Advertisement

ಪುತ್ರನ ವಿವಾಹಕ್ಕೆ ಬನ್ನಿ, ಜೆಡಿಎಸ್‌ ಶಕ್ತಿ ತೋರಿಸಿ

09:30 PM Mar 09, 2020 | Lakshmi GovindaRaj |

ಕೆ.ಆರ್‌.ನಗರ: ನನ್ನ ಪುತ್ರನ ವಿವಾಹ ಮುಖಾಂತರ ರೈತರ ಪಕ್ಷ ಜೆಡಿಎಸ್‌ ಅನ್ನು ಮತ್ತಷ್ಟು ಸದೃಢಗೊಳಿಸಲು ನಿರ್ಧರಿಸಲಾಗಿದ್ದು, ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

Advertisement

ತಾಲೂಕಿನ ಚುಂಚನಕಟ್ಟೆಯ ಕಮಲಮ್ಮಕೃಷ್ಣೇಗೌಡ ಸಭಾಂಗಣದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರು ಹಾಗೂ ಪುತ್ರನ ವಿವಾಹ ಆಮಂತ್ರಣ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಪಕ್ಷದಲ್ಲಿಯೇ ಬೆಳೆದು ಜೆಡಿಎಸ್‌ ಮುಗಿಸಲು ಹೊಂಚು ಹಾಕುತ್ತಿರುವವರಿಗೆ ಕಾರ್ಯಕರ್ತರ ಶಕ್ತಿ ಏನೆಂಬುದನ್ನು ತೋರಿಸಬೇಕಿದೆ.

ನಮ್ಮ ತಂದೆಯ ಕಾಲದಿಂದಲೂ ಕುಟುಂಬದ ಮೇಲೆ ನಂಬಿಕೆ, ಪ್ರೀತಿ, ವಿಶ್ವಾಸವಿಟ್ಟು ಬೆಳೆಸಿರುವ ಕಾರ್ಯಕರ್ತರಿಗೆ ಮಗನ ಮದುವೆಯಲ್ಲಿ ಗೌರವ ನೀಡಬೇಕೆಂಬ ನಿಟ್ಟಿನಲ್ಲಿ ಎಲ್ಲರಿಗೂ ಆಮಂತ್ರಣ ನೀಡುತ್ತಿದ್ದೇನೆ. ಇದರಲ್ಲಿ ಪಕ್ಷ ಸಂಘಟನೆಯ ಸ್ವಾರ್ಥವೂ ಅಡಗಿದೆ ಎಂದರು.

ನೀವೇ ಕಟ್ಟಿದ ಈ ಪಕ್ಷವನ್ನು ರೈತರ ಹಿತಕ್ಕಾಗಿ ಉಳಿಸಿ ಬೆಳೆಸಬೇಕಾಗಿದೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದ 14 ತಿಂಗಳ ನನ್ನ ಸಂಕಷ್ಟದ ಅಧಿಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಲು 25,000 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ನನ್ನ ಸರಕಾರವನ್ನು ಪತನಗೊಳಿಸಿರುವ ಬಿಜೆಪಿ ಸರ್ಕಾರ ಹಣವನ್ನು ತಡೆ ಹಿಡಿಯಲು ಸಾಧ್ಯವಿಲ್ಲ.

ಸಾಲಮನ್ನಾ ಸೌಲಭ್ಯ ಸಿಗದ ರೈತರು ಸಮರ್ಪಕ ದಾಖಲೆ ನೀಡಿದರೆ 24 ಗಂಟೆಯಲ್ಲಿ ಸಾಲಮನ್ನಾ ಆಗಲಿದೆ. ಸಾಲಮನ್ನಾಕ್ಕಾಗಿ ಹಣ ಮೀಸಲಿಟ್ಟಿರುವುದರಿಂದ ಉಳಿದ 1.60 ಲಕ್ಷ ರೈತರಿಗೆ ಈ ಸೌಲಭ್ಯ ನೀಡಲು ಈ ಸರಕಾರ ಕಳ್ಳಾಟವಾಡುತ್ತಿದ್ದು, ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ ಎಂದರು.

Advertisement

ಕೆ.ಆರ್‌.ನಗರ ತಾಲೂಕಿನಲ್ಲಿಯೇ ರೈತರ ಸಾಲಮನ್ನಾ ಯೋಜನೆಯಡಿ 118 ಕೋಟಿ ರೂ.ಸಾಲ ಮನ್ನಾವಾಗಿದೆ. ಖಾಸಗಿಯವರಿಂದ ಬಡ ರೈತರು ಸಾಲಪಡೆದು ಸಂಕಷ್ಟದಲ್ಲಿದ್ದ ಕಾರಣ ತಾನು ಜಾರಿಗೆ ತಂದ ಋಣಮುಕ್ತ ಕಾಯಿದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಈ ಕಾಯಿದೆಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿದ್ದರೂ ಈಗಿನ ಬಿಜೆಪಿ ಸರಕಾರ ತಡೆ ತೆರವುಗೊಳಿಸಲು ಮುಂದಾಗಿಲ್ಲ.

ಆದರೂ ನಮ್ಮದು ರೈತಪರ ಸರಕಾರ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಎಂದು ಕಿಡಿಕಾರಿದರು. ಶಾಸಕ ಸಾ.ರಾ.ಮಹೇಶ್‌ ಮಾತನಾಡಿ, ಪಕ್ಷ ಕಟ್ಟಿ ಬೆಳೆಸಿದ ಕಾರ್ಯಕರ್ತರಿಗೆ ಊಟ ಹಾಕಿಸಬೇಕೆಂಬ ಔದಾರ್ಯದಿಂದ ಖುದ್ದು ಕುಮಾರಸ್ವಾಮಿ ಅವರೇ ಆಮಂತ್ರಣ ನೀಡುತ್ತಿದ್ದಾರೆ. ಈ ಹಿಂದೆ ಯಾವೊಬ್ಬ ಮುಖ್ಯಮಂತ್ರಿ ಕೂಡ ತಮ್ಮ ಮಕ್ಕಳ ಮದುವೆಗೆ ಈ ರೀತಿ ಆಹ್ವಾನಿಸಿಲ್ಲ ಎಂದರು.

ಕೇವಲ 14 ತಿಂಗಳ ಅಧಿಕಾರಾವಧಿಯಲ್ಲಿ ಕುಮಾರಣ್ಣ ನನ್ನ ಕ್ಷೇತ್ರಕ್ಕೆ ಬರೋಬ್ಬರಿ 943 ಕೋಟಿ ರೂ. ಅನುದಾನ ನೀಡಿದರು. ಅಲ್ಲದೇ ನನ್ನ ಮನವಿ ಮೇರೆಗೆ ಸಾಲಿಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದರು ಎಂದು ಸ್ಮರಿಸಿದರು.

ಇದಕ್ಕೂ ಮುನ್ನ ಚುಂಚನಕಟ್ಟೆಯ ಇತಿಹಾಸ ಪ್ರಸಿದ್ಧ ಸೀತಾ ಸಮೇತ ಕೋದಂಡರಾಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ವೇಳೆ ಹಾಡ್ಯ ಗ್ರಾಮದ ಕೆಲ ಕಾಂಗ್ರೆಸ್‌ ಕಾರ್ಯಕರ್ತರು ಎಚ್‌.ಡಿ.ಕುಮರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡರು. ಬಳಿಕ ಉದ್ಯಮಿಗಳಾದ ಎಚ್‌.ಕೆ.ಮಧುಚಂದ್ರ, ಎಚ್‌.ಕೆ.ಶ್ರೀಧರ್‌ ನೂತನವಾಗಿ ನಿರ್ಮಿಸಿರುವ ಕಮಲಮ್ಮಕೃಷ್ಣೇಗೌಡ ಕನ್ವೆನ್ಸನ್‌ ಹಾಲ್‌ ಉದ್ಘಾಟಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಚಂದ್ರಶೇಖರ್‌, ಮೈಮುಲ್‌ ನಿರ್ದೇಶಕ ಎ.ಟಿ.ಸೋಮಶೇಖರ್‌, ನವನಗರ ಕೋ-ಆಪರೇಟೀವ್‌ ಬ್ಯಾಂಕಿನ ಅಧ್ಯಕ್ಷ ಕೆ.ಎನ.ಬಸಂತ್‌, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಾಜೇಗೌಡ, ಕೃಷ್ಣೇಗೌಡ, ಎಸ್‌.ಕೆ.ಮಧುಚಂದ್ರ, ತಾ.ಪಂ.ಸದಸ್ಯೆ ಮಮತಾ ಮಹೇಶ್‌, ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್‌.ಚನ್ನಬಸಪ್ಪ, ಮಾಜಿ ಸದಸ್ಯ ಎಂ.ಟಿ.ಕುಮಾರ್‌, ಮುಖಂಡರಾದ ವೈ.ಆರ್‌.ಪ್ರಕಾಶ್‌, ನರಸಿಂಹಮೂರ್ತಿ, ಎಸ್‌.ಟಿ.ಕೀರ್ತಿ ಇತರರಿದ್ದರು.

ವಿಶ್ವನಾಥ್‌ ವಿರುದ್ಧ ಸಾ.ರಾ.ಮಹೇಶ್‌ ಕಿಡಿ: ಸಾಮೂಹಿಕ ಮದುವೆ ಹೆಸರಿನಲ್ಲಿ ಹಣ ಕಲೆಕ್ಷನ್‌ ಮಾಡಿದ ಮಹಾನುಭಾವ ನಮಗೆ ಬುದ್ಧವಾದ ಹೇಳಲು ಬರುತ್ತಾರೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ವಿರುದ್ಧ ಶಾಸಕ ಸಾ.ರಾ.ಮಹೇಶ್‌ ಕಿಡಿಕಾರಿದರು.

ಹೆಸರಿಗೆ ಮಾತ್ರ ಸಾಮೂಹಿಕ ಮದುವೆ. ಆದರೆ, ಹಣ ವಸೂಲಿ ಮಾಡಿ ತಾನು ಸರಳ, ಸಜ್ಜನ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ನಮ್ಮ ನಾಯಕರಾದ ಕುಮಾರಣ್ಣ ಅವರು ಮಗನ ಮದುವೆಯನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಡಿ ಆ ಹೆಸರಲ್ಲಿ ಹಣ ಲೂಟಿ ಮಾಡಬೇಕಿತ್ತೇ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next