ಮುಧೋಳ: ಕಬ್ಬು ದರ ನಿಗದಿಗಾಗಿ ನಿರಂತರ 53 ದಿನಗಳ ಸುದೀರ್ಘ ಹೋರಾಟಕ್ಕೆ ಬೆಂಬಲ ನೀಡಿದ ಪ್ರತಿಯೊಬ್ಬರೂ ಧನ್ಯವಾದಗಳು ಎಂದು ರೈತ ಸಂಘದ ಜಿಲ್ಲಾಧ್ಯಬಕ್ಷ ಬಸವಂತಪ್ಪ ಕಾಂಬಳೆ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಯುತ ಬೇಡಿಕೆಗಾಗಿ ರೈತ ಸಂಘದ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಮುಖ್ಯಮಂತ್ರಿಗಳು ಸ್ಪಂದನೆ ನೀಡಿದ್ದಾರೆ. ರೈತರ ಎಲ್ಲ ಸಮಸ್ಯೆಗಳನ್ನು ವಾರದೊಳಗೆ ನಮ್ಮೊಂದಿಗೆ ಸಭೆ ಸೇರಿ ಬಗೆಹರಿಸುವ ಭರವಸೆ ನೀಡಿದ್ದರಿಂದ ನಮ್ಮ ಹೋರಾಟವನ್ನು ಹಿಂಪಡೆಯುತ್ತಿದ್ದೇವೆ ಎಂದು ಹೇಳಿದರು.
ಮುಖ್ಯಮಂತ್ರಿಯೊಂದಿಗಿನ ಸಭೆಯಲ್ಲಿ ಎಸ್ಎಪಿ ಪುನರಚನೆ, ಎಫ್ಆರ್ಪಿ ದರವನ್ನು 8.5 ರಿಕವರಿಗೆ ನಿಗದಿಗೊಳಿಸುವುದು. ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ 2850 ರೂ. ನೀಡಬೇಕು, ಕಬ್ಬು ಕಳುಹಿಸಿ 14ದಿನದೊಳಗೆ ರೈತರ ಖಾತೆಗೆ ಹಣ ಜಮಾ ಮಾಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಬಗ್ಗೆ ಗಮನ ಸೆಳೆಯುತ್ತೇವೆ. ಮುಖ್ಯಮಂತ್ರಿಗಳ ರೈತರ ಬೇಡಿಕೆಗಳಿಗೆ ಸಕಾರಾತ್ಮಕ ಫಲಿತಾಂಶ ನೀಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ಹೇಳಿದರು.
ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ನಗರದ ನ್ಯಾಯವಾದಿಗಳು, ಮಾಜಿ ಸೆ„ನಿಕರ, ವೈದ್ಯರ, ಔಷಧ ವ್ಯಾಪಾರಸ್ಥರ, ಅತಿಥಿ ಉಪನ್ಯಾಸಕರ, ಶಿವಾಜಿ ವೃತ್ತದ ಹಿರಿಯರ, ಮುಧೋಳ ಹಿತರಕ್ಷಣೆ, ರನ್ನ ಸಕ್ಕರೆ ಕಾರ್ಖಾನೆ ಕಾರ್ಮಿಕ, ಕಟ್ಟಡ ಕಾರ್ಮಿಕರ ಸಂಘಗಳಿಗೆ ಹಾಗೂ ನಗರದ ಎಲ್ಲ ವ್ಯಾಪಾರಸ್ಥರು, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು, ಬಾಗವಾನ ಸಮಾಜ, ಬೇಪಾರಿ ಸಮಾಜ, ಪೊಲೀಸ್ ಸಿಬ್ಬಂದಿ ಹಾಗೂ ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಧನ್ಯವಾದ ಅರ್ಪಿಸಿದರು.
ರೈತ ಮುಖಂಡರಾದ ದುಂಡಪ್ಪ ಯರಗಟ್ಟಿ, ಮಹೇಶಗೌಡ ಪಾಟೀಲ, ಹನಮಂತಗೌಡ ಪಾಟೀಲ, ರಾಯಬಾಗ ತಾಲೂಕು ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಅಶೋಕ ಪಡಸಲಗಿ, ಕೆಂಪಣ್ಣ ಅಂಗಡಿ, ಪರಸಪ್ಪ ಮುರನಾಳ, ಶಿವಲಿಂಗಪ್ಪ ಕೌಜಲಗಿ, ಸುರೇಶ ಚಿಂಚಲಿ, ಕಲ್ಮೇಶ ಹಣಗೋಜಿ, ಹನಮಂತ ನಬಾಬ, ತಮ್ಮಣ್ಣ ಪಾಟೀಲ, ಉದಯ ಬಡಕಲಿ, ಸಂತೀಶ ಸಂಗಣ್ಣವರ, ಮಲ್ಲಿಕಾರ್ಜುನ ಖಾನಗೌಡರ, ಸಂಗಪ್ಪ ದೇಸಾಯಿ, ಆನಂದ ಮಾಳಿ, ಯಂಕಣ್ಣ ಮಳಲಿ, ಭೀಮಶಿ ಬರಗಿ, ಮಹಾಂತೇಶ ಕಬ್ಬೂರ, ರುದ್ರಪ್ಪ ಅಡವಿ ಇದ್ದರು.
ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಒಂದು ಲಕ್ಷ ಕಬ್ಬು ಬೆಳೆಗಾರರನ್ನು ಸೇರಿಸಿ ಎಸ್ಎಪಿ ಮರುಜಾರಿ ಹಾಗೂ ಎಫ್ ಆರ್ಪಿ ಅವೈಜ್ಞಾನಿಕ ನೀತಿ ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು.
-ಬಸವಂತಪ್ಪ ಕಾಂಬಳೆ ರೈತ ಸಂಘದ ಜಿಲ್ಲಾಧ್ಯಕ್ಷ