Advertisement

ಟಿಡಿಆರ್‌ ಹಗರಣ ತನಿಖೆಗೆ ಸಮಿತಿ

01:00 AM Jul 21, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ರಸ್ತೆಗಳ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಪರ್ಯಾಯವಾಗಿ ಬಿಬಿಎಂಪಿ ನೀಡಿರುವ “ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು’ (ಟಿಡಿಆರ್‌) ಹಗರಣದ ಕುರಿತ ತನಿಖೆಗೆ ಮೇಯರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲು ಶನಿವಾರ ನಡೆದ ಪಾಲಿಕೆ ಸಭೆಯಲ್ಲಿ ನಿರ್ಧಾರಿಸಲಾಗಿದೆ.

Advertisement

ಟಿಡಿಆರ್‌ ಹಗರಣದ ಬಗ್ಗೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಶನಿವಾರ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದರು. “ನಗರದಲ್ಲಿ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಟಿಡಿಆರ್‌ ಅನ್ನು ಎಷ್ಟು ರಸ್ತೆಗಳಿಗೆ ನೀಡಲಾಗಿದೆ, ಆ ಸ್ವತ್ತುಗಳು ಪಾಲಿಕೆಯ ಅಧೀನದಲ್ಲೇ ಇವೆಯಾ, ಪಾಲಿಕೆಯ ಯಾವ ಅಧಿಕಾರಿಗಾದರೂ ಇದರ ಬಗ್ಗೆ ಉತ್ತರ ನೀಡುವ ಧೈರ್ಯವಿದೆಯಾ’ ಎಂದು ಸವಾಲು ಎಸೆದರು.

ಇದಕ್ಕೆ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ, ಬಿಜೆಪಿಯ ಉಮೇಶ್‌ ಶೆಟ್ಟಿ ಹಾಗೂ ಗುಣಶೇಖರ್‌ ಕೂಡ ಧ್ವನಿಗೂಡಿಸಿ, ಟಿಡಿಆರ್‌ ಹಗರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಟಿಡಿಆರ್‌ ಎನ್ನುವುದು ಬಹು ದೊಡ್ಡ ಹಗರಣ. ನಗರದಲ್ಲಿನ ರಸ್ತೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಆದರೆ, ಯೋಜನೆ ಉದ್ದೇಶವೇ ತಲೆಕೆಳಗಾಗಿದ್ದು, ನಗರದ ಹೃದಯ ಭಾಗದಲ್ಲಿ ಕಟ್ಟಡ ಸಂಖ್ಯೆಗಳು ಹೆಚ್ಚಾದಂತೆ ಒತ್ತಡ ಹೆಚ್ಚಾಗಿದೆ ಎಂದು ರೆಡ್ಡಿ ಹೇಳಿದರು.

“ನಗರದಲ್ಲಿ ರಸ್ತೆ ವಿಸ್ತರಣೆಗಾಗಿ 2005ರಲ್ಲಿ ಟಿಡಿಆರ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಇದುವರೆಗೆ 2220 ಆಸ್ತಿಗಳಿಂದ 22,845 ಲಕ್ಷ ಚದರ ಮೀಟರ್‌ನಷ್ಟು ಜಾಗಕ್ಕೆ ಟಿಡಿಆರ್‌ ನೀಡಲಾಗಿದೆ. ನಿಯಮಾನುಸಾರ ಶೇ.5ರಷ್ಟು ಕಳೆದರೂ ಸುಮಾರು 15 ಲಕ್ಷ ಚದರ ಮೀಟರ್‌ ಆಸ್ತಿಯನ್ನು ಬಿಬಿಎಂಪಿ ತನ್ನ ಸ್ವಾಧೀನಕ್ಕೆ ತೆಗೆದು ಕೊಂಡಿರಬೇಕಾಗುತ್ತದೆ. ಇದರಲ್ಲಿ ಎಷ್ಟು ಆಸ್ತಿ ಪಾಲಿಕೆ ವಶದಲ್ಲಿದೆ. 2005ರಿಂದ ಇಲ್ಲಿಯವರೆಗೆ 22,845 ಲಕ್ಷ ಚದರ ಮೀಟರ್‌ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಜಾಗ ಬಳಕೆ ಮಾಡಿಕೊಂಡು ಎಷ್ಟು ಕಿ.ಮೀ. ರಸ್ತೆ ಅಗಲೀಕರಣ ಮಾಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಆಯುಕ್ತ ಮಂಜುನಾಥ್‌ ಪ್ರಸಾದ್‌, ಟಿಡಿಆರ್‌ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸದಸ್ಯರು ಆರೋಪಿಸುತ್ತಿದ್ದು, ಪಾಲಿಕೆಯಿಂದ ಈವರೆಗೆ ನೀಡಲಾದ ಟಿಡಿಆರ್‌ ಕುರಿತು ಸಮಗ್ರ ತನಿಖೆಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ವಹಿಸುವುದೊ ಅಥವಾ ಬಿಬಿಎಂಪಿ ಆಂತರಿಕ ತನಿಖಾ ಸಮಿತಿ ರಚನೆ ಮಾಡಬೇಕೋ ಎಂಬ ಬಗ್ಗೆ ಪಾಲಿಕೆ ಸಭೆ ತೀರ್ಮಾನಿಸಬೇಕು. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಮೇಯರ್‌ ಅಧ್ಯಕ್ಷತೆಯಲ್ಲಿ ಆಂತರಿಕ ತನಿಖಾ ಸಮಿತಿ ರಚನೆ ಮಾಡಿಕೊಂಡು ಎರಡು ತಿಂಗಳ ಅವಧಿಯಲ್ಲಿ ಪರಿಶೀಲನೆ ನಡೆಸಿ, ಎಸಿಬಿ ಅಥವಾ ಉನ್ನತ ಮಟ್ಟದ ತನಿಖಾ ಸಂಸ್ಥೆಗೆ ವಹಿಸುವ ಎಂಬುದರ ಬಗ್ಗೆ ತೀರ್ಮಾನ ಮಾಡುವುದಾಗಿ ನಿರ್ಣಯ ತೆಗೆದುಕೊಂಡರು. ಮೇಯರ್‌ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚನೆ ಮಾಡಿ, ಸದಸ್ಯರಾಗಿ ಉಪಮೇಯರ್‌, ಆಯುಕ್ತರು, ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು, ವಿಶೇಷ ಆಯುಕ್ತರು, ಪಾಲಿಕೆ ಸದಸ್ಯರು ಸೇರಿದಂತೆ ಒಂಭತ್ತು ಜನರ ಸದಸ್ಯರ ಸಮಿತಿ ರಚನೆ ಮಾಡಲು ಮೇಯರ್‌ ಗಂಗಾಂಬಿಕೆ ಸೂಚನೆ ನೀಡಿದರು.

ಟಿಡಿಆರ್‌ ಹಗರಣಗಳು: ಮಾರಗೊಂಡನಹಳ್ಳಿ ಗ್ರಾಮ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಇಲ್ಲಿನ ನಾರಾಯಣಮ್ಮ ಎನ್ನುವವರ ಜಾಗಕ್ಕೆ ಸಂಬಂಧಿಸಿದಂತೆ ಟಿಆರ್‌ಡಿ ನೀಡಲಾಗಿದೆ. 35 ಗುಂಟೆ ಭೂಸ್ವಾಧೀನ ಮಾಡಿಕೊಳ್ಳ ಲಾಗಿದೆ. 60ಚದರ ಮೀಟರ್‌ ಭೂಮಿಯನ್ನು ಅವರಿಗೆ ನೀಡಲಾಗಿದೆ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಕಸವನಹಳ್ಳಿಯಲ್ಲಿ ಸಾರ್ವಜನಿಕರ ರಸ್ತೆಗೆ ಟಿಡಿಆರ್‌ ನೀಡಲಾಗಿದೆ. ಇದರಿಂದ ಪಾಲಿಕೆಯಾವುದೇ ಉಪಯೋಗವಿಲ್ಲ. ಕೇವಲ ಒಂದುವರೆ ಗಂಟೆಯಲ್ಲಿ ಇದು ನೊಂದಣಿಯಾಗಿದ್ದು, ಒಂದೇ ದಿನದಲ್ಲಿ ಮೂವರಿಗೆ ಈ ಜಾಗದ ಖಾತಾ ಬದಲಾಗುತ್ತದೆ. ಅಪಾರ್ಟ್‌ಮೆಂಟ್‌ಗಳಿಗೆ ಅನುಕೂಲ ಮಾಡಲು ಈ ರೀತಿ ಮಾಡಲಾಗಿದೆ.

ನಾನು ಕ್ಷಮೆಯಾಚಿಸುತ್ತೇನೆ: “ಹೈದರಾಬಾದ್‌ನಲ್ಲಿ ರಸ್ತೆಗಳು ವಿಸ್ತಾರವಾಗಿರುವುದರಿಂದ ಅಲ್ಲಿನಂತೆಯೇ ಬೆಂಗಳೂರಿನ ರಸ್ತೆಗಳು ವಿಸ್ತಾರವಾದರೆ, ಇಲ್ಲಿನ ಜನರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಬೆಂಗಳೂರಿನಲ್ಲಿ ಟಿಡಿಆರ್‌ ಪರಿಚಯಿಸುವಂತೆ ನಾನೇ ಸಲಹೆ ನೀಡಿದ್ದೆ. ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎನ್ನುವ ಉದ್ದೇಶದಿಂದ ಜಾರಿಗೆ ತಂದ ಯೋಜನೆ ಇಂದು ಹಗರಣದ ಕೂಪವಾಗಿದೆ. ನಾನು ಯಾಕಾದರೂ ಈ ಯೋಜನೆಗೆ ಸಲಹೆ ನೀಡಿದೆನೋ ಎನ್ನುವಷ್ಟು ಬೇಸರವಾಗಿದೆ,’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ವಿಷಾದ ವ್ಯಕ್ತಪಡಿಸಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ: ಚುಕ್ಕಿ ಗುರುತಿನ ಸಭೆಗೆ ಪಾಲಿಕೆಯಲ್ಲಿ ಮತ್ವವಿದೆ. ಇದಕ್ಕೆ ಅಧಿಕಾರಿಗಳು ಲಿಖೀತ ರೂಪದಲ್ಲಿ ಉತ್ತರ ನೀಡಬೇಕಾಗುತ್ತದೆ. ಆದರೆ, ಪಾಲಿಕೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಉತ್ತರ ನೀಡುತ್ತಿಲ್ಲ ಎಂದು ಪದ್ಮನಾಭ ರೆಡ್ಡಿ ಆರೋಪಿಸಿದರು.

ಸದಸ್ಯರ ಆಸ್ತಿ ವಿವರ ಯಾರಿಗೆ ಸಲ್ಲಿಸಬೇಕು?
ಬೆಂಗಳೂರು: ಬಿಬಿಎಂಪಿ ಸದಸ್ಯರು ಆಸ್ತಿ ವಿವರನ್ನು ಯಾರಿಗೆ ಸಲ್ಲಿಸಬೇಕು ಎನ್ನುವುದರ ಬಗ್ಗೆ ಗೊಂದಲ ಸೃಷ್ಟಿಯಾಗಿರುವ ಬಗ್ಗೆ ಪಾಲಿಕೆಯಲ್ಲಿ ಚರ್ಚೆಯಾಯಿತು. ಪಾಲಿಕೆ ಸದಸ್ಯರ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸುವ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಒತ್ತಾಯಿಸಿದರು.

ಶನಿವಾರ ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ನಡೆದ ಚುಕ್ಕೆಗುರುತಿನ ಪ್ರಶ್ನೆ ಸಭೆಯಲ್ಲಿ ಈ ವಿಷಯ ಪ್ರಸ್ತಾವನೆ ಮಾಡಿದ ಅವರು, ಕೆಎಂಸಿ ಕಾಯ್ದೆಯ ಪ್ರಕಾರ ಪಾಲಿಕೆಯ ಸದಸ್ಯರು ಆಸ್ತಿ ವಿವರವನ್ನು ಮೇಯರ್‌ಗೆ ಸಲ್ಲಿಸಬೇಕು ಎಂದಿದೆ. ಇದರ ಜತೆಗೆ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಸದಸ್ಯೆ ಆಸ್ತಿ ವಿವರವನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲೂ ಪ್ರಕಟಿಸಲಾಗುಲಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು, ಎಚ್‌.ಎಂ. ವೆಂಕಟೇಶ್‌ ಎಂಬುವವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದು, ಲೋಕಾಯುಕ್ತ ಕಾಯ್ದೆಯ ಸೆಕ್ಷನ್‌ 22ರ ಅನ್ವಯ ಸರ್ಕಾರಿ ಸೇವೆ ಸಲ್ಲಿಸುವವರು ಪ್ರತಿ ವರ್ಷ ಜೂನ್‌ ತಿಂಗಳ ಒಳಗೆ ತಮ್ಮ ಆಸ್ತಿ ವಿವರವನ್ನು ಸಲ್ಲಿಕೆ ಮಾಡಬೇಕು. ಮಾಡದೆ ಇದ್ದಲ್ಲಿ, ಲೋಕಾಯುಕ್ತ ಸಂಸ್ಥೆ ಅಂತಹ ಸದಸ್ಯರಿಗೆ ನೋಟಿಸ್‌ ನೀಡಿ, 60 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಬಹುದು.

ವರದಿ ನೀಡದೆ ಇರುವ ಸದಸ್ಯರ ಮೇಲೆ ಕ್ರಮತೆಗೆದುಕೊಳ್ಳವುದಕ್ಕೂ ಅವಕಾಶವಿದೆ. ಇಲ್ಲಿಯವರೆಗೆ ಎಲ್ಲ ಪಾಲಿಕೆ ಸದಸ್ಯರು ನಿಯಮ ಉಲ್ಲಂ ಸಿದ್ದಾರೆ. ಹೀಗಾಗಿ, ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ’ ಎಂದು ವಿವರಿಸಿದರು. “ಇದರ ಬಗ್ಗೆ ಚರ್ಚೆ ಮಾಡಿ 6 ವಾರದಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಜೂನ್‌.4 ರಂದು ಪಾಲಿಕೆಗೆ ಆದೇಶ ನೀಡಿದ್ದಾರೆ. ಇದರ ಬಗ್ಗೆ ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡ ಅವರಿಗೆ ಪತ್ರ ಬರೆಯಲಾಗಿತ್ತು.

ಪಾಲಿಕೆ ಸದಸ್ಯರೂ ಸರ್ಕಾರಿ ಸೇವೆಯಡಿ ಸೇವೆ ಸಲ್ಲಿಸುವವರಾಗಿರುವುದರಿಂದ ಕೆಎಂಸಿ ಕಾಯ್ದೆಯಡಿ ಮತ್ತು ಲೋಕಾಯುಕ್ತ ಎರಡಕ್ಕೂ ವರದಿ ಸಲ್ಲಿಸಬೇಕು ಎಂದು ಅವರು ಕಾನೂನು ಸಲಹೆ ನೀಡಿದ್ದಾರೆ. ಪಾಲಿಕೆ ಸದಸ್ಯರ ಅಭಿಪ್ರಾಯ ತಿಳಿದುಕೊಂಡು ವರದಿ ನೀಡಲು ಕಾಲಾವಕಾಶವಿದೆ’ಎಂದು ಹೇಳಿದರು. ಈ ಬಗ್ಗೆ ಹಿರಿಯ ಪಾಲಿಕೆ ಸದಸ್ಯರೊಂದಿಗೆ ಚರ್ಚೆ ಮಾಡಿ, ಮುಂದಿನ ಕಾನೂನು ಹೋರಾಟದ ಬಗ್ಗೆ ಚಿಂತಿಸುವ ಬಗ್ಗೆ ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next