ನವದೆಹಲಿ: ಪ್ರವಾಸಿ ಭಾರತ ಆತಿಥೇಯ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಸ್ತುತ ಎರಡು ಟೆಸ್ಟ್ ಸೋತು ಸಾಕಷ್ಟು ಟೀಕೆಗಳಿಗೆ ಒಳಗಾಗಿದೆ. ಮಾಜಿ ಕ್ರಿಕೆಟಿಗರು ಭಾರತ ತಂಡದ ಆಟಗಾರರನ್ನು ವ್ಯಾಪಕವಾಗಿ ಟೀಕಿಸುತ್ತಿದ್ದಾರೆ. ಇದೀಗ ಸಂದೀಪ್ ಪಾಟೀಲ್ ಸರದಿ. ಭಾರತ ತಂಡ ಇಂಗ್ಲೆಂಡ್ ನೆಲದಲ್ಲಿ ಕೇವಲ ಕಾಫಿ ಎಂಜಾಯ್ ಮಾಡಲಷ್ಟೇ ತೆರಳಿದೆ ಎಂದು ಸಂದೀಪ್ ಕುಟುಕಿದ್ದಾರೆ. ನಮಗಿನ್ನೂ ನೆನಪಿದೆ. ಟೆಸ್ಟ್ ಆರಂಭಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಇಂಗ್ಲೆಂಡ್ ತಂಡಕ್ಕೆ ಹೆದರುವುದಿಲ್ಲ. ಸೋಲು ಗೆಲುವುಗಳ ಬಗ್ಗೆ ಚಿಂತಿಸುವುದಿಲ್ಲ. ನಾವಲ್ಲಿಗೆ ತೆರಳುತ್ತಿರುವುದು ಕೇವಲ ಕಾಫಿ ಎಂಜಾಯ್ ಮಾಡಲಷ್ಟೇ ಎಂದು ಹೇಳಿದ್ದರು. ಇಂಗ್ಲೆಂಡ್ ಸರಣಿಯನ್ನು ತಲೆಕೆಡಿಸಿಕೊಳ್ಳದಂತೆ ಹೇಳಿಕೆ ನೀಡಿದ್ದ ಅವರೀಗ ಗೆಲ್ಲುವುದನ್ನು ಮರೆತು ಕೇವಲ ಕಾಫಿ ಎಂಜಾಯ್ ಮಾಡುತ್ತಾ ಕುಳಿತಿದ್ದಾರೆ ಎಂದು ಹೇಳಿದರು.