Advertisement

ಒಳಿತು ಮಾಡೋ “ಅಮೃತ’

03:38 PM Nov 10, 2018 | Team Udayavani |

 ಇವರ ವೃತ್ತಿಯಲ್ಲೇ ಸಾಹಸವಿದೆ, ಅಡೆತಡೆಗಳಿವೆ, ಮುಖ್ಯವಾಗಿ ರಿಸ್ಕ್ ಇದೆ. ಮೇಯೋ ಹಾಲ್‌ ಮುಂದುಗಡೆ ಇರೋ “ಕಮ್ಯಾಂಡೋ ಫೋರ್ಸ್‌ - ಗರುಡಾ’ ಕಚೇರಿಯಲ್ಲಿ ಇವರ ಕೆಲಸ. ಕಚೇರಿ ಯೂನಿಫಾರ್ಮ್ ಕಳಚಿಟ್ಟ ತಕ್ಷಣ ತಮ್ಮ ಡ್ನೂಟಿ ಮುಗಿಯಿತೆನ್ನುವವರ ನಡುವೆ ಈ ವ್ಯಕ್ತಿ ವಿಶೇಷವಾಗಿ ಕಾಣುತ್ತಾರೆ. ಏಕೆಂದರೆ, ಯುನಿಫಾರ್ಮ್ ತೊಟ್ಟಿದ್ದಾಗ ಮಾಡಿದ್ದಕ್ಕಿಂತ ಹೆಚ್ಚಿನ ಕೆಲಸವನ್ನು ಸಿವಿಲ್‌ ಡ್ರೆಸ್‌ನಲ್ಲಿ, ಅಮೃತಬಿಂದು ಎನ್‌.ಜಿ.ಓ. ಜೊತೆ ಸೇರಿಕೊಂಡು ಮಾಡಿದ್ದಾರೆ ಎನ್ನುವುದು ಅವರ ಹೆಗ್ಗಳಿಕೆ. ಆ ಮೂಲಕ, ದೇಶ ಕಾಯಲು ಮಿಲಿಟರಿ ಯುನಿಪಾರ್ಮೇ ತೊಡಬೇಕಿಲ್ಲ ಎನ್ನುವುದನ್ನು ಸೂಚ್ಯವಾಗಿ ಸಾರುತ್ತಿದ್ದಾರೆ… 

Advertisement

ಆಫೀಸು, ಕೆಲಸ, ಮನೆ ಜವಾಬ್ದಾರಿ, ಮಕ್ಕಳ ವಿದ್ಯಾಭ್ಯಾಸ ಇವೆಲ್ಲಾ ನಮ್ಮನ್ನು ಲೈಫ‌ಲ್ಲಿ ಬಿಝಿಯಾಗಿಡುವ ಸಾಧನಗಳು. ದಿನನಿತ್ಯದ ವ್ಯವಹಾರಗಳ ನಡುವೆ ತಮ್ಮ ತಮ್ಮ ಆಸಕ್ತಿಯನ್ನು, ಹವ್ಯಾಸಗಳನ್ನು ಕಾಪಾಡಿಕೊಳ್ಳುವವರು ಕೆಲವರಾದರೆ, ಅದರಲ್ಲೇ ಜೀವನದ ಸಾರ್ಥಕ್ಯವನ್ನು ಕಂಡುಕೊಳ್ಳುವವರು ಕೆಲವರು. ಜೀವನದಲ್ಲಿ ರೋಚಕವಾದುದೇನೂ ನಡೆಯುತ್ತಿಲ್ಲವೆಂದು ಸಾಹಸ ಪ್ರದರ್ಶನಕ್ಕೆ, ಚಾರಣಕ್ಕೆ ತೆರಳುವವರೂ ಇದ್ದಾರೆ. ಇದಕ್ಕೆ ಪೂರ್ತಿ ವೈರುಧ್ಯ ಮನೋಭಾವ ಹೊಂದಿದ ವ್ಯಕ್ತಿ ಇಲ್ಲಿದ್ದಾರೆ. ಅವರ ವೃತ್ತಿಯಲ್ಲೇ ಸಾಹಸವಿದೆ, ಅಡೆತಡೆಗಳಿವೆ, ಮುಖ್ಯವಾಗಿ ರಿಸ್ಕ್ ಇದೆ. ಮೇಯೋ ಹಾಲ್‌ ಮುಂದುಗಡೆ ಇರೋ “ಕಮ್ಯಾಂಡೋ ಫೋರ್ಸ್‌ - ಗರುಡಾ’ ಕಚೇರಿಯಲ್ಲಿ ಇವರ ಕೆಲಸ. ಹೆಸರು ಭಾಸ್ಕರ್‌. ಊರು ಕನಕಪುರ. 

ಚೂರುಪಾರುಗಳಿಂದ ಹೊಸ ಬಟ್ಟೆ
ಚಿಕ್ಕಂದಿನಿಂದಲೂ ಇತರರಿಗೆ ಸಹಾಯ ಮಾಡುವುದೆಂದರೆ ಭಾಸ್ಕರ್‌ ಅವರಿಗೆ ಅದೇನೋ ಖುಷಿ. ತನಗಿಲ್ಲದೇ ಹೋದರೂ ನೆರವು ಕೋರಿದವರಿಗೆ ಸಹಾಯ ಮಾಡುವ ಗುಣ. ಈ ಕಾರಣಕ್ಕೆ ಅಮ್ಮನಿಂದ ಬೈಸಿಕೊಂಡಿದ್ದೂ ಇದೆ. ಆದರೆ ಈ ಗುಣ ಕಲಿತಿದ್ದು ಅಮ್ಮನಿಂದಲೇ ಅನ್ನೋದು ಆಶ್ಚರ್ಯ. ಟೈಲರ್‌ ಆಗಿದ್ದ ಅಮ್ಮ, ಅನುಕೂಲಸ್ಥ ಮನೆಗಳವರು ಹೊಲಿಸುತ್ತಿದ್ದ ಬಟ್ಟೆಗಳಿಂದ ಉಳಿದ ಚೂರು ಪಾರುಗಳಿಂದ ಒಂದೊಳ್ಳೆಯ ಬಟ್ಟೆ ಹೊಲಿಯುತ್ತಿದ್ದಳು. ಬಟ್ಟೆ ಕೊಳ್ಳಲು ದುಡ್ಡಿಲ್ಲದೆ ಮುಚ್ಚಿಕೊಳ್ಳಲಾಗದೆ ಇದ್ದ ನಿರ್ಗತಿಕರಿಗೆ ಆ ಬಟ್ಟೆಯನ್ನು ನೀಡುತ್ತಿದ್ದರಂತೆ. “ನನ್ನ ಅತಿಯಾದ ಸಹಾಯ ಗುಣ ಕಂಡು ಮೇಲೆ ಸಿಟ್ಟು ತೋರಿದರೂ ಒಳಗೆ ಹೆಮ್ಮೆ ಪಡುವ ಜೀವ ಅದು. ನನಗೆ ಅಮ್ಮನೇ ಸ್ಫೂರ್ತಿ’ ಎನ್ನುತ್ತಾರೆ ಭಾಸ್ಕರ್‌. 

ಓದು ಬಿಟ್ಟಿದ್ದಾತ ಕಮ್ಯಾಂಡೋ ಆಗಿದ್ದು…
ಎಸ್ಸೆಸ್ಸೆಲ್ಸಿಗೇ ಓದು ನಿಲ್ಲಿಸಿದ್ದ ವ್ಯಕ್ತಿ ಕಮ್ಯಾಂಡೋ ಆಗಿದ್ದರ ಹಿಂದೊಂದು ಕುತೂಹಲಕರ ಕತೆ ಇದೆ. ಎಸ್ಸೆಸ್ಸೆಲ್ಸಿ ಮುಗಿಸಿದ ನಂತರ ಓದಿ ಏನು ಮಾಡಬೇಕಿದೆ ಎಂಬ ಉದಾಸೀನತೆಯೋ ಏನೋ, ಭಾಸ್ಕರ್‌ ಓದಿನಲ್ಲಿ ಆಸಕ್ತಿ ಕಳೆದುಕೊಂಡು ಬಿಟ್ಟಿದ್ದರು. ಆ ಸಮಯದಲ್ಲಿ ಅವರ ಪರಿಚಯದ ಹುಡುಗನೊಬ್ಬ ವಿದ್ಯಾಭ್ಯಾಸ ಪೂರ್ತಿಗೊಳಿಸಲು ಸಹಾಯ ಮಾಡಿ ಎಂದು ಸಹಾಯ ಕೇಳಿ ಬಂದಿದ್ದ. ತಾನು ಓದದೇ ಇದ್ದರೂ ತನ್ನ ಕೈಲಾದಷ್ಟು ನೆರವನ್ನು ಭಾಸ್ಕರ್‌ ಮಾಡಿದರು. ಬರೀ ಆರ್ಥಿಕವಾಗಿ ಮಾತ್ರವಲ್ಲ, ಎಲ್ಲಾ ರೀತಿಯಲ್ಲಿ ಆತನ ಕಷ್ಟಗಳಿಗೆ ನೆರವಾದರು. ಆ ವ್ಯಕ್ತಿ ಮುಂದೆ ವಿದ್ಯಾಭ್ಯಾಸ ಪೂರ್ತಿಗೊಳಿಸಿ ದೊಡ್ಡ ಹುದ್ದೆಗೇರಿದರು. ಆಗಲೂ ಭಾಸ್ಕರ್‌ ಅವರೊಂದಿಗೆ ಸಂಪರ್ಕದಲ್ಲಿದ್ದರು. ಪ್ರತಿಯಾಗಿ ಆ ವ್ಯಕ್ತಿ ಮಾಡಿದ್ದೇನು? ಸನ್ಮಾನ ಸಮಾರಂಭವೊಂದರಲ್ಲಿ ಭಾಸ್ಕರ್‌ ಅವರನ್ನೇ ಓದು ಬಾರದ ಅನಕ್ಷರಸ್ಥ ಎಂದಿದ್ದರು. ಅದನ್ನೇ ಸವಾಲಾಗಿ ಸ್ವೀಕರಿಸಿದ ಭಾಸ್ಕರ್‌ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪಾಸು ಮಾಡಿಯೇಬಿಟ್ಟರು. ನೋಡನೋಡುತ್ತಿರುವಂತೆಯೇ ಆಯ್ಕೆ ಪರೀಕ್ಷೆಯನ್ನೂ ಪಾಸು ಮಾಡಿ ಕಮ್ಯಾಂಡೋ ಕೂಡಾ ಆಗಿ ಬಿಟ್ಟರು.

Advertisement

ಅಮೃತಬಿಂದು ಎಂಬ ನೆರವಿನ ಸಾಗರ
ಸಾಮಾನ್ಯವಾಗಿ ಎನ್‌.ಜಿ.ಓ.ಗಳು ನಿರ್ದಿಷ್ಟ ಕಾರ್ಯವ್ಯಾಪ್ತಿಯೊಳಗೆ ಕಾರ್ಯ ನಿರ್ವಹಿಸುತ್ತಿರುತ್ತವೆ. ಆದರೆ ಅಂಥಾ ಯಾವ ರೀತಿಯ ಬೌಂಡರಿ ಹಾಕಿಕೊಳ್ಳದೆ ಅಂಗವಿಕಲರೇ ಆಗಲಿ, ನಿರ್ಗತಿಕರೇ ಆಗಲಿ, ಆರ್ಥಿಕ ಮುಗ್ಗಟ್ಟಿನಿಂದ ವಿದ್ಯಾಭ್ಯಾಸ ಮುಂದುರಿಸಲಾಗದವರೇ ಆಗಲಿ, ರಕ್ತದಾನವಾಗಲಿ, ನೆರವು ಕೋರಿ ಬಂದವರೆಲ್ಲರಿಗೂ ಸಹಾಯ ಹಸ್ತ ಚಾಚುವ ಎನ್‌.ಜಿ.ಓ “ಅಮೃತಬಿಂದು’. ಹೆಸರಿಗೆ ಮಾತ್ರವಲ್ಲ, ನಿಜಕ್ಕೂ ಇದು ಅಮೃತಬಿಂದುವೇ. 35,000 ಫೇಸ್‌ಬುಕ್‌ ಚಂದಾದಾರರನ್ನು ಹೊಂದಿರುವ ಈ ಸಂಘದಲ್ಲಿ 2,500 ಅಧಿಕ ಸಕ್ರಿಯ ಸದಸ್ಯರಿದ್ದಾರೆ. ನೆರವಿನ ಕೋರಿಕೆ ಬಂದಾಗ ಅದರ ಸತ್ಯಾಸತ್ಯತೆಯನ್ನು ಪರೀಶೀಲಿಸಿ ನಂತರ ಗ್ರೂಪಿನಲ್ಲಿ ಸಂದೇಶವನ್ನು ಮುಟ್ಟಿಸಲಾಗುತ್ತದೆ. ತ್ವರಿತಗತಿಯಲ್ಲಿ ನೆರವು ಒಟ್ಟಾಗುತ್ತದೆ.

ಓದಿಸುತ್ತಾರೆ, ಬರೆಸುತ್ತಾರೆ…
ಸರ್ಕಾರಿ ಶಾಲೆಗಳಿಗೂ ಅಗತ್ಯ ನೆರವನ್ನು ನೀಡುತ್ತಿರುವ ಅಮೃತಬಿಂದು ಸದ್ಯ 2  ಶಾಲೆಗಳನ್ನು ದತ್ತು ಪಡೆದಿದೆ. ಮುಂದೆ 10 ಶಾಲೆಗಳನ್ನು ದತ್ತು ಪಡೆಯುವ ಇರಾದೆಯನ್ನು ಹೊಂದಿದೆ. ಓದಲಾಗದ ಮಕ್ಕಳ ವಿದ್ಯಾಭ್ಯಾಸ, ವಸತಿ, ಊಟ ನೋಡಿಕೊಳ್ಳಲು ಕೇಂದ್ರವನ್ನೂ ತೆರೆದಿದೆ. ಅಲ್ಲಿ ಸದ್ಯ 6 ಮಂದಿ ಶಿಕ್ಷಣ ಪಡೆಯುತ್ತಿದ್ದಾರೆ. ತಂಡದ ಪ್ರತಿಯೊಬ್ಬರೂ ಪ್ರತಿಫ‌ಲಾಪೇಕ್ಷೆಯಿಲ್ಲದೆ ನೆರವಿನ ಹಸ್ತ ಚಾಚುತ್ತಾರೆ. ಈ ಕಾರಣಕ್ಕೇ ಭಾಸ್ಕರ್‌ ಹೇಳುವುದು ನಿಜ ಅನ್ನಿಸುತ್ತದೆ. ‘ನಾನು ಒಂದು ಬಿಂದುವಷ್ಟೇ, ನನ್ನಂಥ ನೂರಾರು ಮಂದಿ ಗ್ರೂಪಿನಲ್ಲಿದ್ದಾರೆ. ಈ ಕಾರಣಕ್ಕೇ ಎಲ್ಲಾ ಸುತ್ತಿ ಬಂದು ಈ ತಂಡದಲ್ಲಿ ಉಳಿದುಕೊಂಡಿರೋದು’ ಎನ್ನುತ್ತಾರವರು. 

ಅಗ್ನಿ ಪರೀಕ್ಷೆ
ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಅಂಗವಿಕಲರು ಹಲವು ಸಮಸ್ಯೆಗಳನ್ನು ಎದುರಿಸುವುದರಿಂದ ಅದು ಅಗ್ನಿಪರೀಕ್ಷೆಯೇ ಸರಿ. ಸಾಮಾನ್ಯರಿಗಿಂತ ಹೆಚ್ಚಿಗೆ ಕಷ್ಟಪಟ್ಟು ಓದುವುದಲ್ಲದೆ, ಪರೀಕ್ಷೆ ಬರೆಯಲು ಸಹಾಯ ಮಾಡುವ ಸಹಾಯಕರನ್ನೂ(ಸೆð„ಬ್‌) ಹುಡುಕಿಕೊಳ್ಳುವುದು ತ್ರಾಸದಾಯಕ. ಇದರಿಂದಾಗಿಯೇ ಅನೇಕರು ಪರೀಕ್ಷೆಗೆ ತಯಾರಾಗಿದ್ದರೂ, ಸಹಾಯಕರನ್ನು ಹುಡುಕಿಕೊಳ್ಳಲು ಸಾಧ್ಯವಾಗದೆ ವರ್ಷಗಳ ಕಾಲ ಮನೆಯಲ್ಲಿ ಕುಳಿತವರಿದ್ದಾರೆ. ಇದನ್ನು ಗಮನಿಸಿ ಅಮೃತಬಿಂದು ತಂಡದಲ್ಲಿ ಅದಕ್ಕೆಂದೇ ಪ್ರತ್ಯೇಕ ವಿಭಾಗವನ್ನೇ ಮಾಡಲಾಗಿದೆ. ಅಕ್ಷತಾ ಮತ್ತು ಅಮೃತಾ ಎಂಬವರು ಈ ವಿಭಾಗದ ಹೊಣೆ ಹೊತ್ತುಕೊಂಡಿದ್ದಾರೆ. ಸಹಾಯಕ ಬೇಕೆನ್ನುವ ರಿಕ್ವೆಸ್ಟ್‌ ಬಂದಾಕ್ಷಣ ಅದನ್ನು ಪರಿಶೀಲಿಸಿ ಗ್ರೂಪ್‌ನಲ್ಲಿ ಶೇರ್‌ ಮಾಡಿ, ಶೀಘ್ರದಲ್ಲಿ ಸಹಾಯಕರನ್ನು ಒದಗಿಸುತ್ತಾರೆ. ಇಲ್ಲೀತನಕ ಸಾವಿರಾರು ಮಂದಿ ಅಂಗವಿಕಲರು ಅಮೃತಬಿಂದು ಸ್ರೆ$R„ಬ್‌ ವಿಭಾಗದ ನೆರವನ್ನು ಪಡೆದುಕೊಂಡಿದ್ದಾರೆ. ಸಂಪರ್ಕ: ಅಕ್ಷತಾ- 9483457417

ಅಮೃತಬಿಂದು ಸಂಪರ್ಕ ಸಂಖ್ಯೆ
ಪ್ರಶಾಂತ್‌: 8553840709 
ಹೊಟ್ಟೆ ತುಂಬಿದವನಿಗೆ ಬಿರಿಯಾನಿ ಕೊಡುವುದಕ್ಕಿಂತ, ಹಸಿದವನಿಗೆ ಅನ್ನ ಕೊಡೋದು ಸರ್ವಶ್ರೇಷ್ಠ.
– ಕೌಸಲ್ಯಾ, ಅಮೃತಬಿಂದು ಸದಸ್ಯೆ
 ನಾವು ಮಾಡಿದ ಒಂದು ಒಳ್ಳೆ ಕೆಲಸ ಸಾವಿರ ಪಟ್ಟಾಗಿ ಅದರ ಪ್ರತಿಫ‌ಲ ನಮಗೆ ಸಿಗುತ್ತದೆ ಎಂದು ಹೇಳಿದ್ದರು ವಿವೇಕಾನಂದರು. ಅದೇ ನಮ್ಮ ತಂಡದ ಧ್ಯೇಯವಾಕ್ಯ.
– ಪ್ರಶಾಂತ್‌, ಸ್ಥಾಪಕ ಸದಸ್ಯ, ಅಮೃತಬಿಂದು 
ಸಮಾನಮನಸ್ಕರ ಈ ತಂಡ ಮಾಡುತ್ತಿರೋ ಕೆಲಸ ನಿಜಕ್ಕೂ ಶ್ಲಾಘನೀಯ. “ಅಮೃತಬಿಂದು’ ಈ ಕಾಲದ ಅನುಭವ ಮಂಟಪ.
– ರವಿ. ಡಿ. ಚೆನ್ನಣ್ಣನವರ್‌, ಡಿಸಿಪಿ

ಹವನ

Advertisement

Udayavani is now on Telegram. Click here to join our channel and stay updated with the latest news.

Next