Advertisement

ಚಾಮುಂಡೇಶ್ವರಿಯಲ್ಲಿ ಸಿಎಂ-ಜಿಟಿಡಿ ನೇರಾನೇರ 

06:50 AM Apr 21, 2018 | |

ಮೈಸೂರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಅಭ್ಯರ್ಥಿ ಹಾಲಿ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಬೆಂಬಲಿಗರ ಪಡೆಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.

Advertisement

ನಜರ್‌ಬಾದ್‌ನಲ್ಲಿರುವ ತಾಲೂಕು ಕಚೇರಿಗೆ ಆಗಮಿಸಿದ ಉಭಯ ನಾಯಕರು ಉಮೇದು ವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ತಾಲೂಕು ಕಚೇರಿವರೆಗೂ ಸಾವಿರಾರು ಕಾರ್ಯ ಕರ್ತರು ಹಾಗೂ ಮುಖಂಡರೊಂದಿಗೆ ಮೆರವ ಣಿಗೆ ಮೂಲಕ ಬಂದ ಇಬ್ಬರು ಅಭ್ಯರ್ಥಿಗಳು, ಅಪರಾಹ್ನ ಮಿನಿ ವಿಧಾನಸೌಧದ ಕೊಠಡಿ ಸಂಖ್ಯೆ 7ರಲ್ಲಿ ಚುನಾವಣಾಧಿಕಾರಿ ಬಿ.ವೆಂಕಟೇಶ್‌ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಸಿದ್ದರಾಮಯ್ಯ ಉಮೇದುವಾರಿಕೆ: ತಾಲೂಕು ಕಚೇರಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, 2 ಸೆಟ್‌ ನಾಮಪತ್ರ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆಯೇ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇ ಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ತಮ್ಮ ಹುಟ್ಟೂರು ಸಿದ್ದರಾಮನಹುಂಡಿಗೆ ತೆರಳಿ, ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿದ ಸಿಎಂ ಸಿದ್ದರಾಮಯ್ಯ ವಿಶೇಷ ಪೂಜೆ ಸಲ್ಲಿಸಿದರು. 

ಜಿಟಿಡಿ ನಾಮಪತ್ರ ಸಲ್ಲಿಕೆ: ಚಾಮುಂಡೇಶ್ವರಿ ಕ್ಷೇತ್ರದ ಹಾಲಿ ಶಾಸಕ ಜಿ.ಟಿ.ದೇವೇಗೌಡ ಬೆಳಗ್ಗೆಯೇ ತಮ್ಮ ಕುಟುಂಬದವರೊಂದಿಗೆ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕೋಟೆ ಆಂಜನೇಯಸ್ವಾಮಿ ದೇವಾಲ ಯದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಅಪರಾಹ್ನ ಮಿನಿ ವಿಧಾನಸೌಧಕ್ಕೆ ಆಗಮಿಸಿ 3 ಸೆಟ್‌ ನಾಮಪತ್ರ ಸಲ್ಲಿಸಿದರು.

ಕಾದ ಮುಖ್ಯಮಂತ್ರಿ 
ನಾಮಪತ್ರ ಸಲ್ಲಿಸಲು ಆಗಮಿಸಿದ ಸಿದ್ದರಾಮಯ್ಯ 20 ನಿಮಿಷಗಳ ಕಾಲ ಕಾದು ಕುಳಿತ ಪ್ರಸಂಗ ನಡೆಯಿತು. ಇಬ್ಬರು ನಾಯಕರು ಒಂದೇ ದಿನ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಅಪರಾಹ್ನ 2.15ಕ್ಕೆ ಮಿನಿ ವಿಧಾನಸೌಧಕ್ಕೆ ಆಗಮಿಸಿದರು. ಅಪರಾಹ್ನ  2.05ಕ್ಕೆ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ಜಿ.ಟಿ. ದೇವೇಗೌಡ ನಾಮಪತ್ರ ಸಲ್ಲಿಸುತ್ತಿದ್ದ ಕಾರಣ ಸಿಎಂ ಸಿದ್ದರಾಮಯ್ಯ, ತಾಲೂಕು ಕಚೇರಿಯ ನಿರೀಕ್ಷಣ ಕೊಠಡಿಯಲ್ಲಿ 20 ನಿಮಿಷಗಳ ಕಾಲ ಕಾದು ಕೂರಬೇಕಾಯಿತು.

Advertisement

ಯತೀಂದ್ರ ನಾಮಪತ್ರ
ರಾಜ್ಯದ ಮುಖ್ಯಮಂತ್ರಿ ಪುತ್ರನಾಗಿ ತಂದೆ ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಡಾ. ಯತೀಂದ್ರ ಮೆರವಣಿಗೆಯಲ್ಲಿ ನಂಜನಗೂಡು ತಾಲೂಕು ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು. 

ಲಾಠಿ ಪ್ರಹಾರ
ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡರಿಗೆ ಜಿದ್ದಾಜಿದ್ದಿನ ಕಣವಾಗಿದ್ದು,  ನಾಮಪತ್ರ ಸಲ್ಲಿಕೆ ಈ ನಾಯಕರ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಯಿತು. ಎರಡು ಪಕ್ಷಗಳ ಕಾರ್ಯಕರ್ತರ ವಾಗ್ವಾದ ನಡೆಯಿತು. ಜನಸ್ತೋಮ ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ಮಾಡಬೇಕಾಯಿತು.

ರಾಹುಕಾಲ…
ಸಿದ್ದರಾಮಯ್ಯ ಹಾಗೂ ಜಿ.ಟಿ.ದೇವೇಗೌಡ ರಾಹುಕಾಲದ ಬಳಿಕ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 10.30ರಿಂದ ಮಧ್ಯಾಹ್ನದ ವರೆಗೆ ರಾಹುಕಾಲ ಇದ್ದ ಕಾರಣ ಇಬ್ಬರೂ ನಾಮಪತ್ರ ಸಲ್ಲಿಕೆಗೆ ಮುಂದಾಗಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next