Advertisement

Yakshagana ಹಾಸ್ಯ ಮಾಡುವಾಗ ಹಾಸ್ಯಗಾರ ನಗಬಾರದು : ಹೊಳಮಗೆ ನಾಗಪ್ಪ

01:49 AM Aug 04, 2024 | Team Udayavani |

ಬಡತನದ ಕುಲುಮೆಯಲ್ಲಿ ಕರಗಿ, ಹತ್ತರ ಹರೆಯದಲ್ಲೇ ಯಕ್ಷರಂಗ ಪ್ರವೇಶಿಸಿದ ಹಿರಿಯ ಹಾಸ್ಯ ಕಲಾವಿದ ಹೊಳಮಗೆ ನಾಗಪ್ಪ ಅವರು ಪ್ರೇಕ್ಷಕರನ್ನು ನಗಿಸುವುದರಲ್ಲಿಯೇ ಜೀವನ ಸಾರ್ಥಕ್ಯ ಕಂಡವರು. ಹಳೆತನದ ಮಟ್ಟನ್ನು, ಹೊಸತನದ ಗುಟ್ಟನ್ನೂ ಅರಿತು, ಪರಂಪರೆಯ ಯಕ್ಷರಂಗದಲ್ಲಿ ಪರಿಶುದ್ಧ ಹಾಸ್ಯಗಾರಿಕೆಯಲ್ಲಿ ಪಳಗಿದವರು. ಬರೋಬ್ಬರಿ 20 ಮೇಳಗಳಲ್ಲಿ 65 ವರ್ಷಗಳ ಸುದೀರ್ಘ‌ ಅವಧಿಯಿಂದ ಕಲಾಸೇವೆಗೈಯ್ಯುತ್ತಿರುವ ಅವರು, ಹಾಸ್ಯಕ್ಕೊಪ್ಪುವ ಆಳಂಗ, ಧ್ವನಿ, ಭಾಷೆ, ನೃತ್ಯ- ಅಭಿನಯ, ಹಾವಭಾವಗಳಿಂದ ಹತ್ತಾರು ಪೌರಾಣಿಕ ಹಾಸ್ಯ ಪಾತ್ರಗಳನ್ನು ಮನೋಜ್ಞವಾಗಿ ಪ್ರದರ್ಶಿಸಿ, ಕಲಾ ರಸಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಕಳುವಿನಬಾಗಿಲಿನ ಹೊಳಮಗೆ ಎಂಬ ಪುಟ್ಟ ಊರಿನಲ್ಲಿ ದೊಟ್ಟ ನಾಯ್ಕ ಹಾಗೂ ಚಂದು ಮೊಗೇರ್ತಿ ದಂಪತಿಯ ಪುತ್ರನಾಗಿ 1946ರಲ್ಲಿ ಜನನ. ಓದಿದ್ದು ಮೂರನೇ ತರಗತಿಯವರೆಗೆ ಮಾತ್ರ. ಎಳವೆಯಲ್ಲಿಯೇ ಬಣ್ಣದ ಬದುಕಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಇವರಿಗೆ ಆಗ ಸಿಗುತ್ತಿದ್ದ ಸಂಬಳ ನಾಲ್ಕಾಣೆ. ಬೇಲೂ¤ರು ಕುಷ್ಟ ನಾಯ್ಕ ಅವರಲ್ಲಿ ಯಕ್ಷ ದೀಕ್ಷೆ ಪಡೆದು, ಹಿರಿಯ ಹಾಸ್ಯ ಕಲಾವಿದ ವಂಡ್ಸೆ ನಾಗಯ್ಯ ಶೆಟ್ಟರ ಗರಡಿಯಲ್ಲಿ ಪಳಗಿದವರು. ಉಡುಪಿ ಯಕ್ಷಗಾನ ಕೇಂದ್ರದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ, ದಶಾವತಾರಿ ಗುರು ವೀರಭದ್ರ ನಾಯಕ್‌, ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲ ರಾವ್ ಅವರಂತಹ ಯಕ್ಷಗುರುಗಳ ಮಾರ್ಗದರ್ಶನದಿಂದ ಸಮರ್ಥ ಕಲಾವಿದರಾಗಿ ರೂಪುಗೊಂಡರು.

ಮಾರಣಕಟ್ಟೆ, ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು, ಕೊಡವೂರು, ಕಮಲಶಿಲೆ, ಮಂದಾರ್ತಿ, ನೀಲಾವರ, ಹಾಲಾಡಿ, ಸೌಕೂರು, ಬಗ್ವಾಡಿ, ಗೋಳಿಗರಡಿ, ಮೇಗರವಳ್ಳಿ, ಮಡಾಮಕ್ಕಿ, ಸೀತೂರು, ಹೆಗ್ಗೋಡು , ಕೋಟ ಅಮೃತೇಶ್ವರಿ, ಗುತ್ಯಮ್ಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲದೆ, ತೆಂಕಿನ ಧರ್ಮಸ್ಥಳ ಮೇಳದಲ್ಲೂ ಕಲಾರಸಿಕರನ್ನು ರಂಜಿಸಿದ್ದಾರೆ. ಮಾರಣಕಟ್ಟೆಯಲ್ಲಿ 20 ವರ್ಷ ಹಾಗೂ ಕಮಲಶಿಲೆ ಮೇಳದಲ್ಲಿ 15 ವರ್ಷಗಳ ಕಾಲ ಕಲಾಸೇವೆ ಸಲ್ಲಿಸಿದ ಇವರು, ಪ್ರಸ್ತುತ ಮಡಾಮಕ್ಕಿ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.

ಭೀಷ್ಮ ಪ್ರತಿಜ್ಞೆಯ ಕಂದರ, ಭೀಷ್ಮ ವಿಜಯದ ಬ್ರಾಹ್ಮಣ, ದಮಯಂತಿಯ ಬಾಹುಕ, ಸತಿ- ಸುಶೀಲೆಯ ವಿದೂಷಕ, ಶೈಲಾ ಶಾಂಭವಿಯ ಚೆಲುವಯ್ಯ, ಪಾಪಣ್ಣ ವಿಜಯದ ಪಾಪಣ್ಣ, ಚಿತ್ರಪಟನ ಕೊರವಂಜಿ, ಸುಭದ್ರಾ ಕಲ್ಯಾಣದ ಬಲರಾಮನ ದೂತನ ಬಹುಭಾಷಾ ವಿನೋದ, ಕೇರಳ ಕುಟ್ಟಿಯ ಮಲಯಾಳ ಜೋಡಿ ಜೋಡಾಟದ ಬಬ್ರುವಾಹನನ ಚಾರಕನಾಗಿ, ಒಂದೇ ದೇಹದಲ್ಲಿ (ಹಿಂದೆ- ಮುಂದೆ) ಎರಡು ವೇಷಗಳನ್ನು ಧರಿಸಿ, ಯಶಸ್ವಿಯಾದ ಹಾಸ್ಯ ಚಮತ್ಕಾರಿ ಇವರು.

6 ದಶಕಗಳ ಸುದೀರ್ಘ‌ ಯಕ್ಷಗಾನ ಒಡನಾಟದ ಮೆಲುಕು?
60 ವರ್ಷದ ತಿರುಗಾಟ ಹೇಗಿತ್ತೆಂದರೆ ಕೆಲವೊಮ್ಮೆ ಸುಖದಿಂದ, ಇನ್ನು ಕೆಲವೊಮ್ಮೆ ಕಷ್ಟದಿಂದ ಸಾಗಿದೆ. ಚಿಕ್ಕವರಿರುವಾಗ ಬಹಳ ಕಷ್ಟದಲ್ಲಿ ಇದ್ದವರು ನಾವು. ಬಾಲ್ಯದಲ್ಲಿ ಎಲ್ಲಿಯೇ ಯಕ್ಷಗಾನ ಇದ್ದರೂ, ಸಂಜೆ 5 ಗಂಟೆಗೆ ಪ್ರದರ್ಶನ ನೋಡಲು ಹೋಗುತ್ತಿದ್ದೆ. ಯಕ್ಷಗಾನದ ಮೇಲಿನ ಆಸಕ್ತಿಯೇ ಈ ಕಲೆಗೆ ನನ್ನನ್ನು ಕರೆಸಿಕೊಂಡಿತು. ಸಣ್ಣ ಪಾತ್ರ ಮಾಡುತ್ತಿದ್ದಾಗ ಕಷ್ಟವಿತ್ತು. ಆಗ ದಿನಕ್ಕೆ ನಾಲ್ಕಾಣೆ ಸಂಬಳ ಪಡೆಯುತ್ತಿದ್ದೆ. ಈಗ ನನ್ನ ಮನಸ್ಸಿಗೆ ನೆಮ್ಮದಿ ಆಗುವಷ್ಟು ಸಿಗುತ್ತಿದೆ. ಆದರೆ ಆಗಲೇ ಯಕ್ಷಗಾನ ಕಲಿಯಬೇಕು ಅನ್ನುವ ಹುಮ್ಮಸ್ಸು ಜಾಸ್ತಿಯಾಗಿದ್ದು. ಯಕ್ಷಗಾನ ಕೇಂದ್ರದ ಮೊದಲ ವಿದ್ಯಾರ್ಥಿ ನಾನು. ಹಿಂದೆ ಒಂದು ಸಾವಿರ ಯಕ್ಷಗಾನ ಅಭಿಮಾನಿಗಳಲ್ಲಿ 300 ಜನ ನಮ್ಮನ್ನು ಮೆಚ್ಚಿಕೊಳ್ಳುತ್ತಿದ್ದರು. ಬಾಕಿ 700 ಮಂದಿ ಅಷ್ಟೊಂದು ಗಂಭೀರವಾಗಿ ವೀಕ್ಷಿಸುತ್ತಿರಲಿಲ್ಲ. ಆದರೆ ಈಗ ಅದು ಕೂಡ ಕಡಿಮೆಯಾಗಿ 300 ಇದ್ದುದು 200ಕ್ಕೆ ಇಳಿದಿದೆ. ಸುಮಾರು 500ಕ್ಕೂ ಮಿಕ್ಕಿ ಉತ್ತಮ ಕಲಾವಿದರ ಒಡನಾಟದಿಂದ, ಅವರು ಮಾಡುವುದನ್ನು ನೋಡಿ, ಅವರಿಂದ ಕೇಳಿ ತಿಳಿದುಕೊಂಡು, ರಂಗದಲ್ಲಿ ಹಾಸ್ಯಗಾರನಾಗಿ ರೂಪುಗೊಂಡೆ.

Advertisement

ಹಾಸ್ಯದ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪಹಾಸ್ಯ ಹೆಚ್ಚಾಗುತ್ತಿದೆ ಎನ್ನುವ ವಾದವಿದೆಯಲ್ಲ?

ಇದು ನಿಜವಾಗಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚುತ್ತಿರುವುದು ಸ್ವಲ್ಪ ಆತಂಕಕಾರಿ ಸಂಗತಿ. ನಮ್ಮ ಹಾಸ್ಯ ಯಾರಿಗೂ ನೋವು ಉಂಟು ಮಾಡಬಾರದು. ಎದುರಿಗೆ ಇರುವವರನ್ನು ನಗಿಸಬೇಕು ಅಂತ ಇನ್ಯಾರದೋ ಭಾವನೆಗೂ ಧಕ್ಕೆ ತರುವಂತಹ ಹಾಸ್ಯ ಮಾಡಬಾರದು. ಕೆಲವೊಂದು ಪದಗಳನ್ನು ಬಳಸುವಾಗಲೂ ಕಲಾವಿದರಿಗೆ ಅರಿವು ಇರಬೇಕು. ಈಗಿನ ಕೆಲವು ಪ್ರಸಂಗಗಳು ಬಡಗು ಹಾಗೂ ತೆಂಕಿಗೆ ಸಮಂಜಸವಾಗಿಲ್ಲ ಅನ್ನುವುದು ನನ್ನ ಅಭಿ ಪ್ರಾಯ. ಅದನ್ನು ಪರಿಶೀಲಿಸಿ, ನೋಡಬೇಕಾದ ಅನಿವಾರ್ಯತೆಯಿದೆ. ರಾಜನಿಗಿಂತ ಮಂತ್ರಿ, ದೂತ ದೊಡ್ಡವ ನಾಗಬಾರದು. ಅಪಹಾಸ್ಯ ಕಡಿಮೆ ಮಾಡಿ, ಪ್ರೇಕ್ಷಕರನ್ನು ನಗಿಸಬೇಕು.

ಹಾಸ್ಯದೊಂದಿಗೆ ಅಶ್ಲೀಲತೆಯ ಹೇರಿಕೆ ಆಗುತ್ತಿದೆ ಅನ್ನುವ ಆರೋಪ ಸರಿಯೇ?
ಅದು ಸತ್ಯ. ಅಭಿಮಾನಿಗಳು, ವಿಮರ್ಶಕರ ಅಭಿ ಪ್ರಾಯಕ್ಕೆ ಮನ್ನಣೆ ಕೊಡಬೇಕು. ಕಲಾವಿದರಿಗೆ ಕೆಲವೊಮ್ಮೆ ರಂಗಕ್ಕೆ ಹೋದ ಮೇಲೆ ಪ್ರಜ್ಞೆ ಇರುವುದಿಲ್ಲ. ಕೆಲವರು ಸಭೆಗೆ ಬೆನ್ನು ಹಾಕಿ ಮಾತಾಡುತ್ತಾರೆ. ಈ ಬಗ್ಗೆ ಅವರಿಗೆ ಅರಿವಿಲ್ಲದೇ ಇರುವುದು ಕಾರಣ.

ಹಾಸ್ಯಕ್ಕಿರುವ ಸ್ವಾತಂತ್ರ್ಯ ಅಸಂಬದ್ಧಕ್ಕೆ ಕಾರಣವಾಗುತ್ತಿದೆಯೇ?
ಹಾಸ್ಯ ಕೇವಲ ಹಾಸ್ಯಗಾರನಿಗೆ ಮಾತ್ರ ಬಿಟ್ಟದ್ದು ಅಲ್ಲ. ಒಳ್ಳೆಯ ವೇಷಧಾರಿ ಎದುರಿಗಿದ್ದರೆ ಇದ್ದರೆ ಹಾಸ್ಯ ಒಳ್ಳೆಯದಾಗಿರುತ್ತದೆ. ಅವರಿಗೂ ಬಾರದೇ, ಇವರಿಗೂ ಬಾರದೇ ಇದ್ದರೇ, ಹಾಸ್ಯ ನಶಿಸಿ ಹೋಗಬಹುದು. ಇಬ್ಬರ ಪಾತ್ರವೂ ಬಹಳ ಮುಖ್ಯ. ಪಾತ್ರ ಮಾಡಿದವ ತನ್ನ ಗೌರವ ಉಳಿಸಿಕೊಂಡರೆ, ಹಾಸ್ಯಗಾರ ತನ್ನ ವಿನಯತೆ ತೋರಿಸಿಕೊಂಡರೆ ಹಾಸ್ಯ ಸುಂದರವಾಗಿ ಮೂಡುತ್ತದೆ.

ಅಭಿನಯ, ಅಭಿವ್ಯಕ್ತಿ, ಅರ್ಥಗಾರಿಕೆ ಈ ಮೂರರಲ್ಲಿ ಹಾಸ್ಯ ಕಲಾವಿದನಿಗೆ ಯಾವುದು ಮುಖ್ಯ? ಹಾಸ್ಯ ಪಾತ್ರಧಾರಿಗಳಿಗೆ ಕುಣಿತದ ಜತೆಗೆ ಓದು, ಅಧ್ಯಯನ ಮುಖ್ಯ ಅಂತ ಅನ್ನಿಸಿದೆಯೇ?
ಈ ಮೂರು ಕೂಡ ಬಹಳ ಮುಖ್ಯ. ಇವು ಮೂರು ಇಲ್ಲದಿದ್ದರೆ ಒಳ್ಳೆಯ ಹಾಸ್ಯಗಾರನಾಗಲು ಸಾಧ್ಯವಿಲ್ಲ. ಅಂಗವಿನ್ಯಾಸ, ವೇಷ, ಕಥೆಗೆ ಆಧಾರವಾಗಿ ಯಾರು ಹಾಸ್ಯ ಮಾಡುತ್ತಾರೋ ಅದು ಸಮರ್ಥ ಹಾಸ್ಯ. ಹಾಸ್ಯಗಾರನಿಗೆ ಓದು, ಅಧ್ಯಯನ ಬೇಕೇ ಬೇಕು. ಬೇರೆ ಬೇರೆ ಕುಣಿತಗಳೂ ಗೊತ್ತಿರಬೇಕು.

ಈಗಿನ ಯುವ ಹಾಸ್ಯಗಾರರು ಸಮರ್ಥ ಹಾಸ್ಯಗಾರರ ಸ್ಥಾನ ತುಂಬುವಲ್ಲಿ ವಿಫಲ ಆಗುತ್ತಿದ್ದಾರೆಯೇ?
ಎಲ್ಲವೂ ಅವನಿಗೆ ಗೊತ್ತಿರಬೇಕು. ಭಾಗವತಿಕೆಯಿಂದ ಹಿಡಿದು ಚೆಂಡೆ, ಮದ್ದಳೆ ಸಾಮಾನ್ಯ ಮಟ್ಟಕ್ಕೆ ಆದರೂ ಬರಬೇಕು. ಈಗ ಎಲ್ಲವೂ ಗೊತ್ತಿರುವ ಬೆರಳೆಣಿಕೆಯಷ್ಟು ಮಂದಿ ಮಾತ್ರ ಹಾಸ್ಯ ಕಲಾವಿದರಿದ್ದಾರೆ. ಈಗಿನ ಕಲಾವಿದರು ಕಲಿಯುವುದು ಕಡಿಮೆ. ಈಗ ರಂಗಸ್ಥಳದಲ್ಲಿ ನಿಂತರೆ ಸಭೆಗೆ ಬೆನ್ನು ಹಾಕಿ, ಭಾಗವತರಿಗೆ ಮುಖ ಹಾಕಿ ಮಾತಾಡುವವರು ಇದ್ದಾರೆ. ಇದನ್ನು ಕಲಾವಿದನಾದವ ತಿಳಿಯಬೇಕು.

ಹಾಸ್ಯ ಪಾತ್ರಕ್ಕೆನಿರ್ದಿಷ್ಟ ಚೌಕಟ್ಟು ಇರುವುದಿಲ್ಲ. ಸಿದ್ಧತೆ ಹೇಗೆ ಮಾಡಿಕೊಳ್ಳುತ್ತೀರಿ?
ಪೌರಾಣಿಕ ಪ್ರಸಂಗಗಳಲ್ಲಿ ಪದ್ಯವೇ ಹಾಸ್ಯ ಕಲಾವಿದರಿಗೆ ಸುಮಾರು ವಿಷಯಗಳನ್ನು ತಿಳಿಸಿಕೊಡುತ್ತದೆ. ಪದ್ಯ ಕೇಳಿ ಅರ್ಥೈಸಿಕೊಂಡು, ಅದಕ್ಕೆ ಬೇಕಾದ ಸಾಂಬಾರ ಪದಾರ್ಥಗಳನ್ನು ಸೇರಿಸಿ, ಪ್ರೇಕ್ಷಕರಿಗೆ ಖುಷಿ ಕೊಡಿಸುವ ಮಾತುಗಳನ್ನು ಆಡುತ್ತಾರೆ. ಹಾಸ್ಯಗಾರನಿಗೆ ಎದುರಿಗಿದ್ದ ಕಲಾವಿದ ಪ್ರೋತ್ಸಾಹಿಸಿದರೆ, ಆ ಕಲಾವಿದನನ್ನು ಹಾಸ್ಯಗಾರ ಪ್ರೋತ್ಸಾಹಿಸಬೇಕು. ಆಗ ಮಾತ್ರ ಉತ್ತಮ ಹಾಸ್ಯ ಮೂಡಲು ಸಾಧ್ಯ. ಹಾಗಂತ ರಾಜನನ್ನು ದೂತ ಕೊಲ್ಲಬಾರದು. ಆಳು ಆಳೇ. ಅರಸ ಅರಸನೇ ಆಗಿರುತ್ತಾನೆ. ಹಾಸ್ಯ ಒಳ್ಳೆಯದಾಗಬೇಕು ಅಂತ ರಾಜನ ವೇಷ ಕಡಿಮೆ ಮಾಡಬಾರದು. ಆ ಜಾಗೃತಿ ಇರಬೇಕು. ರಂಗದಲ್ಲಿ ಹಾಸ್ಯ ಮಾಡುವಾಗ ಹಾಸ್ಯ ಗಾರ ನಗಬಾರದು. ಆತ ರಂಗವನ್ನು ಪ್ರವೇಶಿಸು ವಾಗಲೇ ಪ್ರೇಕ್ಷಕರು ನಗುವಂತಾಗಬೇಕು.

  ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next