Advertisement

ಬನ್ನಿ , ಹೂಡಿಕೆ ಮಾಡಿ: ದಾವೋಸ್‌ನಲ್ಲಿ ಬೊಮ್ಮಾಯಿ ಆಹ್ವಾನ

01:24 AM May 24, 2022 | Team Udayavani |

ದಾವೋಸ್‌: “ಹೂಡಿಕೆದಾರರೇ, ಕರ್ನಾ ಟಕಕ್ಕೆ ಬನ್ನಿ. ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಬಂಡ ವಾಳ ಹೂಡಿಕೆ ಮಾಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಯಮಿಗಳಿಗೆ ಸ್ವಿಜರ್ಲೆಂಡ್‌ನ‌ ದಾವೋಸ್‌ನಲ್ಲಿ ಸೋಮವಾರ ಆಹ್ವಾನ ನೀಡಿದರು.

Advertisement

ವಿಶ್ವ ಆರ್ಥಿಕ ಶೃಂಗದಲ್ಲಿ ಭಾಗವಹಿಸಿದ ಅವರು, ಜ್ಯುಬಿಲಿಯಂಟ್‌ ಗ್ರೂಪ್‌, ಹಿಟಾಚಿ, ಲುಲು ಗ್ರೂಪ್‌, ನೆಸ್ಲೆ ಇಂಡಿಯಾ ಸಂಸ್ಥೆಗಳ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿ, ಬಂಡವಾಳ ಹೂಡಿಕೆ ಮಾಡುವ ಬಗ್ಗೆ ಆಹ್ವಾನ ನೀಡಿದ್ದಾರೆ. ಜತೆಗೆ ಆ ಕಂಪೆನಿಗಳೆಲ್ಲವೂ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಬಗ್ಗೆ ಸಹಮತ ಸೂಚಿಸಿವೆ. ವಿವಿಧ ಕಂಪೆನಿಗಳ ಜತೆಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜ್ಯ ಸರಕಾರ ಕೈಗಾರಿಕೆಗಳಿಗೆ ನೀಡುವ ಕಾನೂನಾತ್ಮಕ, ವಿತ್ತೀಯ ಸಹಿತ ಹಲವು ರಿಯಾಯಿತಿಗಳನ್ನು ಮುಖ್ಯಮಂತ್ರಿಗಳು ಕಂಪೆನಿಗಳ ಪ್ರತಿನಿಧಿಗಳಿಗೆ ವಿವರಿಸಿದ್ದಾರೆ.

ಯಾವ ಕಂಪೆನಿಗಳು?
ಲುಲು ಗ್ರೂಪ್‌ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಮುಂದಾಗಿದೆ. 4 ಶಾಪಿಂಗ್‌ ಮಾಲ್‌ ಮತ್ತು ಹೈಪರ್‌ ಮಾರ್ಕೆಟ್‌ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ ಇದೆ. ಲುಲು ಗ್ರೂಪ್‌ ಇಂಟರ್‌ ನ್ಯಾಶನಲ್‌ನ ನಿರ್ದೇಶಕ ಎ.ವಿ. ಅನಂತ ರಾಮನ್‌ ಜತೆಗೆ ರಾಜ್ಯದಲ್ಲಿ ಹೂಡಿಕೆ ಮಾಡುವ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.

ಕರ್ನಾಟಕದಲ್ಲಿ ಔಷಧೋದ್ಯಮ ಮತ್ತು ಎಫ್.ಎಂ.ಸಿ.ಜಿ. ವಲಯದಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳು ಇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಜ್ಯೂಬಿಲಿಯಂಟ್‌ ಗ್ರೂಪ್‌ನ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಧಾರವಾಡದಲ್ಲಿ ಎಫ್.ಎಂ.ಸಿ.ಜಿ. ವಲಯದಲ್ಲಿ ಹೂಡಿಕೆಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್‌ ಅನ್ನೂಪರಿಗಣಿಸಬಹುದಾಗಿದೆ ಎಂದರು.

ಜ್ಯುಬಿಲಿಯಂಟ್‌ ಫ‌ುಡ್‌ ವರ್ಕ್ಸ್ ನೂತನ ಕೇಂದ್ರೀಕೃತ ಪಾಕಶಾಲೆ ಪ್ರಾರಂಭಿಸಲು ಹಾಗೂ ಜ್ಯುಬಿಲಿಯಂಟ್‌ ಬಯೋಸಿಸ್‌ ದೇವನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನೂತನವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್‌ಆ್ಯಂಡ್‌ಡಿ) ಸ್ಥಾಪಿಸಲು ತೀರ್ಮಾನಿಸಿದೆ. ಪ್ರಸ್ತುತ ರಾಜ್ಯದಲ್ಲಿ 9,000 ಜನರು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

Advertisement

ಹಿಟಾಚಿ ಎನರ್ಜಿ
ಹಿಟಾಚಿ ಎನರ್ಜಿ ಸಂಸ್ಥೆಯ ಮುಖ್ಯಸ್ಥ ರೊಂದಿಗೆ ನಡೆದ ಮಾತುಕತೆ ಸಂದರ್ಭದಲ್ಲಿ ಇ. ವಿ. ಚಾರ್ಜಿಂಗ್‌ಗಾಗಿ ಮೂಲಸೌಕರ್ಯ ಘಟಕ ಸ್ಥಾಪನೆಗೆ ಯೋಜಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಬೆಂಗಳೂರಿನಲ್ಲಿ ಪ್ರತಿಭೆಯ ಲಭ್ಯತೆ ಇರುವುದರಿಂದ ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣದ ಅವಕಾಶಗಳ ಬಗ್ಗೆ ಸಂಸ್ಥೆ ಆಸಕ್ತಿ ತೋರಿದೆ. ಬೆಂಗಳೂರಿನಲ್ಲಿ ಕೇಂದ್ರ ಸ್ಥಾನ ಹೊಂದಿರುವ ಹಿಟಾಚಿ ಕಂಪೆನಿ ದೊಡ್ಡಬಳ್ಳಾಪುರದಲ್ಲಿ ಇಂಧನ ಗುಣಮಟ್ಟ ಉಪಕರಣ ಘಟಕವನ್ನು ಆರಂಭಿಸುತ್ತಿದೆ. ಅಲ್ಲದೆ, 2 ಸಾವಿರ ಎಂಜಿನಿಯರ್‌ಗಳನ್ನು ಹೊಂದಿರುವ ಎಂಜಿನಿಯರಿಂಗ್‌ ಕೇಂದ್ರವನ್ನು ನಿರ್ಮಿಸುತ್ತಿದ್ದಾರೆ.

ಸಿಮೆನ್ಸ್‌
ಬೆಂಗಳೂರಿನಲ್ಲಿ 2 ಯೋಜನೆಗಳನ್ನು ಸಿಮೆನ್ಸ್‌ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಮ್ಯಾಗ್ನೆಟಿಕ್‌ ಇಮೇಜಿಂಗ್‌ ಮತ್ತು ಡಯಾಗ್ನಾಸ್ಟಿಕ್ಸ್‌ ಕೇಂದ್ರೀಕೃತವಾಗಿರುವ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ (ಆರ್‌ಆ್ಯಂಡ್‌ಡಿ) ಸ್ಥಾಪಿಸಲು ಮುಂದಾಗಿದೆ. ಸ್ಥಳೀಯ ಮಾರುಕಟ್ಟೆ ಗಳಿಗೆ ಮಾರಾಟ ಮಾಡಲು ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸುವ ಘಟಕವನ್ನು ಬೊಮ್ಮಸಂದ್ರದಲ್ಲಿ ಸ್ಥಾಪಿಸಲು ಸೆಪ್ಟಂಬರ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಲು ಯೋಚಿಸಲಾಗಿದೆ.

ಬೆಂಗಳೂರಿನಲ್ಲಿ ಸಿಮನ್ಸ್‌ ಸಂಸ್ಥೆ 2500 ಎಂಜಿನಿಯರ್‌ಗಳನ್ನು ಹೊಂದಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿ ವಿಶೇಷ ಪ್ರೋತ್ಸಾಹಕಗಳನ್ನು ಕರ್ನಾಟಕ ಸರಕಾರ ಒದಗಿಸುವ ಭರವಸೆ ನೀಡಿದೆ. ಬಿಯಾಂಡ್‌ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ- ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರಕಾರ ಮತ್ತು ಸೀಮನ್ಸ್‌ ಸಂಸ್ಥೆ ಪ್ರತಿನಿಧಿಗಳು ಮಾತುಕತೆ ನಡೆಸಿದರು.

ನೆಸ್ಲೆ ಇಂಡಿಯಾ
ಕರ್ನಾಟಕದಲ್ಲಿ ಇನ್‌ಸ್ಟೆಂಟ್‌ ಕಾಫಿ ಘಟಕದ ಆಧುನೀಕರಣಕ್ಕೆ ನೆಸ್ಲೆ ಇಂಡಿಯಾ ಬಂಡವಾಳ ಹೂಡಿಕೆ ಮಾಡಲಿದೆ. ಹಾಲಿ ಇರುವ ಉತ್ಪಾದನ ಘಟಕಗಳನ್ನೇ ಬಲಗೊಳಿಸಲಿದೆ ಎಂದು ಕಂಪೆನಿಯ ಪ್ರತಿನಿಧಿಗಳು ಮುಖ್ಯಮಂತ್ರಿ ಬೊಮ್ಮಾಯಿ ಜತೆಗೆ ಭೇಟಿಯಾದ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ, ಅಪರ ಮುಖ್ಯ ಕಾರ್ಯದರ್ಶಿ ಡಾ| ಇ.ವಿ. ರಮಣ ರೆಡ್ಡಿ, ಸಿಎಂ ಪ್ರ.ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌, ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

ಹೂಡಿಕೆಗೆ ಸಮ್ಮತಿ
ಲುಲು ಗ್ರೂಪ್‌
– 2 ಸಾವಿರ ಕೋಟಿ ರೂ. ಬಂಡವಾಳ
– 4 ಶಾಪಿಂಗ್‌ ಮಾಲ್‌,ಹೈಪರ್‌ ಮಾರ್ಕೆಟ್‌
– 10 ಸಾವಿರ ಮಂದಿಗೆ ಉದ್ಯೋಗ

ಜ್ಯುಬಿಲಿಯಂಟ್‌ ಗ್ರೂಪ್‌
– ಔಷಧೋದ್ಯಮ ಮತ್ತು ಎಫ್ಎಂಸಿಜಿ ಕ್ಷೇತ್ರದಲ್ಲಿ ಹೂಡಿಕೆಗೆ ಆಹ್ವಾನ
-ದೇವನಹಳ್ಳಿಯಲ್ಲಿ ಆರ್‌ಆ್ಯಂಡ್‌ಡಿ ಕೇಂದ್ರ ಸ್ಥಾಪನೆ

ಹಿಟಾಚಿ ಎನರ್ಜಿ
– ಇ.ವಿ.ಚಾರ್ಜಿಂಗ್‌ಗೆ ಮೂಲ ಸೌಕರ್ಯ ಘಟಕ ಸ್ಥಾಪನೆ
– ದೊಡ್ಡಬಳ್ಳಾಪುರದಲ್ಲಿ ಇಂಧನ ಗುಣಮಟ್ಟ ಉಪಕರಣ ಘಟಕ

ಸಿಮೆನ್ಸ್‌
– ಬೊಮ್ಮಸಂದ್ರದಲ್ಲಿ ವೈದ್ಯಕೀಯ ಸಲಕರಣೆ ಉತ್ಪಾದಿಸುವ ಘಟಕ
– ಆರೋಗ್ಯ ಕ್ಷೇತ್ರದಲ್ಲಿ ಆರ್‌ಆ್ಯಂಡ್‌ಡಿ ಕೇಂದ್ರ
– ತುಮಕೂರು, ಹುಬ್ಬಳ್ಳಿ- ಧಾರವಾಡ, ಮೈಸೂರಿನಲ್ಲಿ ಬಂಡವಾಳ ಹೂಡಿಕೆ.

Advertisement

Udayavani is now on Telegram. Click here to join our channel and stay updated with the latest news.

Next