Advertisement

ಸಹಕಾರ ಸಂಘಗಳು ರೈತರಿಗೆ ವರದಾನ

06:02 PM Sep 23, 2022 | Team Udayavani |

ದೇವನಹಳ್ಳಿ: ರೈತರಿಗಾಗಿ ರೈತರಿಗೋಸ್ಕರ ಇರುವ ಸಂಸ್ಥೆ ತಾಲೂಕು ಸೊಸೈಟಿಯಾಗಿದೆ. ಸಹಕಾರ ಸಂಘಗಳು ರೈತರಿಗೆ ವರದಾನ ಆಗಿವೆ ಎಂದು ಶಾಸಕ ಎಲ್‌.ಎನ್‌. ನಾರಾಯಣಸ್ವಾಮಿ ತಿಳಿಸಿದರು.

Advertisement

ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ದೇವನಹಳ್ಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಜನತಾ ಬಜಾರ್‌ನಲ್ಲಿ ಗುಣಮಟ್ಟದ ಉತ್ಪನ್ನ ಸಿಗಲಿದೆ. ಅದರ ಸದ್ಭಳಕೆಯನ್ನು ಗ್ರಾಹಕರು ಮಾಡಿಕೊಳ್ಳುವಂತಾಗಬೇಕು. ವಾರ್ಷಿಕ ಮಹಾಸಭೆಗಳು ಲಾಭ-ನಷ್ಟಗಳ ಬಗ್ಗೆ ಸಭೆಯಾಗಬಾರದು. ರೈತರಿಗೆ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಬಗ್ಗೆ ಚರ್ಚೆ ಆಗಬೇಕು ಎಂದರು.

ಟಿಎಪಿಸಿಎಂಎಸ್‌ನಿಂದ ರೈತರಿಗೆ ಯಾವ ರೀತಿ ಸೌಲಭ್ಯ ಸಿಗುತ್ತಿದೆ ಎಂಬುದರ ಮಾಹಿತಿಯನ್ನು ತಿಳಿಸಬೇಕು. ಪ್ರತಿಯೊಂದು ವಹಿವಾಟಿನಲ್ಲೂ ಸಾರ್ವಜನಿಕರಿಗೆ ಹಾಗೂ ಸಂಘದಲ್ಲಿನ ಷೇರುದಾರರಿಗೆ ಹಲವಾರು ರೀತಿಯ ಯೊಜನೆ ರೂಪಿಸಿದೆ. ಸಹಕಾರ ಸಂಘಗಳ ಮಹತ್ವ ಹೆಚ್ಚು ಇದ್ದು, ಅದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಇದೇ ರೀತಿ ಸಂಘ ಮತ್ತಷ್ಟು ಅಬಿವೃದ್ಧಿ ಹೊಂದಲಿ ಎಂದು ಹೇಳಿದರು.

ಕಾಂಕ್ರಿಟ್‌ ರಸ್ತೆ ನಿರ್ಮಾಣ: ಶಾಸಕರ ಅನುದಾನದಲ್ಲಿ ಟಿಎಪಿಸಿಎಂಎಸ್‌ ಸಂಘದ ಆವರಣದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ಹಣವನ್ನು ನೀಡುತ್ತಿದ್ದೇನೆ. ನನ್ನ ವೈಯಕ್ತಿಕವಾಗಿ 1 ಲಕ್ಷ ರೂ. ಶೀಟ್‌ ಹಾಕಲು ನೀಡುತ್ತಿದ್ದೇನೆ. ಖಾಸಗಿ ಅಂಗಡಿಗಳು, ಮಾರುಕಟ್ಟೆಗಳಿಗೆ ಗ್ರಾಹಕರು ಮೊರೆ ಹೋಗದಂತೆ ಎಲ್ಲಾ ಸೌಲಭ್ಯ ಸ್ಥಳೀಯವಾಗಿ ಜನತಾ ಬಜಾರ್‌ìನಲ್ಲಿ ಸಿಗುವುದನ್ನು ಗ್ರಾಹಕರಿಗೆ ಅರಿವು ಮೂಡಿಸಬೇಕು ಎಂದರು.

ಸಂಘಗಳಿಂದ ರೈತರಿಗೆ ಅನುಕೂಲ: ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ. ಮುನೇಗೌಡ ಮಾತನಾಡಿ, ನಮ್ಮ ಗ್ರಾಮೀಣ ಭಾಗದ ರೈತರಿಗೆ ಸಹಕಾರ ಸಂಘಗಳಿಂದ ಸಾಕಷ್ಟು ಅನುಕೂಲ ಆಗಿದೆ. ರೈತರಿಗೆ ಹೊಸ ಹೊಸ ಯೋಜನೆ ಮಾಡಿ ಅನುಕೂಲ ಕಲ್ಪಿಸಿ ಕೊಡಬೇಕು. ನಮ್ಮ ಕರ್ನಾಟಕ ರಾಜ್ಯದಲ್ಲಿ ಇದುವರೆಗೂ ಕಾಂಗ್ರೆಸ್‌, ಬಿಜೆಪಿಯಿಂದ ಪ್ರಧಾನಿಯಾಗಲು ಸಾಧ್ಯವಾಗಿಲ್ಲ. ಆದರೆ, ನಮ್ಮ ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಪ್ರಧಾನಿಯಾದ ಹೆಗ್ಗಳಿಕೆ ದೇವೇಗೌಡರಿಗೆ ಸಲ್ಲುತ್ತದೆ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಪಂಚರತ್ನ ಯೋಜನೆ ಜಾರಿಗೆ ತಂದು ಪ್ರತಿ ಗ್ರಾಮವು ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.

Advertisement

ಸಂಘಗಳಿಂದ ಉತ್ತಮ ಸೌಲಭ್ಯ: ಜೆಡಿಎಸ್‌ ತಾಲೂಕು ಅಧ್ಯಕ್ಷ ಆರ್‌. ಮುನೇಗೌಡ ಮಾತನಾಡಿ, ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನ ಪ್ರತಿ ರೈತರಿಗೂ ಸಹಕಾರ ಸಂಘಗಳಿಂದ ಉತ್ತಮ ಸೌಲಭ್ಯ ಸಿಗುತ್ತಿದೆ. ಸಹಕಾರ ತತ್ವದ ಅಡಿಯಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಪಿ. ಪಟಾಲಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎ.ಸಿ.ನಾಗರಾಜು, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೊಣ್ಣಪ್ಪ, ಕಾಮೇನಹಳ್ಳಿ ರಮೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ. ಮಂಜುನಾಥ್‌, ಹಾಪ್‌
ಕಾಮ್ಸ… ನಿರ್ದೇಶಕ ಶ್ರೀನಿವಾಸ್‌, ಪುರಸಭಾ ಅಧ್ಯಕ್ಷೆ ಗೋಪಮ್ಮ, ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಸಿ.ಮುನಿರಾಜು, ತಾಲೂಕು ಸೊಸೈಟಿ ಉಪಾಧ್ಯಕ್ಷ ಈರಪ್ಪ, ಜಿ.ಎ.ರವೀಂದ್ರ, ಗಂಗಾಧರ್‌, ಚನ್ನಕೃಷ್ಣಪ್ಪ, ಕೆ.ರಮೇಶ್‌, ರಾಮಮೂರ್ತಿ, ಸಿ.ಮುನಿರಾಜು, ಯರ್ತಿಗಾನಹಳ್ಳಿ ಶಿವಣ್ಣ, ಮುನಿರಾಜು, ಆರ್‌. ಚಂದ್ರಶೇಖರ್‌, ಕೆ.ಮಂಜುನಾಥ್‌, ಬಿ.ಸಿ.ಭಾಗ್ಯಮ್ಮ, ಕಾಂತಮ್ಮ, ಎನ್‌. ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಚಂದ್ರೇಗೌಡ,ಚಿಕ್ಕನಾರಾಯಣಸ್ವಾಮಿ, ವೀರಪ್ಪ, ಮುನಿರಾಜು, ಮೀನಾಕ್ಷಿ ಹಾಗೂ ಮುಖಂಡರು ಇದ್ದರು.

ಸಂಘದ ಅಭಿವೃದ್ಧಿಗೆ ಒತ್ತು ನೀಡಿ: ನಾರಾಯಣಸ್ವಾಮಿ
2.40 ಲಕ್ಷ ಜನಸಂಖ್ಯೆ ಹೊಂದಿರುವ ದೇವನಹಳ್ಳಿ ತಾಲೂಕಿನಲ್ಲಿ ಸಹಕಾರ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಬೇಕು. ಸರ್ವ ಸದಸ್ಯರು, ಆಡಳಿತ ಮಂಡಳಿ ಒಮ್ಮತದಿಂದ ಸಂಘದ ಏಳಿಗೆಗೆ ಶ್ರಮಿಸಬೇಕು. ಹಲವಾರು ಅಧ್ಯಕ್ಷರು ಈ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈಗಾಗಲೇ ಹೊಸಕೋಟೆಯಲ್ಲಿನ ಸಹಕಾರ ಸಂಘ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಸಹ ಸಂಘವು ಹೆಚ್ಚು ಅಭಿವೃದ್ಧಿಗೊಳ್ಳಬೇಕು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಹೇಳಿದರು.

ಸಂಘಕ್ಕೆ 38.80 ಲಕ್ಷ ರೂ. ನಿವ್ವಳ ಲಾಭ: ದೇವರಾಜ್‌
ಸಹಕಾರ ಸಂಘಗಳಲ್ಲಿ ಸಿಗುವ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸಂಘವು 2021-22ನೇ ಸಾಲಿಗೆ 38.80 ಲಕ್ಷ ರೂ.ಗಳ ನಿವ್ವಳ ಲಾಭದಲ್ಲಿದೆ. ಸಹಕಾರ ಸಂಘದ ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರ ಅವಶ್ಯಕವಾಗಿದೆ. ರೈತರಿಗೆ ಅನುಕೂಲ ಆಗಲು ಸಾಕಷ್ಟು ಯೋಜನೆ ಕಲ್ಪಿಸಿ ಕೊಡಲಾಗಿದೆ. ರೈತರಿಗೆ ಕ್ರಿಮಿನಾಶಕ, ಇತರೆ ವ್ಯಾಪಾರ ವಹಿವಾಟು ಮಾಡಲಾಗುವುದು ಎಂದು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ದೇವರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next