ತನ್ನ ಪ್ರಪ್ರಥಮ ವಿಧಿಯಲ್ಲೇ ಉಧ್ಘೋಷಿಸಿದೆ. ಅದೇ ರೀತಿ ರಾಜ್ಯಗಳನ್ನು ಸೃಜಿಸುವ, ಪುನರ್‌ ವಿಂಗಡಿಸುವ, ನಾಮಕರಣ ಮಾಡುವ, ಗಡಿಗಳನ್ನು ಗುರುತಿಸುವ ಹಾಗೂ ಬದಲಾಯಿಸುವ, ಬಾಹ್ಯ ಭೂಪ್ರದೇಶವನ್ನು ತನ್ನ ಭೂಪಟದೊಳಗೆ ಸೇರಿಸುವ – ಈ ಎಲ್ಲ ಸಮಗ್ರ ಅಧಿಕಾರವನ್ನು 2 ಮತ್ತು 3 ವಿಧಿಗಳ ಮೂಲಕ ಭಾರತ ಸಂವಿಧಾನ ಕೇವಲ ಕೇಂದ್ರ ಸರಕಾರಕ್ಕೆ ಮಾತ್ರ ನೀಡಿದೆ.1947 ಆಗಸ್ಟ್‌ 15ರಂದು ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಏರಿದಾಗ ಭಾರತದ ಭೂಪಟ ಇನ್ನೂ ಅಪೂರ್ಣವಾಗಿತ್ತು. ಮುಂದೆ ಕಾಶ್ಮೀರವು ಸೇರಿ ದೇಸೀ ರಾಜರ ಆಳ್ವಿಕೆಯ ಹಲವು ರಾಜ್ಯಗಳು, 1950ರ ವೇಳೆಗೆ ಫ್ರೆಂಚರ ವಸಾಹತುಗಳು, 1961ರಲ್ಲಿ ಪೋರ್ಚುಗೀಸರ ಕೈ ವಶದಲ್ಲಿದ್ದ ಗೋವಾ ವಿಮೋಚನೆ, 1975ರಲ್ಲಿ ಸಿಕ್ಕಿಂ ಸಿಕ್ಕಿದ ಪರಿ-ಹೀಗೆ ಇವೆಲ್ಲ ಒಗ್ಗೂಡಿದ ಮಜಲುಗಳು ಇಂದು ಇತಿಹಾಸ. ನಮ್ಮ ಸಂವಿಧಾನ ಕಣ್ಣು ತೆರೆದಾಗ ಎ,ಬಿ,ಸಿ,ಡಿ ವರ್ಗೀಕರಣದ ಅಖಂಡ ಭಾರತ ಮುಂದೆ, 1956ರಲ್ಲಿ ಭಾಷಾವಾರು ಪ್ರಾಂತ್ಯಗಳಾಗಿ ವಿಭಜನೆ ಗೊಂಡವು. ಮುಂದೆ ಇದರ ಮಿತಿಯನ್ನೂ ಮೀರಿ ಪ್ರಾದೇಶಿಕತೆಯ ಆಧಾರದಲ್ಲಿ 2000ರಲ್ಲಿ ಉತ್ತರಾಖಂಡ, ಜಾರ್ಖಡ್‌, ಛತ್ತೀಸ್‌ಗಢ, 2014ರಲ್ಲಿ ತೆಲಂಗಾಣ- ಹೀಗೆ ರಾಜ್ಯಗಳು ಜನ್ಮತಾಳಿದುದೂ ಪ್ರಚಲಿತ ಭಾರತ ಒಕ್ಕೂಟದ ಮೈಲುಗಲ್ಲುಗಳು. 2019ರಲ್ಲಿ 370ನೇ ವಿಧಿಯನ್ನು ಇಲ್ಲವಾಗಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳನ್ನು ನೇರವಾಗಿ ಕೇಂದ್ರಾಡಳಿತ ಪ್ರದೇಶವಾಗಿಸಿದ ಹೆಜ್ಜೆಯು ಇದೀಗ ನಮ್ಮ ನಾಡಿನ ಸಾಂವಿಧಾನಿಕ ಚರಿತ್ರೆಯ ಭಾಗ.

ನಮ್ಮ ಸಂವಿಧಾನದ ಎಳೆ ಎಳೆಯನ್ನು ಆಳವಾಗಿ ಪರಿಶೋಧಿಸಿ ದಾಗ ಕಂಡು ಬರುವ ಸರಳ ಸತ್ಯವೆಂದರೆ ಏಕತೆ ಹಾಗೂ ರಾಷ್ಟ್ರೀಯ ಮನೋಧರ್ಮಕ್ಕೆ ಬಲವಾದ ಒತ್ತು ನೀಡಿದುದು. ಅಮೆರಿಕ ಸಂಯುಕ್ತ ಸಂಸ್ಥಾನದಂತೆ ನಮ್ಮಲ್ಲಿ ರಾಷ್ಟ್ರ ಹಾಗೂ ರಾಜ್ಯಗಳ ಪ್ರತ್ಯಪ್ರತ್ಯೇಕ ಪೌರತ್ವ ಎಂಬುದೇ ಇಲ್ಲ. ರಾಷ್ಟ್ರಧ್ವಜ, ರಾಷ್ಟ್ರ ಲಾಂಛನ, ರಾಷ್ಟ್ರಗೀತೆ ಇವೆಲ್ಲ ಭಾರತದ ಏಕತೆಯ ಪ್ರತೀಕ. ಸಮಗ್ರ ರಾಷ್ಟ್ರಕ್ಕೆ ಒಂದೇ ನ್ಯಾಯಾಂಗ ವ್ಯವಸ್ಥೆ, ಚುನಾವಣ ಆಯೋಗ, ರಿಸರ್ವ್‌ಬ್ಯಾಂಕ್‌, ಕೇಂದ್ರದಿಂದಲೇ ರಾಜ್ಯಪಾಲರು ಹಾಗೂ ಉಪರಾಜ್ಯಪಾಲರ ಆಯ್ಕೆ, ಕೇಂದ್ರ ಲೋಕಸೇವಾ ಆಯೋಗ -ಹೀಗೆ ಸರಣಿ ಚಿತ್ರಣಗಳು ರಾಷ್ಟ್ರೀಯ ಏಕತೆಯನ್ನು ಬಿಂಬಿಸುವ ಸ್ತಂಭಗಳು. ನಮ್ಮ ರಾಜ್ಯಾಂಗ ಘಟನೆಯ ಇನ್ನೊಂದು ಸ್ವಾಗತಾರ್ಹ ಮತ್ತು ಸೋಜಿಗದ ಅಂಶವೆಂದರೆ ಒಂದೊಮ್ಮೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ, ನಮ್ಮ ಒಕ್ಕೂಟ ವ್ಯವಸ್ಥೆ ಸಹನೀಯವೇ ಅಲ್ಲ ಎಂದೆನಿಸಿದರೆ ಹೊರ ನಡೆಯುವ ಸಾಧ್ಯತೆಯೇ ಇಲ್ಲ. ಅರ್ಥಾತ್‌ ಸಮಗ್ರ ಸಂವಿಧಾನವನ್ನು ಆಮೂಲಾಗ್ರವಾಗಿ ಜಾಡಿಸಿದರೂ ನಿರ್ಗಮನದ ದ್ವಾರವೇ ಇಲ್ಲ! ಒಂದು ಕಾಲದ ಸೋವಿಯತ್‌ ಒಕ್ಕೂಟ (USSR) ಇಂದು ಇತಿಹಾಸದ ಗರ್ಭ ಸೇರಿದುದೂ ಆ ದೇಶದ ಸಂವಿಧಾನ ಇಂತಹ ನಿರ್ಗಮನದ ದ್ವಾರ ತೆರೆದಿಟ್ಟ ಕಾರಣ.

ನಮಗಿಂದು ಬೇಕಾಗಿರುವುದು ಸಹಕಾರಿ ಸಂಯುಕ್ತ ರಾಜ್ಯ ಪದ್ಧತಿ (Co-operation Federalism ) ವಿನಾ ಸಂಘರ್ಷಕಾರಿ ಸಂಯುಕ್ತ ರಾಜ್ಯ ಪದ್ಧತಿ (Conflicting Federalism ) ಅಲ್ಲ. ಒಂದೊಮ್ಮೆ ಸ್ಪರ್ಧಾತ್ಮಕ ಸಂಯುಕ್ತ ರಾಜ್ಯ ಪದ್ಧತಿ ( Competitive Federalism) ಆದರೂ ಅದು ಆರೋಗ್ಯಕರ ಲಕ್ಷಣದ ಹಾದಿಯಲ್ಲಿದ್ದರೆ ಸಾಗತಾರ್ಹ. ಮುಖ್ಯವಾಗಿ ಚುನಾ ವಣೆಯ ಕಾಲ ಘಟ್ಟದಲ್ಲಿ, ನಮ್ಮನ್ನು ದಿಲ್ಲಿಯವರು ಆಳುತ್ತಿ¨ªಾರೆ ಎಂಬಂತಹ ವಿಭಜನಾತ್ಮಕ ಮನೋಭೂಮಿಕೆ ಸೃಜಿಸುವಿಕೆ ರಾಷ್ಟ್ರೀಯ ವಿಚಾರಧಾರೆಗೇ ಮಾರಕ. ವಿಸ್ತೀರ್ಣದಲ್ಲಿ ವಿಶ್ವದಲ್ಲಿ ಏಳನೇ ಸ್ಥಾನ ನಮ್ಮ ವಿಶಾಲ ಭಾರತಕ್ಕೆ. ಅತ್ಯಂತ ಹಿರಿಯ ಜನತಂತ್ರ ಎಂಬ ಹೆಮ್ಮೆ ಎಂಬ ಗೌರವಕ್ಕೆ ಪಾತ್ರವಾದ ರಾಷ್ಟ್ರ. ಈ ಹಿರಿಮೆಯನ್ನು ಬರಲಿರುವ ಪೀಳಿಗೆಗೂ ಕೊಂಡೊಯ್ಯುವಲ್ಲಿ ಹಾಗೂ ಪ್ರಜಾಸತ್ತಾತ್ಮಕ ಹಾಗೂ ಸಾಂವಿಧಾನಿಕ ಗೆರೆಯೊಳಗೆ ನಮ್ಮ ನೆಲ, ಜಲ, ಆಗಸದ ಸಾರ್ವ ಭೌಮತೆ ಹಾಗೂ ಸಮಗ್ರತೆಯನ್ನು ಕಾಪಾಡಬೇಕಾಗಿದೆ. ಜನ ಮನದ ಅಖಂಡ ರಾಷ್ಟ್ರ ಕಲ್ಪನೆಗೆ ಸದಾ ನೀರೆರೆಯಬೇಕಾಗಿದೆ. ಸಂವಿಧಾನ, ಸರಕಾರ, ಕಾನೂನು ಸಮುಚ್ಛೆಯ, ಆಡಳಿತ ಯಂತ್ರ, ನ್ಯಾಯಂಗ ವ್ಯವಸ್ಥೆ, ರಾಜಕೀಯ ಪಕ್ಷಗಳು- ಇವೆಲ್ಲ ಅಂತಿಮ ಗುರಿಯಲ್ಲ; ಬದಲಾಗಿ ನಮ್ಮೆಲ್ಲರ ಸಾಮೂಹಿಕ, ವ್ಯವಸ್ಥಿತ ಬದುಕಿನ ಮುನ್ನಡೆಯ ಸಾಧನಗಳು; ಸುಂದರ ನಾಳೆಗಳನ್ನು ಸ್ವಜಿಸುವ ಹಂದರಗಳು.

– ಡಾ| ಪಿ.ಅನಂತಕೃಷ್ಣ ಭಟ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next