Advertisement

ಕಾಫಿ ಡೇ ಚೆಕ್‌ ಬೌನ್ಸ್‌: ಮಾಳವಿಕಾ ಸೇರಿ 8 ಮಂದಿ ವಿರುದ್ಧ ವಾರಂಟ್‌

11:37 PM Nov 04, 2020 | mahesh |

ಚಿಕ್ಕಮಗಳೂರು: ಕಳೆದ ವರ್ಷ ಆತ್ಮಹತ್ಯೆಗೆ ಶರಣಾಗಿದ್ದ ಕಾಫಿ ಡೇ ಮಾಲಕ ಸಿದ್ಧಾರ್ಥ ಹೆಗ್ಡೆ ಅಗಲಿಕೆಯಿಂದ ಕಂಗಾಲಾಗಿರುವ ಪತ್ನಿ ಮಾಳವಿಕಾ ಅವರಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಕಾಫಿ ಡೇ ಕಂಪೆನಿಗೆ ಮಾರಾಟ ಮಾಡಿದ್ದ ಕಾಫಿಗೆ ಹಣ ಪಾವತಿ ಮಾಡದ ಮತ್ತು ಕಂಪೆನಿ ನೀಡಿದ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಜೆಎಂಎಫ್‌ಸಿ ನ್ಯಾಯಾಲಯ ಸಿದ್ಧಾರ್ಥ ಹೆಗ್ಡೆ ಪತ್ನಿ, ಸಂಸ್ಥೆಯ ನಿರ್ದೇಶಕಿ ಮಾಳವಿಕಾ ಸೇರಿದಂತೆ 8 ಮಂದಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿದೆ.

Advertisement

ಚಿಕ್ಕಮಗಳೂರು ತಾಲೂಕು ಮಲ್ಲಂದೂರು ಗ್ರಾಮದ ಶಿವಪ್ರಕಾಶ್‌ ಎಸ್ಟೇಟ್‌ ಮಾಲಕ ಕೆ. ನಂದೀಶ್‌ ಎಬಿಸಿ ಕಂಪೆನಿಗೆ ತಮ್ಮ ಕಾಫಿಯನ್ನು ಮಾರಾಟ ಮಾಡಿದ್ದು, ಸುಮಾರು 45 ಲಕ್ಷ ರೂ. ಪೈಕಿ 4 ಲಕ್ಷ ರೂ.ನಷ್ಟು ಹಣವನ್ನು ಕಂಪೆನಿ ನೀಡಿದೆ. ಬಾಕಿ ಹಣಕ್ಕೆ ಕಂಪೆನಿ ಚೆಕ್‌ಗಳನ್ನು ನೀಡಿದ್ದು, ಈ ಚೆಕ್‌ಗಳು ಬೌನ್ಸ್‌ ಆಗಿವೆ ಎಂದು ಆರೋಪಿಸಿ ಎಬಿಸಿ ಹಾಗೂ ಕಾಫಿ ಡೇ ಸಂಸ್ಥೆಗಳ ನಿರ್ದೇಶಕಿಯಾಗಿರುವ ಸಿದ್ಧಾರ್ಥರ ಪತ್ನಿ, ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಪುತ್ರಿ ಮಾಳವಿಕಾ ಸೇರಿದಂತೆ ಸಂಸ್ಥೆಯ 8 ಮಂದಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾ ಲಯ ಇತ್ತೀಚೆಗೆ ಮಾಳವಿಕಾ ಸಹಿತ ನಿರ್ದೇಶಕ ಜಯರಾಜ್‌ ಸಿ. ಹುಬ್ಳಿ, ಕಾರ್ಯದರ್ಶಿ ಸದಾನಂದ ಪೂಜಾರಿ ಹಾಗೂ ಕಂಪೆನಿ ಮುಖ್ಯಸ್ಥರಾದ ನಿತಿನ್‌ ಬಾಗಮನೆ, ಕಿರೀಟಿ ಸಾವಂತ್‌, ಜಾವಿದ್‌ ಫರ್ವೇಜ್‌ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್‌ ಹೊರಡಿಸಿದೆ.

ಜಿಲ್ಲೆಯಲ್ಲಿ ನೂರಾರು ಕಾಫಿ ಬೆಳೆಗಾರರು ಕಾಫಿ ಡೇ ಹಾಗೂ ಎಬಿಸಿ ಕಂಪೆನಿಗೆ ತಾವು ಬೆಳೆದ ಕಾಫಿ ಮಾರಾಟ ಮಾಡಿದ್ದು, ಈ ಕಾಫಿ ಖರೀದಿಸಿರುವ ಸಂಸ್ಥೆಗಳು ಬೆಳೆಗಾರರಿಗೆ ಮುಂಗಡ ಹಣ ನೀಡಿ ಬಾಕಿ ಹಣಕ್ಕೆ ಚೆಕ್‌ ನೀಡಿದ್ದವು. ಈ ಚೆಕ್‌ಗಳು ಬೌನ್ಸ್‌ ಆಗಿದ್ದರಿಂದ ಬೆಳೆಗಾರರು ಬಾಕಿ ಹಣ ಪಾವತಿಗೆ ಮಾಳವಿಕಾ ಬಳಿ ಅನೇಕ ಬಾರಿ ಮನವಿ ಮಾಡಿದ್ದರೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next