Advertisement

ಸಮ್ಮಿಶ್ರ ಸರ್ಕಾರದ ಸಚಿವರ ಅವಧಿ 2 ವರ್ಷ: ಸಿದ್ದರಾಮಯ್ಯ

06:30 AM Jun 11, 2018 | Team Udayavani |

ಬಾಗಲಕೋಟೆ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿರುವುದು ಎರಡು ವರ್ಷಕ್ಕೆ ಮಾತ್ರ. ಅತೃಪ್ತರಿಗೆ ಮುಂದೆ ಮಂತ್ರಿ ಸ್ಥಾನ ನೀಡುತ್ತೇವೆಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹೇಳಿದರು.

Advertisement

ಭಾನುವಾರ ನೀಲಗುಂದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅತೃಪ್ತ ಶಾಸಕರಿಗೆ ಸ್ಪಂದಿಸಿಲ್ಲ ಅನ್ನೋದು ಊಹಾಪೋಹ. ಅಸಮಾಧಾನ ಇರುವ ಎಲ್ಲ ಶಾಸಕರೊಂದಿಗೆ ದಿನಕ್ಕೆ 2ರಿಂದ 3 ಬಾರಿ ಮಾತನಾಡಿದ್ದೇನೆ. ಸದ್ಯ ಅವರೆಲ್ಲ ಸಮಾಧಾನವಾಗಿದ್ದಾರೆ. ಯಾವುದೇ ರೀತಿಯ ಅತೃಪ್ತಿ ಇಲ್ಲ. ಸರ್ಕಾರಕ್ಕೂ ತೊಂದರೆಯಿಲ್ಲ. ನಾನು ಹೈಕಮಾಂಡ್‌ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದೇನೆ. ಎಲ್ಲ ಅಸಮಾಧಾನ ಶಮನವಾಗಿದೆ. ಸದ್ಯ ಮಂತ್ರಿಗಳನ್ನು ಮಾಡಿದ್ದು ಎರಡು ವರ್ಷಕ್ಕೆ ಮಾತ್ರ. ಮುಂದೆ ಅರ್ಹರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದರು.

ಎಂ.ಬಿ. ಪಾಟೀಲ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದು ನಿಜ. ಇನ್ನೊಂದು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಯಾಗಲ್ಲ. ಹೈಕಮಾಂಡ್‌ನಿಂದ ನನಗೆ ಬುಲಾವ್‌ ಬಂದಿಲ್ಲ. ಅದೆಲ್ಲ ಸುಳ್ಳು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬುದನ್ನು ರಾಹುಲ್‌ ಗಾಂಧಿ ನಿರ್ಧರಿಸುತ್ತಾರೆ. ನಾನು ಯಾರನ್ನೂ ಶಿಫಾರಸು ಮಾಡಲ್ಲ. ರಾಹುಲ್‌ ಗಾಂಧಿ ನನ್ನನ್ನು ಕರೆದು ಕೇಳಿದರೆ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next