Advertisement

ಸಿಎಂ ನಿರ್ಧಾರ ಎನ್‌ಡಿಎಗೆ ಬಿಟ್ಟದ್ದು: ಹಕ್ಕುಸ್ಥಾಪನೆಗೆ ಹಿಂಜರಿದ ನಿತೀಶ್‌ ಕುಮಾರ್‌

12:57 AM Nov 13, 2020 | mahesh |

ಪಾಟ್ನಾ: ಬಿಹಾರದಲ್ಲಿ ಎನ್‌ಡಿಎದಿಂದ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗಿರುವ ವೇಳೆಯಲ್ಲೇ, ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವ ಚರ್ಚೆಯೂ ಶುರುವಾಗಿದೆ. ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈಗಾಗಲೇ ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ದೀಪಾವಳಿ ನಂತರ, ಅಂದರೆ ನವೆಂಬರ್‌ 16ರಂದು ನಿತೀಶ್‌ ಕುಮಾರ್‌ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

Advertisement

ಆದರೂ ಈ ಚುನಾವಣೆಯಲ್ಲಿ 43 ಸ್ಥಾನಗಳನ್ನಷ್ಟೇ ಪಡೆದ ಜೆಡಿಯು ಬದಲು 74 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ಪಕ್ಷದ ನಾಯಕರೇ ರಾಜ್ಯದ ನೇತೃತ್ವ ವಹಿಸುವುದು ಸಮಂಜಸ ಎನ್ನುವ ಭಾವನೆ ಪಕ್ಷದ ಆಂತರಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಗಮನಾರ್ಹ ಸಂಗತಿಯೆಂದರೆ, ಈ ವಿಷಯದಲ್ಲಿ ನಿತೀಶ್‌ ಕೂಡ ಮೊದಲಿನಂತೆ ಹಕ್ಕುಸ್ಥಾಪನೆಗೆ ಪ್ರಯತ್ನಿಸುತ್ತಿಲ್ಲ. ಬಿಹಾರ ಸಿಎಂ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿದ ನಿತೀಶ್‌ “”ನಾನು ಸಿಎಂ ಹುದ್ದೆಗೆ ಹಕ್ಕುಸ್ಥಾಪನೆ ಮಾಡಿಲ್ಲ. ಶುಕ್ರವಾರ ಎನ್‌ಡಿಎದ ನಾಲ್ಕೂ ಪಕ್ಷಗಳು ಸಭೆ ನಡೆಸಿ ನಿರ್ಣಯಕ್ಕೆ ಬರಲಿವೆ” ಎಂದಿದ್ದಾರೆ.

ಪ್ರತಿಯೊಂದು ಸೀಟಿನ ವಿಶ್ಲೇಷಣೆ ಮಾಡಲಿದ್ದೇವೆ: ಚಿರಾಗ್‌ ಪಾಸ್ವಾನ್‌ರ ಪಕ್ಷ ಈ ಬಾರಿ ಕೇವಲ 1 ಸೀಟು ಗೆದ್ದಿದ್ದರೂ, ನಿತೀಶ್‌ರ ಜೆಡಿಯು ಮತದಾರರನ್ನು ವಿಭಜಿಸಲು ಅದು ಸಫ‌ಲವಾಗಿದೆ ಎನ್ನಲಾಗುತ್ತದೆ. ಆದರೆ ಸದ್ಯಕ್ಕಂತೂ ನಿತೀಶ್‌ ಈ ಕುರಿತು ನೇರವಾಗಿ ಎಲ್‌ಜೆಪಿಯ ವಿರುದ್ಧ ಮಾತನಾಡುತ್ತಿಲ್ಲ. ಎಲ್‌ಜೆಪಿಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಿತೀಶ್‌, “”ಎಲ್ಲಿ ಏನಾಗಿದೆ ಎನ್ನುವುದು ಬಿಜೆಪಿಗೆ ಗೊತ್ತಾಗಬೇಕು. ಒಂದೊಂದು ಕ್ಷೇತ್ರದ ಬಗ್ಗೆಯೂ ನಾವು ವಿಶ್ಲೇಷಣೆ ಮಾಡಲಾರಂಭಿಸಿದ್ದೇವೆ” ಎಂದಿದ್ದಾರೆ.

ಮಹಾಘಟಬಂಧನದ ಸೋಲಿಗೆ ರಾಹುಲ್‌ ಕಾರಣ: ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನದ ಸೋಲಿಗೆ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಯೇ ಕಾರಣ ಎಂದು ಟೀಕಿಸಿದ್ದಾರೆ ಬಿಜಿಪಿ ನಾಯಕ ಆನಂದ್‌ ಸ್ವರೂಪ್‌ ಶುಕ್ಲಾ. “”ರಾಹುಲ್‌ ಗಾಂಧಿಯವರು ತಮ್ಮ ಪಕ್ಷವನ್ನು 70 ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಸಿದರು. ಆದರೆ ಆ ಪಕ್ಷ ಕೇವಲ 19 ಸ್ಥಾನಗಳಲ್ಲಿ ಗೆದ್ದಿದೆ. ತೇಜಸ್ವಿ ಯಾದವ್‌ ಮತ್ತು ಆರ್‌ಜೆಡಿಯ ಸೋಲಿನ ಸಂಪೂರ್ಣ ಶ್ರೇಯಸ್ಸು ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಗೆ ಸಲ್ಲಬೇಕು ಎನ್ನುತ್ತಾರೆ ಶುಕ್ಲಾ.

ಕುರ್ಚಿ ವ್ಯಾಮೋಹ ಬಿಡಲಿ
ಗುರುವಾರ ತೇಜಸ್ವಿ ಯಾದವ್‌ ಮಹಾಘಟಬಂಧನದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಡಿಎ ಮತ್ತು ನಿತೀಶ್‌ ಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ. “”ನಮಗೆ ಜನಬೆಂಬಲ ಸಿಕ್ಕಿದೆ. ಆದರೆ ಎನ್‌ಡಿಎ ಧನಬಲ ಹಾಗೂ ಕುತಂತ್ರದಿಂದ ಚುನಾವಣೆ ಗೆದ್ದಿದೆ” ಎಂದಿದ್ದಾರೆ. ನಿತೀಶ್‌ ಕುಮಾರ್‌ ಬಗ್ಗೆ ಪ್ರಶ್ನೆ ಎದುರಾದಾಗ “‘ಅವರು ಆತ್ಮಸಾಕ್ಷಿಯ ಧ್ವನಿಗೆ ಕಿವಿಗೊಟ್ಟು, ಕುರ್ಚಿಯ ವ್ಯಾಮೋಹ ಬಿಡಬೇಕು” ಎಂದು ಕುಟುಕಿದ್ದಾರೆ ತೇಜಸ್ವಿ. 2017ರಲ್ಲಿ ನಿತೀಶ್‌ ಕುಮಾರ್‌ ಆರ್‌ಜೆಡಿಯಿಂದ ಮೈತ್ರಿತುಂಡರಿಸಿಕೊಂಡು ಎನ್‌ಡಿಎ ಸೇರಿದ್ದಾಗ, “”ನಾನು ಆತ್ಮಸಾಕ್ಷಿಗೆ ಓಗೊಟ್ಟು ಹೊರಬಂದಿದ್ದೇನೆ” ಎಂದಿದ್ದರು. ಆ ಮಾತನ್ನೇ ತೇಜಸ್ವಿ ನೆನಪಿಸಿದ್ದಾರೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next