Advertisement

ಪಕ್ಷಾಂತರವಿಲ್ಲದ ಪತ್ರಿಕೋದ್ಯಮ ರಾಜಕಾರಣಿಗಳಿಗೆ ಮಾದರಿ:ಸಂಸದ ನಳಿನ್‌

04:33 PM Mar 16, 2017 | |

ಮುಂಬಯಿ: ಪತ್ರಕರ್ತ ವ್ಯಕ್ತಿ ನಿರ್ಮಾಣದ ಶಕ್ತಿಯಾಗಿದ್ದು ಬಲಿಷ್ಠ ಸಮಾಜ ನಿರ್ಮಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಇಂಟರ್‌ನೆಟ್‌ಗಳಂತಹ ಪ್ರಸಕ್ತ ಯುಗದಲ್ಲಿ ಮಾಧ್ಯಮರಂಗ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವ ಕಾರಣ ಆಧುನಿಕ ಯುಗದಲ್ಲಿ ಮಾಧ್ಯಮ ರಂಗವನ್ನು  ಉಳಿಸಿ ಬೆಳೆಸುವುದು ಕಷ್ಟದ ಕೆಲಸವಾಗಿದೆ ಎಂದು ಕರ್ನಾಟಕ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ನುಡಿದರು.

Advertisement

ಬಂಟರ ಭವನದ ಸಭಾಗೃಹದಲ್ಲಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಿತಿ ಮತ್ತು ಕನ್ನಡ ವಿಭಾಗ ಮುಂಬಯಿ ವಿವಿಯ ಜಂಟಿ ಆಯೋಜನೆಯಲ್ಲಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಹಾಗೂ ಪಾಲೆತ್ತಾಡಿ ಅಭಿನಂದನಾ ಸಮಿತಿ ಮುಂಬಯಿ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ, ಹಿರಿಯ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಅವರ ಅಭಿನಂದನ ಸಮಾರಂಭದಲ್ಲಿ ಪಾಲೆತ್ತಾಡಿ ಅವರ ಆತ್ಮಕಥನ “ನಾನು… ನನ್ನ ಸ್ವಗತ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಡ ಪಂಥೀಯ ಚಿಂತನೆಯೊಂದಿಗೆ ಬಲ ಪಂಥೀಯ ವೈಚಾರಿಕತೆಯನ್ನು  ಮೈಗೂಡಿಸಿಕೊಂಡು  ಶಿಸ್ತು ಸಿದ್ಧಾಂತಗಳಿಗೆ ಬದ್ಧನಾಗಿ ಮುಂಬಯಿ ಪತ್ರಿಕಾರಂಗದಲ್ಲಿ ಅವಿರತವಾಗಿ ದುಡಿದಿರುವ ಹಿರಿಯ ಪತ್ರಕರ್ತ ಚಂದ್ರಶೇಖರ್‌ ಪಾಲೆತ್ತಾಡಿ ಅವರಿಗೆ ಈ ಅಭಿನಂದನೆ ಅರ್ಥಪೂರ್ಣವಾಗಿದೆ. ಪಾಲೆತ್ತಾಡಿ ಅವರ ದೀರ್ಘಾವಧಿಯ ಪûಾಂತರವಿಲ್ಲದ ಪತ್ರಿಕೋದ್ಯಮ ರಾಜಕಾರಣಿಗಳಿಗೆ ಮಾದರಿ. ಕರ್ನಾಟಕದಲ್ಲಿ ಮುಂದಿನ ಬಾರಿ ಬಿಜೆಪಿ ಅಧಿಕಾರ ಪಡೆಯಲಿದ್ದು,  ಪಾಲೆತ್ತಾಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸು ಮಾಡುತ್ತೇನೆ. ಇದೊಂದು ಯುವ ಪತ್ರಕರ್ತರನ್ನು ಪ್ರೇರೇಪಿಸುವ ಅಭಿನಂದನ ಸಮಾರಂಭವಾಗಿದೆ ಎಂದರು.

ಮಾಧ್ಯಮ ಜೀವನ ಸುಲಭವಲ್ಲ
ಅತಿಥಿಯಾಗಿ ಪಾಲ್ಗೊಂಡ ಬೊರಿವಲಿ ಸಂಸದ ಗೋಪಾಲ್‌ ಶೆಟ್ಟಿ ಅವರು ಮಾತನಾಡಿ, ಶಿಸ್ತು, ನೀತಿ, ಶ್ರದ್ಧೆಯೊಂದಿಗೆ ಪತ್ರಿಕಾರಂಗದಲ್ಲಿ 25 ರ ಸುದೀರ್ಘ‌ ಅವಧಿ ಪೂರೈಸಿದ ಚಂದ್ರಶೇಖರರನ್ನು ಇಷ್ಟೊಂದು ಜನ ಸೇರಿ ಸಮ್ಮಾನಿಸುತ್ತಿರುವುದು ಸಂತೋಷದ ಸಂಗತಿ. ಇಂದು ಮಾಧ್ಯಮ ಜೀವನ ಸುಲಭವಲ್ಲ. ಆದರೆ ಶಿಸ್ತುಬದ್ಧ ಬದುಕಿನಿಂದ ಇದು ಪಾಲೆತ್ತಾಡಿ ಅವರಿಗೆ ಒದಗಿದೆ. ತುಳು ಕನ್ನಡಿಗರು ಶಿಸ್ತುವುಳ್ಳವರಾಗಿದ್ದು ಇದರ ಫಲವೇ ಮರಾಠಿ ಭೂಮಿಯಲ್ಲಿ ಕನ್ನಡದ ಬೆಳವಣಿಗೆ ಮತ್ತು ಈ ಸಮಾರಂಭವಾಗಿದೆ ಎಂದು ನುಡಿದು ಪಾಲೆತ್ತಾಡಿ ಅವರನ್ನು ಅಭಿನಂದಿಸಿದರು.

ಮೈಸೂರು ಕೆ. ಆರ್‌. ಪೇಟೆ ಶಾಸಕ ನಾರಾಯಣ ಗೌಡ  ಮಾತನಾಡಿ, ಈಗಲಾದರೂ ಪಾಲೆತ್ತಾಡಿ ಅವರನ್ನು ಗೌರವಿಸಿದ್ದು ಅಭಿಮಾನವೆನಿಸುತ್ತಿದೆ. ನನ್ನ ಶಾಸಕತ್ವದ ಹಿರಿಮೆ ಇಲ್ಲಿನ ಕನ್ನಡ ಪತ್ರಿಕೆಗಳಿಗೆ ಸಲ್ಲುತ್ತದೆ. ಶ್ರೀ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದ ಶ್ರೀಗಳೂ ತಮ್ಮ ಅನುಗ್ರಹಗಳನ್ನು ಪಾಲೆತ್ತಾಡಿ ಅವರಿಗೆ ತಿಳಿಸಿ ಪ್ರಸಾದವನ್ನಿತ್ತು ಶುಭಹಾರೈಸಿದ್ದಾರೆ ಎಂದರು.

ಪಾಲೆತ್ತಾಡಿ ಅವರನ್ನು ಪತ್ನಿ ಕುಸುಮಾ ಪಾಲೆತ್ತಾಡಿ ಹಾಗೂ ಮಕ್ಕಳೊಂದಿಗೆ  ಶಾಲು ಹೊದೆಸಿ, ಮೈಸೂರು ಪೇಟತೊಡಿಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ ಹಾಗೂ ಹಮ್ಮಿಣಿಯನ್ನಿತ್ತು ಸಮ್ಮಾನಿಸಿ ಶುಭಹಾರೈಸಿದರು. ಪತ್ರಿಕೋದ್ಯಮಿ ಮುರಳೀಧರ ಶಿಂಗೋಟೆ ಅವರ ಪರವಾಗಿ ಪುತ್ರ ಪ್ರವೀಣ್‌ ಶಿಂಗೋಟೆ ಅವರನ್ನು ಸಮ್ಮಾನಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟ್ಸ್‌ ನ್ಯಾಯ ಮಂಡಳಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಮಾತನಾಡಿ ಶುಭಹಾರೈಸಿದರು.

Advertisement

ಗೌರವಾನ್ವಿತ ಅತಿಥಿಯಾಗಿ ಎಂ. ಡಿ. ಶೆಟ್ಟಿ, ಉದ್ಯಮಿಗಳಾದ ಕೃಷ್ಣ ವೈ. ಶೆಟ್ಟಿ, ರಘುರಾಮ ಕೆ. ಶೆಟ್ಟಿ, ಸತೀಶ್‌ ರಾಮ ನಾಯಕ್‌, ಡಾ| ಸುರೇಂದ್ರ ವಿ. ಶೆಟ್ಟಿ, ರಾಘು ಪಿ. ಶೆಟ್ಟಿ, ಸುಧಾಕರ ಎಸ್‌. ಹೆಗ್ಡೆ, ಸುರೇಶ್‌ ಆರ್‌. ಕಾಂಚನ್‌, ಎನ್‌. ಟಿ. ಪೂಜಾರಿ, ಗೋಪಾಲ್‌ ಎಸ್‌. ಪುತ್ರನ್‌, ಜಯರಾಮ ಎನ್‌. ಶೆಟ್ಟಿ, ಸಿಎ| ಶಂಕರ ಬಿ. ಶೆಟ್ಟಿ, ಆದರ್ಶ್‌ ಬಿ. ಶೆಟ್ಟಿ, ಡಾ| ಶಿವ ಮೂಡಿಗೆರೆ, ಸಮಾಜ ಸೇವಕರುಗಳಾದ ಪ್ರಕಾಶ್‌ ಬಿ. ಭಂಡಾರಿ, ರವಿ ಎಸ್‌. ದೇವಾಡಿಗ, ಉದಯ ಶೆಟ್ಟಿ ಕಾಂತಾವರ  ಶುಭಹಾರೈಸಿದರು.

ಗಣ್ಯರು ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಭವಾನಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ‌ ದಡªಂಗಡಿ ಚೆಲ್ಲಡ್ಕ ಕುಸುಮೋದ‌ರ ಡಿ. ಶೆಟ್ಟಿ ಅವರು ಪಾಲೆತ್ತಾಡಿ ಅವರ ಅಭಿನಂದನ ಗ್ರಂಥ “ಆಪ್ತಮಿತ್ರ’ ಬಿಡುಗಡೆಗೊಳಿಸಿದರು.  ಕಾರ್ಯಕ್ರಮದ ರೂವಾರಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ, ಡಾ| ಜಿ. ಎನ್‌. ಉಪಾಧ್ಯ ಅಭಿನಂದನಾ ನುಡಿಗಳನ್ನಾಡಿದರು. ಪದ್ಮನಾಭ ಸಸಿಹಿತ್ಲು ಶೀರ್ಷಿಕೆ ಗೀತೆಯನ್ನು ಹಾಡಿದರು. ಚಂದ್ರಿಕಾ ಐಕಳ ಹರೀಶ್‌ ಶೆಟ್ಟಿ ಪಾಲೆತ್ತಾಡಿ ದಂಪತಿಗೆ ಕುಂಕುಮ ಅರಸಿನವನ್ನಿಟ್ಟು ಆರತಿಗೈದರು. ಆಪ್ತಮಿತ್ರದ ಸಂಪಾದಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಗ್ರಂಥ ಪರಿಚಯಿಸಿದರು. ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಉಪನ್ಯಾಸ ನೀಡಿದರು. ಬಾಬು ಕೆ. ಬೆಳ್ಚಡ ಮತ್ತು ತಂಡ ರಚಿಸಿದ ಪಾಲೆತ್ತಾಡಿ ಅವರ ಸಾಕ್ಷ Â ಚಿತ್ರ  ಪ್ರದರ್ಶನಗೊಂಡಿತು. ಅಭಿನಂದನ ಸಮಿತಿಯ ಸಂಚಾಲಕ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಕಾರ್ಯದರ್ಶಿ ಪೇತ್ರಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಸುರೇಶ್‌ ಶೆಟ್ಟಿ ಯೆಯ್ನಾಡಿ, ಜೊತೆ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ರೀಧರ ಉಚ್ಚಿಲ್‌, ಸಾಂಸ್ಕೃತಿಕ ಸಮಿತಿಯ  ಸಂಚಾಲಕರುಗಳಾದ ಸುರೇಂದ್ರ ಕುಮಾರ್‌ ಹೆಗ್ಡೆ, ರವೀಂದ್ರನಾಥ ಎಂ. ಭಂಡಾರಿ ಉಪಸ್ಥಿತರಿದ್ದರು. ಮಹಾನಗರದಲ್ಲಿನ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ತುಳು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು ಪಾಲೆತ್ತಾಡಿ ಅವರನ್ನು ಅಭಿನಂದಿಸಿದರು.

ಅಭಿನಂದನ ಸಮಿತಿ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಸ್ವಾಗತಿಸಿದರು. ಸುರೇಶ್‌ ಶೆಟ್ಟಿ ಶಿಬರೂರು ಪ್ರಾರ್ಥನೆ ಹಾಡಿದರು. ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳಿಗೆ ನೃತ್ಯ ಸ್ಪರ್ಧೆ ನಡೆಯಿತು. ಗಣೇಶ್‌ ಎರ್ಮಾಳ್‌, ಪದ್ಮನಾಭ ಸಸಿಹಿತ್ಲು ತಂಡದಿಂದ  ಗಾನವೈಭವ ನಡೆಯಿತು. 

ಕರ್ನಾಟಕದ 20 ಲಕ್ಷ ಜನತೆ ಮಹಾರಾಷ್ಟ್ರ ದಲ್ಲಿದ್ದಾರೆ. ಇವರಲ್ಲಿ ಬಹುತೇಕರು ಸಾಧಕರೇ ಸರಿ. ತುಳುನಾಡ ಮಣ್ಣಿನ ಶಕ್ತಿ ಮತ್ತು ಹಿರಿಯರ ಮಾರ್ಗದರ್ಶನ ನಮ್ಮವರ ಸಾಧನೆಗೆ ಚೈತನ್ಯವಾಗಿದೆ. ಮಹಾರಾಷ್ಟ್ರದಲ್ಲಿನ ಎಲ್ಲಾ ಸಂಘ ಸಂಸ್ಥೆಗಳ ಬೆಳವಣಿಗೆಗೆ ಇಲ್ಲಿನ ಕನ್ನಡ ಪತ್ರಿಕೆಗಳು ಶಕ್ತಿ ತುಂಬಿದ್ದು ನಮ್ಮೆಲ್ಲರ ವ್ಯಕ್ತಿತ್ವದ ಸಂಬಂಧವೇ ಇದಕ್ಕೆ ಕಾರಣವಾಗಿದೆ. ಸುಖಕಷ್ಟಕ್ಕೆ ಒಟ್ಟಾಗುವ ತುಳು-ಕನ್ನಡಿಗ ಜನತೆ ಮುಂಬಯಿಗರು. ಇವರೆಲ್ಲರಿಂದಲೂ ಇಲ್ಲಿನ ಹಿರಿಯ ಪತ್ರಕರ್ತ, ಸದ್ಗುಣ ಮತ್ತು ಸಾಧಕ ಪಾಲೆತ್ತಾಡಿ ಅವರಿಗೆ ಒಳ್ಳೆಯ ಗೌರವಾರ್ಪಣೆ ನಮ್ಮ ಆಶಯವಾಗಿತ್ತು. ಇದು ಇಂದು ಜನಸ್ತೋಮವಾಗಿ ಈಡೇರಿದೆ 
– ಐಕಳ ಹರೀಶ್‌ ಶೆಟ್ಟಿ (ಅಧ್ಯಕ್ಷರು : ಪಾಲೆತ್ತಾಡಿ ಅಭಿನಂದನ ಸಮಿತಿ).

ನಾನು ಬಿಡುಗಡೆಗೊಳಿಸಿದ ಪಾಲೆತ್ತಾಡಿ ಅವರ ಅಭಿನಂದನಾ ಗ್ರಂಥ “ಆಪ್ತಮಿತ್ರ’ ನಿಜವಾದ ಆಪ್ತಮಿತ್ರವಾಗಿದೆ. ಇದ್ದುದ್ದನ್ನು ಇದ್ದ ಹಾಗೇ ಹೇಳುವ, ಇಲ್ಲದ್ದನ್ನು ವೈಭವೀಕರಿಸದ ಪತ್ರಕರ್ತ ಪಾಲೆತ್ತಾಡಿ ಅವರಾಗಿದ್ದಾರೆ. ಅವರಿಂದ ಇನ್ನಷ್ಟು ನಾಡು-ನುಡಿಗಳ ಸೇವೆ ನಡೆಯುವಂತಾಗಲಿ
 – ಕೆ. ಡಿ. ಶೆಟ್ಟಿ (ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕರು : ಭವಾನಿ ಶಿಪ್ಪಿಂಗ್‌ ಕಂಪೆನಿ).

ಪಾಲೆತ್ತಾಡಿ ಅವರ ಮುಂಬಯಿ ಪತ್ರಿಕಾ ಕ್ಷೇತ್ರದ ಬೆಳ್ಳಿ ಬೆಳಕಿನ ಆರಾಧನೆಗೆ ಅಭಿವಂದನೆಗಳು. ಅವರ ಪತ್ರಿಕೋದ್ಯಮದ ಭಗೀರಥ ಪ್ರಯತ್ನ ಸ್ತುತ್ಯರ್ಹ.  ಅವರಿಗೆ ಸ್ವರ್ಣ ಮಹೋತ್ಸವದ ಭಾಗ್ಯ ಪ್ರಾಪ್ತಿಯಾಗಲಿ 
– ಪ್ರಭಾಕರ ಶೆಟ್ಟಿ (ಅಧ್ಯಕ್ಷರು : ಬಂಟರ ಸಂಘ ಮುಂಬಯಿ).

ಬದುಕಿನಲ್ಲಿ ಗಾಂಭೀರ್ಯತೆ ಮತ್ತು ಇತಿಮಿತಿಗಳು ಅತ್ಯವಶ್ಯ. ಇವುಗಳನ್ನು ಉಳಿಸಿಕೊಂಡು ಬಾಳಿದಾಗ ಜೀವನ ಹಸನಾಗುವುದು. ನಾವು ನಮ್ಮ  ಇತಿಮಿತಿಗಳನ್ನು ಮೀರದೆ ಸಿದ್ಧಾಂತಕ್ಕೆ ಬದ್ಧವಾಗಿ ಬಾಳಿದರೆ ಎಲ್ಲವೂ ಸಿದ್ಧಿಗೊಳ್ಳುವುದು. ಮರಾಠಿ ನೆಲದಲ್ಲಿ  ಕನ್ನಡದ ಸಾಮರಸ್ಯತ್ವ ಬೆಳೆಸಲು ಇಲ್ಲಿನ ಕನ್ನಡ ಪತ್ರಿಕೆಗಳು  ಸಾಕ್ಷಿಯಾಗಿವೆೆ 
– ಡಾ|  ಸುನೀತಾ ಎಂ. ಶೆಟ್ಟಿ ( ಸಾಹಿತಿ).

ಮುಂಬಯಿಯಲ್ಲಿ ಕನ್ನಡದ ಕಹಳೆ ಮೊಳ‌ಗಿಸಿದ ಶ್ರೇಷ್ಠ ಪತ್ರಕರ್ತ ಪಾಲೆತ್ತಾಡಿ. ಅವರಿಂದ ಹಲವಾರು ಯುವ ಲೇಖಕರು ನಗರದಲ್ಲಿ ಹುಟ್ಟಿ ಬೆಳೆದಿದ್ದಾರೆ. ಶ್ರಮ ಸಂಸ್ಕೃತಿಯ ಸದ್ಗುಣವುಳ್ಳ ಅವರ ಇಂದಿನ ಅಭಿನಂದನ ಸಮಾರಂಭ ಅರ್ಥಪೂರ್ಣವಾಗಿದೆ 
– ಡಾ| ಜಿ. ಎನ್‌. ಉಪಾಧ್ಯ (ಮುಖ್ಯಸ್ಥರು : ಕನ್ನಡ ವಿಭಾಗ ಮುಂಬಯಿ ವಿವಿ).

ನಾನು ನನ್ನ ಕರ್ತವ್ಯವನ್ನು ಮಾತ್ರ ಪೂರೈಸಿರುವೆ. ಪತ್ರಿಕೆಯ  ಹುಚ್ಚು ನನ್ನನ್ನು ಇಲ್ಲಿಗೆ ಕರೆತಂದದ್ದು. ನಿಷ್ಠುರತೆಯೇ ನನ್ನತನವಾಗಿದ್ದು ಇದೇ ನನ್ನ ಈ ಸಂಭ್ರಮಕ್ಕೆ ಕಾರಣವಾಗಿದೆ.  ಕಳೆದ 25 ವರ್ಷಗಳಲ್ಲಿನ ನೋವು-ನಲಿವುಗಳನ್ನು ನಾನು ದಿಟ್ಟತನದಿಂದಲೇ ಎದುರಿಸಿದ್ದೇನೆ. ಆ ಮೂಲಕ ಸಂತೋಷ ಪಟ್ಟಿದ್ದೇನೆ. ಈ ಗೌರವವನ್ನು ಮುಂಬಯಿ ಕನ್ನಡಿಗರಿಗೆ ಸಲ್ಲಿಸುತ್ತಿದ್ದೇನೆ 
-ಚಂದ್ರಶೇಖರ ಪಾಲೆತ್ತಾಡಿ (ಸಮ್ಮಾನಿತರು).

Advertisement

Udayavani is now on Telegram. Click here to join our channel and stay updated with the latest news.

Next